ಕ್ಷೇತ್ರ ಪರಿಚಯ : ಚಾಮರಾಜಪೇಟೆಯಲ್ಲಿ ಜೆಡಿಎಸ್ -ಕೈ ಜಟಾಪಟಿ!
ಬೆಂಗಳೂರು, ಮಾರ್ಚ್ 29: ಅತಿ ಹಳೆಯ ಬಡಾವಣೆಗಳಲ್ಲಿ ಒಂದೆನಿಸಿರುವ ಚಾಮರಾಜಪೇಟೆ ಕ್ಷೇತ್ರದ ಏಳಿಗೆ ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ. ಹಾಲಿ ಶಾಸಕ ಜಮೀರ್ ಅಹಮದ್ ಖಾನ್ ಅವರು ಜೆಡಿಎಸ್ ನಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರಿಕೊಂಡಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಜಟಾಪಟಿ ನಡುವೆ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಮೂಲ ಸೌಕರ್ಯಗಳು ಅಭಿವೃದ್ಧಿ ಕಂಡಿಲ್ಲ. ಸಣ್ಣ ಕೈಗಾರಿಕಾ ಉದ್ಯಮಿಗಳನ್ನು ಹೇರಳವಾಗಿ ಹೊಂದಿರುವ ಕ್ಷೇತ್ರ ಬದಲಾವಣೆ ಬಯಸಿದರೆ ಅಚ್ಚರಿ ಪಡಬೇಕಾಗಿಲ್ಲ. ಕಳೆದ ಬಾರಿ ಕಾಂಗ್ರೆಸ್ಸಿನಿಂದ ಜಿ.ಎ ಬಾವಾ ಹಾಗೂ ಬಿಜೆಪಿಯಿಂದ ಬಿ. ವಿ ಗಣೇಶ್ ಸೋಲು ಕಂಡಿದ್ದರು.
ಮುಸ್ಲಿಂ ಪ್ರಾಬಲ್ಯ ಹೊಂದಿರುವ ಕ್ಷೇತ್ರ ಚಾಮರಾಜಪೇಟೆ. ಮೂರು ಬಾರಿ ಕ್ಷೇತ್ರದಲ್ಲಿ ಜೆಡಿಎಸ್ನ ಜಮೀರ್ ಅಹಮದ್ ಖಾನ್ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಚಾಮರಾಜಪೇಟೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಅಂತಿಮ?
10 ವರ್ಷಗಳಿಂದ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳೇ ನಡೆದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿ ಕಾಣಿಸಿಕೊಳ್ಳುತ್ತಾರೆ ಎಂಬ ದೂರು ಇನ್ನೂ ಕೇಳಿ ಬರುತ್ತಿದೆ. ಮೂಲ ಸೌಕರ್ಯಗಳ ಕೊರತೆ, ಟ್ರಾಫಿಕ್ ಸಮಸ್ಯೆ ಇದ್ದೇ ಇದೆ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಅಲ್ಪಸಂಖ್ಯಾತ ಖಾತೆ ಸಚಿವರಾಗಿದ್ದ ಜಮೀರ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ.
2013ರ ಫಲಿತಾಂಶ
2013ರಲ್ಲಿ ಶೇ 58.92ರಷ್ಟು ಮತದಾನವಾಗಿತ್ತು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಿ.ಜಡ್ ಜಮೀರ್ ಅಹ್ಮದ್ ಖಾನ್ ಅವರು 56,339 ಮತಗಳನ್ನು ಗಳಿಸಿ ಜಯ ಗಳಿಸಿದ್ದರು. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಜಿ.ಎ ಬಾವಾ ಅವರು 26,177 ಮತ ಗಳಿಸಿ ಸೋಲು ಕಂಡಿದ್ದರು. 30,162 ಮತಗಳ (ಶೇ 28.01) ಅಂತರದಿಂದ ಜಮೀರ್ ಜಯ ದಾಖಲಿಸಿದ್ದರು.
ಮೂರು ಬಾರಿ ಗೆದ್ದಿರುವ ಜಮೀರ್
2005ರಲ್ಲಿ ಎಸ್.ಎಂ.ಕೃಷ್ಣ ರಾಜೀನಾಮೆಯಿಂದ ಚಾಮರಾಜಪೇಟೆ ಕ್ಷೇತ್ರ ತೆರವಾಯಿತು. ಉಪ ಚುನಾವಣೆ ನಡೆದಾಗ ಜಮೀರ್ ಅಹಮದ್ ಖಾನ್ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದರು. 19,943 ಮತಗಳನ್ನು ಪಡೆದು 3678 ಮತಗಳಿಂದ ಕಾಂಗ್ರೆಸ್ನ ಆರ್.ವಿ.ದೇವರಾಜ್ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ನಂತರ 2008, 2013ರ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಜಮೀರ್ ಅಹಮದ್ ಖಾನ್ ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಸೇರಲಿದ್ದು 2018ರ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು?
ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಕುತೂಹಲದ ಪ್ರಶ್ನೆಯಾಗಿದೆ. ಬಿ.ವಿ.ಗಣೇಶ್, ಲಕ್ಷ್ಮೀನಾರಾಯಣ ಅವರು ಟಿಕೆಟ್ ಆಕಾಂಕ್ಷಿಗಳು. ಮತ್ತೊಂದು ಕಡೆ ಕೆಲವು ತಿಂಗಳ ಹಿಂದೆ ಪಕ್ಷ ಸೇರಿದ ಲಹರಿ ವೇಲು ಅವರು ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ವಿ.ಗಣೇಶ್ 17,720 ಮತಗಳನ್ನು ಪಡೆದಿದ್ದರು. 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಎಸ್.ಶಾಮ ಸುಂದರ್ 23,414 ಮತಗಳನ್ನು ಪಡೆದಿದ್ದರು.
ಮತ ವಿಭಜನೆಯಾದರೆ ಕುತೂಹಲ ಫಲಿತಾಂಶ
ಚಾಮರಾಜಪೇಟೆ ಕ್ಷೇತ್ರದಲ್ಲಿ 216896 ಮತದಾರರು ಇದ್ದಾರೆ. 112728 ಪುರುಷ, 104150 ಮಹಿಳಾ ಮತದಾರರು ಇದ್ದಾರೆ. ಮುಸ್ಲಿಂ, ಒಕ್ಕಲಿಗರು ಹಾಗೂ ಬ್ರಾಹ್ಮಣ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಮತ ವಿಭಜನೆಯಾದರೆ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ? ಎಂಬುದನ್ನು ಊಹಿಸುವುದು ಕಷ್ಟ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದರ ಮೇಲೆ ಚುನಾವಣಾ ಕಣದ ಚಿತ್ರಣ ಅಂತಿಮಗೊಳ್ಳಲಿದೆ.