ತಿರುವು ಪಡೆದುಕೊಂಡ ಮೈಸೂರು ದೇವಸ್ಥಾನ ತೆರವು ಪ್ರಕರಣ!
ಬೆಂಗಳೂರು, ಸೆ. 18: ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಉಚ್ಚಗಣಿಯ ಮಹದೇವಮ್ಮ ದೇವಸ್ಥಾನ ತೆರವು ಮಾಡಲಾಗಿತ್ತು. ದೇವಸ್ಥಾನ ತೆರವು ಆಗುತ್ತಿದ್ದಂತೆಯೆ ತೀವ್ರ ವಿರೋಧವನ್ನು ರಾಜ್ಯ ಸರ್ಕಾರ ಎದುರಿಸುತ್ತಿದೆ.
ಉಚ್ಚಗಣಿಯ ಮಹದೇವಮ್ಮ ದೇವಸ್ಥಾನ ತೆರವು ಪ್ರಕರಣ ತಿರುವು ಪಡೆದುಕೊಂಡಿದೆ. ಎಲ್ಲ ಧರ್ಮಗಳ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿ ಎಂದು ಸುಪ್ರೀಂಕೋರ್ಟ್ ಸೂಚನೆ ಇಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರ ಆದೇಶ ಮಾಡಿತ್ತು. ಆದರೆ ಇದೀಗ ರಾಜ್ಯ ಸರ್ಕಾರದ ನಡೆಯನ್ನು ನಾಡಿನ ಮಠಾಧೀಶರು ಸಂಶಯದಿಂದ ನೋಡುತ್ತಿರುವುದು ವರದಿಯಾಗಿದೆ.
ವೀರಶೈವ-ಲಿಂಗಾಯತ ದೇವಸ್ಥಾನಗಳನ್ನು ತೆರವುಗೊಳಿಸುವ ಹುನ್ನಾರ ನಡೆದಿದೆ. ಅದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಅವಕಾಶ ಮಾಡಿ ಕೊಡುತ್ತಿದೆ ಎಂಬ ಗಂಭೀರ ಆರೋಪವನ್ನು ಮಠಾಧೀಶರು ಮಾಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಹಿಂದಕ್ಕೆ ಸರಿಯುತ್ತಿರುವ ಸಂದರ್ಭದಲ್ಲಿ ವೀರಶೈವ ಲಿಂಗಾಯತ ದೇವಸ್ಥಾನ ಹಾಗೂ ಮಠಗಳನ್ನು ರಾಜ್ಯ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಗಂಭೀರ ಆರೋಪ ವೀರಶೈವ-ಲಿಂಗಾಯತ ಮಠಾಧೀಶರಿಂದ ಬಂದಿದೆ.
ಬಿಜೆಪಿ ಸರ್ಕಾರದ ಮೇಲೆ ಮಠಾಧೀಶರ ಗಂಭೀರ ಆರೋಪ!
ಹಿಂದೂ ಸಂಸ್ಕೃತಿ ನಾಶ ಮಾಡುವ ಮತ್ತು ವೀರಶೈವ-ಲಿಂಗಾಯತ ದೇವಸ್ಥಾನಗಳನ್ನು ತೆರವುಗೊಳಿಸುವ ಯತ್ನದಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬಿಜೆಪಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಅವರು ಧಾರವಾಡದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದ ಲಿಂಗಾಯತ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, "ನೆಲಸಮಗೊಳಿಸಿರುವ ನಂಜನಗೂಡಿನ ಪುರಾತನ ದೇವಾಲಯವನ್ನು ಪುನಃ ನಿರ್ಮಾಣ ಮಾಡಿಕೊಡಬೇಕು. ನಮ್ಮ ರಾಜ್ಯದಲ್ಲಿ ನಡೆದಿರುವ ಇಂತಹ ವ್ಯವಸ್ಥೆಯನ್ನು ಖಂಡಿಸುತ್ತೆನೆ ಎಂದಿದ್ದಾರೆ. ಜೊತೆಗೆ ಮತ್ತೊಂದು ಗಂಭೀರ ಆರೋಪವನ್ನು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದಾರೆ.
ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ ಆರಂಭ!
ಹಿಂದೆ ಡಿ.ವಿ. ಸದಾನಂಗೌಡ ಅವರು ಮುಖ್ಯಮಂತ್ರಿಗಳಾಗಿದ್ದಾಗಲೂ ಲಿಂಗಾಯತ-ವೀರಶೈವ ಮಠಗಳಿಗೆಬ ಹಿನ್ನಡೆಯಾಗಿತ್ತು. ಇದೀಗ ಮತ್ತೆ ಅದೇ ಮರುಕಳಿಸಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.
ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಮೈಸೂರಿನ ನಿರಂಜನ ಮಠಕ್ಕೆ 200 ವರ್ಷಗಳ ಇತಿಹಾಸವಿದೆ. 1892 ರಲ್ಲಿ ಸ್ವಾಮಿ ವಿವೇಕಾನಂದ ಅವರು ಈ ಮಠಕ್ಕೆ ಭೇಟಿ ನೀಡಿದ್ದರು. ಆಗ ಅವರಿಗೆ ನಿರಂಜನ ಮಠದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆ ಮಠದ ಒಂದು ಎಕರೆ ಜಾಗವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ವೀವೇಕ ಸ್ಮಾರಕ ನಿರ್ಮಿಸಲು ಪರಭಾರೆ ಮಾಡಲು ತೀರ್ಮಾನಿಸಿದ್ದರು. ಜೊತೆಗೆ 5 ಕೋಟಿ ರೂಪಾಯಿಗಳನ್ನು ಸರ್ಕಾರ ಕೊಟ್ಟಿತ್ತು" ಎಂದು ದಿಂಗಾಲೇಶ್ವರ ಸ್ವಾಮೀಜಿ ವಿವರಿಸಿದ್ದಾರೆ.
ನಮ್ಮ ದೇವಸ್ಥಾನಗಳನ್ನು ಮಾತ್ರ ತೆರವುಗೋಳಿಸಲಾಗುತ್ತಿದೆ!
"ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಿರಂಜನ ಮಠಕ್ಕೆ ಹಿನ್ನಡೆಯಾಗಿತ್ತು. ಆಗ ನಾನು ಮೈಸೂರಿಗೆ ಹೋಗಿ ನಿರಂಜನ ಮಠದ ಸ್ವಾಮಿಜಿ ಭಕ್ತರ ಸಭೆ ಮಾಡಿದ್ದೆನೆ. ಪುರಾತನ ತತ್ವ ಇಲಾಖೆಗೆ ಸೇರಿದೆಯೋ? ಇಲ್ಲವೋ? ಎಂಬುದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಆದರೂ ಈಗ ಲಿಂಗಾಯತ ದೇವಸ್ಥಾನಗಳನ್ನು ತೆರವುಗೋಳಿಸಲಾಗುತ್ತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.
ಇದೀಗ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ದೇವಸ್ಥಾನಗಳನ್ನು ನ್ಯಾಯಾಲಯದ ಆದೇಶ ಮುಂದಿಟ್ಟುಕೊಂಡು ನೆಲಸಮಗೊಳಿಸಲು ಸರಕಾರ ಹೊರಟಿದೆ.ಇದು ಇಡೀ ಸಮಾಜದ ಜನರಿಗೆ ನೋವುಂಟು ಮಾಡಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಲಿಂಗಾಯತ-ವೀರಶೈವ ಮಠಗಳು ಟಾರ್ಗೆಟ್!
ಬಿಜೆಪಿ ಸರಕಾರದಲ್ಲಿ ಹಿಂದೂ ಧರ್ಮದ ಮತ್ತು ವೀರಶೈವ-ಲಿಂಗಾಯತ ಸಮಾಜದ ದೇವಾಲಯಗಳಿಗೆ ರಕ್ಷಣೆ ಇಲ್ಲದಾಗಿದೆ. ಸಿಎಂ ಬೊಮ್ಮಾಯಿ ಈ ವಿಷಯವನ್ನು ಗಂಭೀರವಾಗಿ ಪರಿಗಣಸಿದಿದ್ದರೆ, ನಾವು ನಮ್ಮ ಮುಂದಿನ ನಡೆಯನ್ನು ಸಮಾಜದ ಸ್ವಾಮೀಜಿಗಳ ಜೊತೆ ಚರ್ಚಿಸಿ ಸ್ಪಷ್ಟಪಡಿಸುತ್ತೇವೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದ್ದಾರೆ.
ಬೊಮ್ಮನಹಳ್ಳಿ-ಮುಳ್ಳಳ್ಳಿಯ ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ಹಿರೇನಾಗಾಂವ ಶ್ರೀ ಜಯಶಾಂತಲಿಂಗ ಸ್ವ್ವಾಮೀಜಿ, ಮಂಟೂರನ ಶ್ರೀ ಶಿವಲಿಂಗ ಸ್ವಾಮೀಜಿ, ಗಡಿಗೌಡಗಾವದ ಶ್ರೀ ಶಾಂತವೀರ ಶಿವಾಚಾರ್ಯರು, ತಾಳಿಕೋಟಿಯ ಶ್ರೀ ಶಿವಯೋಗಿ ಶಿವಾಚಾರ್ಯರು ಮಾಧ್ಯಮಗೋಷ್ಠಿಯಲ್ಲಿದ್ದರು.