ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು
ಮಲೆನಾಡು, ಅರೆ ಮಲೆನಾಡು, ಹಾಗೂ ಬಯಲು ಸೀಮೆಗಳನ್ನೊಳಗೊಂಡ ವೈವಿಧ್ಯಮಯ ಜಿಲ್ಲೆ ಚಿಕ್ಕಮಗಳೂರು, ಎಲ್ಲವನ್ನು ಹೊಂದಿದ್ದರೂ ಏನು ಇಲ್ಲದ್ದಂತ ಪರಿಸ್ಥಿತಿಯಲ್ಲಿರುವ ಜಿಲ್ಲೆಯಾಗಿದೆ. ಹಲವು ಜೀವ ನದಿಗಳ ಉಗಮ ಸ್ಥಾನ. ಆದರೆ, ದೀಪದ ಕೆಳಗೆ ಕತ್ತಲು ಎನ್ನುವಂತೆ ಚಿಕ್ಕಮಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ಜಿಲ್ಲೆಯ ಸಮಸ್ಯೆಗಳತ್ತ ಒಂದು ನೋಟ ಇಲ್ಲಿದೆ.
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹೇಳುವಂತೆ 'ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಒಬ್ಬ ಸಾಹಿತಿಯಾಗಲಿ, ರಾಜಕಾರಣಿ ಹುಟ್ಟದಿರುವುದು ಜಿಲ್ಲೆಗೆ ಅಂಟಿದ ಶಾಪ'
ಚುನಾವಣೆ ಬಂದಾಗ ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಬಿಲ್ಲವ ಸಮುದಾಯ, ಬ್ರಾಹ್ಮಣ, ಬಂಟ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹತ್ತು ಹಲವು ಜಾತಿ ಮತಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗುತ್ತದೆ.
ಕ್ಷೇತ್ರ ಪರಿಚಯ: ಚಿಕ್ಕಮಗಳೂರು- ನೈಸರ್ಗಿಕ ಸಿರಿ ಜಿಲ್ಲೆಯ ಬಡ ಕ್ಷೇತ್ರ
ಶೈವ, ಆಧಾತ್ಮ, ಧಾರ್ಮಿಕ ಕೇಂದ್ರಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಒಕ್ಕಲಿಗ ಹಾಗೂ ಬಿಲ್ಲವ ಸಮುದಾಯ ಮತ ಒಲಿಸಿಕೊಂಡರೆ ಪಾರುಪತ್ಯ ನಡೆಸಬಹುದು ಎಂಬ ಎಣಿಕೆ ಎಲ್ಲಾ ಪಕ್ಷಗಳಲ್ಲೂ ಇದೆ. ಆದರೆ, ಮೂಲ ಸೌಕರ್ಯ ಅಭಿವೃದ್ಧಿ, ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ಹತ್ತಿಕ್ಕುವಲ್ಲಿ ಎಲ್ಲಾ ಪಕ್ಷಗಳು ಸೋತಿವೆ.
ಚಿಕ್ಕಮಗಳೂರು ಕ್ಷೇತ್ರದ ಸಂಕ್ಷಿಪ್ತ ಮಾಹಿತಿ
ತಾಲೂಕುಗಳು: ಶೃಂಗೇರಿ, ಬೀರೂರು, ಕಡೂರು, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ, ತರೀಕೆರೆ. ಚಿಕ್ಕಮಗಳೂರು
ವಿಧಾನಸಭಾ ಕ್ಷೇತ್ರಗಳು: ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ. ಕಡೂರು,
ಪ್ರಮುಖ ಭಾಷೆ: ಕನ್ನಡ, ತುಳು,
ಪ್ರಮುಖ ಜನಾಂಗ: ಹಾಲಕ್ಕಿ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣರು, ವೈಶ್ಯ, ಮುಸ್ಲಿಂ, ಕ್ರೈಸ್ತ, ಹಿಂದುಳಿದ ಜನಾಂಗ,
ಈ ಜಿಲ್ಲೆಯಲ್ಲಿ 07 ತಾಲ್ಲೂಕುಗಳಿದ್ದು, 08 ಶೈಕ್ಷಣಿಕ ವಲಯಗಳಿವೆ. ಲಕ್ಕವಳ್ಳಿಯ ಬಳಿ ಕುವೆಂಪು ವಿಶ್ವ ವಿಶ್ವವಿದ್ಯಾಲಯವು ಇದೆ. ಈ ಜಿಲ್ಲೆಯು 12.54 ಮತ್ತು 13.54 ಡಿಗ್ರಿಗಳ ಉತ್ತರ ಅಕ್ಷಾಂಶದ ಮಧ್ಯದಲ್ಲಿಯೂ 75.7ಡಿಗ್ರಿ ಮತ್ತು 76.22 ಡಿಗ್ರಿಗಳ ಪೂರ್ವ ರೇಖಾಂಶಗಳ ಮಧ್ಯದಲ್ಲಿಯೂ ಇದೆ.
ನೀರಿನ ಆಸರೆ ಇದ್ದರೂ ಪೂರೈಕೆ ಇಲ್ಲ
ತುಂಗಾ, ಭದ್ರಾ, ಹೇಮಾವತಿ, ವೇದಾವತಿ, ಯಗಚಿ ಮುಂತಾದ ನದಿಗಳು ಹುಟ್ಟಿ ಹರಿಯುತ್ತಿವೆ. ಆದರೆ, ಒಂದು ನದಿ ಕೂಡಾ ಚಿಕ್ಕಮಗಳೂರಿನ ಕಡೆಗೆ ಹರಿಯುವುದಿಲ್ಲ. ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಎಂಬಂತೆ ಅಕ್ಕ ಪಕ್ಕದ ಜಿಲ್ಲೆಗಳಿಗೆ ಆಸರೆಯಾಗಿರುವುದೇ ಹೆಚ್ಚು.
ಉಳಿದಂತೆ ಜಿಲ್ಲೆಯ ಬಯಲು ಸೀಮೆಗೆ ಇತಿಹಾಸ ಪ್ರಸಿದ್ಧ ಅಯ್ಯನ ಕೆರೆ ಮತ್ತು ಮದಗದ ಕೆರೆಗಳು ಕಡೂರು ತಾಲ್ಲೂಕಿನಲ್ಲಿ ಆಸರೆಯಾಗಿದೆ.ಲಕ್ಕವಳ್ಳಿಯಿಂದ ಕಡೂರು ತಾಲೂಕಿಗೆ ನೀರು ಹರಿಸುವ ಯೋಜನೆ ಅನುಷ್ಠಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಆಗುತ್ತಿಲ್ಲ. ವೇದಾವತಿ ನದಿ ನೀರು ಏನಕ್ಕೂ ಸಾಲುತ್ತಿಲ್ಲ.
ಸಾರಿಗೆ ಸಂಪರ್ಕ ಸಮಸ್ಯೆಗಳು
ಚಿಕ್ಕಮಗಳೂರು ನಗರ ಸೇರಿದಂತೆ ಪ್ರಮುಖ ತಾಲೂಕು ಕೇಂದ್ರಗಳಲ್ಲಿನ ರಸ್ತೆಗಳು ಹದಗೆಟ್ಟಿವೆ. ಪಕ್ಕದ ತೀರ್ಥಹಳ್ಳಿಯಲ್ಲಿ ಈಗ ವಿಶ್ವದರ್ಜೆ ರಸ್ತೆ ನಿರ್ಮಾಣವಾಗಿದೆ.
ಎರೆಡೆರಡು ಹೆದ್ದಾರಿಗಳಿದ್ದರೂ, ಬಯಲು ಸೀಮೆಯೂ ಘಟ್ಟದ ಜನಕ್ಕೂ ಸಂಪರ್ಕ ಹೊಂದಿಸುವ ಜಿಲ್ಲೆಯಾದರೂ ಸಾರಿಗೆ ಸಮರ್ಪಕವಾಗಿಲ್ಲ. ಖಾಸಗಿ ವಿಮಾನ ನಿಲ್ದಾಣ ಜೊತೆ ಸಣ್ಣ ವಿಮಾನ ನಿಲ್ದಾಣ ಇದೆ. ಪೂರ್ಣ ಪ್ರಮಾಣದ ವಿಮಾನ ನಿಲ್ದಾಣದ ಅಗತ್ಯವಿದೆ.ಚಿಕ್ಕಮಗಳೂರು ನಗರಕ್ಕೆ ರೈಲು ನಿಲ್ದಾಣ ಹೊಸ ಸೇರ್ಪಡೆ. ಏರ್ ಸ್ಟ್ರಿಪ್ ಇದ್ದರೂ ಪೂರ್ಣ ಪ್ರಮಾಣ ವಿಮಾನ ನಿಲ್ದಾಣದ ಅಗತ್ಯವಿದೆ. ನಗರದ ಪ್ರಮುಖ ರಸ್ತೆಗಳೇ ಹಾಳಾಗಿವೆ. ಪಾರ್ಕಿಂಗ್ ವ್ಯವಸ್ಥೆ ದೇವರಿಗೆ ಪ್ರೀತಿ.
ನಗರ ಸಾರಿಗೆ ಸಂಪರ್ಕಕ್ಕೆ ಸರ್ಕಾರಿ ಬಸ್ ನಂಬಿಕೊಂಡಿಲ್ಲ. ಸಹಕಾರಿ ಸಾರಿಗೆ ಇಲ್ಲದಿದ್ದರೆ, ಜಿಲ್ಲೆಯಲ್ಲಿ ಸಂಚಾರ ಕಷ್ಟವಾಗುತ್ತಿತ್ತು ಎಂಬುದು ಸುಳ್ಳಲ್ಲ.ಪ್ರವಾಸಿ ತಾಣಗಳ ಮೂಲ ಸೌಕರ್ಯ
ರಾಮಾಯಣ ಕಾಲದ್ದು ಎನ್ನುವ ಐತಿಹ್ಯವಿರುವ ಕುಂತಿಹೊಳೆ, ಶಂಖತೀರ್ಥ, ಚಾಲುಕ್ಯರ ಕಾಲದ ಬಿಸಿಲೇಹಳ್ಳಿ, ಜೈಮಿನಿ ಭಾರತ ಬರೆದ ಲಕ್ಷ್ಮೀಶನ ದೇವನೂರು, ನಿರ್ವಾಣಸ್ವಾಮಿ ಗುಡ್ಡ, ಭದ್ರಾ ಅಭಯಾರಣ್ಯ, ಬಾಬಾ ಬುಡನ್ ಗಿರಿ, ಮುಳ್ಳಯ್ಯನ ಗಿರಿ, ಕೆಮ್ಮಣ್ಣುಗುಂಡಿ, ಮೂಡಿಗೆರೆಯ ಅಕ್ಕ ಪಕ್ಕದ ಚಾರಣ ತಾಣಗಳು, ಶೃಂಗೇರಿಯ ಶಾರದಾಪೀಠ, ಬಾಳೆಹೊನ್ನೂರಿನ ರಂಭಾಪುರಿ ಮಠ ಹೀಗೆ ಅನೇಕ ಪ್ರವಾಸಿ ತಾಣಗಳಿದ್ದರೂ ಮೂಲ ಸೌಕರ್ಯ ಕೊರತೆ, ಅಭಿವೃದ್ಧಿ ಕಾಣದೆ ಸೊರಗಿವೆ. ವಸತಿ ಸೌಲಭ್ಯಕ್ಕೆ ಸರಿಯಾದ ವ್ಯವಸ್ಥೆಯಿಲ್ಲ, ಮಾರ್ಗದರ್ಶಿಗಳಂತೂ ಸಿಗುವುದು ಕಷ್ಟ.
ಜಿಲ್ಲೆಯ ಜನ ಪ್ರತಿನಿಧಿಗಳು
ಚಿಕ್ಕಮಗಳೂರು:
ಸಿ.ಟಿ
ರವಿ
(ಬಿಜೆಪಿ)
ಮೂಡಿಗೆರೆ:
ಬಿ.ಬಿ
ನಿಂಗಯ್ಯ
(ಜೆಡಿಎಸ್)
(ಎಸ್
ಸಿ)
ಶೃಂಗೇರಿ:
ಡಿ.ಎನ್
ಜೀವರಾಜ
(ಬಿಜೆಪಿ)
ಕಡೂರು:
ಕೆ
ಎಂ
ಕೃಷ್ಣಮೂರ್ತಿ(ಕಾಂಗ್ರೆಸ್)
ತರೀಕೆರೆ:
ಜಿ.
ಎಚ್
ಶ್ರೀನಿವಾಸ(ಕಾಂಗ್ರೆಸ್)
ಕಡೂರು-ಚಿಕ್ಕಮಗಳೂರು
ಕ್ಷೇತ್ರದ
ಸಂಸದೆ
ಶೋಭಾ
ಕರಂದ್ಲಾಜೆ
(ಬಿಜೆಪಿ)