ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಎಂ.ಬಿ ಪಾಟೀಲ್
Recommended Video
ಮಲ್ಲನಗೌಡ ಬಸವನಗೌಡ ಪಾಟೀಲ್ ಎಂದರೆ ತಕ್ಷಣಕ್ಕೆ ಯಾರಿಗೂ ಅರ್ಥವಾಗದು; ಅದೇ ಎಂ.ಬಿ ಪಾಟೀಲ್ ಎಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಪ್ರಿಯ ಹೆಸರು. ಹಾಲಿ ಕರ್ನಾಟಕ ಸರಕಾರದ ಜಲ ಸಂಪನ್ಮೂಲ ಸಚಿವರಾಗಿರುವ ಪಾಟೀಲರು ಮೂಲತಃ ವಿಜಯಪುರ ಜಿಲ್ಲೆಯವರು. ಇಲ್ಲಿನ ಬಬಲೇಶ್ವರ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.
ಒಮ್ಮೆ ಲೋಕಸಭೆ ಸದಸ್ಯರೂ ಆಗಿದ್ದ ಎಂ.ಬಿ ಪಾಟೀಲ್ ನಾಲ್ಕು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಸದ್ಯ ಪಾಟೀಲರ ಹೆಸರು ಚಾಲ್ತಿಗೆ ಬರಲು ಪ್ರಮುಖ ಕಾರಣ 'ಪ್ರತ್ಯೇಕ ಲಿಂಗಾಯತ ಧರ್ಮ' ಹೋರಾಟ.
ಸ್ವತಃ ಲಿಂಗಾಯತರಾಗಿರುವ ಎಂ.ಬಿ. ಪಾಟೀಲ್ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ನಂತರ ತಮ್ಮ ವರ್ಚಸ್ಸನ್ನು ಮತ್ತಷ್ಟು ವೃದ್ಧಿಸಿಕೊಂಡಿದ್ದಾರೆ. ಈ ಮೂಲಕ 60ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಿರುವ ಉತ್ತರ ಕರ್ನಾಟಕದಲ್ಲಿ ಪ್ರಬಲ ಲಿಂಗಾಯತ ನಾಯಕರಾಗಿ ಬೆಳೆದು ಬಂದಿದ್ದಾರೆ.
ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರುವ ಎಂ.ಬಿ ಪಾಟೀಲರು 'ಬಿಎಲ್ ಡಿಇಎ' ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಜತೆಗೆ ವಿಜಯಪುರದಲ್ಲಿ 'ಬಿಎಲ್ ಡಿಇಎ ವಿಶ್ವವಿದ್ಯಾಲಯ'ವನ್ನೂ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರದಲ್ಲೂ ಕೈಯಾಡಿಸಿದ್ದಾರೆ. ಬೌದ್ಧಿಸಂ, ಬಸವ ತತ್ವಗಳು ಪಾಟೀಲರ ನೆಚ್ಚಿನ ವಿಷಯಗಳಾಗಿವೆ
2013ರ ಚುನಾವಣೆಯಲ್ಲಿ ಅವರು ಬಬಲೇಶ್ವರ ಕ್ಷೇತ್ರದಲ್ಲಿ 62,061 ಮತಗಳನ್ನು ಪಡೆದು ಜೆಡಿಎಸ್ ಅಭ್ಯರ್ಥಿ ವಿಜಯಕುಮಾರ್ ಪಾಟೀಲ್ ರನ್ನು 4,355 ಮತಗಳಿಂದ ಸೋಲಿಸಿದ್ದರು.
ಅಂದಹಾಗೆ 53 ವರ್ಷ ವಯಸ್ಸಿನ ಎಂ.ಬಿ. ಪಾಟೀಲರು ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಈ ದಿಸೆಯಲ್ಲಿ ತಮ್ಮ ಜನಪ್ರಿಯತೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ.