Explained: ಭಾರತದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್ ರೂಪಾಂತರ!
ನವದೆಹಲಿ, ಅಕ್ಟೋಬರ್ 29: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ನಿಯಂತ್ರಣಕ್ಕೆ ಬಂದಿತು ಎನ್ನುವಷ್ಟರಲ್ಲೇ ಮತ್ತೆ ಹೊಸ ಪ್ರಕರಣಗಳ ಸಂಖ್ಯೆ ಏರುಮುಖವಾಗಿ ಸಾಗುತ್ತಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ದೇಶದಲ್ಲಿ ಮುಂಬರುವ ದೀಪಾವಳಿ ಹಬ್ಬದ ಹೊಸ್ತಿಲಿನಲ್ಲಿ ಕೊವಿಡ್-19 ಸೋಂಕಿನ ಹರಡುವಿಕೆ ಭೀತಿ ಹೆಚ್ಚಾಗಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ದಿಢೀರ್ ಏರಿಕೆ ಹಿನ್ನೆಲೆ ನವೆಂಬರ್ 30ರವರೆಗೂ ನಿಯಂತ್ರಣ ಕ್ರಮಗಳನ್ನು ವಿಸ್ತರಿಸುವಂತೆ ಸರ್ಕಾರ ಆದೇಶಿಸಿದೆ.
Explained: ಕೊವಿಡ್-19 ಲಸಿಕೆ ತುರ್ತು ಬಳಕೆಗೆ WHO ಅನುಮೋದನೆ ಪ್ರಕ್ರಿಯೆ ಹೇಗೆ ನಡೆಯುತ್ತೆ?
ಭಾರತದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಚರ್ಚೆ ನಡೆಸಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಕೋವಿಡ್ -19 ಹರಡುವುದಕ್ಕೆ ಕಡಿವಾಣ ಹಾಕಲು ಸದ್ಯ ಅಸ್ತಿತ್ವದಲ್ಲಿರುವ ಶಿಷ್ಟಾಚಾರಗಳನ್ನು ನವೆಂಬರ್ 30 ರವರೆಗೆ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ. ಕಳೆದ ತಿಂಗಳು ಹಬ್ಬಗಳ ಸಂಖ್ಯೆ ಹೆಚ್ಚಾಗಿರುವ ಕಾಲದಲ್ಲೇ ಕೊರೊನಾವೈರಸ್ ನಿಯಮಗಳ ಪಾಲನೆ ಆಗದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಳಿತ ಹೇಗಿದೆ?, ಪ್ರಮುಖ ರಾಜ್ಯಗಳಲ್ಲಿ ಕೊವಿಡ್-19 ಪರಿಸ್ಥಿತಿ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.
ಕೋವಿಡ್-19 ನಿರ್ವಹಣೆಯಲ್ಲಿ ಕರ್ನಾಟಕ ಅತ್ಯುತ್ತಮ ಎನಿಸಲು ಏನು ಕಾರಣ?
ದೇಶದಲ್ಲಿ ಕೊರೊನಾವೈರಸ್ ಪರಿಸ್ಥಿತಿ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ನಲುಗಿದ ಭಾರತದಲ್ಲಿ ಸೋಂಕಿತರ ಪ್ರಕರಣಗಳಲ್ಲಿ ಕಳೆದೊಂದು ವಾರದಲ್ಲಿ ಏರಿಳಿತ ಕಂಡು ಬರುತ್ತಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಶುಕ್ರವಾರ ಭಾರತದಲ್ಲಿ 14,348 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 805 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದರೆ, 13,198 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,42,46,157ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ 4,57,191 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದರೆ, ಇದುವರೆಗೂ 3,36,27,632 ಸೋಂಕಿತರು ಗುಣಮುಖರಾಗಿದ್ದಾರೆ. 1,61,334 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.
ದೇಶದಲ್ಲಿ ಕೊರೊನಾವೈರಸ್ ಏರಿಕೆಗೆ ಕಾರಣವೇನು?
ಇಂಗ್ಲೆಂಡಿನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ದಿಢೀರ್ ಏರಿಕೆಗೆ AY4.2 ಎಂಬ ರೂಪಾಂತರ ವೈರಸ್ ಮುಖ್ಯ ಕಾರಣವಾಗಿತ್ತು. ಆದರೆ ಭಾರತದಲ್ಲಿ AY4.2 ಎಂಬ ರೂಪಾಂತರ ವೈರಸ್ ಬಹಳ ವಿರಳವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದರ ಹೊರತಾಗಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಕೆಗೆ ನಿಯಮಗಳ ಪಾಲನೆಯಲ್ಲಿ ಜನರು ತೋರುತ್ತಿರುವ ನಿಷ್ಕಾಳಜಿಯೇ ಕಾರಣ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಪ್ರಮುಖ ರಾಜ್ಯಗಳಲ್ಲಿ ಕೊವಿಡ್-19 ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ.
ಫರಿದಾಬಾನ್ ಪರಿಸ್ಥಿತಿ
ಹರಿಯಾಣದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಫರಿದಾಬಾದ್ನಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ. ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಹರಿಯಾಣದ 22 ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ರಾಷ್ಟ್ರ ರಾಜಧಾನಿಗೆ ಹೊಂದಿಕೊಂಡಿರುವ ಫರಿದಾಬಾದ್, ಅಕ್ಟೋಬರ್ 24ರಂದು 10 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಈ ಹಿನ್ನೆಲೆ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಲಕ್ಷ್ಯ ವಹಿಸುವಂತೆ ಅಧಿಕಾರಿಗಳಿಗೆ ಫರಿದಾಬಾದ್ ಡೆಪ್ಯುಟಿ ಕಮಿಷನರ್ ಜಿತೇಂದರ್ ಯಾದವ್ ಸೂಚಿಸಿದ್ದಾರೆ.
ಗುರುಗ್ರಾಮ್ ಪ್ರದೇಶದಲ್ಲಿ ಕೊವಿಡ್-19
ಗುರುಗ್ರಾಮ್ ನಗರದಲ್ಲಿ ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಸ್ವಲ್ಪ ಹೆಚ್ಚಳವಾಗಿದ್ದು, ಸೋಂಕಿನ ಲಕ್ಷಣಗಳು ಗೋಚರಿಸಿದ ವ್ಯಕ್ತಿಗಳು ಗೃಹ ದಿಗ್ಬಂಧನದಲ್ಲಿ ಇರುವುದಕ್ಕೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಮಾರುಕಟ್ಟೆ ಸೇರಿದಂತೆ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಸಾರ್ವಜನಿಕರ ನಡುವೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದರ ಬಗ್ಗೆ ನಿಗಾ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ವಡೋದರಾದಲ್ಲಿ ಕೊರೊನಾವೈರಸ್
ವಡೋದರಾದಲ್ಲಿ ಸೆಪ್ಟೆಂಬರ್ 4ರ ನಂತರ ಮೊದಲ ಬಾರಿಗೆ ಒಂದೇ ದಿನ ಐದು ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಕಳೆದ ವಾರಾಂತ್ಯದಿಂದ ಹೊಸ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿವೆ. ನಗರದ ಜೆಟಾಲ್ಪುರ, ಗೋರ್ವಾ, ಮಂಜಲ್ಪುರ ಮತ್ತು ದಾಂಡಿಯಾ ಬಜಾರ್ ಪ್ರದೇಶಗಳಲ್ಲಿ ಹೊಸ ಪ್ರಕರಣಗಳು ವರದಿ ಆಗಿವೆ. ಇನ್ನೊಂದೆಡೆ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ (ವಿಎಂಸಿ) ಮಿತಿಯ ಹೊರಗಿನ ಜಿಲ್ಲೆಯ ಪ್ರದೇಶಗಳಿಂದ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ.
ಕರ್ನಾಟಕದಲ್ಲಿ ಕೊರೊನಾವೈರಸ್
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನ AY.4 ರೂಪಾಂತರ ವೈರಸ್ ಪತ್ತೆಯಾದ ಹಿನ್ನೆಲೆ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದಕ್ಕೆ ಚಿಂತನೆ ನಡೆಸಿದೆ. ಹಬ್ಬದ ಹೊಸ್ತಿಲಿನಲ್ಲಿ ಹೊಸ ಪ್ರಕರಣಗಳು ಹೆಚ್ಚುತ್ತಿರುವುದರ ಹಿನ್ನೆಲೆ ಮೂರನೇ ಅಲೆಯ ಭೀತಿ ಸೃಷ್ಟಿಯಾಗುತ್ತಿದೆ. ಕೊವಿಡ್-19 ಹೊಸ ರೂಪಾಂತರ ವೈರಸ್ ಸೋಂಕಿನ ಬಗ್ಗೆ ತಜ್ಞರು ತನಿಖೆ ನಡೆಸುತ್ತಿದ್ದಾರೆ. ಇದರ ಮಧ್ಯೆ ICMR ಮತ್ತು NCDC ತಂಡಗಳು ವಿಭಿನ್ನ ರೂಪಾಂತರಗಳನ್ನು ಅಧ್ಯಯನ ಮತ್ತು ವಿಶ್ಲೇಷಣೆ ನಡೆಸುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊವಿಡ್-19 ಏರಿಕೆ
ಮಹಾರಾಷ್ಟ್ರದಲ್ಲಿ ಎರಡನೇ ದಿನವೂ 1,485 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 38 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಕೊವಿಡ್-19 ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯವು ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಇನ್ನೂ ಎರಡನೇ ಡೋಸ್ ತೆಗೆದುಕೊಳ್ಳದ ಫಲಾನುಭವಿಗಳಿಗೆ ಲಸಿಕೆ ವಿತರಿಸುವಲ್ಲಿಆದ್ಯತೆ ನೀಡುವಂತೆ ಸೂಚಿಸಿದೆ. ಏಕೆಂದರೆ ಲಸಿಕೆ ಪಡೆಯದವರಿಗೆ ಸೋಂಕು ತಗಲುವ ಅಪಾಯ ಹೆಚ್ಚಾಗಿದೆ. ಆರೋಗ್ಯ ತಜ್ಞರು ಹೊಸ ಡೆಲ್ಟಾ ಪ್ಲಸ್ ಉಪ-ವೇರಿಯಂಟ್, AY.4.2 ರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದು ಹಿಂದಿನ ರೂಪಾಂತರಗಳಿಗಿಂತ ಸೋಂಕು ವೇಗವಾಗಿ ಹರಡುತ್ತದೆ. ಸಾಮಾಜಿಕ ಅಂತರ ಪಾಲಿಸುವುದು ಮತ್ತು ಮಾಸ್ಕ್ ಧರಿಸುವ ಬಗ್ಗೆ ಜನರಿಗೆ ಒತ್ತಾಯಿಸಲಾಗುತ್ತಿದೆ.
ರಾಜಸ್ಥಾನ ಕೊವಿಡ್-19 ಪರಿಸ್ಥಿತಿ
ರಾಜಸ್ಥಾನ ಸರ್ಕಾರವು ಹೊಸ ಕೋವಿಡ್ ರೂಪಾಂತರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ರಷ್ಯಾ ಮತ್ತು ಇಂಗ್ಲೆಂಡಿನಲ್ಲಿ ಸಾವಿರಾರು ಜನರನ್ನು ಕೊಂದಿರುವ ಕೊರೊನಾವೈರಸ್ನ ಹೊಸ ರೂಪಾಂತರ ವೈರಸ್ ಆಗಿರುವ AY4.2 ಭಾರತದಲ್ಲೂ ಪತ್ತೆಯಾಗಿದೆ. ಆದ್ದರಿಂದ ಸೋಂಕು ಹರಡುವಿಕೆ ನಿಯಂತ್ರಿಸಲು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೇಳಿಕೊಂಡಿದ್ದಾರೆ.