ಹೆಗಡೆಗೆ ವಾರ್ನಿಂಗ್, ಕಾಂಗ್ರೆಸ್ ಕಮಿಷನ್ ಬಗ್ಗೆ ಬಿಎಸ್ ವೈ
Recommended Video
ಬೆಂಗಳೂರು, ಫೆಬ್ರವರಿ 13: "ಅಂಥ ಹೇಳಿಕೆಗಳನ್ನು ನಾನು ಒಪ್ಪೋದಿಲ್ಲ. ಆ ರೀತಿ ಮಾತನಾಡಬೇಡಿ ಅಂತ ಅನಂತಕುಮಾರ್ ಹೆಗಡೆ ಅವರಿಗೆ ಎಚ್ಚರಿಕೆ ನೀಡಲಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾದ ಅನಂತಕುಮಾರ್ ಹೆಗಡೆ ಪದೇ ಪದೇ ಪ್ರಚೋದನಾಕಾರಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಆ ರೀತಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದ್ದೇವೆ ಹಾಗೂ ಅವರು ಕೂಡ ಸಂಸತ್ ನಲ್ಲಿ ಈ ಬಗ್ಗೆ ಕ್ಷಮೆ ಕೇಳಿದ್ದಾರೆ ಎಂದು ಹೇಳಿದ್ದಾರೆ.
ಜವಾರಿ ಕೋಳಿ ತಿಂದು ದೇಗುಲಕ್ಕೆ ಹೋದ ರಾಹುಲ್ ಗೆ ಬಿಎಸ್ ವೈ ತರಾಟೆ
ರಾಜ್ಯದಲ್ಲಿ ಇಪ್ಪತ್ನಾಲ್ಕು ಮಂದಿ ಹಿಂದೂಗಳ ಹತ್ಯೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಾಂಗ್ರೆಸ್ ವಿಫಲವಾಗಿದೆ ಎಂದು ಆರೋಪಿಸಿದರು. ಇನ್ನು ರಾಹುಲ್ ಗಾಂಧಿ ಅವರನ್ನು 'ಎಲೆಕ್ಷನ್ ಹಿಂದೂ' ಎಂದು ಜರಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧ್ಯಕ್ಷರು ದೇವಾಲಯಗಳಿಗೆ ಭೇಟಿ ನೀಡುತ್ತಿರುವುದಕ್ಕೆ ಟೀಕಿಸಿದರು.
ಒಡೆದು ಆಳುವುದು ಕಾಂಗ್ರೆಸ್ ನ ನೀತಿ. ಆದರೆ ಬಿಜೆಪಿಗೆ ಹಿಂದುತ್ವ ಅನ್ನೋದು ಎಲ್ಲ ಧರ್ಮಗಳ ಅಭಿವೃದ್ಧಿ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಅಜೆಂಡಾ. ಜನರನ್ನು ಓಲೈಸುವ ಸಲುವಾಗಿ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ ಎಂದು ಟೀಕಿಸಿದರು.
ವರಿಷ್ಠರ ಜತೆಗೆ ವಿಶ್ವಾಸದ ಕೊರತೆ ಇದೆಯಾ?
ಬಿಜೆಪಿಯ ಕೇಂದ್ರ ನಾಯಕರು ಹಾಗೂ ಯಡಿಯೂರಪ್ಪ ಮಧ್ಯೆ ವಿಶ್ವಾಸದ ಕೊರತೆ ಇದೆಯಾ ಎಂಬ ಅನುಮಾನವನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಭ್ರಷ್ಟಾಚಾರದ ಆರೋಪ ಬಂದಾಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಆ ನಂತರ ಪ್ರತ್ಯೇಕ ಪಕ್ಷ ಸ್ಥಾಪಿಸಿದ ಅವರು, ಬಿಜೆಪಿ ತೊರೆದಿದ್ದರು.
ದೇಶದ ಯಾವುದೇ ರಾಜ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ
ಒಂದು ವರ್ಷದ ಹಿಂದೆಯೇ ಅವರು (ಬಿಜೆಪಿ ವರಿಷ್ಠರು) ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂದು ಹೇಳಿದ್ದಾರೆ. ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಪಕ್ಷದ ವರಿಷ್ಠರು ಹೀಗೆ ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಅಮಿತ್ ಶಾ ಹಿರಿಯರು
ರಾಜ್ಯದಲ್ಲಿ ನಡೆದ ಸಮಾವೇಶವೊಂದರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ತಲೆ ತಗ್ಗಿಸಿ ನಮಸ್ಕರಿಸಿದ್ದರ ಬಗ್ಗೆ ವಿಷಾದ ಇದೆಯೇ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ, ಖಂಡಿತಾ ಇಲ್ಲ. ಅದು ಸರಿಯಲ್ಲ. ಅವರು (ಅಮಿತ್ ಶಾ) ಹಿರಿಯರು ಹಾಗೂ ಪಕ್ಷದ ಅಧ್ಯಕ್ಷರು. ಅವರಿಗೆ ಅಭಿನಂದನೆ ಸಲ್ಲಿಸಿದೆ ಅಷ್ಟೇ ಎಂದು ಯಡಿಯೂರಪ್ಪ ಉತ್ತರಿಸಿದ್ದಾರೆ.
ಇಪ್ಪತ್ತೈದು ಪರ್ಸೆಂಟ್ ಕಮಿಷನ್
ರಾಜ್ಯ ಸರಕಾರ ಹತ್ತು ಪರ್ಸೆಂಟ್ ಕಮಿಷನ್ ಪಡೆಯದೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದ ಯಡಿಯೂರಪ್ಪ, ಆ ಸಂಖ್ಯೆಯನ್ನು ಮತ್ತೂ ಹೆಚ್ಚಿಸಿದರು. ಪ್ರತಿ ಕೆಲಸಕ್ಕೂ ಶೇಕಡಾ ಇಪ್ಪತ್ತರಿಂದ ಇಪ್ಪತ್ತೈದರಷ್ಟು ಕಿಕ್ ಬ್ಯಾಕ್ ಅನ್ನು ರಾಜ್ಯ ಸರಕಾರ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು.
ಕೋರ್ಟ್ ನಲ್ಲಿ ಸಾಬೀತಾಗಿಲ್ಲ
ಸ್ವತಃ ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಇದರಿಂದ ಪಕ್ಷಕ್ಕೆ ಹಾನಿಯಾಗಬಹುದಾ ಎಂಬ ಪ್ರಶ್ನೆಗೆ, ಇಲ್ಲ ಎಂದು ಬಿಎಸ್ ವೈ ಉತ್ತರಿಸಿದ್ದಾರೆ. "ನನ್ನ ಮೇಲಿನ ಆರೋಪವು ಹೈ ಕೋರ್ಟ್ ನಲ್ಲಾಗಲಿ ಅಥವಾ ಸುಪ್ರೀಂ ಕೋರ್ಟ್ ನಲ್ಲಾಗಲಿ ಸಾಬೀತಾಗಿಲ್ಲ" ಎಂದು ಹೇಳಿದ್ದಾರೆ.