ನಕಲಿ ಮತದಾರರ ಭಾರಿ ಅಕ್ರಮ ಪತ್ತೆ ಹಚ್ಚಿದ ಆಮ್ ಆದ್ಮಿ ಪಾರ್ಟಿ
ಬೆಂಗಳೂರು, ಏಪ್ರಿಲ್ 28: ನಗರದ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಮತದಾರರನ್ನು ಸೃಷ್ಟಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಪ್ಪುಚಿಕ್ಕೆ ಬಳಿಯಲು ಮುಂದಾಗಿದ್ದ ಅಕ್ರಮವನ್ನು ಆಮ್ ಆದ್ಮಿ ಪಕ್ಷ ಬಯಲು ಮಾಡಿದೆ.
ಆಮ್ ಆದ್ಮಿ ಪಕ್ಷ ಕೆಆರ್ ಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದ್ದ ಅಕ್ರಮದ ಈ ಹಿಂದೆ ಮಾಹಿತಿ ನೀಡಿತ್ತು, ಜನಪರವಾಗಿ ಕೆಲಸ ಮಾಡಿ ಚುನಾವಣೆ ಗೆಲ್ಲಲಾಗದ ರಾಜಕಾರಣಿಗಳು ಆಮಿಷಗಳನ್ನು ಒಡ್ಡುವ ಮೂಲಕ , ಚುನಾವಣಾ ಅಕ್ರಮಗಳನ್ನು ನಡೆಸುವ ಮೂಲಕ ಗೆಲ್ಲಲು ಯತ್ನಿಸುತ್ತಾರೆ,.
ಆಪ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕೇಜ್ರಿವಾಲ್, ಸಿಸೋಡಿಯಾ
ಅಂತಹದ್ದೇ ಯತ್ನ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಆಮ್ ಆದ್ಮಿ ಪಕ್ಷದ ಅಂದಾಜಿನ ಪ್ರಕಾರ ಸಿ.ವಿ.ರಾಮನ್ ನಗರದಲ್ಲಿ ಸರಿಸುಮಾರು 35 ಸಾವಿರ ಮತದಾರರು ನಕಲಿ ಮತ್ತು ಬೋಗಸ್. ಈ ಮತದಾರರನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ.
1) ಮತದಾರರ ಹೆಸರು, ಸಂಬಂದಿ ಹೆಸರು ಮತ್ತು ವಿಳಾಸ ಒಂದೇ ಇರುವುದು - 1492 , 2) ಮತದಾರರ ಹೆಸರು ಮತ್ತು ಸಂಬಂದಿ ಹೆಸರು ಒಂದೇ, ಆದರೆ ಅದೇ ಬೂತ್ ಅಲ್ಲಿ ಇರುವವರು - 2922 , 3) ಮತದಾರರ ಹೆಸರು ಮತ್ತು ಸಂಬಂದಿ ಹೆಸರು ಒಂದೇ, ಆದರೆ ಬೇರೆ ಬೇರೆಯ ಬೂತ್ ನಲ್ಲಿ ಇರುವವರು - 18768 ಇದ್ದಾರೆ ಎಂದು ತಿಳಿದುಬಂದಿದೆ.
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಖುದ್ದಾಗಿ 8 ಅಪಾರ್ಟಮೆಂಟ್ ಗಳ 112 ಮನೆಗಳಿಗೆ ಹೋಗಿ ಪರಿಶೀಲಿಸಿ ನೋಡಿದಾಗ, ಆನ್ಲೈನ್ನಲ್ಲಿ ಇರುವ ಮತದಾರರ ಪಟ್ಟಿಗೂ ಭೌತಿಕವಾಗಿ ಪರಿಶೀಲಿಸಿದಾಗ ಸಿಕ್ಕ ಮಾಹಿತಿಗೂ ವ್ಯಾಪಕವಾದ ವ್ಯತ್ಯಾಸಗಳು ಕಂಡು ಬಂದಿವೆ.
ವೋಟರ್ ಲಿಸ್ಟ್ ನಲ್ಲಿ 745 ಮತದಾರರು ಇದ್ದು, ಭೌತಿಕವಾಗಿ ನೋಡಿದಾಗ ಕೇವಲ 54 ಮತದಾರರು ಮಾತ್ರ ಪತ್ತೆಯಾಗಿದ್ದಾರೆ, ಅಲ್ಲಿಗೆ 635 ಮತದಾರರು ನಕಲಿ, ಒಂದೇ ಹೆಸರಿನ ವಿವಿಧ ವಿಳಾಸದ ಬಹುತೇಕ ಒಂದೇ ರೀತಿಯ ವಯಸ್ಸು ಹಾಗೂ ಉಪನಾಮ ಹೊಂದಿರುವ ಪಟ್ಟಿ ಸಿಕ್ಕಿದೆ .
ಇನ್ನು ಕೆಲವು ಪ್ರಕರಣಗಳಲ್ಲಿ ಒಂದೇ ವಿಳಾಸದಲ್ಲಿ ಇಪ್ಪತ್ತು-ಇಪ್ಪತ್ತೈದು ಮತದಾರರು ಇದ್ದು, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಭೌತಿಕವಾಗಿ ಪರಿಶೀಲಿಸಿದಾಗ ಒಂದು ಅಥವಾ ಇಬ್ಬರು ಮತದಾರರು ಮಾತ್ರ ವಾಸವಿರುವ ಬಗ್ಗೆ ತಿಳಿದು ಬಂದಿದೆ . ಇದೇ ರೀತಿಯ ವ್ಯಾಪಕ ಅಕ್ರಮಗಳು ಕ್ಷೇತ್ರದಾದ್ಯಂತ ನಡೆದಿದ್ದು ಕನಿಷ್ಠ ಮೂವತ್ತು ಸಾವಿರ ನಕಲಿ ಮತದಾರರು ಸೇರ್ಪಡೆಯಾಗಿರುವ ಸಾಧ್ಯತೆಯಿದೆ .
ಈ ಗಂಭೀರ, ಪ್ರಜಾಪ್ರಭುತ್ವದ ಉದ್ದೇಶವನ್ನೇ ಮಣ್ಣುಪಾಲು ಮಾಡುವ ಹುನ್ನಾರದ ಚುನಾವಣಾ ಅಕ್ರಮದ ಬಗ್ಗೆ ಆಮ್ ಆದ್ಮಿ ಪಕ್ಷವು ಸಾಕ್ಷಿ ಸಮೇತವಾಗಿ ತಕ್ಷಣವೇ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮತದಾರರ ಪಟ್ಟಿಯನ್ನು ಪುನರ್ ಪರಿಶೀಲಿಸಿ, ಪರಿಷ್ಕರಿಸಬೇಕೆಂದು ಆಗ್ರಹಿಸುತ್ತಿದೆ.
ಮಾತ್ರವಲ್ಲದೇ ಯಾವುದೇ ರೀತಿಯ ನಕಲಿ ಮತದಾನ ನಡೆಯದಂತೆ ತಡೆಯಲು ಸೂಕ್ತವಾದ ಕ್ರಮ ಕೈಗೊಂಡು , ಈ ಅಕ್ರಮದ ಹಿಂದಿರುವ ಯಾವುದೇ ವ್ಯಕ್ತಿ , ಪಕ್ಷ ಹಾಗೂ ಅಭ್ಯರ್ಥಿ ಯಾರನ್ನೂ ಲೆಕ್ಕಿಸದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಅವರನ್ನು ಅವರ ಪಕ್ಷವನ್ನು ಅಸಿಂಧುಗೊಳಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸ ಬೇಕೆಂದು ಮನವಿ ಮಾಡುತ್ತದೆ ಎಂದು ಆಮ್ ಆದ್ಮಿ ಪಕ್ಷದ ಸಹ ಸಂಚಾಲಕ ಮೋಹನ್ ದಾಸರಿ ತಿಳಿಸಿದ್ದಾರೆ.