ಚರ್ಚೆ: ಅಖಂಡ ಕರ್ನಾಟಕದ ಅನಿವಾರ್ಯ, ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗು
'ಉತ್ತರ ಕರ್ನಾಟಕ'ವು ಪ್ರತ್ಯೇಕ ರಾಜ್ಯ ಆಗಬೇಕು ಎಂಬ ಕೂಗು ಅಥವಾ ಆಗ್ರಹ ಕಿವಿಗೆ ಬಿದ್ದಾಗಲೆಲ್ಲ ಒಂದು ಬಗೆಯಲ್ಲಿ ಮನಸಿಗೆ ಹಿಂಸೆ ಆಗುತ್ತದೆ. ಇಂಥದ್ದೊಂದು ಬೇಡಿಕೆ ಹಿಂದೆ ನಿಜವಾಗಲೂ ಒಪ್ಪಬಹುದಾದ ಕಾರಣಗಳು ಇವೆಯೋ ಅಥವಾ ಇಲ್ಲವೋ ಅನ್ನೋದು ಬೇರೆ ಮಾತು. ಆದರೆ ಅದರ ದೂರಗಾಮಿ ಪರಿಣಾಮವನ್ನು ನಿಜಕ್ಕೂ ಯೋಚಿಸಿಯೇ ಇಂಥ ಬೇಡಿಕೆ ಇಟ್ಟಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ.
ಅಭಿವೃದ್ಧಿ ವಿಚಾರವಾಗಿ ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬುದು ಆಕ್ರೋಶ. ಅದರಲ್ಲಿ ಸತ್ಯವೂ ಇದೆ. ಹಾಗಂತ ಅಭಿವೃದ್ಧಿಗಾಗಿ ಈ ವರೆಗೆ ಸರಕಾರಗಳು ಏನೂ ಮಾಡೇ ಇಲ್ಲ ಎಂದು ಹೇಳಲು ಸಾಧ್ಯವೆ? ಅಭಿವೃದ್ಧಿಯಲ್ಲಿ ಆಗಿರುವ ಹಿನ್ನಡೆಗೆ ಪರಿಹಾರ ಕಂಡುಕೊಳ್ಳಬೇಕೆ ವಿನಾ ಸಂಬಂಧ ಕಡಿದುಕೊಳ್ಳುವ ಮಾತನಾಡಿದರೆ ಅದು ಒಪ್ಪಲು ಸಾಧ್ಯವಾ?
ಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿ
ಪ್ರತ್ಯೇಕ ರಾಜ್ಯ ಆಯಿತು ಅಂದುಕೊಳ್ಳಿ. ಆಗ ಆ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ಹಣ ಬೇಕಲ್ಲವೆ? ಅದರ ಮೂಲ ಯಾವುದು? ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಕೇಳಬೇಕಾಗುತ್ತದೆ. ಆಗ ಕೂಡ ಅನುದಾನ ಸಿಕ್ಕರೆ ಸಿಕ್ಕೀತು, ಇಲ್ಲದಿದ್ದರೆ ಇಲ್ಲ. ಇನ್ನು ವರಮಾನದ ವಿಚಾರಕ್ಕೆ ಬಂದರೆ ಅಂಥ ದೊಡ್ಡ ಆದಾಯ ಬರುವ ಮೂಲ ಯಾವುದಿದೆ?
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಳುತ್ತಿರುವುದು ಇದೇ ಪ್ರಶ್ನೆಯನ್ನು. ಆದರೆ ಅವರು ಒಂದಿಷ್ಟು ಸಿಟ್ಟಿನಲ್ಲಿ ಆಡಿದ ಮಾತು ಆಕ್ರೋಶಕ್ಕೆ ಕಾರಣವಾಯಿತು. ಆದರೆ ಉತ್ತರ ಕರ್ನಾಟಕಕ್ಕೆ ಸಿಗಬೇಕಾದ ಎಲ್ಲ ರೀತಿಯ ಮಾನ್ಯತೆ, ಅಂದರೆ ಅದು ರಾಜಕೀಯದಿಂದ ಹಿಡಿದು ಪ್ರತಿಯೊಂದರಲ್ಲೂ ದಕ್ಷಿಣ ಕರ್ನಾಟಕ ಜಿಲ್ಲೆಯ ಜನರಿಗೆ ಸಿಗುವಂಥ ಮನ್ನಣೆ ಸಿಕ್ಕಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗುವ ವಿಷಯ.
ಆದ್ದರಿಂದಲೇ ಈ ಹಂತದಲ್ಲಿ ಮೂಲ ಸೌಕರ್ಯ, ಶಿಕ್ಷಣ, ನೀರಾವರಿ, ಉದ್ಯೋಗ ಸೃಷ್ಟಿ, ರಾಜಕೀಯ ಸ್ಥಾನಮಾನವೂ ಸೇರಿದಂತೆ ಯಾವುದನ್ನು, ಎಷ್ಟು ಪ್ರಮಾಣದಲ್ಲಿ ನೀಡಲೇಬೇಕೋ ಅದನ್ನು ರಾಜಕೀಯ ಲೆಕ್ಕಾಚಾರಗಳನ್ನು ಬದಿಗಿಟ್ಟು ನೀಡಬೇಕು. ಅಧಿಕಾರದಲ್ಲಿದ್ದಾಗ ಒಂದು ಬಗೆ, ಸಿಗದಿದ್ದಾಗ ಮತ್ತೊಂದು ಬಣ್ಣ ಹಾಕುವ ಅಪ್ರಾಮಾಣಿಕ ರಾಜಕಾರಣಿಗಳಿಂದ ಜನರು ಕೂಡ ದಾರಿ ತಪ್ಪಬಾರದು.
ಏನಿದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು? ಆ.2ರ ಬಂದ್ ಯಾಕಾಗಿ?
ಎರಡು ಗುಂಪು, ಎರಡು ಮನಸ್ಥಿತಿಯವರು, ಎರಡು ಬೇರೆಯಾದ ಅಭಿಪ್ರಾಯ ಹೊಂದಿದವರು ಮಾತನಾಡುವಾಗ ಮುಖ್ಯವಾಗಿ ಸಮಾಧಾನವಾಗಿ ಇರಬೇಕು. ಎರಡು ತುದಿಗಳನ್ನು, ಎರಡೂ ಬದಿಯಿಂದ ಜೋರಾಗಿ ಜಗ್ಗಿದರೆ ಆಗುವುದೇನು ಅನ್ನೋದನ್ನು ಹೇಳುವ ಅಗತ್ಯವಿಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂಬ ಕೂಗಿಗೆ ಸಮಾಧಾನದ ಧ್ವನಿಯಿಂದ ಉತ್ತರಿಸುವ ಕೆಲಸ ಆಗಬೇಕು.
ಕರ್ನಾಟಕದ ಅಖಂಡತೆಗೆ ಧಕ್ಕೆ ಆಗಬಾರದು ಎಂಬುದು ಒನ್ಇಂಡಿಯಾ ಕನ್ನಡದ ಆಶಯ. ಒಂದೇ ಭಾಷೆ ಮಾತನಾಡುವ, ಒಂದೇ ರೀತಿ ಭಾವನೆ ವ್ಯಕ್ತಪಡಿಸುವ, ನಮ್ಮ ನೆಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾವವನ್ನು ಬೇರ್ಪಡಿಸುವ ಕೆಲಸ ಆಗಬಾರದು. ಅದೇ ವೇಳೆ ದಶಕಗಳಿಂದಲೂ ಅಭಿವೃದ್ಧಿ ವಿಷಯದಲ್ಲಿ ಹಿಂದುಳಿದಿರುವ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಇಂತಿಷ್ಟೇ ವರ್ಷದಲ್ಲಿ ಅಭಿವೃದ್ಧಿ ಪಡಿಸುವ ಗುರಿ ಹಾಕಿಕೊಂಡು, ಆ ದಿಕ್ಕಿನಲ್ಲಿ ಕೆಲಸ ಆರಂಭಿಸಬೇಕು.
ಪ್ರತ್ಯೇಕ ರಾಜ್ಯದ ಬೇಡಿಕೆ ತಳ್ಳಿ ಹಾಕಿದ ಒನ್ಇಂಡಿಯಾ ಕನ್ನಡ ಓದುಗರು
ಅಭಿವೃದ್ಧಿ ಅಳೆಯಲು ಉತ್ತರ ಹಾಗೂ ದಕ್ಷಿಣ ಕರ್ನಾಟಕ ಎಂದು ಅಳತೆಗೋಲು ಮಾಡುವುದು ಸರಿಯೇ? ಇಂಥ ಸನ್ನಿವೇಶ ಸೃಷ್ಟಿಯಾಗಲು ಕಾರಣ ಯಾರು? ಕರ್ನಾಟಕ ಅಖಂಡವಾಗಿ ಉಳಿಸಿಕೊಳ್ಳಬೇಕಾದ ಕರ್ತವ್ಯ ಎಲ್ಲರದೂ ಅಲ್ಲವೆ? ಈಗಿನ ಸಂದರ್ಭ ಇನ್ನೆಂದೂ ಬಾರದಂತೆ ಏನು ಮಾಡಬಹುದು ಅಂತ ನಿಮಗೆ ಅನ್ನಿಸುತ್ತದೆ ಅನ್ನೋ ಅಭಿಪ್ರಾಯವನ್ನು ನಮ್ಮ ಜತೆಗೆ ಹಂಚಿಕೊಳ್ಳಿ.