ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕುಮಾರಸ್ವಾಮಿ-ಸಿದ್ದರಾಮಯ್ಯ ಆಂಡ್ ಟೀಮ್
ಬೆಂಗಳೂರು, ಮೇ 15: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಿಯೋಗವು ರಾಜ್ಯಪಾಲ ವಜುಭಾಯಿ ವಾಳಾ ಅವರನ್ನು ಭೇಟಿ ಆಗಿ ಸರ್ಕಾರ ರಚಿಸಲು ಅನುಮತಿ ಕೋರಿ ಮನವಿ ಪತ್ರವನ್ನು ಸಲ್ಲಿಸಿದರು.
ಕಾಂಗ್ರೆಸ್ನ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮುನಿರತ್ನ, ಗುಲಾಂ ನಬಿ ಆಜಾದ್, ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಜೆಡಿಎಸ್ ಪಕ್ಷದ ಕುಮಾರಸ್ವಾಮಿ, ಶರವಣ, ಪಿಜಿಆರ್ ಸಿಂಧ್ಯ, ರಮೇಶ್ ಬಾಬು ಅವರುಗಳು ರಾಜಭವನಕ್ಕೆ ಮನವಿ ಪತ್ರ ನೀಡಲು ತೆರಳಿದ್ದರು.
ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳು
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷವು ಜೆಡಿಎಸ್ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿದೆ ಎಂದು ಹೇಳಿದರು.
'ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಸೇರಿದರೆ ಸರ್ಕಾರ ರಚಿಸಲು ಬೇಕಾದ ಸಂಖ್ಯೆ ಇದ್ದು, ಪಕ್ಷೇತರ ಶಾಸಕರು ಕೂಡಾ ನಮ್ಮೊಂದಿಗೆ ಇದ್ದಾರೆ ಹಾಗಾಗಿ ಪ್ರಜಾಪ್ರಭುತ್ವ ನಿಯಮದ ಅಡಿಯಲ್ಲಿ ನಾವುಗಳು ಸರ್ಕಾರ ರಚಿಸುತ್ತೇವೆ' ಎಂದು ಹೇಳಿದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಜಾಣತನದ್ದೆ? ಮುಂದೇನಾಗಲಿದೆ?
ಕುಮಾರಸ್ವಾಮಿ ಅವರು ಮಾತನಾಡಿ, ಜೆಡಿಎಸ್ ಪಕ್ಷವು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಲು ಅನುಮತಿ ಕೋರಿ ಪತ್ರ ಬರೆದಿದ್ದೇವೆ, ನಮ್ಮ ಸಂಖ್ಯಾ ಬಲದ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದೇವೆ, ರಾಜ್ಯಪಾಲರು ಚುನಾವಣಾ ಆಯೋಗದಿಂದ ಮಾಹಿತಿ ಪಡೆದುಕೊಂಡ ನಂತರ ನಮಗೆ ಅವಕಾಶ ನೀಡಲಿದ್ದಾರೆ' ಎಂದರು.
ರಾಜ್ಯಪಾಲರ ಬಳಿ ಒಂದು ವಾರದ ಕಾಲಾವಕಾಶ ಕೋರಿದ ಯಡಿಯೂರಪ್ಪ
ಯಡಿಯೂರಪ್ಪ ಅವರು ಕೂಡಾ ರಾಜ್ಯಪಾಲರನ್ನು ಭೇಟಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಅವರು ಬಹುಮತ ಸಾಬೀತುಪಡಿಸಲು ಎರಡು ದಿನಗಳ ಕಾಲಾವಕಾಶ ಕೋರಿದ್ದಾರೆ. 2008 ರಲ್ಲಿ ಮಾಡಿದಂತೆ ಈಗಲೂ ಆಪರೇಷನ್ ಕಮಲ ಮಾಡಲು ಮುಂದಾಗಿದ್ದಾರೆ ಆದರೆ ಅದು ಈ ಬಾರಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಮಾತನಾಡಿ, 'ಸಚಿವ ಖಾತೆ ಹಂಚಿಕೆ ಇನ್ನಿತರ ವಿಷಯಗಳ ಬಗ್ಗೆ ನಾವು ಚರ್ಚೆ ಮಾಡಿಲ್ಲ, ಅದೆಲ್ಲಾ ಆಮೇಲಿನ ಮೊದಲಿಗೆ ಸರ್ಕಾರ ರಚನೆ ಮಾಡಿ ಆನಂತರ ಖಾತೆ ಹಂಚಿಕೆ ಬಗ್ಗೆ ಚರ್ಚಿಸಲಿದ್ದೇವೆ' ಎಂದರು.