ಹಿಂದುತ್ವದ ಪ್ರತಿಪಾದಕ ಅನಂತ್ ಕುಮಾರ್ ಹೆಗಡೆ
2017ರ ಸೆಪ್ಟೆಂಬರ್ನಲ್ಲಿ ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ ಮಾಡಿದಾಗ ಅನಿರೀಕ್ಷಿತವಾಗಿ ಸಚಿವ ಸ್ಥಾನಕ್ಕೆ ಕೇಳಿಬಂದ ಹೆಸರು ಅನಂತ್ ಕುಮಾರ್ ಹೆಗಡೆ. ಉತ್ತರ ಕನ್ನಡ ಕ್ಷೇತ್ರದ ಸಂಸದರಾದ ಇವರು ಸ್ವತಃ ಕರ್ನಾಟಕದ ಬಿಜೆಪಿ ನಾಯಕರಿಗೆ ಅಚ್ಚರಿಯಾಗುವಂತೆ ಸಚಿವ ಸ್ಥಾನಕ್ಕೇರಿದರು.
ಸಾಮಾಜಿಕ ಜಾಲತಾಣದಲ್ಲಿ 'ಬಿಜೆಪಿಯ ಫೈರ್ ಬ್ಯಾಂಡ್ ನಾಯಕ' ಎಂದೇ ಪ್ರಸಿದ್ಧಿ ಪಡೆದಿದ್ದಾರೆ ಅನಂತ್ ಕುಮಾರ್ ದತ್ತಾತ್ರೇಯ ಹೆಗಡೆ. ಸಚಿವರಾದ 4 ತಿಂಗಳಿನಲ್ಲಿಯೇ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ, ಲೋಕಸಭೆಯಲ್ಲಿ ಕ್ಷಮೆ ಕೇಳಿದ್ದಾರೆ.
ಮೊದಲ ಬಾರಿಗೆ ಕೆನರಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಉತ್ತರ ಕನ್ನಡ ಕ್ಷೇತ್ರದಿಂದ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 1999ರ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವಾ ಅವರು ಅನಂತ್ ಕುಮಾರ್ ಹೆಗಡೆ ಅವರನ್ನು ಸೋಲಿಸಿದ್ದರು.
ಅನಂತ್ ಕುಮಾರ್ ಹೆಗಡೆ ಶಿರಸಿಯ ನಿವಾಸಿ. 1968 ಮೇ 20ರಂದು ಜನನ. ತಂದೆ ದತ್ತಾತ್ರೇಯ ಹೆಗಡೆ, ತಾಯಿ ಲಲಿತಾ ಹೆಗಡೆ. ಶಿರಸಿಯ ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ.
ಹಿಂದೂ ಜಾಗರಣಾ ವೇದಿಕೆ ಮೂಲಕ ಸಾರ್ವಜನಿಕ ಬದುಕಿಗೆ ಪ್ರವೇಶ. ಮೊದಲು ಕೊಡಗು ಜಿಲ್ಲಾ ಸಂಚಾಲಕರಾಗಿ ನೇಮಕ. ನಂತರ ಅನಂತ್ ಕುಮಾರ್ ಹೆಗಡೆ ಅವರಿಗೆ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಹೊಣೆ ನೀಡಲಾಯಿತು.
ಧ್ವಜಾರೋಹಣ ಮಾಡಿದರು : ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ತಾರಕ್ಕಕ್ಕೇರಿದ ಸಂದರ್ಭದಲ್ಲಿ ಅನಂತ್ ಕುಮಾರ್ ಹೆಗಡೆ ನಿಷೇಧಾಜ್ಞೆ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ಧ್ವಜಾರೋಹಣ ಮಾಡಿದರು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದರು.
ಅದು 1994ರ ಆಗಸ್ಟ್ 15 ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸದಂತೆ ನಿಷೇಧಾಜ್ಞೆ ಹೇರಲಾಗಿತ್ತು. ಮೈದಾನಕ್ಕೆ ಪೊಲೀಸ್ ಸರ್ವಗಾವಲು ಹಾಕಲಾಗಿತ್ತು. ಅನಂತ್ ಕುಮಾರ್ ಹೆಗಡೆ ಸುಮಾರು 50 ಯುವಕರೊಂದಿಗೆ ಮೈದಾನಕ್ಕೆ ನುಗ್ಗಿದರು. ರಾಷ್ಟ್ರಧ್ವಜ ಹಾರಿಸಿ ದೇಶದ ಗಮನ ಸೆಳೆದರು.
ಈ ಹೋರಾಟ ಅನಂತ್ ಕುಮಾರ್ ಹೆಗಡೆ ಅವರ ಜೀವನದ ಮಹತ್ವದ ಘಟ್ಟ. ಈ ಘಟನೆ ಬಳಿಕ ಅನಂತ್ ಕುಮಾರ್ ಹೆಗಡೆ ರಾಷ್ಟ್ರೀಯ ವಿಚಾರಧಾರೆ, ಹಿಂದುತ್ವದ ವಿಚಾರದ ಪ್ರತಿಪಾದಕರಲ್ಲಿ ಮುಂಚೂಣಿಗೆ ಬಂದರು.
ಭಟ್ಕಳದಲ್ಲಿ ಕೋಮು ಗಲಭೆ ನಡೆದಾಗ ಹಿಂದೂಪರ ಸಂಘಟನೆಗಳ ನೇತೃತ್ವ ವಹಿಸಿದರು. ಅನಂತ್ ಕುಮಾರ್ ಹೆಗಡೆ ಉಗ್ರ ಪ್ರತಿಭಟನೆ ನಡೆಯಲು ಕಾರಣರಾದರು. ಅದಕ್ಕಾಗಿ ವಿವಿಧ ಪ್ರಕರಣದಲ್ಲಿ ಬಂಧನಕ್ಕೊಳಗಾದರು.
ಅನಂತ್ ಕುಮಾರ್ ಹೆಗಡೆ 1996ರಲ್ಲಿ ಮೊದಲ ಬಾರಿಗೆ 11ನೇ ಲೋಕಸಭೆಗೆ ಕೆನರಾ ಕ್ಷೇತ್ರದಿಂದ ಆಯ್ಕೆಯಾದರು. ಹಣಕಾಸು ಸಮಿತಿಯ ಸದಸ್ಯರಾದರು. 197ರಲ್ಲಿ ವಿದೇಶಾಂಗ ಇಲಾಖೆಯ ಸಮಿತಿಯ ಸದಸ್ಯರಾದರು. ಸದ್ಯ, ನರೇಂದ್ರ ಮೋದಿ ಸಂಪುಟದಲ್ಲಿ ಕೌಶಲ್ಯಾಭಿವೃದ್ಧಿ ಖಾತೆ ಸಚಿವರು.
ವೈದ್ಯರ ಮೇಲೆ ಹಲ್ಲೆ : 2017ರ ಜನವರಿಯಲ್ಲಿ ಅನಂತ್ ಕುಮಾರ್ ಹೆಗಡೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದರು. ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ತಾಯಿಯನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು.
ಆಗ ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಮಧುಕೇಶ್ವರರಾವ್, ಬಾಲಚಂದ್ರ ಅವರ ಮೇಲೆ ಹಲ್ಲೆ ನಡೆಸಿದರು. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ವೈದ್ಯರು ಪ್ರತಿಭಟನೆ ನಡೆಸಿದರು. ಅನಂತ್ ಕುಮಾರ್ ಹೆಗಡೆ ವಿರುದ್ಧ ದೂರು ದಾಖಲಾಯಿತು.
ಶಿರಸಿಯ ಮಾರ್ಕೆಟ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡರು. ಎಫ್ಐಆರ್ ರದ್ದು ಮಾಡುವಂತೆ ಕೋರಿ ಅನಂತ್ ಕುಮಾರ್ ಹೆಗಡೆ ಹೈಕೋರ್ಟ್ ಮೊರೆ ಹೋದರು. ಈ ಪ್ರಕರಣದ ಬಗ್ಗೆ ಇನ್ನೂ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ.
ಹಿಂದುತ್ವದ ಪ್ರತಿಪಾದನೆ ಮೂಲಕವೇ ಚುನಾವಣೆ ಎದುರಿಸಿದ ಅನಂತ್ ಕುಮಾರ್ ಹೆಗಡೆ ಅದರಿಂದಲೇ ಗೆದ್ದು ಬಂದವರು. ಹಿಂದುತ್ವದ ಪರವಾದ ಭಾಷಣಗಳು ಎಂದರೆ ತಕ್ಷಣ ನೆನಪಿಗೆ ಬರುವವರು ಇವರೇ. ಸಚಿವ ಸ್ಥಾನ ಒಲಿದು ಬಂದ ಮೇಲೆಯೂ ಹಿಂದುತ್ವದ ಪರವಾಗಿ ಮೊದಲಿನಂತಯೇ ಭಾಷಣ ಮಾಡುತ್ತಾರೆ.
ರಾಜಕೀಯದ ಹೊರತಾಗಿ 'ಕದಂಬ ಫೌಂಡೇಶನ್' ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯನ್ನು ಅನಂತ್ ಕುಮಾರ್ ಹೆಗಡೆ ಸ್ಥಾಪನೆ ಮಾಡಿದ್ದಾರೆ. ಗ್ರಾಮೀಣ ಭಾಗದ ರೈತರು, ಬಡಜನರ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಸಂಸ್ಥೆ ಮಾಡುತ್ತಿದೆ.