ಖಾತೆ ಹಂಚಿಕೆ ನಂತರ ಮತ್ತೆ ಸ್ಫೋಟಿಸಿದ ಭಿನ್ನಮತ!
ಬೆಂಗಳೂರು, ಜೂನ್ 09: ಬಹುನಿರೀಕ್ಷಿತ ಖಾತೆ ಹಂಚಿಕೆ ಪ್ರಕ್ರಿಯೆ ಜೂನ್ 08 ರಂದು ಮುಕ್ತಾಯವಾಗಿದೆ. ಈ ಮೊದಲು ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿದ್ದ ಶಾಸಕರು ಒಂದೆಡೆ, ಇದೀಗ ಖಾತೆ ಹಂಚಿಕೆಯ ನಂತರ ತಮಗೆ ಸಿಕ್ಕ ಖಾತೆಯ ಕುರಿತು ಅಸಮಾಧಾನ ಹೊಂದಿರುವ ಶಾಸಕರು ಇನ್ನೊಂದೆಡೆ.
ಒಟ್ಟಿನಲ್ಲಿ ಖಾತೆ ಹಂಚಿಕೆಯ ನಂತರ ಮತ್ತೊಮ್ಮೆ ಜೆಡೆಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಸ್ಫೋಟಿಸಿದೆ. ಸಂಪುಟದಲ್ಲಿ ಖಾತೆ ಹಂಚುವಾಗ ಜಾತಿಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ, ಹಿರಿತನ, ವಿದ್ಯಾರ್ಹತೆಯನ್ನಲ್ಲ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಕಾಂಗ್ರೆಸ್ ಶಾಸಕ ಸುಧಾಕರ್ ಬೇಸರ ವ್ಯಕ್ತಪಡಿಸಿ, ಕಾಂಗ್ರೆಸ್ ಹಿರಿಯ ಶಾಸಕ ಎಚ್ ಕೆ ಪಾಟೀಲ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?
ಇತ್ತ ಜೆಡಿಎಸ್ ನಲ್ಲಿ ಸಣ್ಣ ನೀರಾವರಿ ಖಾತೆ ಸಿಕ್ಕಿದ್ದಕ್ಕಾಗಿ ಸಿ ಎಸ್ ಪುಟ್ಟರಾಜು ಅಸಮಾಧಾನಗೊಂಡಿದ್ದಾರೆ. 'ನಿಮ್ಮ ಅನುಭವಕ್ಕೆ ಸಣ್ಣ ನಿರಾವರಿರಯಂಥ ಚಿಕ್ಕ ಖಾತೆ ತಕ್ಕುದಲ್ಲ. ರಾಜೀನಾಮೆ ಕೊಟ್ಟುಬಿಡಿ' ಎಂದು ಅಭಿಮಾನಿಗಳು ದುಂಬಾಲು ಬಿದ್ದಿದ್ದಾರೆ. ಆ ಕಾರಣ ಇಂದು ಪುಟ್ಟರಾಜು ಸುದ್ದಿಗೋಷ್ಠಿ ನಡೆಸುವ ಸಂಭವವೂ ಇದೆ ಎನ್ನಲಾಗದೆ.