ಕ್ಷೇತ್ರ ಪರಿಚಯ : ಬಸವ ಕಲ್ಯಾಣದಲ್ಲಿ ಗೆಲ್ಲುವವರು ಯಾರು?
ಬೀದರ್ ಜಿಲ್ಲೆಯ ಪ್ರಮುಖ ಕ್ಷೇತ್ರ ಬಸವ ಕಲ್ಯಾಣ. ಲಾರಿಗಳು ಈ ಪಟ್ಟಣದ ಆರ್ಥಿಕತೆ ನಿರ್ಧರಿಸುತ್ತವೆ. ಒಂದು ಅಂದಾಜಿನ ಪ್ರಕಾರ 10 ಸಾವಿರಕ್ಕೂ ಅಧಿಕ ಲಾರಿಗಳು ಇಲ್ಲಿವೆ. ಹೈದರಾಬಾದ್-ಪುಣೆ ರಾಷ್ಟ್ರೀಯ ಹೆದ್ದಾರಿ ಪಟ್ಟಣಕ್ಕೆ ಹತ್ತಿರದಲ್ಲಿದೆ. ವಾಹನಗಳ ಬಿಡಿಭಾಗಗಳ ಉದ್ಯಮವೂ ಇಲ್ಲಿ ಜೋರಾಗಿದೆ.
'ಸಸ್ತಾಪುರ ಬಾಂಗ್ಲಾ' ಬಸವ ಕಲ್ಯಾಣದ ಪ್ರಮುಖ ಆರ್ಥಿಕ ಕೇಂದ್ರ. ಲಾರಿಗಳಂತೆ ಅದನ್ನು ರಿಪೇರಿ ಮಾಡುವ ಗ್ಯಾರೇಜುಗಳು ಇಲ್ಲಿ ಅಧಿಕವಾಗಿವೆ. ಪುಣೆ, ಗುಜರಾತ್, ಮುಂಬೈ, ಹೈದರಾಬಾದ್ ಗಳಲ್ಲಿಯೂ ಪಟ್ಟಣದ ಜನರ ವ್ಯವಹಾರ ಹಬ್ಬಿದೆ.
ಕ್ಷೇತ್ರ ಪರಿಚಯ : ಬೀದರ್ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ?
12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಡೆದ ಪಟ್ಟಣವಿದು. ಜಿಲ್ಲಾಕೇಂದ್ರ ಬೀದರ್ನಿಂದ ಸುಮಾರು 80 ಕಿ.ಮೀ.ದೂರದಲ್ಲಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ ಈ ಕ್ಷೇತ್ರ. ಬಸವ ಕಲ್ಯಾಣದ ಕೋಟೆ ಪ್ರಮುಖ ಆಕರ್ಷಣೆ.
2011ರ ಜನಗಣತಿಯ ಅನ್ವಯ ಬಸವ ಕಲ್ಯಾಣ ಪಟ್ಟಣದ ಜನಸಂಖ್ಯೆ 69,717. ಪಟ್ಟಣ್ಣದಲ್ಲಿರುವ 108 ಅಡಿ ಎತ್ತರದ ಬಸವೇಶ್ವರರ ಪುತ್ಥಳಿ ಕ್ಷೇತ್ರದ ಪ್ರಮುಖ ಆಕರ್ಷಣೆ, ಕೋಟೆ, ದೇವಾಲಯಗಳು ಪ್ರವಾಸಿಗರನ್ನು ಸೆಳೆಯುತ್ತವೆ.
ಹೈದರಾಬಾದ್-ಪುಣೆ ರಾಷ್ಟ್ರೀಯ ಹೆದ್ದಾರಿ ಪಟ್ಟಣಕ್ಕೆ ಹತ್ತಿರದಲ್ಲಿದೆ. ಆದ್ದರಿಂದ, ಇಲ್ಲಿನ ಬಹುತೇಕ ಜನರು ಲಾರಿಗಳನ್ನು ಬಾಡಿಗೆಗೆ ನೀಡಿದ್ದಾರೆ. ಆದ್ದರಿಂದ, ಇಲ್ಲಿನ ಆರ್ಥಿಕತೆ ಲಾರಿಗಳ ಚಕ್ರದ ಸುತ್ತಲೇ ಗಿರಿಕಿ ಹೊಡೆಯುತ್ತದೆ.
ಬಸವಕಲ್ಯಾಣ 1983 ರಿಂದ 2004ರ ತನಕ ಜನತಾ ಪರಿವಾರದ ಭದ್ರ ಕೋಟೆಯಾಗಿತ್ತು. 2008ರಲ್ಲಿ ಕ್ಷೇತ್ರ ಬಿಜೆಪಿ ತಕ್ಕೆಗೆ ಸೇರಿತು. 2013ರಲ್ಲಿ ಕ್ಷೇತ್ರ ಜೆಡಿಎಸ್ ಪಾಲಾಯಿತು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳ ಹಿಡಿತದಲ್ಲಿರುವ ಕ್ಷೇತ್ರವಿದು.
ಕ್ಷೇತ್ರದ ಸದ್ಯದ ಶಾಸಕರು ಜೆಡಿಎಸ್ನ ಮಲ್ಲಿಕಾರ್ಜುನ ಖೂಬಾ. ಕಳೆದ ಚುನಾವಣೆಯಲ್ಲಿ 15,893 ಮತಗಳ ಅಂತರದಿಂದ ಅವರು ಜಯಗಳಿಸಿದ್ದಾರೆ. ಮಾಜಿ ಸಚಿವ ಬಸವರಾಜ ಪಾಟೀಲ್ ಅಟ್ಟೂರ್ ಬಿಜೆಪಿ ಸೇರಿದ್ದು, ಅವರ ಕುಟುಂಬದವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂಬುದು ಸುದ್ದಿ.
ಮಲ್ಲಿಕಾರ್ಜುನ ಖೂಬಾ ಅವರು ಈ ಬಾರಿಯು ಟಿಕೆಟ್ ಪಡೆಯುವುದು ಖಚಿತ. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಯಾರಾಗುತ್ತಾರೆ? ಎಂಬುದರ ಮೇಲೆ ಹಣಾಹಣಿ ನಿರ್ಧಾರವಾಗಲಿದೆ.
2013ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖೂಬಾ ಅವರು 37,494 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಬಿ.ನಾರಾಯಣ ರಾವ್ 21,601 ಮತ, ಬಿಜೆಪಿಯ ಸಂಜಯ್ 17,431 ಮತಗಳನ್ನು ಪಡೆದಿದ್ದಾರೆ.