ಆಮ್ ಆದ್ಮಿ ಪಾರ್ಟಿ ಪ್ರಚಾರಕ್ಕೆ ರೇಡಿಯೊ ಜಿಂಗಲ್ಸ್ ಬಿಡುಗಡೆ
ಬೆಂಗಳೂರು, ಏಪ್ರಿಲ್ 26: ಆಮ್ ಆದ್ಮಿ ಪಕ್ಷ ಚುನಾವಣಾ ಪ್ರಚಾರಕ್ಕಾಗಿ ರೇಡಿಯೋ ಜಿಂಗಲ್ಸ್ ಹಾಗೂ ಪ್ರಚಾರದ ಹಾಡನ್ನು ಗುರುವಾರ ಬಿಡುಗಡೆ ಮಾಡಿದೆ.
ಕನ್ನಡಿಗರೇ ಎದ್ದೇಳಿ, ನಾಡನ್ನು ಉಳಿಸೋಣ, ಭ್ರಷ್ಟರನ್ನು ತೊಲಗಿಸೋಣ, ನಮ್ಮ ತೆರಿಗೆ ಹಣ ನಮಗಾಗಿಯೇ ಸಧ್ಬಳಕೆಯಾಗಲಿ ಎಂಬ ಆಶಯವುಳ್ಳ, ಜನ ಜಾಗೃತಿಯನ್ನುಂಟು ಮಾಡುವ ಹಾಡಿನಲ್ಲಿ ಹೇಗೆ ರಾಜಕಾರಣಿಗಳು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಎಳೆಎಳೆಯಾಗಿ ಬಿಡಿಸಿ ವಿವರಿಸಲಾಗಿದೆ.
ಎಎಪಿಯ ಪೃಥ್ವಿ ರೆಡ್ಡಿ, ದಾಸರಿ ನಾಮಪತ್ರ ಸಲ್ಲಿಕೆಗೆ ಡೊಳ್ಳು, ಕಂಸಾಳೆ ಮೆರವಣಿಗೆ
ಜಿಂಗಲ್ಸ್ ಹಾಗೂ ಪ್ರಚಾರದ ಹಾಡನ್ನು ಆಮ್ ಆದ್ಮಿ ಪಕ್ಷದ ಸಂಚಾಲಕ ಪೃಥ್ವಿರೆಡ್ಡಿ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿಗಳು ಎರಡು ಸುತ್ತಿನ ಮನೆ-ಮನೆ ಪ್ರಚಾರ ಮುಗಿಸಿದ್ದು, ಜನರಿಂದ ವ್ಯಾಪಕವಾದ ಧನಾತ್ಮಕ ಸ್ಪಂದನೆಗಳು ದೊರೆಯುತ್ತಿವೆ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಈ ಹಾಡುಗಳು ಮತ್ತು ರೇಡಿಯೋ ಜಿಂಗಲ್ಸ್ ಗಳು ಬಲ ತುಂಬಲಿವೆ.
ಕಳಂಕರಹಿತರಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಆಮ್ಆದ್ಮಿ ಪಕ್ಷ ಮಾದರಿ ರಾಜಕಾರಣ ತೋರಿದ್ದು, ಪ್ರತಿ ಚುನಾವಣೆಯಲ್ಲಿ ಆಸ್ತಿ ಡಬಲ್ ಮಾಡಿಕೊಳ್ಳುವ ರಾಜಕಾರಣಿಗಳ ನಡುವೆ ಪರ್ಯಾಯ ರಾಜಕಾರಣದ ಪ್ರತಿನಿಧಿಗಳಾದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಆದರ್ಶವಾಗಿ ನಿಲ್ಲುತ್ತಾರೆ ಎಂದು ಪೃಥ್ವಿರೆಡ್ಡಿ ಹೇಳಿದ್ದಾರೆ.
ಸಮಾಜದ ವಿವಿಧ ಸ್ಥರಗಳಿಗೆ ಸೇರಿದ ವಿವಿಧ ರೀತಿಯ ಹಿನ್ನೆಲೆಯುಳ್ಳ ಯೋಗ್ಯ ಅಭ್ಯರ್ಥಿಗಳನ್ನು ಆಮ್ ಆದ್ಮಿ ಪಕ್ಷ ಕಣಕ್ಕೆ ಇಳಿಸಿದ್ದು, ಪ್ರತಿಯೊಬ್ಬ ಅಭ್ಯರ್ಥಿಯೂ ಸ್ವಚ್ಛ ಹಾಗೂ ಪ್ರಾಮಾಣಿಕ ರಾಜಕಾರಣವನ್ನು ಪ್ರತಿಪಾದಿಸುವವರೇ ಆಗಿದ್ದಾರೆ.