ಕರ್ನಾಟಕದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆದ್ರೆ, ಬಿಎಸ್ಪಿ ಏನ್ಮಾಡುತ್ತೆ?
ಬೆಂಗಳೂರು, ಮೇ 14: ಕರ್ನಾಟಕ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಹುತೇಕ ಅತಂತ್ರ ಸ್ಥಿತಿ ಎಂಬ ಫಲಿತಾಂಶ ಬಂದಿದೆ. ಹೀಗಾಗಿ, ಮತ್ತೊಮ್ಮೆ ಎರಡು ರಾಷ್ಟ್ರೀಯ ಪಕ್ಷಗಳು, ಜೆಡಿಎಸ್ ಬೆಂಬಲಕ್ಕಾಗಿ ಕಾಯಬೇಕಾಗುತ್ತದೆ.
ಜಾತ್ಯಾತೀಯ ಜನತಾ ದಳ(ಜೆಡಿಎಸ್) ಎಂದಿದ್ದರೂ ಬಿಜೆಪಿಯ 'ಬಿ ಟೀಂ' ಎಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರದ ವೇಳೆ ಹೇಳುತ್ತಾ ಬಂದಿದೆ. ಜೊತೆಗೆ ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಅಭ್ಯರ್ಥಿಗಳನ್ನು ಜೆಡಿಎಸ್ ನಿಲ್ಲಿಸಿದೆ.
ಕುಮಾರಸ್ವಾಮಿ ಯಾವ ದಿಕ್ಕಿನಲ್ಲಿ ಬಾಣ ಬಿಡುತ್ತಾರೋ, ಬಲ್ಲವರಾರು?
ಆದರೆ, ಜೆಡಿಎಸ್ ಜತೆ ಮೈತ್ರಿ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಈಗ ಒಂದು ವೇಳೆ ಅತಂತ್ರ ಸ್ಥಿತಿ ಎದುರಾದರೆ, ಕಾಂಗ್ರೆಸ್ ಜತೆ ಜೆಡಿಎಸ್ ಕೈ ಜೋಡಿಸಿದರೆ ಜೆಡಿಎಸ್ ನ ಮುಂದಿನ ಭವಿಷ್ಯಕ್ಕೂ ಪೂರಕವಾಗಲಿದೆ.
ಅದೇ ಬಿಜೆಪಿ ಜತೆ ಮತ್ತೆ ಸಖ್ಯ ಬೆಳೆಸಿದರೆ, ಜೆಡಿಎಸ್ ಗೆ ಬೆಂಬಲ ನೀಡಿರುವ ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಇಬ್ಬಂದಿ ಪರಿಸ್ಥಿತಿ ಎದುರಿಸಲಿದೆ.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ವಿರುದ್ಧ ಮಯಾವತಿ ನೇತೃತ್ವದ ಬಿಎಸ್ಪಿ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ ಹೋರಾಟ ನಡೆಸುತ್ತಿವೆ. ಸ್ಥಳೀಯ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಿ, ತಕ್ಕಮಟ್ಟಿನ ಯಶ ಸಾಧಿಸಿವೆ.
ಚುನಾವಣಾ ಪೂರ್ವ -ಉತ್ತರ ಸಮೀಕ್ಷೆಗಳ ಸರಾಸರಿ : ಅತಂತ್ರ ವಿಧಾನಸಭೆ
2019ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ವಿರುದ್ಧ ಪ್ರಬಲವಾಗಿ ಹೋರಾಟ ನಡೆಸಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಎಸ್ಪಿ ಮೈತ್ರಿ ಪಕ್ಷ ಜೆಡಿಎಸ್ ಇಡುವ ನಡೆ ದೊಡ್ಡ ಹಿನ್ನಡೆಯಾಗಲಿದೆ.
ತೃತೀಯ ರಂಗಕ್ಕೆ ಮತ್ತೊಮ್ಮೆ ಚಾಲನೆ ನೀಡುವ ದೃಷ್ಟಿಯಿಂದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ಗೆ ಬೆಂಬಲ ನೀಡಬೇಕಾದರೆ, ಸಿದ್ದರಾಮಯ್ಯ ಬದಲಿಗೆ ಮತ್ತೊಬ್ಬರನ್ನು ಸಿಎಂ ಆಗಿ ನೇಮಿಸಲು ಸೂಚಿಸಬಹುದು. ಅದರಲ್ಲೂ ದಲಿತ ಸಿಎಂ ಆಗಲಿ ಎಂಬ ಬೇಡಿಕೆ ಬಂದರೆ, ಆಗ ಮಾಯಾವತಿ ಕೂಡಾ ಜೆಡಿಎಸ್ ಬೆಂಬಲ ಮುಂದುವರೆಸುವ ಬಗ್ಗೆ ಯೋಚಿಸಬಹುದಾಗಿದೆ. ಹೀಗಾಗಿ, ಜೆಡಿಎಸ್ ಹಾಗೂ ಬಿಎಸ್ಪಿ ನಡುವಿನ ಮೈತ್ರಿ ಭವಿಷ್ಯ ಕೂಡಾ ಕಾಂಗ್ರೆಸ್ ಕೈಲಿದೆ.