ಹೊಸ ವರ್ಷದ ಹೊಸ್ತಿಲಿನಲ್ಲಿ ಮರೆಯಲಾರದ ಬೆಂಗಳೂರಿನ ಅಪರಾಧ ಲೋಕದ ಹೆಜ್ಜೆಗಳು !
ಬೆಂಗಳೂರು, ಜನವರಿ 02 : ಲಾಕ್ ಡೌನ್ ವೇಳೆ ಜಾಲಿ ರೇಡ್ ಗೆ ಹೋಗಿದ್ದ ನಟಿ ಶರ್ಮಿಳಾ ಮಾಂಡ್ರೆಯ ಕಾರು ಅವಘಡ, ಫೇಸ್ ಬುಕ್ ಪೋಸ್ಟ್ ಗೆ ಹೊತ್ತಿ ಉರಿದ ಮಹಾನಗರಿ, ವರ್ಷ ಪೂರ್ತಿ ಸ್ಯಾಂಡಲ್ ವಡ್ ಸಿನಿಲೋಕವನ್ನೇ ಅಲುಗಾಡಿಸಿದ ಮಾದಕ ಲೋಕ !
ಕರೋನಾ ಮಹಾ ಮಾರಿಯ ಆತಂಕದಲ್ಲಿ ವರ್ಷ ಮುಗಿದಿದೆ. ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಬೆಂಗಳೂರಿನ ಅಪರಾಧ ಲೋಕದ ಪುಟಗಳನ್ನು ತಿರುವಿ ಹಾಕಿದರೆ ಕರೋನಾ ಹೊಡೆತಕ್ಕೆ ರಾಜಧಾನಿ ಪಾತಕ ಲೋಕವೇ ತಣ್ಣಗಾಗಿದೆ. ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರಗಳು ಕಡಿಮೆಯಾಗಿವೆ. ಆದರೆ, ಎಲ್ಲವನ್ನೂ ಮೀರಿ ಇಡೀ ದೇಶವೇ ಇತ್ತ ತಿರುಗಿ ನೋಡುವಂತೆ ಮಾಡುವ ಹಲವು ಅಪರಾಧಗಳಿಗೆ ಬೆಂಗಳೂರು ಸಾಕ್ಷಿಯಾಯಿತು. ದಶಕಗಳು ಕಳೆದರೂ ಮರೆಯಲಾಗದ ಅಪರಾಧ ಪ್ರಕರಣಗಳ ನೆನಪು ಹಾಗೂ ಬೆಂಗಳೂರು ಅಪರಾಧ ಲೋಕದ ಕಿರು ಚಿತ್ರಣ ಇಲ್ಲಿದೆ.
ಮಾಂಡ್ರೆ ಕಾರು ಅವಘಡ:
ಕರೋನಾ ಭೀತಿಯಲ್ಲಿ ಇಡೀ ರಾಜ್ಯವೇ ಸ್ಥಗತಿಗೊಂಡಿತ್ತು. ಲಾಕ್ ಡೌನ್ ನಿಯಮ ಜಾರಿಗೆ ತಂದಿದ್ದರಿಂದ ಬೆಂಗಳೂರು ಬಿಕೋ ಎನ್ನುತ್ತಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಜಾಲಿ ರೇಡ್ ಗೆ ತೆರಳಿ ಹೈಗ್ರೌಂಡ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಐಶರಾಮಿ ಕಾರು ಅವಘಡಕ್ಕೆ ಒಳಗಾಗಿತ್ತು. ನಟಿ ಮಾಂಡ್ರೆ, ಅವರ ಆಪ್ತ ಸ್ನೇಹಿತರು, ಖಾಸಗಿ ಷೇರು ವಹಿವಾಟು ನಡೆಸುವ ಕಂಪನಿ ಸಿಇಓ ಕಾರಿನಲ್ಲಿದ್ದರು. ಎಲ್ಲರಿಗೂ ಗಾಯಗಳಾಗಿತ್ತು. ಡ್ರಗ್ ಸೇವನೆ ಮಾಡಿರುವ ಆರೋಪ ಕೂಡ ಕೇಳಿ ಬಂದಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ನೆಪದಲ್ಲಿ ಮಾಂಡ್ರೆ ಎಸ್ಕೇಪ್ ಆದರು. ತುಂಬಾ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸರು ಮಾಂಡ್ರೆ ಡ್ರಗ್ ಜಾಲ ಪ್ರಕರಣ ಕೇವಲ ಅಪಘಾತಕ್ಕೆ ಸೀಮಿತವಾಯಿತೇ ಎಂಬ ಆರೋಪ ಕೇಳಿ ಬಂದಿತ್ತು.
ಬೆಂಗಳೂರು ಹಿಂಸಾಚಾರ:
ಅವತ್ತು ಆಗಸ್ಟ್ 11, ಪೊಲೀಸರೆಲ್ಲರೂ ಕರೋನಾ ಲಾಕ್ ಡೌನ್ ನಿಯಮ ಜಾರಿಯಲ್ಲಿ ತಲ್ಲೀನರಾಗಿದ್ದರು. ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಅವರ ಅಕ್ಕನ ಮಗ ನವೀನ್ ಮಹಮದ್ ಪೈಂಗಬರ್ ಬಗ್ಗೆ ಅವಹೇಳನ ಮಾಡುವ ಪೋಸ್ಟ್ ಹಾಕಿದ್ದ. ಈ ಪೋಸ್ಟ್ ದೊಡ್ಡ ಅವಾಂತರ ಸೃಷ್ಟಿಸಿತು ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಬಿತ್ತು. ಆನಂತರ ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಪೊಲೀಸ್ ಠಾಣೆಗಳಿಗೆ ಪುಂಡರು ಬೆಂಕಿ ಇಟ್ಟರು. ಪೂರ್ವ ನಿಯೋಜಿತ ಯೋಜನೆ ರೂಪಿಸಿ ಕೆಲವು ರಾಜಕೀಯ ನಾಯಕರು ಮುಂದೆ ಶಾಸಕರಾಗುವ ಉದ್ದೇಶದಿಂದ ಈ ಗಲಭೆಗೆ ಕುಮ್ಮಕ್ಕು ನೀಡಿದ್ದ ಅಂಶ ತನಿಖೆ ವೇಳೆ ಬೆಳಕಿಗೆ ಬಂತು. ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟು, ರಸ್ತೆ ಬದಿ ಸಿಕ್ಕ ಸಿಕ್ಕ ವಾಹನಗಳನ್ನು ಸುಟ್ಟಿದ್ದರು. ಮಹಾ ದಂಗೆ ರೀತಿ ಬೆಂಗಳೂರು ಹೊತ್ತಿ ಉರಿಯಿತು. ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು. ಮೂರು ಜನ ಪೊಲೀಸರ ಗುಂಡೇಟಿಗೆ ಬಲಿಯಾದರು. ಅದೇ ರೀತಿ ಪೊಲೀಸರು ಕೂಡ ಪುಂಡರ ಕಲ್ಲೇಟುಗಳಿಗೆ ಒಳಗಾದರು. ಮರುದಿನ ಬೆಳಗ್ಗೆ ನೂರಕ್ಕೂ ಹೆಚ್ಚು ಮಂಧಿ ಬಂಧನಕ್ಕೆ ಒಳಗಾದರು. ಎಸ್ಡಿಪಿಐ ಮತ್ತು ಪಿಎಫ್ಐ ಕೈವಾಡ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅದರ ಮುಖಂಡರನ್ನು ಬಂಧಿಸಿದರು. ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟ ಹಾಗೂ ಸಾರ್ವಜನಿಕರ ಆಸ್ತಿ ಸುಟ್ಟು ಹಾಕಿ ಭೀತಿ ಹುಟ್ಟಿಸಿದ ಆರೋಪ ಸಂಬಂಧ ರಾಷ್ಟ್ರೀಯ ತನಿಖಾ ದಳ ಪ್ರಕರಣ ಕೈಗೆತ್ತಿಕೊಂಡಿತು. ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಸುಮಾರು ಇನ್ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿತು. ಎಸ್ಡಿಪಿಐ ಮತ್ತು ಪಿಎಫ್ಐ ಮುಖಂಡರ ಮನೆ ಮೇಲೆ ದಾಳಿ ನಡೆಸಿತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧನಕ್ಕೆ ಒಳಗಾಗಿದಿದ್ದರು. ಎರಡು ಪ್ರಕರಣ ಎನ್ಐಎ ತನಿಖೆ ನಡೆಸುತ್ತಿದೆ. ಗಲಭೆಯಲ್ಲಿ ನಷ್ಟವಾದ ಸಾರ್ವಜನಿಕ ಆಸ್ತಿಯ ಮೌಲ್ಯವನ್ನು ಆರೋಪಿಗಳಿಂದ ವಸೂಲಿ ಮಾಡುವ ನಿಟ್ಟಿನಲ್ಲಿ ಎನ್ಐಎ ತನಿಖೆ ನಡೆಸುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಇದು ಸುದ್ದಿಯಾಗಿತ್ತು.
ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ:
ಎನ್ ಸಿಬಿ ಅಧಿಕಾರಿಗಳು ಡ್ರಗ್ ಜಾಲ ಪ್ರಕರಣದ ತನಿಖೆ ವೇಳೆ ಡ್ರಗ್ ಜಾಲದಲ್ಲಿ ಸ್ಯಾಂಡಲ್ ವುಡ್ ನಟ ನಟಿಯರ ನೆರಳಿದೆ ಎಂಬ ಒಂದು ಹೇಳಿಕೆ ಸಂಚಲನ ಮೂಡಿಸಿತ್ತು. ಎನ್ಸಿಬಿ ಹೇಳಿಕೆ ನಿಜ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆ ದಾಖಲಿಸಿದರು. ಬಳಿಕ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಧ್ವನಿಗೂಡಿಸಿ ನನ್ನ ಬಳಿ ದಾಖಲೆ ಇದೆ ಎಂದು ಹೇಳಿದ್ದರು. ಸಿಸಿಬಿ ಇಬ್ಬರನ್ನು ವಿಚಾರಣೆ ನಡೆಸಿದರೂ ಯಾವ ಪ್ರಯೋಜನ ಆಗಿರಲಿಲ್ಲ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಳೇ ಡ್ರಗ್ ಜಾಲ ಪ್ರಕರಣ ಎಳೆ ಹಿಡಿದು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಸ್ಯಾಂಡಲ್ ಅಂತಾರಾಷ್ಟ್ರೀಯ ಡ್ರಗ್ ರಾಕೆಟ್ ಜಾಲವನ್ನು ಪತ್ತೆ ಮಾಡಿತು. ಈ ಜಾಲದಲ್ಲಿ ಸಿಲುಕಿದ್ದ ಸ್ಯಾಂಡಲ್ ವುಡ್, ಸೀರಿಯಲ್ ನಟಿಯರ ನಶೆ ಇಳಿಸಿತ್ತು !
ಜಯನಗರದ ಆರ್ಟಿಓ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರವಿಶಂಕರ್ ನನ್ನು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ನಟಿ ರಾಗಿಣಿ, ಸಂಜನಾ ಅವರ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸಿದ್ದರು. ಇಬ್ಬರ ನಟಿಯರ ಜತೆ ರಾಹುಲ್ ತೋನ್ಸೆ, ವೀರೇನ್ ಖನ್ನಾ ಬೆಂಗಳೂರಿನ ಡ್ರಗ್ ಪೆಡ್ಲರ್ ಗಳು ಬಧನಕ್ಕೆ ಒಳಗಾದರು. ಸೀರಿಯಲ್ ನಟರಿಯರೂ ಹಾಗೂ ನಿರೂಪಕಿ ಅನುಶ್ರೀ ಸೇರಿದಂತೆ ಹಲವರಿಗೆ ನೋಟಿಸ್ ನೀಡಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ನಟ ದಿಗಂತ್, ಅಂಧ್ರಿತಾ ರೈ ಕೂಡ ವಿಚಾರಣೆ ಎದುರಿಸಿದ್ದರು. ಅಂತಿಮವಾಗಿ ಇಬ್ಬರು ನಟಿಯರು ಮಾತ್ರ ಜೈಲು ಪಾಲಾಗಿದ್ದು, ರಾಗಿಣಿ ಜೈಲಿನಲ್ಲಿದ್ದಾರೆ. ಅನಾರೋಗ್ಯ ನೆಪದ ಮೇಲೆ ಸಂಜನಾ ಜಾಮೀನು ಪಡೆದು ಹೊರ ಬಂದಿದ್ದಾರೆ. ಉಳಿದ ಡ್ರಗ್ ಪೆಡ್ಲರ್ ಗಳು ಜೈಲಿನಲ್ಲಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ರಾಜ್ಯದೆಲ್ಲಡೆ ಸಾಕಷ್ಟು ಡ್ರಗ್ ಪೆಡ್ಲರ್ ಗಳು ಬಂಧನಕ್ಕೆ ಒಳಗಾದರು. ರಾಜಕಾರಣಿಗಳ ಪುತ್ರರ ಹೆಸರು ಕೂಡ ಕೇಳಿ ಬಂದಿತ್ತು. ಹ್ಯಾಕರ್ ಶ್ರೀಕೃಷ್ಣ, ರಾಜಕಾರಣಿ ಪುತ್ರ ದರ್ಶನ್ ಲಮಾಣಿ ಸೇರಿದಂತೆ ಪ್ರಮುಖರು ಡ್ರಗ್ ಜಾಲದಲ್ಲಿ ಸಿಕ್ಕಿಬಿದ್ದರು. ಇದೇ ಹಂತದಲ್ಲಿ ವಿವಿಧ ಪ್ರಕರಣಗಳಲ್ಲಿ ಸಾವಿರಾರು ಕೆ.ಜಿ. ಗಾಂಜಾ ವಶಪಡಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈಗಲೂ ಸಹ ಡ್ರಗ್ ಜಾಲದ ವಿರುದ್ಧದ ಸಿಸಿಬಿ ಸಮರ ಮುಂದುವರೆದಿದೆ. ಇದು ಕೂಡ ಇಡೀ ಬೆಂಗಳೂರನ್ನು ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.
ಐಎಂಎ ಡೆವಲಪ್ ಮೆಂಟ್:
ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಬಂಧನಕ್ಕೆ ಒಳಗಾದರು. ಇದೇ ಪ್ರಕರಣದಲ್ಲಿ ಕಂಪನಿ ವಂಚನೆ ಬಗ್ಗೆ ಮುಚ್ಚಿ ಹಾಕಿ ಮೋಸ ಮಾಡಿದ ಆರೋಪಕ್ಕೆ ಗುರಿಯಾಗಿ ಖಿನ್ನತೆಗೆ ಒಳಗಾಗಿದ್ದ ಐಎಎಸ್ ಅಧಿಕಾರಿ ವಿಜಯ ಶಂಕರ್ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಐಎಂಎ ವಂಚನೆ ಪ್ರಕರಣಕ್ಕೆ ಸಹಕರಿಸಿದ ಆರೋಪ ಎದುರಿಸುತ್ತಿದ್ದ ಡಿಸಿಪಿ ಅಜಯ್ ಹಿಲೋರಿ, ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್, ಇನ್ಸ್ ಪೆಕ್ಟರ್ ರಮೇಶ್ ಡಿವೈಎಸ್ಪಿ ಶ್ರೀಧರ್ ಮತ್ತಿತರ ಮೇಲೆ ತನಿಖೆಗೆ ಸರ್ಕಾರ ಅನುಮತಿ ನೀಡಿತ್ತು. ಐಎಂಎ ಸಾವಿರಾರು ಕೋಟಿ ರೂಪಾಯಿ ಆಸ್ತಿ ವಶಪಡಿಸಿಕೊಂಡಿದ್ದು, ಅದನ್ನು ಸಂತ್ರಸ್ತರಿಗೆ ಹಂಚುವ ನಿಟ್ಟಿನಲ್ಲಿ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಅಧ್ಯಕ್ಷತೆಯ ಸಕ್ಷಮ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ.
ಕಣ್ವ ಅಕ್ರಮ ಬೆಳಕಿಗೆ :
ಜನರಿಗೆ ದುಬಾರಿ ಬಡ್ಡಿ ನೀಡುವ ಆಸೆ ಹುಟ್ಟಿಸಿ ಸಾವಿರಾರು ಜನರಿಂದ ಹಣ ಪಡೆದು ವಂಚನೆ ಮಾಡಿದ ಆರೋಪ ಸಂಬಂಧ ಕಣ್ವ ಸಮೂಹ ಸಂಸ್ಥೆ ಮುಖ್ಯಸ್ಥ ನಜುಂಡಯ್ಯ ಬಂಧನಕ್ಕೆ ಒಳಗಾಗಿದ್ದಾನೆ. ಈತನಿಗೆ ಸೇರಿದ ಸುಮಾರು 200 ಕೋಟಿ ರೂಪಾಯಿ ಆಸ್ತಿ ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಇದಾದ ಬಳಿಕ ಪ್ರಕರಣ ಸಿಐಡಿ ತನಿಖೆ ಗೆ ವಹಿಸಲಾಗಿತ್ತು. ಸಿಐಡಿ ಪೊಲೀಸರು ಸುಮಾರು 200 ಕೋಟಿ ರೂ. ಹೆಚ್ಚುವರಿ ಆಸ್ತಿ ಪತ್ತೆ ಮಾಡಿದ್ದಾರೆ. ಮೋಸ ಹೋದ ಸಂತ್ರಸ್ತರಿಂದ ದೂರು ಪಡೆದು ತನಿಖೆ ನಡೆಸುತ್ತಿದ್ದಾರೆ. ಕಣ್ವ ವಂಚನೆ ಬೆಳಕಿಗೆ ಬಂದಿದ್ದು, ಪ್ರಕರಣ ತನಿಖೆ ಹಂತದಲ್ಲಿದೆ.
ಬೆಂಗಳೂರು ಅಪರಾಧ ಲೋಕದ ಚಿತ್ರಣ:
ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಕರೋನಾ ವರ್ಷದಲ್ಲಿ ಅಪರಾಧಗಳು ಗಣನೀಯವಾಗಿ ಇಳಿಕೆಯಾಗಿವೆ. ಕೊಲೆ ದರೋಡೆ, ಮನೆಗಳ್ಳತನ ಪ್ರಕರಣಗಳು ಇಳಿಕೆಯಾಗಿವೆ. ಆದರೆ, ಡ್ರಗ್ ಜಾಲ, ಡಿ.ಜೆ. ಹಳ್ಳಿ ಪ್ರಕರಣ, ಐಎಎಂ, ಕಣ್ವ ಮತ್ತು ಸೈಬರ್ ಅಪರಾಧಗಳು ಹೆಚ್ಚುವ ಮೂಲಕ ಬೆಂಗಳೂರು ಅಪರಾಧ ಲೋಕದ ಚಿತ್ರಣ ಬದಲಾಗುತ್ತಿದೆ ಎಂದೆನಿಸುತ್ತದೆ. ಎರಡು ವರ್ಷದಲ್ಲಿ ನಡೆದ ಅಪರಾಧ ಪ್ರಕರಣಗಳ ವಿವರ ಇಲ್ಲಿದೆ.
ಕೊಲೆ ಪ್ರಕರಣ (2020 ಡಿಸಂಬರ್ 27 ರವರೆಗೆ)
ಅಪರಾಧ | ವರ್ಷ | ಸಂಖ್ಯೆ |
ಕೊಲೆ | 2019 | 204 |
2020 | 176 | |
ವ್ಯತ್ಯಾಸ | 28 | |
ಅತ್ಯಾಚಾರ | 2019 | 147 |
2020 | 106 | |
ವ್ಯತ್ಯಾಸ | 41 | |
ಡಕಾಯತಿ | 2019 | 39 |
2020 | 27 | |
ವ್ಯತ್ಯಾಸ | 12 | |
ಮನೆಗಳ್ಳತನ | 2019 | 1272 |
2020 | 890 | |
ವ್ಯತ್ಯಾಸ | 382 | |
ರಾಬರಿ | 2019 505 | 2020 371 |
ವ್ಯತ್ಯಾಸ | 134 |
ಡ್ರಗ್ ಪ್ರಕರಣದ ವಿವರ
ವರ್ಷ | ದಾಖಲಾದ ಪ್ರಕರಣ | ಸೀಜ್ ಆದ ಡ್ರಗ್ | ಬಂಧನ |
2019 | 768 | 1,053 ಕೆಜಿ | 1,260 |
2020 | 742 | 3,865 ಕೆಜಿ | 3,645 |
ಬೆಂಗಳೂರಿನ ಅಪರಾಧಗಳ ವಿವರ
ವರ್ಷ ದಾಖಲಾದ ಒಟ್ಟು ಪ್ರಕರಣ ಪತ್ತೆಯಾದ ಪ್ರಕರಣ ಪತ್ತೆಯಾಗದಿರುವ ಪ್ರಕರಣಗಳು
ವರ್ಷ | ದಾಖಲಾದ ಪ್ರಕರಣ | ಸೀಜ್ ಆದ ಡ್ರಗ್ | ಬಂಧನ |
2019 | 46,858 | 27,530 | 19,328 |
2020 | 37,392 | 19,016 | 18,376 |