2024ರ ಲೋಕಸಭೆ ಚುನಾವಣೆ ಬಗ್ಗೆ ಪಿ ಚಿದಂಬರಂ ಭವಿಷ್ಯ
ಗೋವಾ, ಅಕ್ಟೋಬರ್ 14: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಿ ಚಿದಂಬರಂ ಅವರು 2024ರ ಲೋಕಸಭೆ ಚುನಾವಣೆ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ, ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಚಿದಂಬರಂ ಹೇಳಿದ್ದಾರೆ.
ಎಐಸಿಸಿ ಗೋವಾ ಉಸ್ತುವಾರಿಯಾಗಿರುವ ಚಿದಂಬರಂ ಅವರು ಇಂದು ಪಣಜಿಯಲ್ಲಿ ವಿಧಾನಸಭೆ ಚುನಾವಣೆ ಕಹಳೆ ಮೊಳಗಿಸಿದರು. ಗೋವಾ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
"ಇತಿಹಾಸವನ್ನು ಅವಲೋಕಿಸಿ ಒಂದು ವಿಷಯ ನಾನು ಹೇಳುತ್ತೇನೆ ... ಯಾರು ಗೋವಾವನ್ನು ಗೆಲ್ಲುತ್ತಾರೋ ಅವರು ದೆಹಲಿಯನ್ನು ಗೆಲ್ಲುತ್ತಾರೆ. 2007ರಲ್ಲಿ ನಾವು ಗೋವಾದಲ್ಲಿ ಜಯಭೇರಿ ಬಾರಿಸಿದೆವು... 2009ರಲ್ಲಿ ನಾವು ದೆಹಲಿಯನ್ನು ಗೆದ್ದೆವು. 2012 ರಲ್ಲಿ ನಾವು ದುರದೃಷ್ಟವಶಾತ್ ಗೋವಾದಲ್ಲಿ ಸೋಲು ಕಂಡೆವು, 2014ರಲ್ಲಿ ನಾವು ದೆಹಲಿಯನ್ನು ಕಳೆದುಕೊಂಡಿದ್ದೇವೆ. 2017ರಲ್ಲಿ ನೀವು ( ಪಕ್ಷದ ಕಾರ್ಯಕರ್ತರನ್ನು ಉಲ್ಲೇಖಿಸಿ) ಗೋವಾವನ್ನು ಗೆದ್ದುಕೊಟ್ಟರೂ, ನಮ್ಮ ಶಾಸಕರು ಗೋವಾವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, "ಎಂದು ಹೇಳಿದರು, ಆದರೆ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಾರ್ಯಕರ್ತರಲ್ಲಿ ಧೈರ್ಯ ತುಂಬಿದ ಚಿದು
ಮಾಜಿ ಕೇಂದ್ರ ಸಚಿವ ಚಿದಂಬರಂ ಅವರು, ಕಾರ್ಯಕರ್ತರಲ್ಲಿ ಧೈರ್ಯ ತುಂಬಿ, ಪಕ್ಷ ಇಂದು ಹೆಚ್ಚಿನ ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಚುನಾವಣಾ ಕಣಕ್ಕಿಳಿಯುತ್ತಿದೆ, ಗೋವಾದಲ್ಲಿ 2022ರಲ್ಲಿ ಗೆಲ್ಲುತ್ತೇವೆ ಹಾಗೂ ದೆಹಲಿಯಲ್ಲಿ 2024ರಲ್ಲೂ ನಮ್ಮದೇ ಗೆಲುವು ಎಂದು ಹೇಳಿದರು.
ಇನ್ನೊಂದೆಡೆ, ಇಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, 2022ರಲ್ಲಿ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಭಾರತೀಯ ಜನತಾ ಪಕ್ಷ ಸಂಪೂರ್ಣ ಬಹುಮತ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಲವು ಪಕ್ಷಗಳು ಕಣಕ್ಕಿಳಿಯಲು ಸಜ್ಜು
ಮುಂದಿನ ವರ್ಷದ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (ಎಎಪಿ) ಸೇರಿದಂತೆ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್, ಹಲವು ಪ್ರಾದೇಶಿಕ ಪಕ್ಷಗಳು ಅಲ್ಲದೆ, ಶಿವಸೇನೆ ಕೂಡಾ 40 ಸದಸ್ಯರ ಬಲದ ವಿಧಾನಸಭೆ ಸ್ಪರ್ಧಿಸಲು ಸಜ್ಜಾಗುತ್ತಿವೆ.
2017 ರ ಗೋವಾ ವಿಧಾನಸಭಾ ಚುನಾವಣೆ ಫಲಿತಾಂಶ
2017 ರ ಗೋವಾ ವಿಧಾನಸಭಾ ಚುನಾವಣೆ ಫಲಿತಾಂಶದಂತೆ 40 ಸ್ಥಾನಗಳ ಪೈಕಿ, ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, 13 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಜೊತೆ ಕೆಲವು ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಕಾಂಗ್ರೆಸ್ ತೊರೆದು ಲುಜಿನ್ಹೋ ಫಲೆರೋ ಅವರು ಟಿಎಂಸಿ ಸೇರಿದ ಬಳಿಕ ಸದ್ಯ ನಾಲ್ಕು ಮಂದಿ ಕಾಂಗ್ರೆಸ್ ಶಾಸಕರು ಮಾತ್ರ ಇದ್ದು, ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಅವರ ಸಾಧನೆ, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಣಕ್ಕಿಳಿಯುತ್ತಿದೆ.
ಗೋವಾದಲ್ಲಿ ಮತ್ತೆ ಸುವರ್ಣ ಯುಗ ಆರಂಭ
ಗೋವಾದಲ್ಲಿ ಮತ್ತೆ ಸುವರ್ಣ ಯುಗ ಆರಂಭವಾಗಲಿದೆ, ಗೋವಾಕ್ಕೆ ಸ್ಥಳೀಯರೇ ಪ್ರಭುಗಳಾಗಿ ಅಧಿಕಾರ ಚಲಾಯಿಸಬೇಕು, ಇಲ್ಲಿನ ಜನರ ಕಷ್ಟ ಸುಖಕ್ಕೆ ಸ್ಪಂದಿಸಬೇಕು, ಇತಿಹಾಸ ಮರುಕಳಿಸುವಂತೆ ಮಾಡಬೇಕು ಎಂಬುದು ಕಾಂಗ್ರೆಸ್ ಉದ್ದೇಶ ಎಂದರು.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಘಟಿತ ಮತ್ತು ಸಾಂಸ್ಥಿಕ ಹೋರಾಟ ನಡೆಸಲಿಲ್ಲ ಎಂದು ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ವಿಶ್ಲೇಷಿಸಿದ್ದರು. ಈಗ ಗೋವಾ ಉಸ್ತುವಾರಿಯಾಗಿ ಪಕ್ಷದ ಕಾರ್ಯಕರ್ತರಿಗೆ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಕರೆ ನೀಡಿದ್ದಾರೆ.
ಸಂಘಟಿತ ಹೋರಾಟ, ಮೈತ್ರಿ ಲಾಭ
ಬಿಹಾರ ವಿಧಾನಸಭಾ ಚುನಾವಣೆಯು ಸಾಕಷ್ಟು ಪಾಠಗಳನ್ನು ಕಲಿಸಿದೆ. ಸಂಘಟಿತ ಹೋರಾಟದಿಂದ ಗೆಲುವು ಸಾಧ್ಯ ಎನ್ನುವುದನ್ನು ಸಿಪಿಐ-ಎಂಎಲ್, ಎಐಎಂಐಎಂ ರೀತಿಯ ಸಣ್ಣ ಪಕ್ಷಗಳು ಸಾಬೀತುಪಡಿಸಿವೆ. ಬಿಜೆಪಿ ಮೈತ್ರಿಕೂಟಕ್ಕಿಂತ ವಿರೋಧ ಪಕ್ಷಗಳ ಮೈತ್ರಿಕೂಟವೇ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿವೆ. ಆದರೆ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದಕ್ಕೆ ನಾವು ಸಂಘಟಿತವಾಗಿ ಹೋರಾಡಬೇಕಿದೆ ಎಂದು ಚಿದಂಬರಂ ಸಲಹೆ ನೀಡಿದ್ದರು. ಗೋವಾದಲ್ಲೂ ರಾಷ್ಟ್ರೀಯ ಪಕ್ಷಗಳ ಜೊತೆಗೆ ಸ್ಪರ್ಧೆ ಎದುರಿಸಿ ಕಾಂಗ್ರೆಸ್ ಗೆದ್ದರೂ, ಪ್ರಾದೇಶಿಕ ಪಕ್ಷಗಳ ಬೆಂಬಲ ಅತ್ಯಗತ್ಯ ಎಂಬ ಅಂಶವನ್ನು ಚಿದಂಬರಂ ಮತ್ತೊಮ್ಮೆ ಮುಂದಿಟ್ಟಿದ್ದಾರೆ.