ಹಿರಿಯರಿಗೆ ತೀರ್ಥಕ್ಷೇತ್ರ, ಯುವಕರಿಗೆ ವಂಡರ್ ಲಾ, ಲೇಡೀಸ್ ಗೆ ಕುಕ್ಕರ್
"ಆ ಮನೆಯಲ್ಲಿ ಕುಕ್ಕರ್ ಗಳನ್ನೆಲ್ಲ ಇಟ್ಟುಹೋಗಿದ್ದಾರೆ. ಒಬ್ಬೊಬ್ಬರನ್ನಾಗಿ ಕರೆದು ಕೊಡುತ್ತಿದ್ದಾರೆ. ನೀವೂ ಒಬ್ಬರೇ ಹೋಗಬೇಕಂತೆ" ಎಂದು ಗುಟ್ಟಾಗಿ ಇಬ್ಬರು ಹೆಂಗಸರು ಮಾತನಾಡಿಕೊಳ್ಳುತ್ತಿದ್ದರು. "ಯಾರು ಕೊಡ್ತಿರೋದು, ಯಾರಿಗೆ ವೋಟು ಹಾಕ್ಬೇಕಂತೆ?" ಎಂದು ಮತ್ತೊಬ್ಬ ಮಹಿಳೆ ತಗ್ಗಿದ ಧ್ವನಿಯಲ್ಲೇ ಪ್ರಶ್ನೆ ಕೇಳಿದಾಗ, ಅಷ್ಟೇ ಮೆದು ಧ್ವನಿಯಲ್ಲಿ ಉತ್ತರ ಬಂತು.
ಓಹ್, ಹಾಗಾ? ಸರಿ ಎಂದು ತಲೆಯಾಡಿಸಿದ ಮಹಿಳೆ 'ಆ ಮನೆಯತ್ತ' ಹೆಜ್ಜೆ ಹಾಕಿದರು. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕುಕ್ಕರ್ ಹಂಚುವುದು ಬಹುತೇಕ ಕ್ಷೇತ್ರಗಳಲ್ಲಿ ಕಂಡುಬರುತ್ತಿದೆ. ಅದೂ ಆಯಾ ಬಡಾವಣೆಯಲ್ಲಿ ತುಂಬ ನಿಷ್ಠರಾದ ಹಾಗೂ ಪಕ್ಷದ ಅಭ್ಯರ್ಥಿ ಕೊಟ್ಟರು ಎಂದು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ವ್ಯಕ್ತಿಯ ಮನೆಯಲ್ಲಿ ಇಟ್ಟು, ಹಂಚಲಾಗುತ್ತಿದೆ.
ನಗದು, ಸೀರೆ, ಮದ್ಯ, ಪಾತ್ರೆಪಡಗ, ಲ್ಯಾಪ್ ಟಾಪ್!
ಕುಕ್ಕರ್ ಹಂಚುವುದರ ಹಿಂದಿನ ಗುಟ್ಟೇನು ಅಂದರೆ, ಮಹಿಳೆಯರು ಪುರುಷರಿಗಿಂತ ಹೆಚ್ಚು ಪ್ರಾಮಾಣಿಕರು. ಅವರಿಂದ ವೋಟು ಹಾಕಿಸಿಕೊಳ್ಳುವುದು ಅಂಥ ಕಷ್ಟವಲ್ಲ. ಹೇಗೆ ಅಕ್ಕಿ ಕೊಟ್ಟ ಮೇಲೆ ಪಕ್ಷದ ಮೇಲೆ ಋಣದ ಭಾವನೆ ಬರುತ್ತದೋ ಅದೇ ರೀತಿ ಕುಕ್ಕರ್ ಹಂಚಿದರೆ ಹೆಂಗಸರಲ್ಲಿ ಅಂಥದ್ದೊಂದು ಆಲೋಚನೆ ಬರುತ್ತದೆ ಅನ್ನೋದು ಹಂಚುವವರ ಲೆಕ್ಕಾಚಾರ.
ಸಿಗಂದೂರು ಚೌಡೇಶ್ವರಿ ಫೋಟೋ ಮೇಲೆ ಪ್ರಮಾಣ
ತುಮಕೂರಿನಲ್ಲಿ ಅಭ್ಯರ್ಥಿಯೊಬ್ಬರು ವ್ಯಾನಿಟಿ ಬ್ಯಾಗ್, ಅದರ ಮೇಲೆ ಸಿಗಂದೂರು ಚೌಡೇಶ್ವರಿ ಫೋಟೋ, ಅದರ ಮೇಲೆ ಐನೂರು ರುಪಾಯಿಯ ಎರಡು ನೋಟು ಕೊಡುತ್ತಿದ್ದಾರೆ. ದೇವಿ ಮೇಲೆ ಪ್ರಮಾಣ ಮಾಡಿದ ಮೇಲೆ ಹಣ ಹಾಗೂ ವ್ಯಾನಿಟಿ ಬ್ಯಾಗ್ ಕೊಡ್ತಾರೆ. ಇನ್ನು ಕುಕ್ಕರ್, ಬೆಳ್ಳಿ ದೀಪ, ವಾಚು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ವಯಸ್ಸಾದವರಿಗೆ ತೀರ್ಥ ಕ್ಷೇತ್ರ ಪ್ರವಾಸ
ಇನ್ನು ಮೈಸೂರಿನಲ್ಲಿ ವಯಸ್ಸಿನ ಆಧಾರದಲ್ಲಿ ಪ್ರವಾಸ ಆಯೋಜಿಸಲಾಗಿದೆ. ವಯಸ್ಸಾದವರಿಗೆ ತೀರ್ಥ ಕ್ಷೇತ್ರ ಪ್ರವಾಸ ಏರ್ಪಡಿಸಿದರೆ, ಯುವಕರಿಗೆ ವಂಡರ್ ಲಾಗೆ ಕರೆದುಕೊಂಡು ಹೋಗುತ್ತಿದ್ದಾರೆ. ಬಾಡೂಟ, ಮದ್ಯ ಸಮಾರಾಧನೆ ಕೂಡ ಜೋರಾಗಿ ನಡೆಸುತ್ತಿದ್ದಾರೆ. ಉಳಿದಂತೆ ವಸ್ತುಗಳು ಹಂಚುವುದು ಮಾಮೂಲು ಎಂಬಂತಾಗಿದೆ.
ಓಂಶಕ್ತಿ ದೇವಸ್ಥಾನದ ಪ್ರವಾಸ
ಕೋಲಾರದ ಮಾಲೂರು ಹಾಗೂ ಬೆಂಗಳೂರಿನ ವಿವಿಧ ಕಡೆ ತಿರುಪತಿ ಹಾಗೂ ಓಂಶಕ್ತಿ ದೇವಸ್ಥಾನಕ್ಕೆ ಪ್ರವಾಸ ಕರೆದುಕೊಂಡು ಹೋಗುತ್ತಿರುವುದು ವರದಿ ಆಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಯು ಮುನ್ನೆಲೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಯಾರು ಪ್ರವಾಸ ಕರೆದೊಯ್ಯುತ್ತಿದ್ದಾರೆ ಎಂಬುದನ್ನು ಮತದಾರ ಪ್ರಭುಗಳ ಗಮನಕ್ಕಂತೂ ತರಲಾಗುತ್ತದೆ.
ತಾಳೆ ಮೇಲೆ ಪ್ರಮಾಣ ಮಾಡಿಸ್ತಾರೆ
ಸೀರೆ ಹಂಚುವುದು, ಸ್ವಸಹಾಯ ಸಂಘಗಳಿಂದ ಸಾಲ ಕೊಟ್ಟಾಗಲೇ ಅರಿಶಿನ-ಕುಂಕುಮ ಕೊಟ್ಟು ತಾಳಿ ಮೇಲೆ ಆಣೆ ಮಾಡಿಸಿಕೊಳ್ಳುವುದು, ಡಿಸಿಸಿ ಬ್ಯಾಂಕ್ ನಿಂದ ಸಾಲ ಕೊಡಿಸುವುದು, ವೀಳ್ಯದೆಲೆ- ಅಡಿಕೆ ಮೇಲೆ ಪ್ರಮಾಣ ಮಾಡಿಸುವುದು, ದೇವಸ್ಥಾನಗಳಿಗೆ- ದರ್ಗಾಗಳಿಗೆ ಕರೆದುಕೊಂಡು ಹೋಗಿ ಆಣೆ-ಪ್ರಮಾಣ ಮಾಡಿಸುವುದು ಸಾಮಾನ್ಯ ಸಂಗತಿ ಎಂಬಂತೆ ಆಗಿದೆ.