ರಾಜ್ಯ ರಾಜಕಾರಣದ ಅಚ್ಚರಿ ಎಚ್.ಡಿ.ಕುಮಾರಸ್ವಾಮಿ!
ಬೆಂಗಳೂರು, ಮೇ 15: ರಾಜ್ಯ ರಾಜಕಾರಣದ ಅತ್ಯಂತ ಅಚ್ಚರಿಯ ರಾಜಕೀಯ ಬೆಳವಣಿಗೆಯ ಇತಿಹಾಸ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಏಕೆಂದರೆ 2006ರಲ್ಲಿ ಹಠಾತ್ ರಾಜಕೀಯ ಬದಲಾವಣೆಯಿಂದ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಇದೀಗ ಮತ್ತೊಮ್ಮೆ ಸಿಎಂ ಹುದ್ದೆಯ ಸನಿಹಕ್ಕೆ ಬಂದು ನಿಂತಿದ್ದಾರೆ.
LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗನಾದ ಕುಮಾರಸ್ವಾಮಿ ಅವರು ತಂದೆಯನ್ನೂ ಮೀರಿಸುವ ರಾಜಕೀಯ ಚಾಣಾಕ್ಷ ಎಂದೇ ಹೇಳಲಾಗುತ್ತಿದೆ. 1998ರಲ್ಲಿ ಲೋಕಸಭೆ ಪ್ರವೇಶಿಸಿದ್ದ ಅವರು 2004ರಲ್ಲಿ ರಾಮನಗರದಿಂದ ಗೆದ್ದು, ಸಮ್ಮಿಶ್ರ ಸರ್ಕಾರ ರಚನೆಗೆ ಕಾರಣರಾದರು.
ಕರ್ನಾಟಕ ಜನಾದೇಶ: ಒಂದಷ್ಟು ಕಹಿ, ಮತ್ತಷ್ಟು ಸಿಹಿ
ಇದೀಗ ಜೆಡಿಎಸ್ 40 ಗಡಿ ದಾಟದಿದ್ದರೂ ಕಾಂಗ್ರೆಸ್ ಪಕ್ಷವೇ ಕುಮಾರಸ್ವಾಮಿ ಅವರನ್ನು ಸಿಎಂ ಆಗುವಂತೆ ಅರಸಿ ಮನೆ ಬಾಗಲಿಗೆ ಬಂದಿದೆ. ಅಂತಹ ಕುಮಾರಸ್ವಾಮಿ ಅವರ ಹಿನ್ನೆಲೆ ಇಲ್ಲಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ ಎನ್ನುವ ಬಲದೊಂದಿಗೆ ರಾಜಕೀಯಕ್ಕೆ ಕಾಲಿಟ್ಟರೂ ತಮ್ಮದೇ ವರ್ಚಸ್ಸು ಬೆಳೆಸಿಕೊಂಡು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ಮಟ್ಟಿಗೆ ಬೆಳೆದ ಎಚ್.ಡಿ.ಕುಮಾರಸ್ವಾಮಿ ಅವರು ಹುಟ್ಟಿದ್ದು, ಬಾಲ್ಯ ಕಳೆದಿದ್ದು ಎಲ್ಲವೂ ಹಾಸನ ಜಿಲ್ಲೆಯಲ್ಲಿಯೇ.
ಅವರು ಹುಟ್ಟಿದ್ದು ಡಿಸೆಂಬರ್ 16, 1959 ರಂದು, ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಯಲ್ಲಿ. ಎಚ್.ಡಿ.ದೇವೇಗೌಡ-ಚನ್ನಮ್ಮ ದಂಪತಿಯ 6 ಮಕ್ಕಳಲ್ಲಿ ಕುಮಾರಸ್ವಾಮಿ ಅವರು ಮೂರನೇ ಮಗ. ನಿವೃತ್ತ ಕೆಎಎಸ್ ಅಧಿಕಾರಿ ಬಾಲಕೃಷ್ಣೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ನಂತರ ಮೂರನೇ ಮಗನಾಗಿ ಕುಮಾರಸ್ವಾಮಿ ಜನ್ಮತಾಳಿದರು. ಕುಮಾರಸ್ವಾಮಿ ಬಾಲ್ಯದಿಂದಲೂ ಸೌಮ್ಯ ಸ್ವಭಾವದವರಾಗಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಹೊಳೆನರಸೀಪುರದಲ್ಲೇ ಮುಗಿಸಿದ ಕುಮಾರ, 1970 ರಲ್ಲಿ 7 ನೇ ತರಗತಿ ಪಾಸಾದರು. ನಂತರ 8 ನೇ ತರಗತಿಗೆ ಹಾಸನದ ಸಂತಜೋಸೆಫ್ ಶಾಲೆಯಲ್ಲಿ ಪ್ರವೇಶ ಪಡೆದುಕೊಂಡರು. ಕುಮಾರಸ್ವಾಮಿ 9 ನೇ ತರಗತಿ ಪೂರೈಸುವುದರೊಳಗೆ, ಹಿರಿಯಣ್ಣ ಬಾಲಕೃಷ್ಣ ಉನ್ನತ ಶಿಕ್ಷಣ ಪಡೆಯುವ ಹಂತ ತಲುಪಿದ್ದರು. ಅದೇ ವೇಳೆಗೆ ತಂದೆ ದೇವೇಗೌಡರು, ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಲ್ಲದೇ, ಉನ್ನತ ಸ್ಥಾನಕ್ಕೇರಿದ್ದರು. 1972 ರಲ್ಲಿ ಕುಮಾರಸ್ವಾಮಿ ಅವರು ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್ ಶಾಲೆಗೆ 10 ನೇ ತರಗತಿಗೆ ಸೇರಿಕೊಂಡರು.
ನಂತರ 1973-74 ರಲ್ಲಿ ಜಯನಗರದ ವಿಜಯಾ ಕಾಲೇಜಿಗೆ ಪಿಯುಸಿಗೆ ಸೇರ್ಪಡೆಯಾದರು. ಆದರೆ ದ್ವಿತೀಯ ಪಿಯುಸಿಯಲ್ಲಿ ಅವರು ನಪಾಸಾದರು. ಕಾಲೇಜು ವ್ಯಾಸಂಗದ ಅವಧಿಯಲ್ಲಿಯೇ ನಾಯಕತ್ವದ ಗುಣ ಬೆಳೆಸಿಕೊಂಡಿದ್ದ ಅವರು ಹೆಚ್ಚು ಸಮಯವನ್ನು ಸ್ನೇಹಿತರೊಂದಿಗೆ ಕಳೆಯುತ್ತಿದ್ದರು. ಅವರು ಎಲ್ಲಿಯೇ ಹೋದರು, ಬಂದರೂ ಹಿಂದೆ ಹತ್ತಾರು ಸ್ನೇಹಿತರಿರುತ್ತಿದ್ದರು.