ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಚಿತ್ರ: ಕರ್ನಾಟಕದ 'ಕಿಂಗ್ ಮೇಕರ್' ದೇವೇಗೌಡ

By Mahesh
|
Google Oneindia Kannada News

ಕರ್ನಾಟಕದ 24‍‍x7 ರಾಜಕಾರಣಿ, ತಂತ್ರಗಾರಿಕೆ ನಿಪುಣ, ಮಣ್ಣಿನ ಮಗ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರು ಎಲ್ಲಾ ಕಾಲಕ್ಕೂ ಪ್ರಭಾವಿ ರಾಜಕಾರಣಿ. ಪ್ರಖರ, ಭೀಕರ ಭಾಷಣಕ್ಕೆ ಹೆಸರುವಾಸಿಯಲ್ಲದಿದ್ದರೂ ನಿಖರ ಮಾತು, ಸಮಯೋಚಿತ ಪದ ಬಳಕೆ ಮೂಲಕ ಜನರನ್ನು ಮುಟ್ಟಬಲ್ಲ ಸಂವೇದನಾಶೀಲ ಮುತ್ಸದ್ದಿ. ಮುಂಬರುವ ಚುನಾವಣೆಯಲ್ಲಿ ಪ್ರಭಾವ ಬೀರಬಲ್ಲ ರಾಜಕಾರಣಿಗಳ ಪೈಕಿ ದೇವೇಗೌಡರು ಮುಂಚೂಣಿಯಲ್ಲಿದ್ದಾರೆ.

ಬಿಳಿ ಪಂಚೆ, ಜುಬ್ಬ, ಹಣೆಯ ಮೇಲೆ ಕುಂಕುಮ, ಸರಳ ಜೀವನ, ನಿರಂತರ ಹೋರಾಟ ಕಂಡಿರುವ ದೇವೇಗೌಡರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ 'ಕಿಂಗ್ ಮೇಕರ್' ಎನಿಸಿಕೊಂಡು ತಮ್ಮ ಪುತ್ರ ಕುಮಾರಸ್ವಾಮಿಯನ್ನು ಸಿಎಂ ಆಗಿ ನೋಡುವ ಆಸೆಯಿದೆ. ಜತೆಗೆ ತಮ್ಮ ಉತ್ತರಾಧಿಕಾರಿಯಾಗಿ ರೇವಣ್ಣ ಅವರ ಮಗ ಪ್ರಜ್ವಲ್ ಅವರನ್ನು ಹೆಸರಿಸಿದ್ದಾರೆ.

ಜಾತ್ಯಾತೀತ ಜನತಾ ದಳದಲ್ಲಿನ ಬಂಡಾಯ, ಕುಟುಂಬ ರಾಜಕೀಯ, ಅಸೆಂಬ್ಲಿ ಟಿಕೆಟ್ ಗಾಗಿ ಮನೆಯಲ್ಲಿನ ಮುಸುಕಿನ ಗುದ್ದಾಟದ ನಡುವೆಯೂ ಜೆಡಿಎಸ್ ಪಕ್ಷವು ಸಮತೋಲನ ಕಾಯ್ದುಕೊಂಡು ಉತ್ತಮ ಪ್ರದರ್ಶನ ನೀಡಲು ಸಜ್ಜು ಮಾಡುತ್ತಿದ್ದಾರೆ.

Assembly Elections 2018 : JDs supremo H D Deve Gowda profile

ಹೊಳೆನರಸೀಪುರದಿಂದ ವಿಧಾನಸಭೆಗೆ ಮೊದಲಿಗೆ ಆಯ್ಕೆಯಾದ ದೇವೇಗೌಡರು, 1994ರಲ್ಲಿ ಮುಖ್ಯಮಂತ್ರಿಯಾದರು. 1996ರಲ್ಲಿ ತೃತೀಯರಂಗದ ನಾಯಕರಾಗಿ ದೇಶದ ಪ್ರಧಾನಿಯಾದರು. 2018ರ ಚುನಾವಣೆಗೆ ತಯಾರಿ ನಡೆಸಿರುವ ಜೆಡಿಎಸ್ ಪಕ್ಷ ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ 45 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದೆ.

ಹೀಗಾಗಿ, ಕೃಷಿ, ನೀರಾವರಿ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಾ ಪ್ರಚಾರ ಆರಂಭಿಸಿದೆ. ಕುಮಾರಸ್ವಾಮಿ ಅವರು ಹಂತ ಹಂತವಾಗಿ ತಮ್ಮ ಗ್ರಾಮ ವಾಸ್ತವ್ಯವನ್ನು ಮುಂದುವರೆಸಿದ್ದರೆ, ದೇವೇಗೌಡರು ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿರುವುದು ಗಮನಾರ್ಹ.

'2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ ಪಕ್ಷವಾಗಿ ಚುನಾವಣೆ ಎದುರಿಸಲಿದೆ. ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ' ಎಂದು ದೇವೇಗೌಡರು ಎಂದೋ ಘೋಷಿಸಿದ್ದಾರೆ.

ರೈತರ ಹಿತ ಮುಖ್ಯ: ನಾಡಿನ ರೈತರ ಹಿತಕಾಯುವ ಪಕ್ಷ ಅಂತ ಏನಾದರೂ ಇದ್ದರೆ ಅದು ಜೆಡಿಎಸ್ ಮಾತ್ರ. ಇಸ್ರೇಲ್ ಮಾದರಿ ಕೃಷಿ ಮೂಲಕ ರೈತರ ವರಮಾನ ಹೆಚ್ಚಳ ಸಾಧ್ಯವಿದೆ. ಆದರೆ, ಅಲ್ಲಿನ ತಂತ್ರಜ್ಞಾನ ಇಲ್ಲಿ ಹೇಗೆ ಅಳವಡಿಸಬಹುದು ಎಂಬುದನ್ನು ಮನಗಾಣಬೇಕು ಎಂದಿದ್ದಾರೆ.

20 ತಿಂಗಳು ಉತ್ತಮ ಅಧಿಕಾರ ನೀಡಿದ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಈ ರಾಜ್ಯದ ಚುಕ್ಕಾಣಿ ಹಿಡಿಯಬೇಕು. ಆಗ ಮಾತ್ರ ಈ ನಾಡು ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಾಧ್ಯ ಎಂದು ಪ್ರಚಾರಕ್ಕೆ ಹೋದ ಕಡೆಯೆಲ್ಲ ಹೇಳುತ್ತಿದ್ದಾರೆ.

ಪತ್ರದ ಮೂಲಕ ಚುರುಕು ಮುಟ್ಟಿಸುವ ದೇವೇಗೌಡರು: ಅಡಿಕೆ, ತೆಂಗು, ಕಾಫಿ ಸೇರಿದಂತೆ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ಕಂಗಾಲಾಗಿರುವ ರೈತರ ಪರ ದನಿಯೆತ್ತಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಲ್ಲದೆ, ಸಮಯ ಸಿಕ್ಕಾಗ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು-ಹಾಸನ ರೈಲಿಗೆ ಹೇಮಾವತಿ, ಬೆಂಗಳೂರು-ಮಂಗಳೂರು ರೈಲಿಗೆ ಗೊಮಟೇಶ್ವರ, ಬೆಂಗಳೂರು-ಅರಸೀಕೆರೆ-ಮಂಗಳೂರು ರೈಲಿಗೆ ಕಾಲಭೈರವೇಶ್ವರ ಎಂದು ಹೆಸರಿಡುವಂತೆ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ ಕೂಡಾ. ಈ ಬಗ್ಗೆ ಇತ್ತೀಚೆಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ರನ್ನು ಭೇಟಿ ಮಾಡಿದ್ದನ್ನು ಮರೆಯುವಂತಿಲ್ಲ.

ಮೋದಿ ವಿರುದ್ಧ ಎಚ್ಚರದ ನಡೆ: ನರೇಂದ್ರ ಮೋದಿ ಅವರ ಸರ್ಕಾರ 500 ಹಾಗೂ 1000 ರುಪಾಯಿ ನೋಟುಗಳನ್ನು ನಿಷೇಧಿಸಿರುವುದನ್ನು ವಿರೋಧಿಸಿ ವಿಪಕ್ಷಗಳು ನಡೆಸಲು ಉದ್ದೇಶಿಸಿದ ಆಕ್ರೋಶ ದಿವಸಕ್ಕೆ ಜೆಡಿಎಸ್ ಬೆಂಬಲ ನೀಡಿರಲಿಲ್ಲ.

ಕೇಂದ್ರದ ನೋಟು ನಿಷೇಧ ಕ್ರಮದಿಂದ ಬಡವರಿಗೆ, ಕಾರ್ಮಿಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದೇವೇಗೌಡರು ಹೇಳಿದ್ದರು.

ಉಡುಪಿಯಲ್ಲಿ ಪಂಕ್ತಿಭೇದ ಇದೆ ಎನ್ನುವುದಾದರೆ ಅಲ್ಲಿಗೆ ಹೋಗಬಾರದು ಎಂದು ಮಾಜಿ ಪ್ರಧಾನಿ ದೇವೇಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

ದೇಶದಲ್ಲಿ ಹಲವು ಧರ್ಮಗಳಿವೆ. ಎಲ್ಲ ಧರ್ಮಗಳಿಗೂ ಅದರದೇ ನೀತಿ-ನಿಯಮಗಳಿವೆ. ಆದ್ದರಿಂದ ಏಕರೂಪ ನಾಗರಿಕ ಸಂಹಿತೆಯನ್ನು ತೀವ್ರವಾಗಿ ವಿರೋಧಿಸಿದ್ದರು.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ಮಾಜಿ ಪ್ರಧಾನಿ ದೇವೇಗೌಡರನ್ನು ಹುಡುಕಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಿದ್ದು, ದೇವೇಗೌಡರು ಆ ಸಮಯದಲ್ಲಿ ನಡೆದುಕೊಂಡ ರೀತಿ ಕಾವೇರಿ ಕೊಳ್ಳದ ಜನತೆಯ ನೆನಪಿನಲ್ಲಿದೆ.

Recommended Video

Chetana Raj | ಚೇತನಾ ಟ್ರೀಟ್‌ಮೆಂಟ್ ಸುದ್ದಿ ಪೋಷಕರಿಗೆ ಗೊತ್ತಿರಲಿಲ್ಲಾ | Oneindia Kannada

ಜನರಿಗೆ ಕುಡಿಯುವ ನೀರು ಮುಖ್ಯವೋ ಅಲ್ಲಿನ(ತಮಿಳುನಾಡಿಗೆ) ಬೆಳೆಗೆ ನೀರು ಮುಖ್ಯವೋ ಎಂದು ದೇವೇಗೌಡರು ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಈಗ ಮಹದಾಯಿ, ಕಳಸಾ ಬಂಡೂರಿ ವಿಷಯದಲ್ಲೂ ದೇವೇಗೌಡರು ದನಿಯೆತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾವೆಲ್ಲ ಅಂಶಗಳು ಮತದಾರರನ್ನು ತಟ್ಟಬಲ್ಲದು ಎಂಬುದರ ಲೆಕ್ಕಾಚಾರವನ್ನು ಹಾಕಿ ಅದಕ್ಕೆ ತಕ್ಕಂತೆ ದೇವೇಗೌಡರು ತಮ್ಮ ಹೆಜ್ಜೆ ಇಡುತ್ತಿದ್ದಾರೆ.

English summary
In the perspective of Karnataka Assembly Elections 2018, we present the short biography and political journey of Vokkaliga leader HD Deve Gowda. Former Prime Minister, former CM of Karnataka, son of the soil, JDs supremo H D Deve Gowda is likely to play the role of Kingmaker in the upcoming Assembly Elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X