ವ್ಯಕ್ತಿಚಿತ್ರ: ನೇರ ನಡೆ-ನುಡಿಯ ರಾಜಕಾರಣಿ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಜನತಾ ಪರಿವಾರದ ಮೂಲಕ ಬೆಳಕಿಗೆ ಬಂದ ಅಪ್ಪಟ ದೇಸಿ ಪ್ರತಿಭೆ. ಕರ್ನಾಟಕದ ಪ್ರಮುಖ ಹಾಗು ಪ್ರಬಲ ರಾಜಕಾರಣಿಯಾಗಿ, ನೇರ ನಡೆ-ನುಡಿಯ ವ್ಯಕ್ತಿಯೆಂದೆ ಹೆಸರುವಾಸಿ, ಹಗರಣ ಮುಕ್ತ, ಸರಳ ವ್ಯಕ್ತಿತ್ವವೇ ಸಿದ್ದರಾಮಯ್ಯ ಪ್ಲಸ್ ಪಾಯಿಂಟ್.
ರಾಜಕೀಯ ಜೀವನದಲ್ಲಿ ಮೂರು ಬಾರಿ ಹಣಕಾಸು ಸಚಿವರಾಗಿ ನಾಡಿಗೆ ಬಹಳ ಉತ್ತಮವಾದ ಆಯ-ವ್ಯಯವನ್ನು ಕೊಟ್ಟಿದ್ದಾರೆ. ಎರಡು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಮುಖ್ಯಮಂತ್ರಿಯಾಗಿ ದೇವರಾಜ ಅರಸು ನಂತರ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಯಶಸ್ಸಿನ ಹಾದಿಯಲ್ಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಯಾವೆಲ್ಲ ರೀತಿ ಪ್ರಭಾವ ಬೀರಬಹುದು ಎಂಬುದರ ಬಗ್ಗೆ ಸಂಕ್ಷಿಪ್ತ ನೋಟ ಇಲ್ಲಿದೆ.
ಸಿದ್ದರಾಮಯ್ಯ ಸರ್ಕಾರದ ಸಾಧನೆಯ 'ಪ್ರತಿಬಿಂಬ' ಅನಾವರಣ
ರಾಜ್ಯದ ಮೂರನೇ ಅತಿದೊಡ್ಡ ಜನಾಂಗವಾದ ಕುರುಬರ ನಾಯಕನಾಗಿ ಮಾತ್ರ ಕಾಣಿಸಿಕೊಳ್ಳದೆ ಎಲ್ಲಾ ವರ್ಗಕ್ಕೂ ಸಲ್ಲುವ ಜನರ ನಿಜವಾದ ಪ್ರತಿನಿಧಿ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅನುಭವಿ ರಾಜಕಾರಣಿ: ಮೈಸೂರಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿ ಗ್ರಾಮದವರಾದ ಸಿದ್ದರಾಮಯ್ಯ ಅವರು ರಾಜಕೀಯ ಪ್ರವೇಶಕ್ಕೂ ಮುನ್ನ ಮೈಸೂರಿನಲ್ಲಿ ಕೆಲಕಾಲ ವಕೀಲ, ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಸಿದ್ದರಾಮಯ್ಯ ಸರಕಾರದ 10 ಜನಪ್ರಿಯ ಯೋಜನೆಗಳು
ಭಾರತೀಯ ಲೋಕ ದಳ ಟಿಕೆಟ್ ಪಡೆದು ಚಾಮುಂಡೇಶ್ವರಿ ಕ್ಷೇತ್ರದಿಂದ 1978ರಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಮುಂದೆ ಜನತಾ ಪಕ್ಷದ ನಾಯಕರಾಗಿ ಬೆಳೆದರು.
ಸಿದ್ದರಾಮಯ್ಯ ಸರ್ಕಾರವನ್ನು ಕಾಡಿದ 10 ವಿವಾದಗಳು
ಎಚ್ ಡಿ ದೇವೇಗೌಡ ಹಾಗೂ ರಾಮಕೃಷ್ಣ ಹೆಗಡೆ ಗರಡಿಯಲ್ಲಿ ಬೆಳದ ಸಿದ್ದರಾಮಯ್ಯ ಅವರು ಇಂದಿಗೂ ದೇವರಾಜ ಅರಸು ಅವರ ಆದರ್ಶಗಳನ್ನು ಪಾಲಿಸುತ್ತಿದ್ದಾರೆ.
2006ರ ಹೊತ್ತಿಗೆ ಸಂಪೂರ್ಣ ಕಾಂಗ್ರೆಸ್ಸಿರಾಗಿ ಬದಲಾದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಕಂಡಿದ್ದು ಕೇವಲ 250 ಪ್ಲಸ್ ಮತಗಳನ್ನು ಪಡೆದು ಎಂಬುದು ಗಮನಾರ್ಹ. ಆದರೆ, 2008 ಹಾಗೂ 2013ರಲ್ಲಿ ವರುಣಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಲ್ಲದೆ ಪರಮೇಶ್ವರ್ ಅವರನ್ನು ಹಿಂದಿಕ್ಕಿ ಸಿಎಂ ಪಟ್ಟಕ್ಕೇರಿದರು.
ಜನಪ್ರಿಯ ಯೋಜನೆಗಳ ಹರಿಕಾರ: ಗ್ರಾಮ ಸ್ವರಾಜ್ಯ, ಹಿಂದುಳಿದ ಅಲ್ಪ ಸಂಖ್ಯಾತರ ಉದ್ಧಾರ ಎಂಬ ಕಾಂಗ್ರೆಸ್ ಕನಸಿಗೆ ತಕ್ಕಂತೆ, ಅನ್ನಭಾಗ್ಯ, ಶಾದಿ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಪಶು ಭಾಗ್ಯ ಹೀಗೆ ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕದಲ್ಲಿ ಎಲ್ಲಾ ಸ್ತರ ಜನರ ಆಶೋತ್ತರ ಈಡೇರಿಸುವ ನಿಟ್ಟಿನಲ್ಲಿ ಹಲವು ಬಾರಿ ಸಿದ್ದರಾಮಯ್ಯ ಹಠಮಾರಿತನ ತೋರಿದ್ದಾರೆ.
ತಮ್ಮ ನಿರ್ಲಕ್ಷ್ಯ, ಹಠಮಾರಿತನದಿಂದ ಹಲವು ಪ್ರಾಂತ್ಯದ ಮೇಲ್ವರ್ಗದ ಜನರ ವಿಶ್ವಾಸ ವಂಚಿತರಾಗಿದ್ದಾರೆ. ಸರ್ಕಾರಿ ನೌಕರರಿಗೆ ಇನ್ನೂ ಸಿದ್ದು ಮೇಲೆ ಭರವಸೆ ಇದೆ. ಅದಕ್ಕೆ ತಕ್ಕಂತೆ ಚುನಾವಣೆಗೂ ಮುನ್ನ ನಿವೃತ್ತಿ, ಪಿಂಚಣಿ, ವೇತನ ಆಯೋಗದ ಘೋಷಣೆ ಮಾಡಿದರೆ ಕಾಂಗ್ರೆಸ್ಸಿಗೆ ಭೀಮ ಬಲ ಬಂದಂತ್ತಾಗುತ್ತದೆ.
ಹಠಮಾರಿ, ಖಂಡಿತವಾದಿ: ಮಠ ಮಾನ್ಯಗಳಿಗೆ ಅನುದಾನ ಕಡಿತಗೊಳಿಸಿದ್ದು, ಟಿಪ್ಪು ಜಯಂತಿ ವಿವಾದ ಮೈಮೇಲೆ ಎಳೆದುಕೊಂಡಿದ್ದು, ಗೋಹತ್ಯೆ ನಿಷೇಧದ ವಿವಾದ, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಮೌಢ್ಯ ನಿಷೇಧ ಕಾಯ್ದೆ, ಡಿಕೆ ರವಿ, ಗಣಪತಿ ಸೇರಿದಂತೆ ಬಾಕಿ ಉಳಿದಿರುವ ಪ್ರಮುಖ ಕೇಸುಗಳು, ಐಟಿ ಬಿಟಿ ವಲಯದ ಉದ್ಯೋಗ ಅವಕಾಶ, ಮಹದಾಯಿ, ಕೃಷ್ಣಾ, ಕಾವೇರಿ ವಿವಾದಗಳು ಸಿದ್ದರಾಮಯ್ಯ ಅವರನ್ನು ಚುನಾವಣೆ ಸಂದರ್ಭದಲ್ಲಿ ಕಾಡದೇ ಬಿಡದು.
ರಾಕೇಶ್ ಸಿದ್ದರಾಮಯ್ಯ ಸಾವಿನ ಸೂತಕದ ನಡುವೆಯೂ ಕರ್ತವ್ಯ ಪಾಲನೆಗೆ ಹಾಜರಾದ ಸಿದ್ದರಾಮಯ್ಯ ಅವರನ್ನು ರಾಜಕೀಯ ದ್ವೇಷ ಮರೆತು ಎಲ್ಲಾ ಪಕ್ಷದವರು ಸಾಂತ್ವನಿಸಿದ್ದನ್ನು ಮರೆಯುವಂತಿಲ್ಲ. ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಪ್ರಚಾರ ಬಯಸದ ಸಿದ್ದರಾಮಯ್ಯ ಅವರು ಎಂದಿಗೂ ಮಕ್ಕಳನ್ನು ರಾಜಕೀಯಕ್ಕೆ ಕರೆ ತರುವ ಆಸೆ ಹೊಂದಿರಲಿಲ್ಲ. ಆದರೆ, ಒತ್ತಡಕ್ಕೆ ಮಣಿದು ಕುಟುಂಬ ರಾಜಕೀಯ ಬೆಳೆಸುತ್ತಿರುವ ರಾಜಕಾರಣಿಗಳ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಾರೆ.
ಬತ್ತಳಿಕೆಯಲ್ಲಿರುವ ಹೊಸ ಅಸ್ತ್ರಗಳು: ಚುನಾವಣೆ ಸಂದರ್ಭದಲ್ಲಿ ಸಮತೋಲನ ಬಜೆಟ್ ಮಂಡನೆ ಮಾಡಿ ಸಿದ್ದರಾಮಯ್ಯ ಸೈ ಎನಿಸಿಕೊಳ್ಳುವ ಸಾಧ್ಯತೆಯಿದೆ. ಹೊಸ ತಾಲೂಕುಗಳ ಘೋಷಣೆ, ವಿದ್ಯಾರ್ಥಿಗಳು, ಕಾರ್ಮಿಕ ವರ್ಗ, ಮಹಿಳೆಯರಿಗೆ, ನಗರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಹೆಚ್ಚಿಸುವ ಮೂಲಕ ಎಲ್ಲಾ ವರ್ಗವನ್ನು ಸರ್ಕಾರ ಸಂತೈಸುವ ಯೋಜನೆ ಸದ್ಯ ಸಿದ್ದರಾಮಯ್ಯ ಅವರ ತಲೆಯಲ್ಲಿ ಓಡುತ್ತಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿರುವ ಸಿಎಂ ಅವರ ಬೆನ್ನ ಹಿಂದೆ ಜನಪ್ರಿಯ ಯೋಜನೆಗಳಿವೆ. ಸಾಧನಾ ಸಮಾವೇಶದ ಯಶಸ್ಸಿನ ಖುಷಿಯಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಗಮನದಿಂದ ರಾಜ್ಯದಲ್ಲಿ ಬದಲಾವಣೆ ತರುವ ಇರಾದೆಯಿದೆ.
ಯೋಜನೆಗಳ ಫಲಾನುಭವಿಗಳು, ದಮನೀತ ವರ್ಗ, ಯುವ ಮತದಾರರೆಲ್ಲರೂ ಕಾಂಗ್ರೆಸ್ ಬೆಂಬಲಿಸಲು ಇವಿಷ್ಟೇ ಸಾಕೇ? ಕಾದು ನೋಡಬೇಕಿದೆ.