ರಜನಿಯ 'ರಾಜ್, ಕನ್ನಡಾಭಿಮಾನದ' ಹಿಂದೆ ಇದೆಯಾ ರಾಜಕೀಯ ಲೆಕ್ಕಾಚಾರ?
Recommended Video
ಪ್ರಸಕ್ತ ಕಾಲಘಟ್ಟದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಮಂಚೂಣಿಯಲ್ಲಿರುವ ಸೂಪರ್ ಸ್ಟಾರ್ ರಜನೀಕಾಂತ್, ರಾಜಕೀಯ ಪ್ರವೇಶಿಸುತ್ತಿದ್ದೇನೆ ಮತ್ತು ಹೊಸ ಪಕ್ಷ ಸದ್ಯದಲ್ಲೇ ಹುಟ್ಟುಹಾಕಲಿದ್ದೇನೆಂದು ಎಂದು ಘೋಷಿಸಿದ್ದಾಗಿದೆ.
ತಮಿಳುನಾಡಿನ ರಾಜಕೀಯವೇ ಬೇರೆ, ಇಲ್ಲಿನ ಜನ ಹೆಚ್ಚಾಗಿ 'ವ್ಯಕ್ತಿ ಆರಾಧಕರು' ಎನ್ನುವ ಸತ್ಯವನ್ನು ಅರಿತಿರುವ ರಜನೀಕಾಂತ್, 1996ರಿಂದ ತನ್ನ ಹಿಂದೆ ಮುಂದೆ ಸುತ್ತುತ್ತಿದ್ದ ರಾಜಕೀಯದ ಸುದ್ದಿಗೆ ಕೊನೆಗೂ ಇತಿಶ್ರೀ ಹಾಡಿದ್ದಾರೆ. ಬಣ್ಣದ ಜಗತ್ತಿನ ಹಿನ್ನಲೆಯಿಂದ ಬಂದ ಜನಪ್ರಿಯ ಸಿಎಂ ಜಯಲಲಿತಾ ನಿಧನದ ಒಂದು ವರ್ಷದ ನಂತರ ರಜನಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರಜನಿ ರಾಜಕೀಯ ಭವಿಷ್ಯ; ಚಾಣಕ್ಯರಾಗಬೇಕು ಚಂದ್ರಗುಪ್ತರಲ್ಲ
ತನ್ನ ರಾಜಕೀಯ ನಿರ್ಧಾರದ ಘೋಷಣೆಯ ಮುನ್ನ, ಹೋದ ವಾರ ಸತತವಾಗಿ ಅಭಿಮಾನಿಗಳ ಜೊತೆ ಕಾಲಕಳೆದ ರಜನಿಕಾಂತ್, ತಾನು ಬೆಂಗಳೂರಿನಲ್ಲಿ ಬೆಳೆದದ್ದು, ಡಾ. ರಾಜಕುಮಾರ್ ಜೊತೆಗಿನ ಒಡನಾಟ, ಕನ್ನಡಾಭಿಮಾನದ ಬಗ್ಗೆ ತುಸು ಹೆಚ್ಚೇ ಮಾತನಾಡಿದ್ದಾರೆ.
ಈ ಹಿಂದೆ ಕೂಡಾ, ಕಾವೇರಿ ಮತ್ತು ಹೊಗೇನಕಲ್ ಹೋರಾಟ ತೀವ್ರತೆ ಪಡೆದ ಸಮಯದಲ್ಲಿ ರಜನಿ 'ಮೂಲ'ವನ್ನು ಕೆದಕುವ ಕೆಲಸವನ್ನು ತಮಿಳು ಚಿತ್ರೋದ್ಯಮ ಮತ್ತು ಅಲ್ಲಿನ ರಾಜಕೀಯ ಮಾಡಿತ್ತು. ಎಷ್ಟಾದರೂ 'ತಲೈವಾ' ಕನ್ನಡ ಪಕ್ಷಪಾತಿ ಎನ್ನುವ ಆರೋಪವೂ ಕೇಳಿಬಂದಿತ್ತು.
ರಾಜಕೀಯಕ್ಕೆ ರಜನಿಕಾಂತ್ : ಕರ್ನಾಟಕದ ನಾಯಕರು ಏನು ಹೇಳಿದರು?
ಇಂತಹ ಆರೋಪಗಳಿಗೆಲ್ಲಾ ಆಗಿದ್ದಾಂಗೆ ಉತ್ತರ ನೀಡುತ್ತಾ ಬಂದಿದ್ದ ರಜನಿಕಾಂತ್, ನನ್ನ ಭಾಷಾಭಿಮಾನವನ್ನು ಯಾರಿಗೂ ರುಜುವಾತು ಪಡಿಸಬೇಕಾಗಿಲ್ಲ, ನಾನಿಂದು ಏನಾಗಿದ್ದೇನೋ ಅದು ತಮಿಳು ಜನರು ನನಗೆ ತೋರಿಸಿದ ಪ್ರೀತಿಯಿಂದ ಎಂದಿದ್ದರು. ರಜನೀಕಾಂತ್ ಅವರ ಕನ್ನಡಾಭಿಮಾನದ ಹಿಂದೆ, ರಾಜಕೀಯದ ಲೆಕ್ಕಾಚಾರವೂ ಯಾಕಿರಬಾರದು ಎನ್ನುವ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ, ಮುಂದೆ ಓದಿ..
ಕನ್ನಡದಲ್ಲೇ ಓದಿದ್ದು, ಕನ್ನಡದಲ್ಲಿಯೇ ಕಲಿತು ಬೆಳೆದಿದ್ದೇನೆ
ಚೆನ್ನೈನ ರಾಘವೇಂದ್ರ ಕಲ್ಯಾಣ ಮಂದಿರದಲ್ಲಿ ಅಭಿಮಾನಿಗಳೊಂದಿಗಿನ ಸಂವಾದದಲ್ಲಿ ಮಾತನಾಡುತ್ತಿದ್ದ ರಜನಿಕಾಂತ್, "ನಾನು ಕನ್ನಡದಲ್ಲೇ ಓದಿದ್ದು, ಕನ್ನಡದಲ್ಲಿಯೇ ಕಲಿತು ಬೆಳೆದಿದ್ದೇನೆ. ನನ್ನ ಕುಟುಂಬ, ಸಹೋದರರು ಕನ್ನಡವನ್ನು ಕಲಿತಿದ್ದಾರೆ. ಕನ್ನಡದಲ್ಲಿಯೇ ಮಾತನಾಡುತ್ತಾರೆ. ನಾನು ರಾಜಕುಮಾರ್ ಅವರ ಅಭಿಮಾನಿ, ಅವರ ಚಿತ್ರದ ಶತದಿನೋತ್ಸವದ ಕಾರ್ಯಕ್ರಮದಲ್ಲಿ ಅವರ ಪಾದಮುಟ್ಟಿ ನಮಸ್ಕರಿಸಿದ್ದೆ ಎಂದು ರಜನಿಕಾಂತ್, ತನ್ನ ಕನ್ನಡಾಭಿಮಾನವನ್ನು ಹೊರಹಾಕಿದ್ದರು.
ತನ್ನ ಪಕ್ಷ ತಮಿಳುನಾಡಿಗೆ ಮಾತ್ರ ಸೀಮಿತ ಎಂದು ಎಲ್ಲೂ ಹೇಳಿಲ್ಲ
2021ರಲ್ಲಿ ನಡೆಯಲಿರುವ ತಮಿಳುನಾಡು ಅಸೆಂಬ್ಲಿಯ ಎಲ್ಲಾ 234 ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸಲಿದ್ದೇವೆ ಎಂದು ಘೋಷಿಸಿರುವ ರಜನಿ, ತನ್ನ ಪಕ್ಷ ತಮಿಳುನಾಡಿಗೆ ಮಾತ್ರ ಸೀಮಿತ ಎಂದು ಎಲ್ಲೂ ಹೇಳಿಲ್ಲ. ಹಾಗಾಗಿ, ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಕ್ಷೇತ್ರದ ಕೆಲವೇ ಕೆಲವು ಸೀಟುಗಳಲ್ಲಿ ರಜನಿಯ ಹೊಸ ಪಕ್ಷ ಸ್ಪರ್ಧಿಸುವ ಸಾಧ್ಯತೆಯಿದೆಯಾ?
ರಾಷ್ಟ್ರೀಯ ಪಕ್ಷದ ಪರವಾಗಿ ಕರ್ನಾಟಕದಲ್ಲಿ ಪ್ರಚಾರ
ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ರಜನೀಕಾಂತ್ ತಾನು ಬಹು ಪ್ರೀತಿಸುವ ಊರು ಬೆಂಗಳೂರು ಎಂದು ಹಲವು ಬಾರಿ ಹೇಳಿದ್ದಾರೆ. ಜೊತೆಗೆ, ತಮಿಳುನಾಡಿನ ನಂತರ ಅತಿಹೆಚ್ಚು ಅಭಿಮಾನಿಗಳನ್ನು ರಜನಿಕಾಂತ್ ಕರ್ನಾಟಕದಲ್ಲಿ ಹೊಂದಿದ್ದಾರೆ. ರಾಜ್ಯದಲ್ಲಿ ತಮಿಳು ಮತಗಳೇ ನಿರ್ಣಾಯಕವಾಗಿರುವ ಕೆಲವು ಅಸೆಂಬ್ಲಿ ಕ್ಷೇತ್ರಗಳಿವೆ. ಹೊಸ ಪಕ್ಷ ಹುಟ್ಟುಹಾಕುತ್ತಿರುವ ಇದೇ ಬಿಸಿಯಲ್ಲಿ, ಆಗಿದ್ದಾಗಲಿ ಎಂದು ರಜನಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರಾ ಅಥವಾ ರಾಷ್ಟ್ರೀಯ ಪಕ್ಷದ ಪರವಾಗಿ ಕರ್ನಾಟಕದಲ್ಲಿ ಪ್ರಚಾರ ನಡೆಸಲಿದ್ದಾರಾ?
ಕೆಜಿಎಫ್, ಬೆಂಗಳೂರು ನಗರದ ಗಾಂಧಿನಗರ, ಶಾಂತಿನಗರ, ಸಿ ವಿ ರಾಮನ್ ನಗರ
ಕೋಲಾರದ ಕೆಜಿಎಫ್, ಬೆಂಗಳೂರು ನಗರದ ಗಾಂಧಿನಗರ, ಶಾಂತಿನಗರ, ಸಿ ವಿ ರಾಮನ್ ನಗರ, ಸರ್ವಜ್ಞ ನಗರ, ಬೊಮ್ಮನಹಳ್ಳಿ ಮುಂತಾದ ಕ್ಷೇತ್ರಗಳಲ್ಲಿ ತಮಿಳು ಭಾಷಿಗರ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಾಗಾಗಿ, ನಾನು ಕನ್ನಡಿಗ ಎನ್ನುವ ಹಿನ್ನಲೆ ಒಂದು ಕಡೆ, ತಮಿಳು ನಟ ಎನ್ನುವ ಅಂಶವನ್ನೂ ಇಟ್ಟುಕೊಂಡು, ಒಂದಾ ತಾನು ಹುಟ್ಟುಹಾಕುತ್ತಿರುವ ಹೊಸ ಪಕ್ಷ ಅಥವಾ ಬಿಜೆಪಿ ಪರವಾಗಿ, ರಜನಿಕಾಂತ್ ಮತಯಾಚಿಸುವ ಸಾಧ್ಯತೆಯಿಲ್ಲದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.
ಬಿಜೆಪಿ ಸಿದ್ದಾಂತವನ್ನು ಹೋಲುವ ರಜನೀಕಾಂತ್ ನಿಲುವು
ನನ್ನದು 'ಆಧ್ಯಾತ್ಮಿಕ ರಾಜಕೀಯ' ಎಂದಿರುವ ರಜನಿಕಾಂತ್ ಅವರ ಒಟ್ಟಾರೆ ಸಿದ್ದಾಂತ ಬಹುವಾಗಿ ಬಿಜೆಪಿಯನ್ನು ಹೋಲುತ್ತದೆ. ಜೊತೆಗೆ, ರಜನಿಕಾಂತ್ ಪ್ರಧಾನಿ ಮೋದಿಯವರ ಆಪ್ತರು. ಇವೆಲ್ಲಕ್ಕಿಂತ ಹೆಚ್ಚಾಗಿ, ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುವಂತೆ ಬಿಜೆಪಿಯವರು ಒತ್ತಡವನ್ನೂ ಹೇರುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಈ ಎಲ್ಲಾ ಲೆಕ್ಕಾಚಾರವನ್ನು ನೋಡಿದರೆ, ರಜನೀಕಾಂತ್ ಅವರ 'ಕನ್ನಡಾಭಿಮಾನ'ದ ಸುತ್ತ ರಾಜಕೀಯದ ನೆರಳು ಹರಿದಾಡುತ್ತಿದೆ.