ವಿಧಾನಸೌಧಕ್ಕೆ 'ಟಾಂಗಾ'ದಲ್ಲಿ ತೆರಳಿದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ!
ಬೆಂಗಳೂರು, ಸೆ. 24: ವಿಧಾನ ಮಂಡಲ ಮಳೆಗಾಲದ ಮಹತ್ವದ ಅಧಿವೇಶನ ಇಂದು ಶುಕ್ರವಾರ ಮುಕ್ತಾಯವಾಗಲಿದೆ. ಕಲಾಪದ ಕಾಲಾವಕಾಶವನ್ನು ವ್ಯರ್ಥ ಮಾಡದೇ ಸಂಪೂರ್ಣವಾಗಿ ಚರ್ಚೆಗೆ ಬಳಸಿಕೊಂಡಿರುವುದು ಈ ಅಧಿವೇಶನದ ವಿಶೇಷ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರು ಸಂಪೂರ್ಣವಾಗಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಮತ್ತೊಂದು ಮಹತ್ವದ ಐತಿಹಾಸಿಕ ಕಾರ್ಯಕ್ರಮವೂ ಇಂದು ವಿಧಾನಸಭೆಯಲ್ಲಿ ನಡೆಯಲಿದೆ. ಅದಕ್ಕಾಗಿ ಇವತ್ತು ಶುಕ್ರವಾರ ಮಧ್ಯಾಹ್ನದ ಬಳಿಕ ಜಂಟಿ ಅಧಿವೇಶನ ನಡೆಯಲಿದೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಟಾಂಗಾ ಏರುವ ಮೂಲಕ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಲಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾಯಾಧ್ಯಕ್ಷರುಗಳು ಟಾಂಗಾದಲ್ಲಿ ತೆರಳಲಿದ್ದಾರೆ.
ಜಂಟಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಟಾಂಗಾದಲ್ಲಿ ತೆರಳುತ್ತಿರುವುದಾದರೂ ಯಾಕೆ? ಮುಂದಿದೆ ಸಂಪೂರ್ಣ ಮಾಹಿತಿ.
ಮೊದಲ ದಿನ ಎತ್ತಿನ ಗಾಡಿಯಲ್ಲಿ ಬಂದಿದ್ದರು!
ಕೊರೊನಾ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಕಳೆದೊಂದು ವರ್ಷದಿಂದ ಅಧಿವೇಶನ ಕರೆಯಲು ಆಗ್ರಹಿಸಿತ್ತು. ಇದೇ ವೇಳೆ ಸೆ. 13 ರಿಂದ 10 ದಿನಗಳ ಅಧವೇಶನ ಆರಂಭವಾಗಿತ್ತು. ವಿಶೇಷ ಎಂದರೆ ಅಧಿವೇಶನದಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕರು ಬೆಂಗಳೂರಿನ ತಮ್ಮ ತಮ್ಮ ಮನೆಗಳಿಂದ ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ಪ್ರಯಾಣಿಸಿದ್ದರು. ಕುಮಾರಕೃಪಾ ರಸ್ತೆಯ ನಿವಾಸದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸದಾಶಿವನಗರದ ನಿವಾಸದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ಪ್ರಯಾಣಿಸಿದ್ದರು. ತಮ್ಮ ಕಾರುಗಳನ್ನು ಬಿಟ್ಟು ಹೀಗೆ ಎತ್ತಿನ ಗಾಡಿಯಲ್ಲಿ ಕಾಂಗ್ರೆಸ್ ನಾಯಕರು ಪ್ರಯಾಣಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸೈಕಲ್ ಹತ್ತಿದ್ದ 'ಕೈ' ನಾಯಕರು!
ವಿಧಾನ ಮಂಡಲ ಅಧಿವೇಶನದಲ್ಲಿ ಭಾಗವಹಿಸಲು ಮೊದಲ ದಿನ ಎತ್ತಿನ ಗಾಡಿಯಲ್ಲಿ ಆಗಮಿಸಿದ್ದ ಕಾಂಗ್ರೆಸ್ ನಾಯಕರು ಕಳೆದ ಸೋಮವಾರ ಸೈಕಲ್ ಏರಿ ಸದನಕ್ಕೆ ತೆರಳಿದ್ದರು. ಆ ಮೂಲಕ ತಮ್ಮ ವಿರೋಧವನ್ನು ಸರ್ಕಾರಕ್ಕೆ ತೋರಿಸಿದ್ದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ವಿಧಾನಸೌಧದವರೆಗೆ ಸೈಕಲ್ ಹೊಡೆದಿದ್ದರು. ಇವತ್ತು ಟಾಂಗಾದಲ್ಲಿ ಪ್ರಯಾಣಿಸುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಅದಕ್ಕೆ ಕಾರಣ ಏನು? ಮುಂದಿದೆ ಮಾಹಿತಿ.
ಕಾರು ಬಿಟ್ಟು ಟಾಂಗಾ ಏರುತ್ತಿರುವುದ್ಯಾಕೆ ಕಾಂಗ್ರೆಸ್ ನಾಯಕರು?
ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಕಾಂಗ್ರೆಸ್ ನಾಯಕರು ಟಾಂಗಾದಲ್ಲಿ ತೆರಳುತ್ತಿದ್ದಾರೆ. ಆ ಮೂಲಕ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳಿಗೆ ಟಾಂಗ್ ಕೊಡಲು ತೀರ್ಮಾನ ಮಾಡಿದ್ದಾರೆ. ಮೊದಲು ಎತ್ತಿನ ಗಾಡಿಯಲ್ಲಿ ನಂತರ ಸೈಕಲ್ನಲ್ಲಿ ಪ್ರಯಾಣಿಸಿ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ನಾಯಕರು ತರಾಟೆಗೆ ತೆಗೆದುಕೊಂಡಿದ್ದರು.
ದೇಶದಲ್ಲಿ ನಿರಂತರವಾಗಿ ಇಂಧನ ಬೆಲೆ ಏರುತ್ತಿದೆ. ಅದರ ಪರಿಣಾಮ ನೇರವಾಗಿ ಜನರ ಮೇಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಲೆ ಏರಿಕೆ ತಡೆಯಲು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಟಾಂಗಾದಲ್ಲಿ ಪ್ರಯಾಣಿಸಲಿದ್ದಾರೆ 'ಕೈ' ನಾಯಕರು.
ಹೋರಾಟ ನಿರಂತರ ಎಂದ ಕಾಂಗ್ರೆಸ್ ನಾಯಕರು
ಸೆ. 13 ರಿಂದ 10 ದಿನಗಳ ಕಾಲ ನಡೆದ ವಿಧಾನ ಮಂಡಲ ಅಧಿವೇಶನದ ಎರಡೂ ಸದನಗಳಲ್ಲಿ ಕಾಂಗ್ರೆಸ್ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇರುವಾಗ ಅದರ ಲಾಭ ಮಾತ್ರ ಜನಸಾಮಾನ್ಯರಿಗೆ ಸಿಗುವಂತೆ ಮಾಡಿಲ್ಲ. ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ, ಡೀಸೆಲ್ 94 ಆಗಿದೆ, ಅಡುಗೆ ಅನಿಲ 880 ರೂ. ಆಗಿದೆ. ಇದರಿಂದ ಇತರೆ ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗಿದೆ.
ಪೆಟ್ರೋಲ್ ಬೆಲೆಯಲ್ಲಿ 25 ರೂ. ಡೀಸೆಲ್ ಬೆಲೆಯಲ್ಲಿ 20 ರೂ. ಹಾಗೂ ಅಡುಗೆ ಅನಿಲದ ಬೆಲೆ 150 ರೂ. ಕಡಿಮೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತಮ್ಮ ತಾಳಿ, ಒಡವೆ ಮಾರಿಕೊಂಡು ಜೀವನ ಮಾಡುವ ಸ್ಥಿತಿಗೆ ತಲುಪಿದ್ದಾರೆ. ಸರ್ಕಾರದ ಈ ಜನವಿರೋಧಿ ನೀತಿ ವಿರೋಧಿಸಿ ನಾವಿಂದು ಈ ಪ್ರತಿಭಟನೆ ಮಾಡಿದ್ದೇವೆ. ಜನರ ಪರ ಧ್ವನಿ ಎತ್ತಲು ನಾವು ಮೊನ್ನೆ ಎತ್ತಿನ ಗಾಡಿಯಲ್ಲಿ ಸದನಕ್ಕೆ ಆಗಮಿಸಿದ್ದೆವು. ನಂತರ ಸೈಕಲ್ ಮೂಲಕ ತೆರಳಿದ್ದೇವು. ಇವತ್ತು ಟಾಂಗಾದಲ್ಲಿ ತೆರಳುತ್ತಿದ್ದೇವೆ. ಸರ್ಕಾರ ಬೆಲೆ ಇಳಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ. ಜನರು ಕೂಡ ಈ ಕೆಟ್ಟ ಸರ್ಕಾರ ಕಿತ್ತೊಗೆಯಲು ಸಜ್ಜಾಗಬೇಕು ಎಂದು ಕಾಂಗ್ರೆಸ್ ನಾಯಕರು ನಾಡಿನ ಜನನರಲ್ಲಿ ಮನವಿ ಮಾಡಿದ್ದಾರೆ.