ಪುಸ್ತಕದಲ್ಲಿ ಹಿಂದುತ್ವದ ಬಗ್ಗೆ ವಿವಾದಾದ್ಮಕ ಅಂಶ: ಸಲ್ಮಾನ್ ಖುರ್ಷಿದ್ ನಿವಾಸಕ್ಕೆ ಬೆಂಕಿ
ನವದೆಹಲಿ, ನವೆಂಬರ್ 15: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ತನ್ನ ಅಯೋಧ್ಯೆಯ ಬಗೆಗಿನ ಪುಸ್ತಕದಲ್ಲಿ ಹಿಂದುತ್ವದ ಬಗ್ಗೆ ಉಲ್ಲೇಖ ಮಾಡಿರುವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸಲ್ಮಾನ್ ಖುರ್ಷಿದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಪ್ರತಿಭಟನೆ ನಡೆಸಿದೆ. ಈಗ ಸಲ್ಮಾನ್ ಖುರ್ಷಿದ್ ಮನೆಗೆ ಬೆಂಕಿ ಹಾಕಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಹಿಂದುತ್ವ ಹಾಗೂ ಉಗ್ರವಾದಿ ಸಂಘಟನೆಗಳ ನಡುವೆ ಹೋಲಿಕೆ ಮಾಡಿ ತನ್ನ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಉಲ್ಲೇಖ ಮಾಡಿದ್ದರು. ಈ ಬೆನ್ನಲ್ಲೇ ನೈನಿತಾಲ್ನಲ್ಲಿನ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ನಿವಾಸವನ್ನು ಧ್ವಂಸ ಮಾಡಲಾಗಿದ್ದು, ಬೆಂಕಿ ಹಾಕಲಾಗಿದೆ.
ತನ್ನ ಹೊಸ ಪುಸ್ತಕದ 'ಹಿಂದುತ್ವ' ಕುರಿತ ಅಭಿಪ್ರಾಯವನ್ನು ಸಮರ್ಥಿಸಿಕೊಂಡ ಸಲ್ಮಾನ್ ಖುರ್ಷಿದ್
ಈ ಬಗ್ಗೆ ಸಲ್ಮಾನ್ ಖುರ್ಷಿದ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ನಿವಾಸಕ್ಕೆ ಬೆಂಕಿ ಹಾಕಲಾಗಿರುವ, ಮನೆಗೆ ಹಾನಿ ಉಂಟಾಗಿರುವ ವಿಡಿಯೋ, ಚಿತ್ರಗಳನ್ನು ಸಲ್ಮಾನ್ ಖುರ್ಷಿದ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ನಾನು ನನ್ನ ಸ್ನೇಹಿತರಿಗಾಗಿ ಬಾಗಿಲು ತೆರೆದೆ. ಆದರೆ ಈ ಆ ಸ್ನೇಹಿತರು ಈ ರೀತಿ ಮಾಡಿಹೋಗಿದ್ದಾರೆ. ನಾನು ಈಗಲೂ ಇಂತಹದ್ದು ಹಿಂದೂ ಧರ್ಮ ಎಂದು ಹೇಳುವುದು ತಪ್ಪೇ?," ಎಂದು ಸಲ್ಮಾನ್ ಖುರ್ಷಿದ್ ಪ್ರಶ್ನೆ ಮಾಡಿದ್ದಾರೆ.
ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ಏನಿದೆ?
"ಅಯೋಧ್ಯೆಯಲ್ಲಿ ಸುರ್ಯೋದಯ: ನಮ್ಮ ಕಾಲದಲ್ಲಿ ರಾಷ್ಟ್ರತ್ವ" ಎಂಬ ಶೀರ್ಷಿಕೆಯಲ್ಲಿ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೊಸ ಪುಸ್ತಕವೊಂದನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಬರೆಯಲಾಗಿರುವ ಕೆಲವು ವಿಚಾರಗಳು ಭಾರೀ ವಿವಾದವನ್ನು ಸೃಷ್ಟಿ ಮಾಡಿದೆ. "ಸನಾತನ ಧರ್ಮ ಮತ್ತು ಋಷಿಗಳು, ಸಂತರ ಶಾಸ್ತ್ರೀಯವಾದ ಹಿಂದೂ ಧರ್ಮವನ್ನು ಹಿಂದುತ್ವವು ಬದಿಗೆ ತಳ್ಳಿದೆ. ಇತ್ತೀಚಿಗೆ ಹಿಂದುತ್ವವು ಐಸಿಸ್ ಹಾಗೂ ಬೊಕೊ ಹರಾಮ್ನಂತಹ (ಉಗ್ರವಾದಿ ಸಂಘಟನೆ) ಇಸ್ಲಾಂ ಜಿಹಾದಿಗಳ ಗುಂಪಿನಂತೆ ಆಕ್ರಮಣಕಾರಿ ಆಗಿದೆ." ಎಂದು ಈ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್ ಉಲ್ಲೇಖ ಮಾಡಿದ್ದಾರೆ.
— Salman Khurshid (@salman7khurshid) November 15, 2021 |
ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಆಕ್ರೋಶ
ಈ ವಿಚಾರದಲ್ಲಿ ಬಿಜೆಪಿಯು ಸಲ್ಮಾನ್ ಖುರ್ಷಿದ್ ವಿರುದ್ಧ ವಾಗ್ದಾಳಿ ನಡೆಸಿದೆ. "ಸಲ್ಮಾನ್ ಖುರ್ಷಿದ್ರ ಈ ಹೇಳಿಕೆಯು ಹಿಂದೂ ಧರ್ಮದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಈಗ ಕಾಂಗ್ರೆಸ್ ಈ ರೀತಿಯಾಗಿ ಕೋಮು ಹೇಳಿಕೆ ನೀಡಿ, ಮತ್ತೆ ಮುಸ್ಲಿಮರ ಮತವನ್ನು ಪಡೆದುಕೊಳ್ಳುವ ಯತ್ನ ಮಾಡುತ್ತಿದೆ. ಕಾಂಗ್ರೆಸ್ ಮುಸ್ಲಿಮರ ಮತಕ್ಕಾಗಿ ಓಲೈಕೆಯ ರಾಜಕೀಯ ಮಾಡುತ್ತಿದೆ," ಎಂದು ಆರೋಪ ಮಾಡಿದ್ದಾರೆ. ಇನ್ನು ರಾಹುಲ್ ಗಾಂಧಿ, ಹಿಂದೂ ಧರ್ಮ ಹಾಗೂ ಹಿಂದುತ್ವದ ಬಗ್ಗೆಗಿನ ವ್ಯತ್ಯಾಸವನ್ನು ಉಲ್ಲೇಖ ಮಾಡುತ್ತಿದ್ದಂತೆ ಬಿಜೆಪಿಯು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದೆ. "ಕಾಂಗ್ರೆಸ್ ಪಕ್ಷಕ್ಕೆ ಹಿಂದುತ್ವದ ಮೇಲಿನ ದ್ವೇಷದ ರೋಗವಿದೆ," ಎಂದು ಬಿಜೆಪಿಯು ಹೇಳಿದೆ.
ಸಮರ್ಥಿಸಿಕೊಂಡಿದ್ದ ಸಲ್ಮಾನ್ ಖುರ್ಷಿದ್
ಇನ್ನು ತನ್ನ ಪುಸ್ತಕದಲ್ಲಿ ಉಲ್ಲೇಖ ಮಾಡಿರುವ ಅಂಶವು ವಿವಾದವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ತನ್ನ ಈ ಅಭಿಪ್ರಾಯವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. "ನಾನು ಈ ಜನರನ್ನು ಭಯೋತ್ಪಾದಕರು ಎಂದು ಕರೆದಿಲ್ಲ. ನಾನು ಅವರು ಧರ್ಮವನ್ನು ವಿರೂಪ ಮಾಡುವವರಿಗೆ ಸಮನಾದವರು ಎಂದು ಹೇಳಿದ್ದೇನೆ. ಹಿಂದುತ್ವವು 'ಸನಾತನ ಧರ್ಮ' ಹಾಗೂ ಹಿಂದೂ ಧರ್ಮವನ್ನು ಬದಿಗೆ ತಳ್ಳಿದೆ. ಇದು ಬೊಕೊ ಹರಾಮ್ ಹಾಗೂ ಬೇರೆಯವರಂತೆ ಒಂದು ಆಕ್ರಮಣಕಾರಿ ಹಾಗೂ ದೃಢವಾದ ಸ್ಥಾನವನ್ನು ಪಡೆದುಕೊಂಡಿದೆ," ಎಂದು ಹೇಳಿದ್ದಾರೆ. "ಹಿಂದುತ್ವವಾದಿಗಳಿಗೆ ಸಮಾನವಾದವರು ಬೇರೆ ಯಾರೂ ನನಗೆ ಸಿಗಲಿಲ್ಲ. ನನಗೆ ಅವರು ಬೊಕೊ ಹರಾಮ್ನಂತಹ ಆಕ್ರಮಣಕಾರಿ ನಿಲುವು ಹೊಂದಿರುವವರು ಅನಿಸಿತು. ಆದ್ದರಿಂದ ನಾನು ಹಿಂದುತ್ವವಾದಿಗಳು ಬೊಕೊ ಹರಾಮ್ಗೆ ಸಮಾನ ಎಂದು ನಾನು ಹೇಳಿದೆ. ಅಷ್ಟೇ, ಇದಕ್ಕೂ ಹಾಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದುತ್ವವನ್ನು ಪ್ರತಿಪಾದನೆ ಮಾಡುತ್ತಿರುವಂತೆ ಅದು ಹಿಂದೂ ಧರ್ಮವನ್ನು ವಿರೂಪ ಮಾಡುತ್ತಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರುಗಳಿಂದಲೇ ಆಕ್ಷೇಪ
"ಹಿಂದುತ್ವವು 'ಸನಾತನ ಧರ್ಮ' ಹಾಗೂ ಹಿಂದೂ ಧರ್ಮವನ್ನು ಬದಿಗೆ ತಳ್ಳಿದೆ ಹಾಗೂ ಬೊಕೊ ಹರಾಮ್ನಂತಹ (ಉಗ್ರವಾದಿ ಸಂಘಟನೆ) ಆಕ್ರಮಣಕಾರಿ ಸ್ಥಾನವನ್ನು ಪಡೆದುಕೊಂಡಿದೆ," ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ಉಲ್ಲೇಖ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕರುಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್, "ಈ ಹೇಳಿಕೆಯು ತಪ್ಪು ಹಾಗೂ ಅತಿಶಯೊಕ್ತಿ," ಎಂದು ಹೇಳಿದ್ದಾರೆ. "ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ನಾವು ಹಿಂದುತ್ವವನ್ನು ರಾಜಕೀಯ ಸಿದ್ಧಾಂತವಾಗಿ ಒಪ್ಪದೆ ಇರಬಹುದು. ಆದರೆ ಹಿಂದುತ್ವವನ್ನು ಐಸಿಸ್ ಹಾಗೂ ಜಿಹಾದಿಗಳ ಜೊತೆ ತುಲನೆ ಮಾಡುವುದು ಅತಿಶಯೊಕ್ತಿ," ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಟ್ವೀಟ್ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)