ಸಿಪಿಐಎಂ ಅಭ್ಯರ್ಥಿ ಬಿ.ಮಾಳಮ್ಮ ಪರಿಚಯ
ಬಳ್ಳಾರಿ, ಏಪ್ರಿಲ್ 08 : ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಸಂಘಟನೆಯ ರಾಜ್ಯಾಧ್ಯಕ್ಷೆ ಬಿ. ಮಾಳಮ್ಮ ಅವರು ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ವಿಧಾಸನಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಶೋಷಿತರ, ಬಡವರ ಮತ್ತು ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿ ಎರಡು ದಶಕಗಳ ಕಾಲ ನಿರಂತರವಾಗಿ ದುಡಿದಿರುವ ಬಿ. ಮಾಳಮ್ಮ, ಸಿಪಿಐ (ಎಂ)ನ ಆಸ್ತಿ. ತೀರ ಆಕಸ್ಮಿಕವಾಗಿ ಹೋರಾಟದ ಬದುಕನ್ನು ಅರಿವಿಲ್ಲದೇ ಹೊದ್ದುಕೊಂಡ ಇವರು, ಹುಟ್ಟು ಹೋರಾಟಗಾರರು. ಜನಪರರು, ಜನಪ್ರಿಯರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
19ನೇ ವರ್ಷ ವಯಸ್ಸಿನಲ್ಲಿ ತಂದೆಯ ಹೆಸರಿನಲ್ಲಿ ರೇಷನ್ಕಾರ್ಡ್ ಪಡೆಯಲಿಕ್ಕಾಗಿ ಸರ್ಕಾರಿ ಕಚೇರಿ ಅಲೆದು, ಅಲೆದು ಬೇಸತ್ತ ಜೀವಕ್ಕೆ ಪ್ರೋತ್ಸಾಹದಾಯಕವಾಗಿ ಕಂಡಿದ್ದು ಸಿಪಿಐ(ಎಂ) ಸಂಘಟನೆ. ಕಾರ್ಯಕರ್ತರ ಕ್ರಾಂತಿಕಾರಿ ಗೀತೆಗಳು, ಭಾಷಣಕಾರರ ಜನಪರ ತುಡಿತ, ಹೋರಾಟದ ಕಿಚ್ಚು - ಕೆಚ್ಚು.
ಬಡತನದಲ್ಲೇ ಹೋರಾಟದತ್ತ ಹೊರಳಿದ ಬಿ. ಮಾಳಮ್ಮ ಅವರು ಆರಂಭದ ದಿನಗಳಲ್ಲಿ ಹೆತ್ತವರ, ಬಂಧುವರ್ಗದ ಮತ್ತು ನೆರೆಹೊರೆಯವರ ವಿರೋಧ ಎದುರಿಸಿದವರು. ಅವರ ಮನವೊಲಿಸಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು ಇಂದು ರಾಜ್ಯಮಟ್ಟದ ನಾಯಕರಾಗಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ : ಸಿಪಿಐಎಂ ಅಭ್ಯರ್ಥಿಗಳ ಪಟ್ಟಿ
ಬಿ. ಮುದುಗಪ್ಪ (75), ಉಚ್ಚಂಗಿಯಮ್ಮ (68) ದಂಪತಿಗಳ ಹಿರಿಯ ಪುತ್ರಿ ಮಾಳಮ್ಮ 5ನೇ ತರಗತಿ ತನಕ ಓದಿದ್ದಾರೆ. ಹೋರಾಟದ ಹಾದಿಯಲ್ಲಿ ಸ್ಪಷ್ಟವಾಗಿ, ನಿಖರವಾಗಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ರೀತಿಗೆ ಮನಸೋತ ಪಕ್ಷದ ಮುಖಂಡರು ಇವರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಿ ಪ್ರೋತ್ಸಾಹಿಸಿದರು.
ಕ್ಷೇತ್ರ ಪರಿಚಯ : ಬಳ್ಳಾರಿ ನಗರದಲ್ಲಿ ಲಾಡ್ ವಿರುದ್ಧ ರೆಡ್ಡಿ ಹಣಾಹಣಿ
ಲಿಂಗಾಯತ ಜಗನ್ನಾಥ್ ಅವರನ್ನು ದಲಿತರಾದ ಬಿ. ಮಾಳಮ್ಮ ವಿವಾಹವಾಗಿದ್ದಾರೆ. ವಿವಾಹದ ಸಮಯದಲ್ಲಿ ಸಹಜವಾಗಿಯೇ ಎದುರಾದ ವಿರೋಧಗಳನ್ನು ಯಶಸ್ವಿಯಾಗಿ ಎದುರಿಸಿ ಹೋರಾಟಗಳಲ್ಲಿ ದಿನೇ ದಿನೇ ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸತೊಡಗಿದರು. ಒಮ್ಮೆ ಹಂಪಸಾಗರ ಜಿಲ್ಲಾ ಪಂಚಾಯಿತಿ ಎಸ್ಸಿ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಸೋಲು ಕಂಡಿದ್ದು, ಈಗ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಬಿ. ಮಾಳಮ್ಮ ಅವರು 'ನಾನು ಗೆದ್ದರೆ ವಿಧಾನಸೌಧದ ಒಳಗಡೆ, ಹೊರಗಡೆ ಧ್ವನಿ ರಹಿತರ ಧ್ವನಿಯಾಗಿ ಕೆಲಸ ಮಾಡುವೆ. ಸೋಲು-ಗೆಲುವಿನ ಲೆಕ್ಕಾಚಾರವಿಲ್ಲ. 22 ವರ್ಷಗಳ ಜನಸೇವೆಯನ್ನು, ಹೋರಾಟವನ್ನು ಬಂಡವಾಳ ಮಾಡಿಕೊಂಡಿರುವೆ. ಸೋತರೆ ಅನುಭವ ಎನ್ನುವೆ. ಗೆಲ್ಲುವ ವಿಶ್ವಾಸವಿದೆ. ಚುನಾವಣೆಗಾಗಿ ಅನೇಕರು ಚಂದಾ ನೀಡುತ್ತಿದ್ದಾರೆ' ಎಂದು ಹೇಳಿದ್ದಾರೆ.
ಮಕ್ಕಳಾದ ಬಿ. ಕಲ್ಪನ, ಬಿ. ಬೃಂದ ಕಾಲೇಜು ವಿದ್ಯಾರ್ಥಿಗಳು. 'ಬಾಲ್ಯದಿಂದಲೂ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ, ತಾಯಿಯ ಜವಾಬ್ದಾರಿ, ಹೋರಾಟ, ಚಿಂತನೆಗಳು, ದಮನಿತರ ಪರ ನಿಲುವುಗಳನ್ನು ಅರ್ಥ ಮಾಡಿಕೊಂಡು ಬೆಂಬಲಿಸುತ್ತಿದ್ದೇವೆ' ಎನ್ನುತ್ತಾರೆ.