ಸಂದರ್ಶನ : ಹಿರಿಯೂರು ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್
Recommended Video
ಚಿತ್ರದುರ್ಗ, ಏಪ್ರಿಲ್ 20 : 'ಹಿರಿಯೂರು ಕ್ಷೇತ್ರದಲ್ಲಿ ವಲಸಿಗರು, ಸ್ಥಳೀಯರು ಎಂಬ ಮಾತಿಲ್ಲ. ಜನರಿಗಾಗಿ ಯಾರು ಕೆಲಸ ಮಾಡುತ್ತಾರೆಯೋ?, ಆ ನಾಯಕರನ್ನು ಜನರು ಚುನಾವಣೆಯಲ್ಲಿ ಬೆಂಬಲಿಸಬೇಕು' ಎಂದು ಹಿರಿಯೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಪೂರ್ಣಿಮಾ ಶ್ರೀನಿವಾಸ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆ.ಆರ್.ಪುರ ವಾರ್ಡ್ನ ಸದಸ್ಯರು. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಎ.ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಬಿಜೆಪಿಯ ಮೊದಲ ಪಟ್ಟಿಯಲ್ಲಿಯೇ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಬಿಬಿಎಂಪಿ ಸದಸ್ಯರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದೇಕೆ?, ಬೆಂಗಳೂರು ಬಿಟ್ಟು ಪೂರ್ಣಿಮಾ ಅವರು ಚಿತ್ರದುರ್ಗ ಆಯ್ಕೆ ಮಾಡಿಕೊಂಡಿದ್ದು ಏಕೆ? ಎಂಬ ಬಗ್ಗೆ ಅವರು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದಾರೆ.
ವಿಡಿಯೋ : ಹಿರಿಯೂರು ಜೆಡಿಎಸ್ ಅಭ್ಯರ್ಥಿ ಡಿ.ಯಶೋಧರ್ ಸಂದರ್ಶನ
ಹಿರಿಯೂರು ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷೆ ಮಾಡಲಾಗಿದೆ. ಕಾಂಗ್ರೆಸ್ನಿಂದ ಎರಡು ಬಾರಿಯ ಶಾಸಕ ಡಿ.ಸುಧಾಕರ್ ಅವರು ಅಭ್ಯರ್ಥಿ. ಬಿಜೆಪಿಯಿಂದ ಪೂರ್ಣಿಮಾ ಶ್ರೀನಿವಾಸ್ ಮತ್ತು ಜೆಡಿಎಸ್ನಿಂದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ್ ಅವರು ಕಣದಲ್ಲಿದ್ದಾರೆ. ಪೂರ್ಣಿಮಾ ಶ್ರೀನಿವಾಸ್ ಅವರ ಸಂದರ್ಶನ ಓದಿ, ವಿಡಿಯೋ ನೋಡಿ.
ಚುನಾವಣೆಯ ಸಿದ್ಧತೆ ಹೇಗೆ ಸಾಗಿದೆ?
ನಮ್ಮದು ಚುನಾವಣೆಗೆಂದು ಕೆಲಸ ಮಾಡುವ ಪಕ್ಷವಲ್ಲ. ಸತತವಾಗಿ ಜನರ ಜೊತೆ ಇರುವ ಪಕ್ಷ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ತಂದೆಯವರು ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.
ಆ ಚುನಾವಣೆ ಬಳಿಕವೂ ನಾನು ಕ್ಷೇತ್ರದ ಜನರ ಜೊತೆ ಒಡನಾಟ ಇಟ್ಟುಕೊಂಡಿದ್ದೆ. 2015ರಲ್ಲಿ ನಾನು ಬಿಜೆಪಿ ಸೇರಿದ ಬಳಿಕ ಇಲ್ಲಿ ಪಕ್ಷವನ್ನು ಸಂಘಟನೆ ಮಾಡಿದೆ. ಕ್ಷೇತ್ರದ ಜನರ ಜೊತೆಗೆ ಇದ್ದು ಅವರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ. ಈ ಬಾರಿಯ ಚುನಾವಣೆಗೆ ಪ್ರಚಾರ ಆರಂಭಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಹಿರಿಯೂರು ಆಯ್ಕೆ ಮಾಡಿಕೊಳ್ಳಲು ಕಾರಣವೇನು?
ನಮ್ಮ ತಂದೆ ಎ.ಕೃಷ್ಣಪ್ಪ ಅವರು ಕಳೆದ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಸೋತಿದ್ದರು. ನಾನು ರಾಜ್ಯ ಕಾರ್ಯದರ್ಶಿಯಾಗಿ ಚಿತ್ರದುರ್ಗ ಜಿಲ್ಲಾ ಪ್ರಭಾರಿಯಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ.
ಬಿಜೆಪಿ ಪಕ್ಷ ಈ ಕೆಲಸಗಳನ್ನು ನೋಡಿ ಮಹಿಳೆಯಾದ ನನಗೆ ಹಿರಿಯೂರು ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಬಹುಶಃ ಹಿರಿಯೂರನ್ನು ಆಯ್ಕೆ ಮಾಡಿಕೊಳ್ಳಲು ಇದೇ ಕಾರಣವಿರಬಹುದು.
ಜನರು ಬೆಂಗಳೂರಿನ ಪೂರ್ಣಿಮಾರನ್ನು ಏಕೆ ಬೆಂಬಲಿಸಬೇಕು?
ಕ್ಷೇತ್ರದ ಜನರು ಸ್ಥಳೀಯರು, ವಲಸಿಗರು ಎಂದು ನೋಡಬಾರದು. ಯಾವ ಅಭ್ಯರ್ಥಿ ಜನರಿಗಾಗಿ ಕೆಲಸ ಮಾಡುತ್ತಾರೋ ಅವರಿಗೆ ಬೆಂಬಲ ನೀಡಬೇಕು. 10 ವರ್ಷದಿಂದ ಇಲ್ಲಿನ ಶಾಸಕರಾಗಿರುವವರು ಸ್ಥಳೀಯರಲ್ಲ. ಪಕ್ಕದ ಚಳ್ಳಕೆರೆ ಕ್ಷೇತ್ರದವರು. ಹತ್ತು ವರ್ಷದಿಂದ ಅವರು ಇಲ್ಲಿನ ಜನರಿಗೆ ಬೇಕಾದ ಸೌಕರ್ಯ ನೀಡಲು ಸಾಧ್ಯವಾಗಲಿಲ್ಲ.
ನಾನು ಒಬ್ಬ ಪಾಲಿಕೆ ಸದಸ್ಯೆಯಾಗಿ ಕ್ಷೇತ್ರದ ಜನರಿಗೆ ಏನು ಬೇಕು ಎಂಬುದು ತಿಳಿದಿದೆ. ಪ್ರಾಮಾಣಿಕವಾಗಿ ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ ಮಾಡುತ್ತೇನೆ. ಆದ್ದರಿಂದ, ಚುನಾವಣೆಯಲ್ಲಿ ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ.
ಬಿಬಿಎಂಪಿ ಸದಸ್ಯರು ನೀವು, ವಿಧಾನಸಭೆ ಚುನಾವಣೆಗೆ ಏಕೆ ಸ್ಪರ್ಧೆ?
ಮನುಷ್ಯ ಯಾವತ್ತೂ ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಅಂತಹ ಸಂದರ್ಭದಲ್ಲಿ ದೇವರ ಆಶೀರ್ವಾದವೂ ಸಿಗಬೇಕು. ಬಿಜೆಪಿ ಪಕ್ಷ ನನಗೆ ಈ ಅವಕಾಶ ನೀಡಿದೆ.
ಪಾಲಿಕೆ ಸದಸ್ಯರಾಗಿ ನಾನು ಕೈಲಾದಷ್ಟು ಮಟ್ಟಿಗೆ ಜನರ ಸೇವೆ ಮಾಡಿದ್ದೇನೆ. ಅದನ್ನೆಲ್ಲ ಗುರುತಿಸಿ ಪಕ್ಷದ ಪ್ರಮುಖರು ಹಿರಿಯೂರು ಕ್ಷೇತ್ರದಲ್ಲಿ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಜನರ ಬೆಂಬಲವೂ ಸಿಕ್ಕಿದರೆ ಶಾಸಕಿಯಾಗಿ ಕ್ಷೇತ್ರ ಅಭಿವೃದ್ಧಿ ಮಾಡಲು ಪ್ರಯತ್ನ ಪಡುತ್ತೇನೆ.