ಚರ್ಚೆ: ಜನೌಷಧದ ಬಗ್ಗೆ ದಾರಿ ತಪ್ಪಿಸುತ್ತಿದ್ದಾರಾ ವೈದ್ಯರು?
ನೆಗಡಿಯೇ ಇರಲಿ ಅಥವಾ ಕ್ಯಾನ್ಸರ್ ಆಗಿರಲಿ ಔಷಧದ ವೆಚ್ಚ ಜೇಬು ಮೀರಿದ್ದೇ ಆಗಿರುತ್ತದೆ. ಸಣ್ಣ ಖಾಯಿಲೆಗಳಿಗೂ ದುಬಾರಿ ಔಷಧ ಕೊಡುವುದು ಫ್ಯಾಷನ್ ಏನೋ ಎಂಬ ರೀತಿಯಲ್ಲಿ ಚಾಲ್ತಿಯಲ್ಲಿದೆ. ಇದರಿಂದ ಬಡವರನ್ನು ಬಚಾವು ಮಾಡಿದ್ದು ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರ, ಆದರೆ ಈಗ ಅದರ ಮೇಲೂ ಅನುಮಾನ ಮೂಡುವಂತೆ ಮಾಡುತ್ತಿದ್ದಾರೆ ಕೆಲವು ವೈದ್ಯರು.
ಜನೌಷಧ ಕೇಂದ್ರದ ಔಷಧ ಬಳಸಿ ಖಾಯಿಲೆ ವಾಸಿಯಾಗಲಿಲ್ಲವೆಂದರೆ ಅದಕ್ಕೆ ವೈದ್ಯರು ಜವಾಬ್ದಾರರಲ್ಲ ಎಂದು ಧಾರವಾಡದ ವೈದ್ಯರೊಬ್ಬರು ತಮ್ಮ ಕ್ಲಿನಿಕ್ನಲ್ಲಿ ಸೂಚನೆ ಪ್ರಕಟಿಸಿದ್ದಾರೆ.
ಜನೌಷಧ ಕೇಂದ್ರದ ಔಷಧ ತೆಗೆದುಕೊಂಡರೆ ರೋಗಿಗಳೇ ಜವಾಬ್ದಾರರು, ವೈದ್ಯರಲ್ಲ!
ಧಾರವಾಡದ ಈ ವೈದ್ಯರ ಸೂಚನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿಜವಾಗಿಯೂ ಜನೌಷಧ ಕೇಂದ್ರದ ಔಷಧಗಳು ಪರಿಣಾಮಕಾರಿ ಅಲ್ಲವೇ ಅಥವಾ ವೈದ್ಯರು ತಮ್ಮ ಲಾಭಕ್ಕೆ ಕುತ್ತಾಗಬಾರದೆಂದು ಜನೌಷಧ ಕೇಂದ್ರದ ಔಷಧಗಳನ್ನು ಬಳಸದಂತೆ ರೋಗಿಗಳ ಮೇಲೆ ಮಿತಿ ಹೇರುತ್ತಿದ್ದಾರಾ?
ಕೇಂದ್ರ ಸರ್ಕಾರದ ಬಹು ಜನಪ್ರಿಯ ಯೋಜನೆಗಳಲ್ಲಿ ಜನೌಷಧ ಕೇಂದ್ರವೂ ಒಂದು, ಬಡವರಿಗೆ ಕಡಿಮೆ ದರದಲ್ಲಿ ಔಷಧಗಳು ದೊರಕಬೇಕೆಂದು ನಿರ್ಮಿಸಲಾದ ಕೇಂದ್ರಗಳಿವು. ಇವುಗಳಿಂದ ಕೋಟ್ಯಂತರ ಜನರಿಗೆ ಉಪಯೋಗವಾಗುತ್ತಿರುವುದು ಸುಳ್ಳಲ್ಲ. ಆದರೆ ಕೆಲವು ವೈದ್ಯರ ಲಾಭಕೋರತನ (?)ದಿಂದ ಜನೌಷಧ ಕೇಂದ್ರದ ಮೇಲೆ ಜನ ನಂಬಿಕೆ ಕಳೆದುಕೊಳ್ಳುವ ಮುನ್ಸೂಚನೆ ಕಾಣುತ್ತಿದೆ.
ಈ ಬಗ್ಗೆ ಓದುಗರಾದ ನಿಮ್ಮ ಅಭಿಪ್ರಾಯವೇನು, ಜನೌಷಧ ಕೇಂದ್ರಗಳ ಔಷಧಗಳು ನಿಜಯಾಗಿಯೂ ಅಪ್ರಯೋಜಕವೇ ಅಥವಾ ವೈದ್ಯರ ಲಾಭಕೋರತನದಿಂದಾಗಿ ಹೀಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಯೇ ಕಮೆಂಟ್ನಲ್ಲಿ ಬರೆದು ತಿಳಿಸಿ.