ರಾಹುಲ್ ಅಪ್ಪುಗೆಯ ಮೌಲ್ಯವನ್ನು ಕಳೆದು ಹಾಕಿದ ಕಣ್ಮಿಟುಕು
ನವದೆಹಲಿ, ಜುಲೈ 20 : ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಂದ ನಂ.1 ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಕರೆಯಿಸಿಕೊಂಡಿರುವ ರಾಹುಲ್ ಗಾಂಧಿ ಅವರ ವರ್ತನೆ ಅಪಹಾಸ್ಯಕ್ಕೆ ಮಾತ್ರವಲ್ಲ ತೀವ್ರ ಟೀಕೆಗೂ ಗುರಿಯಾಗಿದೆ.
ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ರಾಹುಲ್ ಅವರ ಮೇಲೆ ಇದ್ದ ಅಪಾರವಾದ ನಿರೀಕ್ಷೆ, ಕೆಲವೆಡೆ ಹಾಸ್ಯರಸದಿಂದ ಕೂಡಿದ್ದರೂ ಗಾಂಭೀರ್ಯತೆಯಿಂದ ಕೂಡಿದ್ದ ಕೆಲ ತೂಕದ ಮಾತುಗಳ ಮೌಲ್ಯವನ್ನು, ಭಾಷಣದ ನಂತರ ರಾಹುಲ್ ನಡೆದುಕೊಂಡ ರೀತಿ ಕಡಿಮೆ ಮಾಡಿಬಿಟ್ಟಿದೆ ಎಂಬ ಮಾತುಗಳು ಸಾಮಾಜಿಕ ತಾಣದಲ್ಲಿ ಕೇಳಿಬರುತ್ತಿವೆ.
ಅವಿಶ್ವಾಸ ನಿರ್ಣಯ LIVE: ರಾಹುಲ್ ನಂತರ ಮೋದಿ ಭಾಷಣದ ಮೋಡಿ
ಸಭಾಧ್ಯಕ್ಷರಾಗಿರುವ ಸುಮಿತ್ರಾ ಮಹಾಜನ್ ಅವರು ಕೂಡ, ನರೇಂದ್ರ ಮೋದಿಯವರನ್ನು ರಾಹುಲ್ ಗಾಂಧಿಯವರು ತಬ್ಬಿಕೊಂಡಿದ್ದು ಮತ್ತು ನಂತರ ಇಡೀ ಬಿಜೆಪಿ ಬಳಗವನ್ನೇ ಅಪಹಾಸ್ಯ ಮಾಡುವಂತೆ ಕಣ್ಣು ಮಿಟುಕಿಸಿದ್ದನ್ನು ಟೀಕಿಸಿದ್ದಾರೆ. ಇದು ಸದನದ ಗಾಂಭೀರ್ಯತೆಗೆ ತಕ್ಕುದ್ದಲ್ಲ ಎಂದಿದ್ದಾರೆ. ಇವರೇನಾದರೂ ಚಿಪ್ಕೋ ಆಂದೋಲನ ಮಾಡುತ್ತಿದ್ದಾರಾ ಎಂದು ರಾಜನಾಥ್ ಸಿಂಗ್ ಲೇವಡಿ ಮಾಡಿದ್ದಾರೆ.
ಆಡಳಿತ ಪಕ್ಷವನ್ನು ಟೀಕಿಸುವುದಕ್ಕೆ, ಅದರ ವೈಫಲ್ಯಗಳನ್ನು ಎತ್ತಿ ತೋರಿಸುವುದಕ್ಕೆ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಅಧ್ಯಕ್ಷರಿಗೆ ಎಲ್ಲ ಹಕ್ಕೂ ಇದೆ. ಅವರು ಆ ಎಲ್ಲ ಆರೋಪಗಳನ್ನು ಸಾಕ್ಷಿ ಸಮೇತರಾಗಿ ಸದನದ ಮುಂದಿಟ್ಟು ತಮ್ಮ ಮಿತ್ರ ಪಕ್ಷದ ಸದಸ್ಯರ ಮನವನ್ನು ಗೆಲ್ಲಲು ಅದ್ಭುತ ಅವಕಾಶವಿತ್ತು.
ಅಪ್ಪುಗೆ, ಕಣ್ಣೇಟು... ರಾಹುಲ್ ವರ್ತನೆಗೆ ಸಂಸತ್ತಿನಲ್ಲಿ ಭೂಕಂಪ!
ಆದರೆ, ಆ ಅವಕಾಶವನ್ನು ರಾಹುಲ್ ಗಾಂಧಿ ಹಾಳುಗೆಡವಿಕೊಂಡಿದ್ದಾರೆ. ಭಾಷಣದುದ್ದಕ್ಕೂ ಕಿಡಿ ಮಾತುಗಳಿಂದ ನರೇಂದ್ರ ಮೋದಿಯವರನ್ನು ತಿವಿದು, ನಂತರ ಅವರನ್ನು ತಬ್ಬಿಕೊಳ್ಳುವ ವ್ಯಕ್ತಿಯಲ್ಲಿ ಅವರ ಬಗ್ಗೆ ಗೌರವವಿದೆ, ಪ್ರೀತಿಯಿದೆ ಎಂದು ನಂಬುವುದಾದರೂ ಹೇಗೆ? ಅದರಲ್ಲೂ ಕಣ್ಣು ಮಿಟುಕಿಸಿರುವುದಂತೂ 'ಚೈಲ್ಡಿಶ್' ಎಂದು ವಿಶ್ಲೇಷಿಸಲಾಗುತ್ತಿದೆ.
ಮೋದಿಯವರನ್ನು ಸದ್ಭಾವನೆಯಿಂದಲೇ ತಬ್ಬಿಕೊಳ್ಳಲು ಬಂದಿದ್ದಾರೆಂದು ತಿಳಿಯೋಣ. ಆದರೆ, ಅವರನ್ನು ಅವರ ಸ್ಥಾನದಿಂದ ಏಳಿ ಎಂದು ಆಗ್ರಹಿಸುತ್ತಿದುದು ಅಸಭ್ಯತನದ ಪರಮಾವಧಿಯಂತೆ ಕಂಡುಬಂದಿತು. ಇದೇನು ನಡೆಯುತ್ತಿದೆ ಎಂದು ನರೇಂದ್ರ ಮೋದಿ ಕೂಡ ಕ್ರೋಧಿತರಾಗಿದ್ದು ಕಂಡಿತು. ತಬ್ಬಿಕೊಂಡರೂ ಸಾವರಿಸಿಕೊಂಡ ಮೋದಿ ಅವರು ರಾಹುಲ್ ರನ್ನು ಅಭಿನಂದಿಸಿ ಕಳಿಸಿದ್ದು ಮೋದಿಯವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
ರಾಹುಲ್ -ಮೋದಿ ಅಪ್ಪುಗೆ ಕಂಡು ಅವಾಕ್ಕಾದ ಟ್ವೀಟ್ ಲೋಕ
ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ. ಹಿಂದೆ ವಿರೋಧಿ ಪಕ್ಷದಲ್ಲಿದ್ದವರು ಕೂಡ ತಮ್ಮ ನಡವಳಿಕೆಯಿಂದಾಗಿ ಆಡಳಿತ ಪಕ್ಷದ ಗೌರವಕ್ಕೆ, ಅಭಿನಂದನೆಗೆ ಪಾತ್ರರಾದ ಉದಾಹರಣೆಗಳು ಬೇಕಾದಷ್ಟಿವೆ. ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಚಂದ್ರಶೇಖರ, ಸೋಮನಾಥ ಚಟರ್ಜಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಜೈಪಾಲ್ ರೆಡ್ಡಿ, ಲಾಲ್ ಕೃಷ್ಣ ಅಡ್ವಾಣಿ, ಮನಮೋಹನ ಸಿಂಗ್ ಮುಂತಾದವರು ತಮ್ಮ ಉತ್ತಮ ನಡವಳಿಕೆಯಿಂದಲೇ ಪಕ್ಷಾತೀತರಾಗಿ ಮೆಚ್ಚುಗೆ ಗಳಿಸಿದ ಸಂಸದರು.
ಇವರೆಲ್ಲರ ನಡುವೆ ರಾಹುಲ್ ಗಾಂಧಿ ಅವರ ನಡವಳಿಕೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಾಯಕರೆಲ್ಲರೂ, ರಾಹುಲ್ ಗಾಂಧಿ ಅವರು ಮೋದಿಯವರನ್ನು ತಬ್ಬಿಕೊಂಡು, ಜಾದೂ ಕಿ ಝಪ್ಪಿಯಿಂದ ದ್ವೇಷ ಅಸೂಯೆಯನ್ನು ಹೇಗೆ ಹಿಮ್ಮೆಟ್ಟಿಸಬಹುದು ಎಂದು ರಾಹುಲ್ ಅವರು ಇಡೀ ಜಗತ್ತಿಗೆ ತೋರಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ರಾಹುಲ್ ಅವರ ನಡವಳಿಕೆಯನ್ನು ಹಾಡಿ ಹೊಗಳಿದ್ದಾರೆ. ನೀವೇನಂತೀರಿ?