10 ರಾಜ್ಯಗಳ 13 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ
ನವದೆಹಲಿ, ಮೇ 30 : ಕರ್ನಾಟಕದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆ ಮತ್ತು ದೇಶದ ಇತರ ರಾಜ್ಯಗಳಲ್ಲಿ 4 ಲೋಕಸಭೆ ಮತ್ತು 9 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಗುರುವಾರ, ಮೇ 31ರಂದು ಬೆಳಿಗ್ಗೆ 8 ಗಂಟೆಯಿಂದ ಪ್ರಕಟವಾಗುತ್ತಿದೆ.
ರಾಜರಾಜೇಶ್ವರಿ ನಗರದಲ್ಲಿ ಮೈತ್ರಿಕೂಟದ ಅಂಗಪಕ್ಷಗಳಾದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟುಕೊಂಡು ಜಿದ್ದಾಜಿದ್ದಿ ಕಣಕ್ಕಿಳಿದಿದ್ದರು. ಕರ್ನಾಟಕದ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಇಬ್ಬರಲ್ಲೊಬ್ಬರು ಗೆದ್ದರೂ ಅಷ್ಟೇ ಸೋತರೂ ಅಷ್ಟೆ, ಗೆಲುವು-ಸೋಲು ಮೈತ್ರಿಕೂಟಕ್ಕೇ.
ಅಂದುಕೊಂಡಂತೆ ಕಾಂಗ್ರೆಸ್ಸಿನ ಮುನಿರತ್ನ ನಾಯ್ಡು ಅವರು ಗೆಲುವಿನ ಸನಿಹದಲ್ಲಿದ್ದು, ಬಿಜೆಪಿಯ ಮುನಿರಾಜು ಅವರು ಎರಡನೇ ಸ್ಥಾನದಲ್ಲಿ ಮತ್ತು ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು ಮೂರನೇ ಸ್ಥಾನದಲ್ಲಿ ಇದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಹುಚ್ಚ ವೆಂಕಟ್ ಅವರು ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ.
ಉಪಚುನಾವಣೆ ಫಲಿತಾಂಶ 2018 LIVE : ಕ್ಷಣಕ್ಷಣದ ಮಾಹಿತಿ
ಈ ಎಲ್ಲ ಕ್ಷೇತ್ರಗಳಿಗೆ ಮೇ 28ರಂದು ಸೋಮವಾರ ಮತದಾನ ನಡೆದಿತ್ತು. ಭಾರತೀಯ ಜನತಾ ಪಕ್ಷಕ್ಕೆ ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರ ಭಾರೀ ಪ್ರತಿಷ್ಠೆಯ ಕಣವಾಗಿದೆ. ಏಕೆಂದರೆ, ಗೋರಖಪುರ ಮತ್ತು ಫುಲಪುರ ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಅಧಿಕಾರರೂಢವಾಗಿರುವ ಬಿಜೆಪಿ ಅವಮಾನಕರ ಸೋಲು ಕಂಡಿತ್ತು ಮತ್ತು ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಜಯಭೇರಿ ಬಾರಿಸಿತ್ತು. ಹೀಗಾಗಿ ಕೈರಾನಾ ಕ್ಷೇತ್ರವನ್ನು ಬಿಜೆಪಿ ಗೆಲ್ಲಲೇಬೇಕಾಗಿದೆ.
ಈ ಎಲ್ಲ ಕ್ಷೇತ್ರಗಳ ಫಲಿತಾಂಶವನ್ನು ಒನ್ಇಂಡಿಯಾ ಕನ್ನಡದಲ್ಲಿ ಮೇ 31ರ ಬೆಳಿಗ್ಗೆ 8 ಗಂಟೆಯಿಂದ ನೋಡಬಹುದಾಗಿದೆ. ಯಾರು ಮುನ್ನಡೆ ಸಾಧಿಸಿದ್ದಾರೆ, ಯಾರು ಹಿನ್ನಡೆ ಕಂಡಿದ್ದಾರೆ, ಟ್ರೆಂಡ್ ಯಾವ ರೀತಿಯಿದೆ, ಗೆದ್ದವರಾರು, ಬಿದ್ದವರಾರು ಇತ್ಯಾದಿ ಕ್ಷಣಕ್ಷಣದ ಮಾಹಿತಿಯನ್ನು ಅಂಕಿಅಂಶಗಳ ಜೊತೆ ಒನ್ಇಂಡಿಯಾ ನಿಮಗಾಗಿ ತರುತ್ತಿರುತ್ತದೆ.