ಕ್ಷೇತ್ರ ಪರಿಚಯ: ಬಂಟ್ವಾಳದಲ್ಲಿ ರಮಾನಾಥ ರೈಗೆ ಸಿಗುವುದೇ 7ನೇ ಗೆಲುವು?
ಮಂಗಳೂರು ನಗರದಿಂದ 25 ಕಿಲೋಮೀಟರ್ ದೂರದಲ್ಲಿ, ನೇತ್ರಾವತಿ ದಂಡೆಯ ಮೇಲೆ ಬಂಟ್ವಾಳ ತಾಲೂಕು ಹರಡಿಕೊಂಡಿದೆ. ಪ್ರಸಿದ್ಧ ಪುಣ್ಯ ಕ್ಷೇತ್ರ ಪೊಳಲಿ ಈ ಕ್ಷೇತ್ರದಲ್ಲೇ ಬರುತ್ತದೆ. ಇಲ್ಲಿನ ಶ್ರೀ ರಾಜರಾಜೇಶ್ವರೀ ದೇವಾಲಯ ಪ್ರಾಚೀನವಾದದ್ದು ಹಾಗೂ ಐತಿಹಾಸಿಕ ಪ್ರಾಮುಖ್ಯತೆಯನ್ನೂ ಪಡೆದಿರುವ ಸ್ದಳ.
ಬಂಟ್ವಾಳದಿಂದ 6 ಕಿ.ಮೀ ದೂರದಲ್ಲಿರುವ ಪಾಣೆ ಮಂಗಳೂರಿನ ವೆಂಕಟರಮಣ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಲಕ್ಷದೀಪೋತ್ಸವವೂ ನಡೆಯುತ್ತದೆ.
ಸುಳ್ಯ ಕ್ಷೇತ್ರ ಪರಿಚಯ: ಸೋಲಿಲ್ಲದ ಸರದಾರ ಅಂಗಾರಗೆ ಈ ಬಾರಿಯೂ ಗೆಲುವು?
ರಾಜ್ಯ ಅರಣ್ಯ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಮಾನಾಥ ರೈ ಪ್ರತಿನಿಧಿಸುವ ಕ್ಷೇತ್ರವಿದು.
ಇಲ್ಲಿ ರಾಜಕೀಯ ಇತಿಹಾಸದ ಪುಟಗಳನ್ನು ತೆರೆದರೆ 1972ರ ವರೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜತೆಗೆ ಸಿಪಿಐ ಬಲವಾಗಿದ್ದನ್ನು ಕಾಣಬಹುದು. 1972ರಲ್ಲಿ ಇಲ್ಲಿ ಸಿಪಿಐನಿಂದ ಬಿವಿ ಕಕ್ಕಿಲ್ಲಾಯ ಜಯ ಸಾಧಿಸಿದ್ದರು. 1978ರಲ್ಲಿ ಕಾಂಗ್ರೆಸ್ ಇಲ್ಲಿ ಗೆದ್ದರೂ 1983ರಲ್ಲಿ ಇಲ್ಲಿ ಬಿಜೆಪಿಯ ಎನ್ ಶಿವರಾವ್ ಜಯ ಸಾಧಿಸಿದ್ದರು.
ಆದರೆ, ಯಾವಾಗ 1985ರಲ್ಲಿ ಕ್ಷೇತ್ರಕ್ಕೆ ರಮಾನಾಥ ರೈ ಲಗ್ಗೆ ಇಟ್ಟರೋ ಅಲ್ಲಿಂದ ತಮ್ಮ ನಾಗಾಲೋಟ ಮುಂದುವರಿಸಿದರು. 1985, 89, 94, 99 .. ಹೀಗೆ ನಾಲ್ಕು ಚುನಾವಣೆ ಗೆದ್ದರು ರಮಾನಾಥ ರೈ. ಈ ಅವಧಿಯಲ್ಲಿ ಸಚಿವರಾಗಿ ಹಲವು ಹುದ್ದೆಗಳನ್ನೂ ಅವರು ನಿಭಾಯಿಸಿದರು. 2004ರಲ್ಲಿ ಮಾತ್ರ 6 ಸಾವಿರ ಮತಗಳಿಂದ ಅವರು ಬಿಜೆಪಿಯ ಬಿ. ನಾಗರಾಜ ಶೆಟ್ಟಿ ವಿರುದ್ಧ ಸೋಲು ಕಂಡರು.
ಮತ್ತೆ 2008ರಲ್ಲಿ ಗೆಲುವಿನ ಹಳಿಗೆ ಮರಳಿದ ರಮಾನಾಥ ರೈ 1 ಸಾವಿರ ಮತಗಳ ಅಂತರದಲ್ಲಿ ನಾಗರಾಜ ಶೆಟ್ಟಿಗೆ ಸೋಲುಣಿಸಿದರು. 2013ರಲ್ಲಿ ತಮ್ಮ ಗೆಲುವಿನ ಅಂತರವನ್ನು ಬರೋಬ್ಬರಿ 18 ಸಾವಿರಗಳಿಗೆ ಹೆಚ್ಚಿಸಿಕೊಂಡು ಆರನೇ ಬಾರಿ ವಿಧಾನಸಭೆಯ ಮೆಟ್ಟಿಲು ಹತ್ತಿ ಸದ್ಯ ಸಚಿವರಾಗಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ರಾಜೇಶ್ ನಾಯ್ಕ್ ಉಳಿಪ್ಪಾಡಿ 63,607 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದರು.
ಬಂಟ್ವಾಳ ಮೊದಲಿನಿಂದಲು ಬಂಟ (ಶೆಟ್ಟಿ) ಸಮುದಾಯದ ಬಿಗಿ ಹಿಡಿತದಲ್ಲೇ ಇದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಬಂಟ ಸಮುದಾಯ ಅಭ್ಯರ್ಥಿಗಳೇ ನಿರಂತರವಾಗಿ ಸ್ಪರ್ಧಿಸುತ್ತಾ ಬಂದಿರುವುದೇ ಇದಕ್ಕೆ ಸಾಕ್ಷಿ.
ಚುನಾವಣೆಯ ಹಿನ್ನಲೆಯಲ್ಲಿ ಹಿರಿಯ ಆರ್.ಎಸ್.ಎಸ್ ನಾಯಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ರಮಾನಾಥ ರೈ ನಡುವಿನ ಗುದ್ದಾಟ, ಸರಣಿ ಕೊಲೆಗಳು, ಕೋಮು ಗಲಭೆಗಳಿಗೆ ಈ ಬಾರಿ ಬಂಟ್ವಾಳ ಸಾಕ್ಷಿಯಾಗಿದೆ. ಇದು ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ನೋಡಬೇಕಷ್ಟೆ.
ಜತೆಗೆ ಈ ಬಾರಿ ರಮಾನಾಥ ರೈ ವಿರುದ್ಧ ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದೂ ಫಲಿತಾಂಶವನ್ನು ನಿರ್ಧರಿಸಲಿದೆ.