ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು
ಶಿವಮೊಗ್ಗ, ಫೆಬ್ರವರಿ 28 : ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ಹೊಂದಿರುವ, ಯತೇಚ್ಛ ನೈಸರ್ಗಿಕ ಸೌಂದರ್ಯವನ್ನು ಒಳಗೊಂಡಿರುವ ಜಿಲ್ಲೆ ಶಿವಮೊಗ್ಗ. ಹಲವಾರು ಪ್ರವಾಸಿ ತಾಣಗಳು, ವಿವಿಧ ಚಳವಳಿಗಳ ತವರೂರು ಶಿವಮೊಗ್ಗ.
ಏಷ್ಯಾದ ಅತೀ ಎತ್ತರದ ಜೋಗ ಜಲಪಾತ, ಲಿಂಗನಮಕ್ಕಿ ಅಣೆಕಟ್ಟು, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಆಗುಂಬೆಯ ಸೂರ್ಯಾಸ್ತ, ಶರಾವತಿ ನದಿಯ ಉಗಮ ಸ್ಥಾನವಾದ ಅಂಬುತೀರ್ಥ ಮುಂತಾದವು ಜಿಲ್ಲೆಯ ಪ್ರಮುಖ ಆಕರ್ಷಣೆಗಳು.
ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ದಿ.ಕಡಿದಾಳ್ ಮಂಜಪ್ಪ, ಶಾಂತವೇರಿ ಗೋಪಾಲಗೌಡ, ದಿ.ಎಸ್.ಬಂಗಾರಪ್ಪ ಜಿಲ್ಲೆಯ ಪ್ರಮುಖ ರಾಜಕಾರಣಿಗಳು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಬಂಗಾರಪ್ಪ ಪುತ್ರರಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಅವರ ತವರು ಕ್ಷೇತ್ರ ಶಿವಮೊಗ್ಗ ಜಿಲ್ಲೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳ ಪರಿಚಯ
ಶಿವಮೊಗ್ಗ ಲೋಕಸಭಾ ಕ್ಷೇತ್ರವಾಗಿದೆ ಲೋಕಸಭೆ ಚುನಾವಣೆಯಲ್ಲಿ ಬೈಂದೂರು ಶಿವಮೊಗ್ಗದ ವ್ಯಾಪ್ತಿಗೆ ಸೇರುತ್ತದೆ. ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಸೊರಬ, ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳನ್ನು ಜಿಲ್ಲೆ ಒಳಗೊಂಡಿದೆ. 2011ರ ಜನಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 17,55,512.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸಮಸ್ಯೆಗಳು..
ಸಾಗರ ಕ್ಷೇತ್ರದ ಸಮಸ್ಯೆಗಳು
ನಾಡಿಗೆ ಬೆಳಕು ನೀಡಲು ಸಾಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿ, ವಿದ್ಯುತ್ ಉತ್ಪಾದನೆ ಆರಂಭಿಸಲಾಯಿತು. ಆದರೆ, ಅಣೆಕಟ್ಟು ಕಟ್ಟುವಾಗ ಜಾಗ ಬಿಟ್ಟುಕೊಟ್ಟ ಜನರಿಗೆ ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ. 50 ವರ್ಷಗಳು ಕಳೆಯುತ್ತಾ ಬಂದರೂ ಭೂಮಿ ಸಂತ್ರಸ್ತರ ಹೆಸರಿಗೆ ಮಂಜೂರಾಗಿಲ್ಲ. ಅರಣ್ಯ, ಕಂದಾಯ ಇಲಾಖೆಯವರು ಜಾಗ ಖಾಲಿ ಮಾಡಿಸಲಿದ್ದಾರೆ? ಎಂಭ ಭಯದಲ್ಲಿಯೇ ಹಲವು ಜನರು ಬದುಕುತ್ತಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರ
ಜಿಲ್ಲಾ ಕೇಂದ್ರ ಶಿವಮೊಗ್ಗ ನಗರವನ್ನು ತನ್ನ ಒಡಲಲ್ಲಿ ಹೊಂದಿರುವ ಕ್ಷೇತ್ರ ಶಿವಮೊಗ್ಗ ನಗರ. ಶಿವಮೊಗ್ಗ ಈಗ ಸ್ಮಾರ್ಟ್ ಸಿಟಿಯಾಗಿದೆ. ನಗರದ ಆಡಳಿತ ಮಹಾನಗರ ಪಾಲಿಕೆಯ ಕೈವಶವಾಗಿದೆ. ಆದರೆ, ಕಸ ವಿಲೇವಾರಿ ಸಮಸ್ಯೆ ನಗರವನ್ನು ಕಾಡುತ್ತಿದೆ. ರೈಲ್ವೆ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣದ ಸಮಸ್ಯೆ ಹಾಗೆಯೇ ಇದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕ್ಷೇತ್ರದಿಂದ ಉದ್ಯೋಗ ಹುಡುಕುಕೊಂಡು ನಗರಕ್ಕೆ ಯುವ ಜನರು ಬರುತ್ತಾರೆ. ಆದರೆ, ಉದ್ಯೋಗ ಸೃಷ್ಟಿಗೆ ಪ್ರಮಖ ಕೈಗಾರಿಕೆಗಳು ಜಿಲ್ಲೆಗೆ ಬಂದಿಲ್ಲ.
ಶಿಕಾರಿಪುರ ಕ್ಷೇತ್ರ
ಶಿಕಾರಿಪುರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ, ಬೇಸಿಗೆಯಲ್ಲಿ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ತಾಲೂಕಿಗೆ ರೈಲ್ವೆ ಸಂಪರ್ಕ ಬೇಕು ಎಂಬ ಬೇಡಿಕೆ ಇತ್ತು. ಅದು ಸಹ ಕೆಲವು ವರ್ಷಗಳಲ್ಲಿ ನನಸಾಗುವ ಸಾಧ್ಯತೆ ಇದೆ.
ತೀರ್ಥಹಳ್ಳಿ ಕ್ಷೇತ್ರ
ತೀರ್ಥಹಳ್ಳಿ ಕ್ಷೇತ್ರದಲ್ಲಿ ತುಂಗಾ ನದಿ ಹರಿಯುತ್ತದೆ. ಮರಳು ಕಣ್ಣಿಗೆ ಕಾಣುತ್ತದೆ. ಆದರೆ, ಸ್ಥಳೀಯರಿಗೆ ಕಡಿಮೆ ದರದಲ್ಲಿ ಲಭ್ಯವಾಗುತ್ತಿಲ್ಲ. ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಬಗರ್ ಹುಕುಂ ಸಾಗುವಳಿದಾರರಿಗೆ ಒಕ್ಕಲೆಬ್ಬಿಸುವ ಆತಂಕವಿದೆ. ಜಿಲ್ಲೆಯಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ ಆಗಬೇಕು ಅದು ತೀರ್ಥಹಳ್ಳಿಯಲ್ಲಿ ಸ್ಥಾಪನೆಯಾಗಬೇಕು ಎಂಬ ಬೇಡಿಕೆಗೆ ಇನ್ನೂ ಬೆಲೆ ಸಿಕ್ಕಿಲ್ಲ.
ಸೊರಬ ಕ್ಷೇತ್ರ
ಸೊರಬ ಕ್ಷೇತ್ರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಅಗತ್ಯವಿದೆ. ಸೊರಬ ಪಟ್ಟಣ, ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಸೇರಿದಂತೆ ವಿವಿಧ ಮೂಲಕ ಸೌಕರ್ಯಗಳು ಅಭಿವೃದ್ಧಿಯಾಗಬೇಕಿದೆ.
ಭದ್ರಾವತಿ ಕ್ಷೇತ್ರ
ಭದ್ರಾವತಿ ಕ್ಷೇತ್ರದಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್ಎಲ್), ಎಂಪಿಎಂ ಕಾರ್ಖನೆ ಬಾಗಿಲು ಮುಚ್ಚುವುದೇ?, ಉಳಿಯುವುದೇ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಕಾರ್ಖಾನೆಗಳನ್ನು ನಂಬಿದ ನೂರಾರು ಕುಟುಂಬಗಳು ಆತಂಕದಲ್ಲಿವೆ. ಚುನಾವಣಾ ಪ್ರಚಾರಕ್ಕೆ ಬರುವ ನಾಯಕರು ಸಮಸ್ಯೆ ಬಗೆಹರಿಸುತ್ತೇವೆ ಎಂಂದು ಹೇಳುತ್ತಿದ್ದಾರೆ. ಆದರೆ, ನಂತರ ಮೌನಕ್ಕೆ ಶರಣಾಗುತ್ತಿದ್ದಾರೆ. ಭದ್ರಾಪತಿ ಪಟ್ಟಣದಲ್ಲಿ ಮೂಲ ಸೌಕರ್ಯಗಳು ಇನ್ನಷ್ಟು ಉತ್ತಮವಾಗಬೇಕಿದೆ.
ಪ್ರವಾಸಿ ತಾಣಗಳ ಅಭಿವೃದ್ಧಿ
ಜೋಗ ಜಲಪಾತ, ಆಗುಂಬೆ, ಮಂಡಗದ್ದೆ ಪಕ್ಷಿಧಾಮ, ಸಕ್ರೆಬೈಲು ಆನೆ ಶಿಬಿರ, ಕೊಡಚಾದ್ರಿ ಸೇರಿದಂತೆ ಹಲವಾರು ಪ್ರವಾಸಿ ಸ್ಥಳಗಳು ಶಿವಮೊಗ್ಗ ಜಿಲ್ಲೆಯಲ್ಲಿದೆ. ಆದರೆ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ.
ಜನರ ಕನಸು ನನಸಾಗಿಲ್ಲ
ವಿಮಾನದಲ್ಲಿ ಸಂಚಾರ ನಡೆಸುವ ಶಿವಮೊಗ್ಗ ಜಿಲ್ಲೆಯ ಜನರ ಕನಸು ಇನ್ನೂ ನನಸಾಗಿಲ್ಲ. 2011ರಲ್ಲಿ ಶಿವಮೊಗ್ಗ ನಗರದ ಹೊರವಲಯದ ಸೊಗಾನೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಯಿತು. ಆದರೆ, 2015ರಲ್ಲಿ ಕಾಮಗಾರಿ ನಿಂತು ಹೋಗಿದೆ.