ಕೊರೊನಾ ಭೀತಿ: ಯಡಿಯೂರಪ್ಪಗೆ ಸಿಪಿಐ(ಎಂ) ಬಹಿರಂಗ ಪತ್ರ
ಯಡಿಯೂರಪ್ಪನವರೇ, ತಡವಾಗಿಯಾದರೂ ತಾವು ಸರ್ವ ಪಕ್ಷಗಳ ಸಮಾಲೋಚನಾ ಸಭೆ ಕರೆದಿರುವುದು ಸ್ವಾಗತಾರ್ಹ ವಿಚಾರ. ಆದರೆ ಸರಕಾರದ ದೋಷ ಪೂರಿತ ತಿಳುವಳಿಕೆಯಂತೆ, ವಿಧಾನಸಭೆ ಹಾಗೂ ಪರಿಷತ್, ಪಾರ್ಲಿಮೆಂಟ್ನಲ್ಲಿ ಚುನಾಯಿತ ಸದಸ್ಯರನ್ನು ಹೊಂದಿದ ಪಕ್ಷಗಳು ಮಾತ್ರವೇ ಈ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂಬುದಾಗಿರುವುದರಿಂದ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಈ ಪತ್ರ ಬರೆಯಬೇಕಾಗಿ ಬಂದಿದೆ ಎಂದು ಕಾರ್ಯದರ್ಶಿ ಯು. ಬಸವರಾಜ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮತ್ತೊಮ್ಮೆ ಕೋವಿಡ್ - 19 ರ ಎರಡನೇ ಅಲೆಯ ಬಾಧೆಗೊಳಗಾಗುತ್ತಿರುವುದು ತೀವ್ರ ನೋವಿನ ಸಂಗತಿಯಾಗಿದೆ. ಕೋವಿಡ್ - 19 ಎರಡನೇ ಅಲೆಯ ಸೋಂಕಿನ ಬೆಳವಣಿಗೆಯನ್ನು ತಮ್ಮ ಸರಕಾರವು ಕೇವಲ ತೋರಿಕೆಯ ಆತಂಕದಿಂದ ಗಮನಿಸುತ್ತಿರುವುದನ್ನು ಬಿಟ್ಟರೇ, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೈಗೊಂಡ ಕ್ರಮಗಳು ಏನೇನು ಇಲ್ಲವಾಗಿದೆ.
ಕಳೆದ ವರ್ಷದ ದಾಳಿಯ ಅನುಭವವನ್ನು ಕ್ರೋಢೀಕರಿಸಿಕೊಂಡು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆಗಳನ್ನು ಬಲ ಪಡಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಿಲ್ಲ. ಈಗ ಬೆಳೆಯುತ್ತಿರುವ ಸೋಂಕಿತರ ಸಂಖ್ಯೆಗೆ ಅನುಸಾರವಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ವೆಂಟಿಲೇಟರ್ಗಳು ದೊರೆಯುತ್ತಿಲ್ಲವೆಂಬುದು ಸೋಂಕಿತರ ಹಾಗೂ ಅವರ ಕುಟುಂಬದ ಸದಸ್ಯರ ಅಳಲಾಗಿದೆ. ಇದರಿಂದಾಗಿ ಹಲವು ಸೋಂಕಿತರು ಮರಣ ಹೊಂದಿದ್ದಾರೆ. ಖಾಸಗಿ ಆಸ್ಪತ್ರೆಗಳು, ಜನಗಳ ಈ ದುಸ್ಥಿತಿಯನ್ನು ಬಳಸಿಕೊಂಡು ಸುಲಿಗೆಗೆ ನಿಂತಿವೆಯೆಂದರೆ ತಪ್ಪಾಗಲಾರದು.
ರಾಜ್ಯದ ನಾಗರೀಕರಲ್ಲಿ ಮತ್ತಷ್ಟು ಭೀತಿಯುಂಟಾಗಿದೆ
ಇದರಿಂದಾಗಿ, ರಾಜ್ಯದ ನಾಗರೀಕರಲ್ಲಿ ಮತ್ತಷ್ಟು ಭೀತಿಯುಂಟಾಗಿದೆ. ಮೊದಲೇ ರಾಜ್ಯವು ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಜೊತೆಗೆ ಕಳೆದ ಎರಡು-ಮೂರು ವರ್ಷಗಳ ಬರಗಾಲ ಮತ್ತು ಪ್ರವಾಹಗಳು ಇನ್ನಷ್ಟು ಸಂಕಷ್ಟಗಳನ್ನು ಜನತೆಯ ಮೇಲೆ ಅದಾಗಲೇ ಹೇರಿದ್ದವು. ಕಳೆದ ವರ್ಷದಿಂದ ಈ ಕೋವಿಡ್ ಬಾಧೆ, ಅವೈಜ್ಞಾನಿಕ ಲಾಕ್ ಡೌನ್ ಅದರ ದುಷ್ಪರಿಣಾಮಗಳು ಮತ್ತು ಇದೀಗ ಮುಂದುವರೆದ ವೈರಸ್ ದಾಳಿ ರಾಜ್ಯವನ್ನು ನಲುಗುವಂತೆ ಮಾಡಿದೆ. ಇಂತಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಅಗತ್ಯ ಪರಿಹಾರದ ಕ್ರಮಗಳನ್ನು ಕೈಗೊಳ್ಳುವಂತೆ ಸಿಪಿಐಎಂ ಹಾಗೂ ನಾಗರೀಕರು ನಿರಂತರ ಒತ್ತಾಯ ಮಾಡುತ್ತಾ ಬಂದರೂ ತಮ್ಮ ಸರಕಾರ ಆ ಕುರಿತು ಗಮನವನ್ನೇ ಹರಿಸಲಿಲ್ಲ.
ಇದರಿಂದಾಗಿ, ಜನತೆಯ ಸಂಕಷ್ಟಗಳನ್ನು, ಅವರುಗಳೇ ಪರಿಹರಿಸಿಕೊಳ್ಳುವಂತೆ ಅವರ ಮೇಲೆಯೇ ನಿರ್ಧಯಿಯಾಗಿ ತಮ್ಮ ಸರಕಾರ ಬಿಟ್ಟು ಬಿಟ್ಟುದರಿಂದ ಸಾಮಾನ್ಯರು, ಬಡವರು, ತಮ್ಮ ಬಳಿ ಇದ್ದ ಸಣ್ಣ ಪುಟ್ಟ ಆಸ್ತಿಗಳನ್ನು ಉಳ್ಳವರಿಗೆ ದುಬಾರಿ ಬಡ್ಡಿಯ ಸಾಲಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. ಸಾಲಬಾಧಿತರಾಗಿದ್ದಾರೆ. ಇದರಿಂದ ಶ್ರೀಮಂತರು ಭಾರೀ ಶ್ರೀಮಂತರಾದರೇ, ಬಡವರು ಮತ್ತಷ್ಟು ಕಡುಬಡವರಾಗುತ್ತಿದ್ದಾರೆ.
ರಾಜ್ಯವು ಮರಳಿ ಮತ್ತಷ್ಟು ದುಸ್ಥಿತಿಯ ಕಡೆ ಚಲಿಸುವಂತಾಗಿದೆ
ಈಗ ರಾಜ್ಯವು ಮರಳಿ ಮತ್ತಷ್ಟು ದುಸ್ಥಿತಿಯ ಕಡೆ ಚಲಿಸುವಂತಾಗಿದೆ. ಒಂದೆರಡು ತಿಂಗಳಿನಿಂದ ಉದ್ಯೋಗ ಹರಸಿ ಹೊರಟಿದ್ದ ವಲಸೆ ಕಾರ್ಮಿಕರು, ಬೆಳೆಯುತ್ತಿರುವ ಸೋಂಕಿನ ಕಾರಣದಿಂದ ಆತಂಕಗೊಂಡು ಮರಳಿ ಸ್ವಂತ ಊರುಗಳ ಕಡೆ ಮುಖ ಮಾಡುತ್ತಿದ್ದಾರೆ. ನಿರುದ್ಯೋಗ ಮತ್ತೊಮ್ಮೆ ಬೃಹದಾಕಾರವಾಗಿ ಬೆಳೆಯುವ ಲಕ್ಷಣ ಕಂಡು ಬರುತ್ತಿದೆ.
ಮತ್ತೊಂದು ಕಡೆ, ತಮ್ಮ ಹಾಗೂ ಕೇಂದ್ರ ಸರಕಾರಗಳು ಜಾರಿ ಮಾಡುತ್ತಿರುವ ಲೂಟಿ ಕೋರ ಕಾರ್ಪೋರೇಟ್ ಪರವಾದ ನೀತಿಗಳು, ಜನತೆಯನ್ನು ಇನ್ನಷ್ಟು ಆತಂಕಿತರನ್ನಾಗಿಸಿ ಇಂತಹ ವೈರಾಣು ಧಾಳಿಯ ನಡುವೆಯೂ ಅವರು ಬೀದಿಗಿಳಿಯುವಂತೆ ಬಲವಂತ ಮಾಡಿದೆ.
ಕೋವಿಡ್ ತುರ್ತು ಸ್ಥಿತಿಯನ್ನು ಘೋಷಿಸಬೇಕು
ರೈತರು ಹಾಗೂ ಕಾರ್ಮಿಕರ ಮತ್ತು ನಾಗರೀಕರ ವಿರೋಧಿಯಾದ ಕಾರ್ಮಿಕ ಸಂಹಿತೆಗಳು ಮತ್ತು ಕೃಷಿ ಕಾಯ್ದೆಗಳು, ಭೂಸುಧಾರಣಾ ತಿದ್ದುಪಡಿ ಕಾಯ್ದೆ - 2020, ಏಪಿಎಂಸಿ ತಿದ್ದುಪಡಿ ಕಾಯ್ದೆ- 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ - 2020 ಹಾಗೂ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಗಳನ್ನು ತಕ್ಷಣ ವಾಪಾಸು ಪಡೆಯಬೇಕು.
ಅಲ್ಲದೇ, ರಾಜ್ಯದಲ್ಲಿ ಕೋವಿಡ್ ತುರ್ತು ಸ್ಥಿತಿಯನ್ನು ಘೋಷಿಸಿ ಕೆಳಕಂಡ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳುವಂತೆ ಈ ಮೂಲಕ ಸಿಪಿಐ(ಎಂ) ಬಲವಾಗಿ ಒತ್ತಾಯಿಸುತ್ತದೆ.
ಕೋವಿಡ್ ಸೋಂಕಿತರಿಗೆ ಉಚಿತ ಆರೈಕೆ
ಕೋವಿಡ್ ಸೋಂಕಿತರಿಗೆ ಉಚಿತ ಆರೈಕೆ ಒದಗಿಸಲು ಮತ್ತು ಖಾಸಗೀ ಆಸ್ಪತ್ರೆಗಳ ಸುಲಿಗೆಗಳಿಂದ ರಕ್ಷಿಸಲು ಎಲ್ಲಾ ಖಾಸಗೀ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಸರಕಾರದ ವಶಕ್ಕೆ ಪಡೆಯ ಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಅರ್ಧದಷ್ಠು ಹಾಸಿಗೆಗಳನ್ನು ಕೋವಿಡ್ ಬಾಧಿತರಿಗೆ ಮೀಸಲಿಡಬೇಕು. ಈ ಎಲ್ಲದರ ನಿರ್ವಹಣೆಗೆ ಅಗತ್ಯ ಸಿಬ್ಬಂದಿ, ಔಷಧಿ ಹಾಗೂ ಅದಕ್ಕಾಗಿ ಹಣಕಾಸು ನೆರವನ್ನು ಘೋಷಿಸಬೇಕು.ಅದಾಗಲೇ ಕೋವಿಡ್ ವ್ಯಾಕ್ಸಿನ್ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಸಮಯಕ್ಕೆ ದೊರೆಯುವಂತೆ ಮತ್ತುವ್ಯಾಕ್ಸಿನ್ ಪಡೆಯುವವರಿಗೆ ವ್ಯಾಕ್ಸಿನ್ಕೊರತೆಯಾಗದಂತೆ ಅಗತ್ಯ ಕ್ರಮವಹಿಸಬೇಕು.
ಎಲ್ಲರಿಗೆ ತಲಾ 10 ಕೆಜಿ ಸಮಗ್ರ ಆಹಾರಧಾನ್ಯ
ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳಿಗೆ ಮಾಸಿಕ 10,000 ರೂ. ಗಳ ಒದಗಿಸಬೇಕು. ಈ ಎಲ್ಲರಿಗೆ ತಲಾ 10 ಕೆಜಿ ಸಮಗ್ರ ಆಹಾರಧಾನ್ಯಗಳನ್ನು ಮತ್ತು ಕೋವಿಡ್ ಸುರಕ್ಷಿತ ಕ್ರಮಗಳನ್ನು ಕನಿಷ್ಠ ಮುಂದಿನ ಆರು ತಿಂಗಳವರೆಗೆ ಒದಗಿಸಬೇಕು. ಎಲ್ಲಾ ಸಾಮಾಜಿಕ ಪಿಂಚಣಿದಾರರ ಬಾಕಿ ಪಿಂಚಣಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಉತ್ಪಾದಕ ಘಟಕಗಳನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಿ, ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಬೇಕು. ಅಗತ್ಯ ಸೇವೆಯಲ್ಲೂ ಶೇ 50 ರಷ್ಟು ಸಿಬ್ಬಂದಿಯನ್ನು ಸುರಕ್ಷತಾ ಕ್ರಮಗಳೊಂದಿಗೆ ಬಳಸಬೇಕು. ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಗಳನ್ನು ನೀಡಿ ಸರಕಾರವೇ ನೇರವಾಗಿ ಖರೀದಿಸಬೇಕು.
ಎಲ್ಲ ರೀತಿಯ ಸಾಲಗಳನ್ನು ಕೂಡಲೇ ಮನ್ನಾ
ಉದ್ಯೋಗ ಖಾತ್ರಿ ಕೆಲಸವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಕೋವಿಡ್ ಸುರಕ್ಷತೆಯೊಂದಿಗೆ ಜಾರಿಗೊಳಿಸಲು ಕ್ರಮ ವಹಿಸಬೇಕು. ವೃದ್ಧರು ಅಂಗವಿಕಲರು, ಒಂಟಿ ಜೀವನ ನಡೆಸುವ ಅಸಹಾಯಕರುಗಳನ್ನು ಗುರುತಿಸಿ ಅವರಿಗೆ ನೇರ ಊಟದ ಪಾಕೆಟ್ಗಳನ್ನು ವಹಿಸಲು ಕ್ರಮ ಕೈಗೊಳ್ಳಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳ ಎಲ್ಲ ರೀತಿಯ ಸಾಲಗಳನ್ನು ಕೂಡಲೇ ಮನ್ನಾ ಮಾಡಬೇಕು.