ಬಿಜೆಪಿಯಿಂದ ಸಿಡಿದು ಕಾಂಗ್ರೆಸ್ ಕೈಹಿಡಿದಿರುವ ಬಿ ನಾಗೇಂದ್ರ ಸಂದರ್ಶನ
ಬಳ್ಳಾರಿ, ಮೇ 08 : ಬಿ. ನಾಗೇಂದ್ರ. ಒಮ್ಮೆ ಬಿಜೆಪಿ ಶಾಸಕರು, ಮತ್ತೊಮ್ಮೆ ಪಕ್ಷೇತರರು. ಎರಡು ಬಾರಿ ಕೂಡ್ಲಿಗಿ ಎಸ್ಟಿ ಮೀಸಲು ಕ್ಷೇತ್ರದ ಶಾಸಕರು. ಈಗ ಸ್ಪರ್ಧಿಸಿರೋದು ಬಳ್ಳಾರಿ ಗ್ರಾಮೀಣ ಎಸ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಾಯಕತ್ವ ಒಪ್ಪಿ ಕಾಂಗ್ರೆಸ್ ಸೇರಿರುವ ಬಿ. ನಾಗೇಂದ್ರ ಸ್ವಯಂ ರೂಪಿತ ಲೀಡರ್. ರೆಡ್ಡಿ ಬಳಗ, ಬಿ. ಶ್ರೀರಾಮುಲು ನಾಯಕತ್ವದ ಅಡಿಯಲ್ಲಿ ಇದ್ದರೂ ಸ್ವ ಸಾಮರ್ಥ್ಯವನ್ನು ನಂಬಿಕೊಂಡು ಬೆಳೆದವರು.
ನನ್ನದು ಖಾಲಿ ಜೇಬು, ಯಾವ ವ್ಯವಹಾರವೂ ಇಲ್ಲ: ಶ್ರೀರಾಮುಲು ಸಂದರ್ಶನ
ಈಗ ಬಿ. ಶ್ರೀರಾಮುಲು ವಿರುದ್ಧದ ಕಾಂಗ್ರೆಸ್ ಅಸ್ತ್ರ. ಕಾಂಗ್ರೆಸ್ ಹೇಳುವುದು ಬಿಜೆಪಿಯ ಬಿ. ಶ್ರೀರಾಮುಲುಗೆ, ನಮ್ಮ ಬಿ. ನಾಗೇಂದ್ರ ಸಾಕು ಅಂತ. ಹೀಗಿರುವಾಗ ಬಿ. ಶ್ರೀರಾಮುಲು ರಾಜ್ಯಮಟ್ಟದ ನಾಯಕರಾಗಿ 80 ಕ್ಷೇತ್ರಗಳ ಸ್ಟಾರ್ ಕ್ಯಾಂಪೇನರ್ ಅಂತ ಬಿಜೆಪಿ ಘೋಷಣೆ ಮಾಡಿಯೇ ಬಿಡ್ತು. ಅಲ್ಲದೇ, ಡಿಸಿಎಂ ಅಭ್ಯರ್ಥಿ ಅಂತಾನೇ ಬಿಂಬಿಸಿತು.
ಬಿ. ನಾಗೇಂದ್ರ ಅವರಿಗೆ ಬಳ್ಳಾರಿ ಗ್ರಾಮೀಣ ಮತದಾರರ ಜೊತೆ ಮೂರು ದಶಕಗಳಿಂದ ನಿರಂತರ ಸಂಪರ್ಕ ಇದೆ. ಅನೇಕ ಸಂದರ್ಭಗಳಲ್ಲಿ ಬಳ್ಳಾರಿ ಗ್ರಾಮೀಣಕ್ಕೆ ಲಗ್ಗೆ ಹಾಕುವ ಅವಕಾಶ ಕಳೆದುಕೊಂಡಿದ್ದ ಅವರು, ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯಲ್ಲಿ ಜನ ಗುಂಪು ಗುಂಪಾಗಿ ನಾಗೇಂದ್ರ ಅವರನ್ನು ನೋಡಲು ಸಾಲುಗಟ್ಟಿ ಬರುತ್ತಿದ್ದಾರೆ.
ಕೂಡ್ಲಿಗಿ ಕ್ಷೇತ್ರ ಪರಿಚಯ : ವಲಸಿಗರ ನಡುವೆ ಕದನ?
ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಒತ್ತಡದಲ್ಲೂ ಜನರೊಂದಿಗೆ ಮುಗುಳ್ನಗುತ್ತ, ಕೈಮುಗಿಯುತ್ತ ಮತ ಕೇಳುತ್ತಿರುವ ಬಿ. ನಾಗೇಂದ್ರ, ಕ್ಷೇತ್ರಕ್ಕೆ ಹೊಸಮುಖ. ಕಾಂಗ್ರೆಸ್ ಗೆ ಹೊಸ ಹುರುಪನ್ನು ತಂದಿದ್ದಾರೆ. ಔಪಚಾರಿಕವಾಗಿ ಒನ್ ಇಂಡಿಯಾ ಕನ್ನಡದ ಜೊತೆ ತಮ್ಮ ಅನಿಸಿಕೆ ಬಿಚ್ಚಿಟ್ಟಿದ್ದು ಹೀಗೆ...
ಕ್ಷೇತ್ರ ಬದಲಾವಣೆ ಏಕೆ?
ನನ್ನ ಬಾಲ್ಯ, ಯೌವ್ವನ ಕಳೆದದ್ದು ಇಲ್ಲೇ. ಅನೇಕ ಮಿತ್ರರಿದ್ದಾರೆ. ಬಂಧುಗಳಿದ್ದಾರೆ. ಕಾಂಗ್ರೆಸ್ ಸೇರುವಾಗಲೇ ಬಳ್ಳಾರಿ ಗ್ರಾಮೀಣದಲ್ಲಿ ಸ್ಪರ್ಧಿಸುವ ಮುಕ್ತ ಅವಕಾಶವಿತ್ತು. ಕೂಡ್ಲಿಗಿ - ಬಳ್ಳಾರಿ ಗ್ರಾಮೀಣ ಎನ್ನುವ ಗೊಂದಲ ತೀರಿದ ನಂತರ ಇಲ್ಲಿಂದ ಸ್ಪರ್ಧೆ.
ಕಾಂಗ್ರೆಸ್ ಸೇರಲು ಕಾರಣ?
ತತ್ವ - ಸಿದ್ಧಾಂತಗಳಲ್ಲಿಯ ಭಿನ್ನತೆ. ನನ್ನ ಜಾತ್ಯಾತೀತ ವ್ಯಕ್ತಿತ್ವ, ಸೌಹಾರ್ದ ಮನೋಭಾವ. ರೆಡ್ಡಿ ಬಳಗವನ್ನು ನಾನು ಬಿಟ್ಟಿಲ್ಲ. ಕಾರಣಾಂತರಗಳಿಂದ ಅಂತರ ಕಾಪಾಡಿಕೊಂಡಿದ್ದೇನೆ. ವೈಯಕ್ತಿಕ ಕಾರಣಗಳಿವೆ.
ಪ್ರಚಾರದ ವಿಷಯ?
ಸಿಎಂ ಸಾಹೇಬ್ರ ಐದು ವರ್ಷದ ಯಶಸ್ವಿ ಆಡಳಿತವೇ ನನ್ನ ಪ್ರಚಾರದ ವಿಷಯ. ತಂತ್ರಗಾರಿಕೆ ರಾಜಕೀಯದಲ್ಲಿ ಸಾಮಾನ್ಯ - ಸಹಜ. ಹೀಗಾಗಿ ಎಲ್ಲವನ್ನೂ ಹೇಳಲಿಕ್ಕೆ ಆಗಲ್ಲ. ಉಪ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ವಿಶೇಷ ಅನುದಾನ ಸಿಕ್ಕಿದೆ. ಸಾಕಷ್ಟು ಅಭಿವೃದ್ಧಿಯೂ ಆಗಿದೆ.
ಜನಸ್ಪಂದನೆ ಹೇಗಿದೆ?
ಜನರು ಮನೆಯ ಮಗನಂತೆ ಬರಮಾಡಿಕೊಳ್ಳುತ್ತಿದ್ದಾರೆ. ನಿರೀಕ್ಷೆಗೂ ಮೀರಿದ ಉತ್ತಮ ಸ್ಪಂದನೆ ಸಿಗುತ್ತಿದೆ. ಖುಷಿ ಆಗುತ್ತಿದೆ. ಬಿಸಿಲು ನಮ್ಮ ಖುಷಿಯನ್ನು ಹೆಚ್ಚಿಸುತ್ತಿದೆ. ಅಲ್ಲಂ ವೀರಭದ್ರಪ್ಪ ಅವರ ಕಾಲುಬಾಧೆಯ ಹಿನ್ನಲೆಯಲ್ಲಿ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಅಲ್ಲಂ ಪ್ರಶಾಂತ್, ಬಿ. ರಾಂಪ್ರಸಾದ್, ಜೀವೇಶ್ವರಿ, ಎನ್. ಸೂರ್ಯನಾರಾಯಣರೆಡ್ಡಿ ಎಲ್ಲರೂ ಬರುತ್ತಿದ್ದಾರೆ.
ಕೆಲವೊಬ್ಬರು ಬೇರೆ ಕ್ಷೇತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲರೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಪಕ್ಷ ಗೆಲ್ಲಬೇಕಿದೆ. ಗೆಲ್ಲುತ್ತದೆ.
ನಿಮ್ಮ ಎದುರಾಳಿ ಯಾರು?
ಬಿಜೆಪಿ ಎದುರಾಳಿ. ಈ ಚುನಾವಣೆ ಕಾಂಗ್ರೆಸ್ - ಬಿಜೆಪಿ ಮಧ್ಯದ ಸ್ಪರ್ಧೆ, ವ್ಯಕ್ತಿಗತವಲ್ಲ. ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಒಂದೇ. ಶಾಂತಿಯುತ ಚುನಾವಣೆ ನಡೆಯಬೇಕು. ಮತದಾರರಲ್ಲಿ ವಿಶೇಷವಾಗಿ ಮನವರಿಕೆ ಮಾಡಿಕೊಂಡು, ಶಾಂತಿಯುತ ಚುನಾವಣೆ ನಡೆಸಲು ಮನವಿ ಮಾಡುತ್ತಿರುವೆ.
ಜಿಲ್ಲೆಯಾದ್ಯಂತ ಶಾಂತಿಯುತ ಚುನಾವಣೆ ನಡೆಯುವ ವಿಶ್ವಾಸವಿದೆ.