ಡಿಬೇಟ್ : ದೇವೇಗೌಡರು ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕೆ?
17ನೇ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮೇ 23ಕ್ಕಿಂತ ಕೇವಲ ಐದು ದಿನ ಮೊದಲು ಮೇ 18ರಂದು 86 ವರ್ಷ ಪೂರೈಸಿ 87ನೇ ವಯಸ್ಸಿಗೆ ಕಾಲಿಡಲಿರುವ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರು ತಮ್ಮ ಕಟ್ಟಕಡೆಯ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು 28 ಕ್ಷೇತ್ರಗಳಲ್ಲಿ ಕೇವಲ 8 ಸೀಟುಗಳಿಗೆ ಮಾತ್ರ ಸೆಣಸುತ್ತಿರುವ ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡ ಅವರು ಈ ಬಾರಿ ಮೈತ್ರಿ ಒಪ್ಪಂದದಂತೆ ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ.
ತುಮಕೂರಿನಿಂದಲೇ ದೇವೇಗೌಡರು ಸ್ಪರ್ಧೆ, ಸೋಮವಾರ ನಾಮಪತ್ರ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ, ಎಚ್ ಡಿ ರಮೇಶ್, ಎಚ್ ಡಿ ಬಾಲಕೃಷ್ಣ ಗೌಡ, ಎಚ್ ಡಿ ಶೈಲಜಾ ಮತ್ತು ಎಚ್ ಡಿ ಅನುಸೂಯಾ ಎಂಬ ಮಕ್ಕಳಿರುವ ದೇವೇಗೌಡರು, ತಮ್ಮಿಬ್ಬರು ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರನ್ನು ಕೂಡ ಚುನಾವಣೆ ಕಣಕ್ಕೆ ಇಳಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಚಿತ್ರರಂಗದಿಂದ ನೇರವಾಗಿ ಜಿಗಿದು ಮಂಡ್ಯ ಲೋಕಸಭೆ ಚುನಾವಣಾ ಕಣಕ್ಕೆ ಧುಮುಕಿದ್ದರೆ, ರಾಜಕೀಯದಲ್ಲಿಯೇ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರು, ದೇವೇಗೌಡರ ಹಾಸನ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುವುದು ದಿಟವಾಗಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ದೇಶದ 11ನೇ ಪ್ರಧಾನಿಯಾಗಿ 1 ಜೂನ್ 1996ರಿಂದ 21 ಏಪ್ರಿಲ್ 1997ರವರೆಗೆ ಆಡಳಿತ ನಡೆಸಿದ್ದ ದೇವೇಗೌಡ ಅವರು ಈ ವಯಸ್ಸಿನಲ್ಲಿಯೂ ಚುನಾವಣೆಗೆ ನಿಲ್ಲುವ ಅವಶ್ಯಕತೆಯಿತ್ತೆ ಎಂಬ ಚರ್ಚೆ ಶುರುವಾಗಿದೆ. ನಾನು ಇನ್ನೆಂದು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದ ದೇವೇಗೌಡರು ಮತ್ತೆ ಸ್ಪರ್ಧಿಸುತ್ತಿರುವುದೇಕೆ?
ವಿರೋಧಿಗಳನ್ನು ಪತರಗುಟ್ಟಿಸಿದ ದೇವೇಗೌಡರ ಚಾಣಾಕ್ಷ ನಡೆಗೆ ಉಘೇ ಉಘೇ
ಈಗಾಗಲೆ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ದೇವೇಗೌಡರು ಅತ್ಯಂತ ಭಾವುಕರಾಗಿ ತಮ್ಮ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟಿದ್ದಾರೆ. ಈ ನಿರ್ಧಾರದ ಹಿಂದೆ ಎಚ್ ಡಿ ರೇವಣ್ಣ ಅವರ ಒತ್ತಾಯ ಮತ್ತು ಜೆಡಿಎಸ್ ನಲ್ಲಿ ಪ್ರಜ್ವಲ್ ಪ್ರಬಲವಾಗಿ ಬೆಳೆಯುತ್ತಿರುವುದೇ ಕಾರಣ ಎಂದು ರಾಜಕೀಯ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಚುನಾವಣೆಗೆ ದೇವೇಗೌಡರ ಸ್ಪರ್ಧೆ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?
ಇತ್ತೀಚೆಗೆ ನಡೆದಿರುವ ಸಮೀಕ್ಷೆಯೊಂದರ ಪ್ರಕಾರ, 8 ಕ್ಷೇತ್ರಗಳಲ್ಲಿ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಜಯಶಾಲಿ ಆಗಲಿದೆ. ಆ ಕ್ಷೇತ್ರ ಯಾವುದು ಎಂಬುದು ಇನ್ನೂ ಸಸ್ಪೆನ್ಸ್. ಇದಕ್ಕೆ ಉತ್ತರ ಮೇ 23ರಂದು ದೊರೆಯಲಿದೆ. ಈ ಕಾರಣದಿಂದಾಗಿಯೇ ದೇವೇಗೌಡ ಅವರು ತುಮಕೂರು ಲೋಕಸಭೆ ಕ್ಷೇತ್ರಕ್ಕೆ ಧುಮುಕಲಿದ್ದಾರೆಯೆ? ಕಾರಣ ಅಸ್ಪಷ್ಟ. ಆದರೆ, ದೇವೇಗೌಡರು ಕಣಕ್ಕಿಳಿಯುವುದಂತೂ ಗ್ಯಾರಂಟಿ.
ದೇವೇಗೌಡರಿಗೆ 86 ವಯಸ್ಸು ಹತ್ತಿರವಾಗಿದ್ದರೂ, ಮುದ್ದೆ ಊಟ ಮಾಡಿ, ಯೋಗ ಮಾಡಿ ಇನ್ನೂ ಗಟ್ಟಿಮುಟ್ಟಾಗಿದ್ದಾರೆ. ಲೋಕಸಭೆಯ ಹಲವಾರು ಕಲಾಪಗಳಲ್ಲಿಯೂ, ಚರ್ಚೆಗಳಲ್ಲಿಯೂ ಭಾಗವಹಿಸಿದ್ದಾರೆ. ಇನ್ನೂ ಮಹಾಘಟಬಂಧನ್ ದಲ್ಲಿಯೂ ಎರಡನೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಭಾರೀ ಸಮಾವೇಶ ನಡೆಸುತ್ತಿರುವುದಾಗಿಯೂ ಹೇಳಿದ್ದಾರೆ. ಮಣ್ಣಿನ ಮಗ, ರಾಜಕೀಯ ಮುತ್ಸದ್ದಿ ದೇವೇಗೌಡರು ರಾಜಕೀಯವನ್ನು ಬಿಟ್ಟರೂ ರಾಜಕೀಯ ಅವರನ್ನು ಬಿಡುವುದಿಲ್ಲ.
ಇಷ್ಟೆಲ್ಲ ಹೇಳಿದ ಮೇಲೂ, ಉತ್ತರ ಹುಡುಕಬೇಕಾದ ಪ್ರಶ್ನೆ : ದೇವೇಗೌಡರು ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕೆ?