ಹಡಗಲಿ ಕ್ಷೇತ್ರ ಪರಿಚಯ : ಗೆಲುವಿನ ನಿರೀಕ್ಷೆಯಲ್ಲಿ ಕಮಲ ಪಕ್ಷ
ಮಾಜಿ ಸಚಿವ ಎಂ.ಪಿ ಪ್ರಕಾಶ್ ಅವರ ಶಿಷ್ಯ ಹಾಲಿ ಶಾಸಕ ಕಾಂಗ್ರೆಸ್ಸಿನ ಪಿ.ಟಿ ಪರಮೇಶ್ವರ ನಾಯ್ಕ 2013ರಲ್ಲಿ ಬಿಜೆಪಿಯ ಚಂದನಾಯ್ಕರನ್ನು ಸೋಲಿಸಿದ್ದರು.
ಅನುಪಮಾ ಶೆಣೈ ಅವರ ರಾಜಿನಾಮೆಗೆ ಕಾರಣರಾದರು, ಪ್ರಕಾಶ್ ಅವರ ಪುತ್ರ ಎಂ.ಪಿ ರವೀಂದ್ರ ಅವರ ಜತೆ ಭಿನ್ನಾಭಿಪ್ರಾಯ ಇವೆಲ್ಲವೂ ಪರಮೇಶ್ವರ್ ನಾಯ್ಕ್ ಗೆ ಮುಳುವಾಗುವ ಸಾಧ್ಯತೆಯಿದೆ. ಬಿಜೆಪಿಯಿಂದ ಯಡಿಯೂರಪ್ಪ ಆಪ್ತ ಮಧುನಾಯ್ಕ್ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದು, ಕುತೂಹಲ ಕೆರಳಿಸಿದೆ.
ಈ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್ ಪಕ್ಷದ ಪಿ.ಟಿ. ಪರಮೇಶ್ವರ ನಾಯ್ಕ. 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಚಂದ್ರ ನಾಯ್ಕ ಅವರನ್ನು ಸೋಲಿಸಿ ಅಭ್ಯರ್ಥಿಯಾಗಿದ್ದರು. ಮಾಜಿ ಸಚಿವ ಹಾಗೂ ರಾಜಕೀಯ ಮುತ್ಸದ್ಧಿ ಎಂ.ಪಿ. ಪ್ರಕಾಶ್ ಅವರ ಶಿಷ್ಯನೆಂಬುದೇ ಪರಮೇಶ್ವರ್ ನಾಯ್ಕ ಅವರಿಗಿದ್ದ ಪ್ಲಸ್ ಪಾಯಿಂಟ್.
ಆದರೆ, ತಮ್ಮ ಸ್ವಕ್ಷೇತ್ರದ ಮೇಲೆ ಪಕ್ಷದ ಹರಪನ ಹಳ್ಳಿಯ ಕಾಂಗ್ರೆಸ್ ಶಾಸಕ ಎಂ.ಪಿ. ರವೀಂದ್ರ ಅವರು ಹೊಂದಿರುವ ಹಿಡಿತವನ್ನು ತಪ್ಪಿಸಲು ಪರಮೇಶ್ವರ ನಾಯ್ಕ ಅವರಿಗೆ ಸಾಧ್ಯವಾಗಿಲ್ಲ ಎನ್ನುತ್ತಿವೆ ಇಲ್ಲಿನ ರಾಜಕೀಯ ಮೂಲಗಳು.
ರವೀಂದ್ರ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣದಿಂದಲೇ ಹಡಗಲಿ ಕ್ಷೇತ್ರದ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳಲ್ಲಿ ರವೀಂದ್ರ ತಮ್ಮ ಪ್ರಭಾವ ಬೀರಿ, ಪರಮೇಶ್ವರ್ ನಾಯ್ಕ ಅವರು ಚಿಗುರೊಡೆಯದಂತೆ ನೋಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಹೀಗೆ, ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಪರಮೇಶ್ವರ್ ನಾಯ್ಕ ಅವರು ವಿಫಲರಾಗಿರುವುದು ಹಾಗೂ ತಮ್ಮ ದರ್ಪದಿಂದಾಗಿ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರ ರಾಜಿನಾಮೆಗೆ ಕಾರಣರಾದರು ಎಂಬ ಸುದ್ದಿಗಳು ಬಿತ್ತರವಾಗಿದ್ದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ನಾಯ್ಕ ಅವರಿಗೆ ಮುಳುವಾಗಲಿದೆ ಎಂದು ಹೇಳಲಾಗಿದೆ.
ಇದು, ಕಳೆದ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿ ನಾಯಕ ಚಂದ್ರ ನಾಯ್ಕ ಅವರಿಗೆ ನೆರವಾಗುವ ಸಾಧ್ಯತೆಗಳಿವೆ. ಆದರೆ, ಚಂದ್ರ ನಾಯ್ಕ ಅವರಿಗೆ ಈ ಬಾರಿ ಬಿಜೆಪಿಯಿಂದ ಅವರಿಗೆ ಟಿಕೆಟ್ ಸಿಗುವುದು ಅನುಮಾನ. ಏಕೆಂದರೆ, ಈ ಬಾರಿ ಈ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಧು ನಾಯ್ಕ ಪ್ರಯತ್ನಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ ಅವರಿಗೆ ಈ ಭಾಗದಲ್ಲಿ ಬೆಂಬಲವಾಗಿದ್ದವರು ಮಧು ನಾಯ್ಕ. ಅಲ್ಲದೆ, ಯಡಿಯೂರಪ್ಪ ಅವರಿಗೆ ಹೆಚ್ಚು ಆಪ್ತ. ಈ ಹಿನ್ನೆಲೆಯಲ್ಲೇ, ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ಚಂದ್ರ ನಾಯ್ಕ ಅಥವಾ ಮಧು ನಾಯ್ಕ - ಈ ಇಬ್ಬರಲ್ಲಿ ಯಾರಿಗೇ ಟಿಕೆಟ್ ಸಿಗಲಿ ಅವರಿಗೆ ಜಯ ಸುಲಭ ಎಂದು ಸದ್ಯದ ಪರಿಸ್ಥಿತಿಗಳು ಹೇಳುತ್ತಿವೆ.