ಇಡಿ ದಾಳಿಯಿಂದ ಕೈ ಪಾಳಯದ ಬಣ ರಾಜಕೀಯಕ್ಕೆ ಹೊಸ ತಿರುವು
ಬೆಂಗಳೂರು, ಆಗಸ್ಟ್ 06: ಸಿದ್ದರಾಮಯ್ಯ ಅವರೇ ನಮ್ಮ ನಾಯಕರು, ಅವರೇ ನಮ್ಮ ರಾಜ್ಯದ ಮುಖ್ಯಮಂತ್ರಿ ಅವರು ಒಪ್ಪಿದರೆ ಚಾಮರಾಜಪೇಟೆ ನನ್ನ ಕ್ಷೇತ್ರವನ್ನೇ ಬಿಟ್ಟುಕೊಡುತ್ತೇನೆ! ಈ ಮಾತುಗಳು ರಾಜ್ಯದ ಜನರು ಮರೆತಿಲ್ಲ. ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ಮುಂದಿನ ಸಿಎಂ ಅಭ್ಯರ್ಥಿ ಕುರಿತು ಶಾಸಕರೊಬ್ಬರು ನೀಡಿದ ಹೇಳಿಕೆ ಕಾಂಗ್ರೆಸ್ ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ಹೈಕಮಾಂಡ್ ಇಬ್ಬರು ನಾಯಕರನ್ನು ಕೂರಿಸಿ ಸಂಧಾನ ಕೂಡ ಮಾಡಿತ್ತು. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಕೆಲವು ಶಾಸಕರು ಹೇಳಿದ ಹೇಳಿಕೆಗಳು ಪಕ್ಷದ ಬಣರಾಜಕೀಯವನ್ನು ಹೊರ ಹಾಕಿತ್ತು. ಅದರಲ್ಲೂ ಖಡಕ್ ಆಗಿ ಬ್ಯಾಂಟಿಂಗ್ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್!
ಇದೀಗ ಇಡಿ ದಾಳಿಗೆ ಒಳಗಾದ ವೇಳೆ ಡಿ.ಕೆ. ನಡೆದುಕೊಂಡ ರೀತಿಗೆ ಮನಸೋತು ಜಮೀರ್ ಅಹಮದ್ ಮಾಜಿ ಸಿಎಂ ಸಿದ್ದು ಬಣದ ಪಥ ಬದಲಿಸಲಿದ್ದಾರೆಯೇ ? ಜಮೀರ್ ಮನೆ ಮೇಳೆ ಇಡಿ ದಾಳಿ ನಡೆದ ಬಳಿಕ ಆಗುತ್ತಿರುವ ಬೆಳವಣಿಯಿಂದ ಇಂತಹ ಪ್ರಶ್ನೆ ಎದ್ದಿದೆ. ಅಂತಹ ಮಹತ್ವದ ಬೆಳವಣಿಗೆಗೆ ಇಡಿ ದಾಳಿ ನಾಂದಿ ಹಾಡಿದೆ.
ರಾಜಕೀಯ ಶತ್ರು ಶತ್ರುವಲ್ಲ, ಪರಮ ಮಿತ್ರ!
ಹೌದು. ಚಾಮರಾಜ ಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆ ಮೇಲೆ ಇಡಿ ದಾಳಿಯಾಗುತ್ತಿದ್ದಂತೆ ಮೊದಲು ಸುದ್ದಿಗೋಷ್ಠಿ ಕರೆದು ಪ್ರತಿಕ್ರಿಯೆ ನೀಡಿದ್ದು ಡಿ.ಕೆ. ಶಿವಕುಮಾರ್. ಜಮೀರ್ ಅಹಮದ್ ಖಾನ್ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತ. ಬಿಜೆಪಿಯಲ್ಲಿ ಯಾರೂ ಭ್ರಷ್ಟರು ಇಲ್ಲವೇ? ಅವರು ಮಾಡದ ಭ್ರಷ್ಟಾಚಾರ ಜಮೀರ್ ಮಾಡಿದರೇ? ಬಿಜೆಪಿ ಕೆಲವರನ್ನು ಟಾರ್ಗೆಟ್ ಮಾಡಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳೂತ್ತಿದೆ ಎಂದು ನೇರವಾಗಿ ಡಿಕೆಶಿ ಆರೋಪ ಮಾಡಿದರು. ಎರಡು ತಿಂಗಳ ಹಿಂದೆಷ್ಟೇ ಸಿದ್ದುಪರ ಬ್ಯಾಟಿಂಗ್ ಮಾಡಿದ್ದ ಜಮೀರ್ ಬಗ್ಗೆ ಕಾಳಜಿ ವಹಿಸಿ ಬಿಜೆಪಿ ಹಾಗೂ ಬಿಜೆಪಿ ನಾಯಕರ ಭ್ರಷ್ಟಾಚಾರ ಪ್ರಕರಣ ಉಲ್ಲೇಖಿಸಿ ಹರಿಹಾಯ್ದರು.
ಆಪರೇಷನ್ ಕಮಲ ಸಂಬಂಧ ಐದು ಕೋಟಿ ಮನೆಯಲ್ಲಿಟ್ಟಿದ್ದರು ಎಂದಿದ್ದ ಶಾಸಕ ಶ್ರೀನಿವಾಸ ಗೌಡರ ಮನೆ ಮೇಲೆ ಯಾಕೆ ಇಡಿ ದಾಳಿ ಮಾಡಲಿಲ್ಲ? ಬಿಜೆಪಿ ಅಧಿಕಾರಕ್ಕೆ ತರಲು ಮನೆ ಮಾರಿ ಹಣ ಕೊಟ್ಟಿದ್ದೀನಿ ಎಂದಿದ್ದ ರಮೇಶ್ ಜಾರಕಿಹೊಳಿ ಮೇಲೆ ಯಾಕೆ ಮನಿ ಲ್ಯಾಂಡ್ರಿಗ್ ಕೇಸು ಹಾಕಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದ್ದರು. ಒಂದು ಪಕ್ಷ ಹಾಗೂ ಒಂದು ಸಮುದಾಯದ ನಾಯಕರನ್ನು ಇಡಿ ಟಾರ್ಗೆಟ್ ಮಾಡಿದೆ. ತನಿಖಾ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ದೊಡ್ಡಮಟ್ಟದಲ್ಲಿ ಧ್ವನಿಯೆತ್ತಿದ್ದರು. ರೋಷನ್ ಬೇಗ್ ವಿಚಾರ ಬಂದಾಗ ಅದರ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ನೀಡಲೇ ಇಲ್ಲ.
ಸಿದ್ದರಾಮಯ್ಯ ಸೈಲೆಂಟ್ ಟ್ವೀಟ್ ಮರ್ಮ ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಲ್ಲಿ ಒಬ್ಬರು ಶಾಸಕ ಜಮೀರ್. ಮುಂದಿನ ಚುನಾವಣೆಗೆ ತನ್ನ ಕ್ಷೇತ್ರವನ್ನೇ ಬಿಟ್ಟು ಕೊಡುವುದಾಗಿ ತ್ಯಾಗದ ಮಾತುಗಳನ್ನು ಆಡಿದ್ದು ಜಮೀರ್ ಅಹಮದ್. ಅಷ್ಟೇ ಅಲ್ಲ,, ಯಾವತ್ತಿಗೂ ನಮ್ಮ ನಾಯಕರು ಸಿದ್ದರಾಮಯ್ಯ ಅವರೇ ಎಂದು ಕೆಲ ದಿನಗಳ ಹಿಂದಷ್ಟೇ ಡಿಕೆಶಿ ಬಣಕ್ಕೆ ಟಾಂಗ್ ಕೊಟ್ಟಿದ್ದರು. ಜಮೀರ್ ಮನೆ ಮೇಲೆ ಇಡಿ ದಾಳಿ ಮಾಡಿದಾಗ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ಕರೆದು ಮಾತನಾಡಿದ್ದರೆ ಅದರ ಲೆಕ್ಕಾಚಾರವೇ ಬೇರೆಯದ್ದೇ ಆಗಿರುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ಆಪ್ತ ಜಮೀರ್ ಮನೆ ಮೇಲಿನ ರೇಡ್ ಬಗ್ಗೆ ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತಲಿಲ್ಲ. ಇದು ಬಿಜೆಪಿಯ ರಾಜಕೀಯ ಪ್ರೇರಿತ ದಾಳಿ. ಕೇಂದ್ರ ಸರ್ಕಾರ ಅಧಿಕಾರ ದರುಪಯೋಗ ಪಡಿಸಿಕೊಂಡು ಪ್ರತಿ ಪಕ್ಷಗಳನ್ನು ಎದುರಿಸುವ ಕೆಲಸ ಮಾಡುತ್ತಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿ ಸುಮ್ಮನಾದರು. ಒಂದು ತನಿಖಾ ಸಂಸ್ಥೆಗೆ ಕೊಡಬೇಕಾದ ಗೌರವ ಕೊಡುವ ಜತೆಗೆ ಬೇರೆ ಯಾರೋ ಮಾಡುವ ಯಡವಟ್ಟುಗಳಿಂದ ತನ್ನ ವರ್ಚಸ್ಸು ಕಡಿಮೆ ಮಾಡಿಕೊಳ್ಳಬಾರದು ಎಂಬ ನಿಲುವಿಗೆ ಬದ್ಧರಾಗಿ ಅನಿವಾರ್ಯತೆಗೆ ಬಿದ್ದು ಕೇವಲ ಒಂದು ಟ್ವೀಟ್ ಮಾಡಿ ಸುಮ್ಮನಾದರು.
ಸಿದ್ದು ಫೀಲ್ಡ್ ಗೆ ಇಳಿದ್ರೆ ಮಾತಲ್ಲಿ ಸೋಲಿಸೋರು ಯಾರು?
ಪ್ರಬುದ್ಧ ರಾಜಕಾರಣಕ್ಕೆ ಸೀಮಿತವಾಗಿಟ್ಟುಕೊಂಡಿರುವ ಸಿದ್ಧರಾಮಯ್ಯ ಅವರು ಜಮೀರ್ ಮನ ಓಲೈಸುವ ಉದ್ದೇಶವೇ ಇಟ್ಟುಕೊಂಡು ಟ್ವೀಟ್ ಮಾಡಿದ್ದೇ ಆದಲ್ಲಿ ಬಿಜಿಪಿ ನಾಯಕರ ಬುಡ ಅಲ್ಲಾಡಿಸುತ್ತಿದ್ದರು. ಸಿದ್ದು ಅವರ ಮೊನಚು ಮಾತುಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದವು. ಆದರೆ, ತನ್ನ ಆಪ್ತನೇ ಆಗಿದ್ದರೂ ತಪ್ಪು ಮಾಡಿದ ಆರೋಪಕ್ಕೆ ಗುರಿಯಾದವರ ಮೇಲಿನ ತನಿಖೆ ಬಗ್ಗೆಯಾಗಲೀ, ತನಿಖಾ ಸಂಸ್ಥೆಗಳ ಬಗ್ಗೆ ಹೇಳಿಕೆ ಕೊಡುವುದಿಲ್ಲ. ಒಬ್ಬರನ್ನು ರಕ್ಷಣೆ ಮಾಡಿಕೊಳ್ಳಲು ಇನ್ನೊಬ್ಬರ, ಇನ್ನೊಂದು ಪಕ್ಷದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ.
ಅದೇ ಬಿಜೆಪಿ ಪಕ್ಷದ ಆಡಳಿತವನ್ನು ಟೀಕಿಸುವ ಸಂದರ್ಭ ಎದುರಾದರೆ ಸಿದ್ದು ಸ್ಟೇಟ್ ಮೆಂಟ್ಗಳನ್ನು ಸೋಲಿಸೋಕೆ ಯಾರಿಂದಲೂ ಸಾಧ್ಯವಗಲ್ಲ. ತನ್ನದೆ ಹಳ್ಳಿ ಶೈಲಿಯಲ್ಲಿ ಛೂ ಬಾಣ ಬಿಟ್ಟು ತಣ್ಣಗಾಗಿಸುತ್ತಾರೆ. ಆದರೆ, ಜಮೀರ್ ಮೇಲಿನ ಇಡಿ ದಾಳಿ ವಿಚಾರದಲ್ಲಿ ಕೇವಲ ಒಂದು ಲೈನ್ ಟ್ವೀಟ್ಗೆ ಸೀಮಿತಗೊಳಿಸಿಕೊಂಡು ಸುಮ್ಮನಾದರು. ತನ್ನ ಕ್ಷೇತ್ರವನ್ನೇ ತ್ಯಾಗ ಮಾಡಿದ ಗೆಳೆಯ ಎಂಬ ಆಸೆಗೆ ಬಿದ್ದೂ ಜಮೀರ್ ಪರ ಬ್ಯಾಟಿಂಗ್ ಮಾಡಲಿಲ್ಲ. ಇದು ಗುರುವಾರ ಸಿದ್ದು ಮಾಡಿರುವ ಟ್ವೀಟ್ ಮತ್ತು ಡಿಕೆಶಿ ಸುದ್ದಿಗೋಷ್ಠಿ ನೋಡಿದ ಪ್ರತಿಯೊಬ್ಬರಿಗೂ ಅರ್ಥವಾಗದೇ ಇರದು. ಸಿದ್ದು ಅವರ ಪ್ರಬುದ್ಧ ನಡೆ ಜಮೀರ್ ಪಥ ಬದಲಿಸಲು ಕಾರಣವಾಗದರೂ ಅಚ್ಚರಿ ಪಡಬೇಕಿಲ್ಲ.
ಸಿದ್ದು ಹೆಸರು ಪ್ರಸ್ತಾಪಿಸಲಿಲ್ಲ ಯಾಕೆ?
ಎರಡು ತಿಂಗಳ ಹಿಂದಷ್ಟೇ ಜಮೀರ್ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ನ ಸಿಎಂ ಕ್ಯಾಂಡಿಡೇಟ್ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದರು. ಇದು ಡಿಕೆಶಿಯನ್ನು ಕೆರಳಿಸಿತ್ತು. ಕಾಂಗ್ರೆಸ್ ಪಕ್ಷದ ಸಿಎಂ ಬಗ್ಗೆ ಹೈಕಮಾಂಡ್ ಸೋನಿಯಾಗಾಂಧಿ ಕರೆಸಿಕೊಂಡು ಹೇಳಿದ್ದರಾ? ಜಮೀರ್ ಹದ್ದುಬಸ್ತಿನಲ್ಲಿರುವುದು ಒಳಿತು ಎಂದು ಎಚ್ಚರಿಕೆ ಕೊಟ್ಟಿದ್ದರು. ಅಚ್ಚರಿ ಏನೆಂದರೆ, ಇಡಿ ದಾಳಿ ಪೂರ್ಣಗೊಂಡ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಜಮೀರ್, ನಮ್ಮ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಅಭಿನಂದನೆ ಸಲ್ಲಿಸಿದರು. ಇದೊಂದು ರಾಜಕೀಯ ಪ್ರೇರಿತ ದಾಳಿ. ಯಾರೋ ನನ್ನ ರಾಜಕೀಯ ಶತ್ರುಗಳು ಮನೆ ಬಗ್ಗೆ ಇಡಿ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅದೇ ಅಪ್ಪಿ ತಪ್ಪಿಯೂ ಸಿದ್ದರಾಮಯ್ಯ ಹೆಸರೂ ಪ್ರಸ್ತಾಪಿಸಲಿಲ್ಲ. ಜಮೀರ್ ಮನೆ ಮೇಲೆ ದಾಳಿ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಜಮೀರ್ ಇಡಿ ದಾಳಿ ಎದುರಿಸಲು ಕಾನೂನು ಸಮರ್ಥರಿದ್ದಾರೆ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಜಮೀರ್ ಅವರ ಇವತ್ತಿನ ನಡವಳಿಕೆ ನೋಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದು ಬಣ ಬಿಡುವ ನಿಶ್ಚಲತೆ ಕಾಣುತ್ತಿದೆ!
ಬರೀಗೈಯಲ್ಲಿ ವಾಪಸು ಬಂದ ಜಮೀರ್ ಪಥ ಬದಲಾವಣೆ
ಇಡಿ ದಾಳಿ ಬಳಿಕ ಸುದ್ದಿಗೋಷ್ಠಿ ನಡೆಸಿ ಕೆಪಿಸಿಸಿ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದ ಜಮೀರ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದರು. ಆದರೆ ಸಿದ್ದರಾಮಯ್ಯ ಅವರು ಸಿಗಲಿಲ್ಲ. ಇಡಿ ದಾಳಿ ಮುಗಿದ ಬಳಿಕ ಜಮೀರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಪ್ರಯತ್ನ ಫಲಿಸಲಿಲ್ಲ. ಜಮೀರ್ ಮೇಲಿನ ಇಡಿ ದಾಳಿ ಕುರಿತು ಟ್ವೀಟ್ ಮಾಡಿ ಸುಮ್ಮನಾಗುವ ಮೂಲಕ ತಮ್ಮ ಪ್ರಬುದ್ಧ ರಾಜಕಾರಣ ತೋರಿಸಿದ್ದಾರೆ.
ಇನ್ನೊಂದಡೆ ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ ಎಂಬ ಫಿಲಾಸಫಿಯಲ್ಲಿ ನಂಬಿಕೆ ಇಟ್ಟಿರುವ ಡಿಕೆಶಿ ಎದುರಾಳಿ ಬಣದ ದೊಡ್ಡ ಕೈಯನ್ನು ತನ್ನತ್ತ ಸೆಳೆದು ಆಪ್ತ ಮಿತ್ರ ಮಾಡಿಕೊಂಡಿದ್ದಾರೆ. ವಿರೋಧಿಗಳನ್ನು ಮಿತ್ರರನ್ನಾಗಿ ಪರಿವರ್ತಿಸುವ ಡಿಕೆಶಿಯ ಚಾಣಾಕ್ಷತೆ ಕೂಡ ಹೌದು. ಭವಿಷ್ಯದಲ್ಲಿ ಡಿಕೆಶಿಯೇ ನಮ್ಮ ನೆಚ್ಚಿನ ನಾಯಕ. ಅವರೇ ರಾಜ್ಯದ ಸಿಎಂ ಕ್ಯಾಂಡಿಡೇಟ್ ಎಂದು ಜಮೀರ್ ಹೇಳಿಕೆ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ. ಅಂತೂ ಚಾಮರಾಜಪೇಟೆ ಶಾಸಕ ಜಮೀರ್ ಡಿಕೆಶಿ ಬಣ ಸದ್ದಿಲ್ಲದೇ ಸೇರಲಿದ್ದಾರೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ. ಒಂದು ತಿಂಗಳ ಹಿಂದೆ ಪರಮ ವೈರಿಗಳಾಗಿದ್ದ ಜಮೀರ್ ಮತ್ತು ಡಿಕೆಶಿ ಪರಮಾಪ್ತರಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಇದೇ ಅಲ್ಲವೇ ರಾಜಕೀಯ!