ಅಥಣಿ ಕ್ಷೇತ್ರ ಪರಿಚಯ; ಉಪಚುನಾವಣೆಯಲ್ಲಿ ಟಿಕೆಟ್ ಯಾರಿಗೆ?
ಶಾಸಕ ರಮೇಶ್ ಜಾರಕಿಹೊಳಿ ಆಪ್ತ ಎಂದೇ ಗುರುತಿಸಿಕೊಂಡಿದ್ದವರು ಶಾಸಕ ಮಹೇಶ್ ಕುಮಟಳ್ಳಿ. ಕಾಂಗ್ರೆಸ್ ಟಿಕೆಟ್ ಪಡೆದು ಅಥಣಿ ಕ್ಷೇತ್ರದಿಂದ ಗೆದ್ದಿದ್ದ ಮಹೇಶ್ ಕುಮಟಳ್ಳಿ ಪಕ್ಷಕ್ಕಿಂತಲೂ ತಮ್ಮ ನಾಯಕ ರಮೇಶ್ ಜಾರಕಿಹೊಳಿ ಅವರೆಡೆಗಿನ ನಿಷ್ಠೆಯಿಂದಲೇ ರಾಜೀನಾಮೆ ನೀಡಿದ್ದರು. ಈಗ ಅನರ್ಹ ಶಾಸಕರಲ್ಲಿ ಮಹೇಶ್ ಕಮಟಳ್ಳಿಯವರೂ ಒಬ್ಬರಾಗಿದ್ದಾರೆ.
ಇದೀಗ ಉಪ ಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳಲ್ಲಿ ಒಂದಾದ ಅಥಣಿಯಲ್ಲೂ ಸ್ಪರ್ಧೆಗೆ ಸದ್ದಿಲ್ಲದೇ ತಯಾರಿ ನಡೆಯುತ್ತಿದೆ.
ದೀಪಾವಳಿಗೂ ಮುನ್ನವೇ ಉಪಚುನಾವಣೆ: 15 ಕ್ಷೇತ್ರಗಳ ಪಟ್ಟಿ ಹೀಗಿದೆ...
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಅಥಣಿ ಬೆಳಗಾವಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದ ಜನರಿಗೆ ವ್ಯವಸಾಯವೇ ಅತಿ ಮುಖ್ಯ ಉದ್ಯೋಗ. ಜೊತೆಗೆ ಕೈಗಾರಿಕೆಗೂ ಇಲ್ಲಿ ಹೆಚ್ಚಿನ ಅವಕಾಶ ಲಭಿಸಿದೆ. ಇಲ್ಲಿನ ರೈತರು ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಸಕ್ಕರೆ ಕಾರ್ಖನೆಗಳಿದ್ದು, ಇವುಗಳಲ್ಲಿ 5 ಕಾರ್ಖನೆಗಳು ಅಥಣಿಯಲ್ಲಿವೆ. ಇದು ಈ ಕ್ಷೇತ್ರದ ಅಭಿವೃದ್ಧಿಯ ಸೂಚಕವೂ ಎನ್ನಬಹುದು. ಅಷ್ಟೇ ಅಲ್ಲ, ಶೈಕ್ಷಣಿಕವಾಗಿಯೂ ಅಥಣಿ ಹೆಚ್ಚು ಅಭಿವೃದ್ಧಿ ಹೊಂದಿದೆ.
ಇದರೊಂದಿಗೆ, ಗಡಿಯ ಮಹರಾಷ್ಟ್ರದ ನಗರಗಳಾದ ಮಿರಜ್, ಸಾಂಗ್ಲಿ, ಜತ್ತ್ ಹಾಗೂ ರಾಜ್ಯದ ಪ್ರಮುಖ ಮತ್ತು ವಾಣಿಜ್ಯ ನಗರಗಳಿಗೆ ಒಳ್ಳೆಯ ರಸ್ತೆಯ ಸಂಪರ್ಕವನ್ನು ಹೊಂದಿದೆ. ಕೃಷ್ಣಾ ನದಿಯು ತಾಲೂಕಿನ ಉದ್ದಕ್ಕೂ ಹರಿಯುತ್ತದೆ. ಕ್ಷೇತ್ರದ ವ್ಯಾಪಿಯಲ್ಲಿನ ಐನಾಪುರ ಪ್ರಸಿದ್ಧ ಗ್ರಾಮವಾಗಿದೆ. ಇಲ್ಲಿ ಶುದ್ಧವಾದ ಹಾಲನ್ನು ಕಾಯಿಸಿ, ಸಕ್ಕರೆ ಬೆರೆಸಿ ಪೇಡ ತಯಾರಿಸಲಾಗುತ್ತದೆ. ಅದೂ ಕೂಡ ಇಲ್ಲಿನ ವಿಶೇಷಗಳಲ್ಲೊಂದು.
ಕರ್ನಾಟಕ ಉಪಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ ಸ್ಪರ್ಧೆ
1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೀಸಿದ್ದ ಲಕ್ಷ್ಮಣ ಸವದಿ ಸೋಲು ಕಂಡಿದ್ದರು. 2004ರಲ್ಲಿ ಬಿಜೆಪಿ ಸೇರಿ ಅಲ್ಲಿಂದ ಸತತ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದರು. ಆದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಣ ಸಂಗಪ್ಪ ಸವದಿ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮಹೇಶ್ ಕುಮಟಳ್ಳಿ ವಿರುದ್ಧ ಸೋಲು ಕಂಡಿದ್ದರು. ಆದರೂ ಅವರಿಗೆ ಡಿಸಿಎಂ ಪಟ್ಟ ಒಲಿದುಬಂತು. ಆದರೆ ಇತ್ತ ಮಹೇಶ್ ಕುಮಟಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹರಾಗಿದ್ದಾರೆ.
ಹದಿನೈದು ವರ್ಷಗಳ ನಂತರ ಅಥಣಿ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಮಹೇಶ ಕುಮಟಳ್ಳಿ ಅವರನ್ನು ಆಯ್ಕೆ ಮಾಡಿ ಅಭಿವೃದ್ಧಿ ಅಪೇಕ್ಷಿಸಿದ ಕ್ಷೇತ್ರದ ಜನತೆಗೆ ನಿರಾಶೆಯಾಗಿದೆ. ಮಹೇಶ ಕುಮಟಳ್ಳಿ ಪಕ್ಷದ ಯಾವುದೇ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾರದೇ ಹಠಾತ್ ನಿರ್ಧಾರ ತೆಗೆದುಕೊಂಡಿದ್ದರು. ಜೊತೆಗೆ ಪಕ್ಷಕ್ಕಿಂತಲೂ ತಮ್ಮ ನಾಯಕ ರಮೇಶ್ ಜಾರಕಿಹೊಳಿ ಅವರೆಡೆಗಿನ ನಿಷ್ಠೆಯೇ ಮುಖ್ಯ ಎಂದಿದ್ದ ಅವರೆಡೆಗೆ ಕಾಂಗ್ರೆಸ್ ಪಕ್ಷದಲ್ಲೇ ಆಕ್ರೋಶ ಉಂಟಾಗಿತ್ತು.
ಮಹೇಶ್ ಕುಮಟಳ್ಳಿ ಅನರ್ಹರಾದ ನಂತರ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಮಹೇಶ ಕುಮಟಳ್ಳಿ ತಾವು ಬಿಜೆಪಿ ಟಿಕೆಟ್ ಪಡೆದರೆ ಹೇಗೆ ಎಂದು ಯೋಚಿಸುತ್ತಿದ್ದು, ಅತ್ತ ಬಿಜೆಪಿಯ ಲಕ್ಷ್ಮಣ ಸವದಿ ಕೂಡಾ ಮಹೇಶ ಕುಮಟಳ್ಳಿ ಪಕ್ಷಕ್ಕೆ ಬಂದರೆ ಮುಂದಿನ ನಡೆ ಏನು ಎಂಬ ಕುರಿತು ತಮ್ಮ ಆಪ್ತರೊಂದಿಗೆ ಚರ್ಚಿಸುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ಆಪ್ತ ಮಹೇಶ್ ಕುಮಟಳ್ಳಿ ಅವರ ಅಥಣಿ ಕ್ಷೇತ್ರಕ್ಕೆ ಇದೀಗ ಕಾಂಗ್ರೆಸ್ಸಿನಿಂದ ಎ.ಬಿ.ಪಾಟೀಲ್ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎ.ಬಿ.ಪಾಟೀಲ್ ಅವರು ಕಾಂಗ್ರೆಸ್ನ ಹಿರಿಯರಲ್ಲಿ ಒಬ್ಬರಾಗಿದ್ದು, ಅವರನ್ನು ಈ ಹಿಂದೆ ಕಡೆಗಣಿಸಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಅವರು ಸೋತಿದ್ದರು. ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವ ಸಂಭವ ಇದೆ.
ಈ ನಡುವೆ, ಅಥಣಿ ಕ್ಷೇತ್ರದಿಂದ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡುತ್ತೇವೆ. ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಬೇರೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಬಿಜೆಪಿ ನಂಬಿ ಬಂದವರಿಗೆ ಅನ್ಯಾಯ ಆಗುವುದಿಲ್ಲ ಎನ್ನುವ ಮೂಲಕ ಅನರ್ಹ ಶಾಸಕರಿಗೆ ಟಿಕೆಟ್ ಪಕ್ಕಾ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.