'ಸತ್ಯ ಹೊಸ್ತಿಲು ದಾಟುವುದರೊಳಗೆ ಸುಳ್ಳು ಊರೆಲ್ಲಾ ಸುತ್ತಿ ಬಂದಂತೆ' ಎಂದು ಸಿ.ಟಿ. ಹೇಳಿದ್ಯಾಕೆ?
ಬೆಂಗಳೂರು, ಆ. 18: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವೀಗ ವೈಯಕ್ತಿಕ ಮಟ್ಟಕ್ಕೆ ಹೋಗಿದೆ. ಇದೇ ವಿಚಾರದ ಚರ್ಚೆಯಲ್ಲಿ ತಮ್ಮ ಮೇಲೆ ಬಂದಿದ್ದ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದ್ದಾರೆ. ಅದರಲ್ಲಿಯೂ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ಈಗ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ.
ತಮ್ಮ ಮೇಲೆ ಕಾಂಗ್ರೆಸ್ ನಾಯಕರು ಮಾಡಿದ್ದ ಆರೋಪಗಳಿಗೆ ಸಿ.ಟಿ. ರವಿ ಮಾರ್ಮಿಕವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ಸತ್ಯ ಹೊಸ್ತಿಲು ದಾಟುವುದರೊಳಗೆ ಸುಳ್ಳು ಊರೆಲ್ಲಾ ಸುತ್ತಿ ಬಂದಂತೆ" ಎಂಬ ಗಾದೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಅನ್ವಯಿಸುತ್ತದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾಡ್ಡಿ, ಮಾಜಿ ಸಂಸದ ಧ್ರುವನಾರಾಯಣ್ ಮತ್ತು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ಸುಳ್ಳುಗಳನ್ನೇ ನೂರು ಬಾರಿ ಸತ್ಯ... ಸತ್ಯ... ಸತ್ಯ... ಎಂದು ಹೇಳುತ್ತಲೇ ಸುಳ್ಳಿನ ಸರಮಾಲೆಗಳನ್ನು ಪೋಣಿಸುತ್ತಾ, ಸುಳ್ಳುಗಳನ್ನು ಸಮಾಜದಲ್ಲಿ ಬಿತ್ತುತ್ತ... ಅದನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಿರುಗೇಟು ಕೊಟ್ಟಿದ್ದಾರೆ.
ಕಾರು ಅಪಘಾತ ಪ್ರಕರಣ: ವಿಡಿಯೋ ಮೂಲಕ ಸಿಟಿ ರವಿ ಪ್ರತಿಕ್ರಿಯೆ
ಅಷ್ಟಕ್ಕೂ ಮಾಜಿ ಸಚಿವ ಸಿ.ಟಿ. ರವಿ ಅವರ ಸುಧೀರ್ಘ ಪ್ರತಿಕ್ರಿಯೆ ಹಿಂದೆ ಬಹುದೊಡ್ಡ ಕಾರಣವಿದೆ. ಆ ಕಾರಣವನ್ನೂ ಸ್ವತಃ ಸಿ.ಟಿ. ರವಿ ಅವರೇ ಹೇಳಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕರ ಮೇಲೆ ಕಾನೂನು ಸಮರಕ್ಕೂ ಸಿ.ಟಿ. ರವಿ ಸಿದ್ಧತೆ ಮಾಡಿಕೊಮಡಿದ್ದಾರೆ. ಏನದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪ?
ಸಿ.ಟಿ. ರವಿ ಮದ್ಯಪಾನ ಮಾಡಿ ಕಾರು ಓಡಿಸುತ್ತಿದ್ದರು!
"ಸುಳ್ಳುಗಳೇ ಅವರ ಬಂಡವಾಳ. ದಿನ ನಿತ್ಯ ಏನಾದರೂ ಒಂದು ಕೆದಕಿ ಮಾಧ್ಯಮಗಳ ಮುಂದೆ ಪ್ರಚಾರ ಗಿಟ್ಟಿಸಿಕೊಳ್ಳುವ ಮೂಲಕ ತಮ್ಮ ಹೈ ಕಮಾಂಡ್ಗೆ ನಾವು ಸಹ ವಿರೋಧ ಪಕ್ಷದಲ್ಲಿ ಇದ್ದೇವೆ. ಮಾತನಾಡಲು ನಮಗೂ ಬರುತ್ತದೆ ಎಂದು ತೋರಿಸಿಕೊಳ್ಳಲು ಪೈಪೋಟಿಗೆ ಬಿದ್ದವರಂತೆ ಆರೋಪಗಳನ್ನು ಮಾಡುತ್ತಲೇ ಪ್ರಚಾರ ಪ್ರಿಯರಾಗುತ್ತಿದ್ದಾರೆ ಕಾಂಗ್ರೆಸ್ ನಾಯಕರು" ಎಂದು ಸಿ.ಟಿ. ರವಿ ಹೇಳಿದ್ದಾರೆ.
"ಸಿಟಿ ರವಿ ಅವರೇ ಮದ್ಯಪಾನ ಮಾಡಿ ಕಾರು ಓಡಿಸುತ್ತಿದ್ದರು ಎಂದು ಕಥೆಕಟ್ಟಿ ಈಗ ಅಪ ಪ್ರಚಾರ ಮಾಡುತ್ತಿದ್ದು, ಈ ಘಟನೆ ಬಗ್ಗೆ ನಾನು ಅಂದೇ ಸ್ಪಷ್ಟನೆ ನೀಡಿದ್ದೇನೆ.
2019 ರ ಫೆಬ್ರವರಿ 18 ಸೋಮವಾರ ರಾತ್ರಿ 11.30ರ ಸುಮಾರಿಗೆ ಚಿಕ್ಕಮಗಳೂರಿನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೋಗಲು ಕಾರು ಹತ್ತಿದೆವು. ಕಾರಿನಲ್ಲಿ ಗನ್ಮ್ಯಾನ್ ರಾಜಾ ನಾಯ್ಕ ಇದ್ದರು. ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಊರ್ಕೇನಹಳ್ಳಿ ಬಳಿ ರಸ್ತೆ ನಡುವೆ ನಿಂತಿದ್ದ ಕಾರಿಗೆ ನನ್ನ ಕಾರು ಚಾಲಕ ರುದ್ರೇಗೌಡ ಅಲಿಯಾಸ್ ಆಕಾಶ್ನಿಂದ ಅಪಘಾತವಾಗಿದ್ದು ಅನಿರೀಕ್ಷಿತ. ಅದು ಉದ್ದೇಶ ಪೂರ್ವಕ ಅಪಘಾತವಲ್ಲ" ಎಂದು ಸಿ.ಟಿ. ರವಿ ವಿವರಿಸಿದ್ದಾರೆ.
ನಾನು ಕಾರು ಚಲಾಯಿಸುವುದಿಲ್ಲ!
"ಅಷ್ಟೇ ಅಲ್ಲ ಅಪಘಾತವಾದಾಗ ನಾನು ಕಾರು ಚಲಾಯಿಸುತ್ತಿದ್ದೆ ಎಂದು ಕಾಂಗ್ರೆಸ್ ಮುಖಂಡರ ಆರೋಪ ಮಾಡುತ್ತಿದ್ದಾರೆ. ಚಾಲಕನಿರುವಾಗ ನಾನು ಕಾರು ಚಲಾಯಿಸುವುದಿಲ್ಲ. ಅತ್ಯಂತ ಜರೂರು ಸಂದರ್ಭದಲ್ಲಿ ನಾನು ಸ್ಥಳೀಯವಾಗಿ ಚಿಕ್ಕಮಗಳೂರಿನ ಸುತ್ತಮುತ್ತ ವಾಹನ ಚಾಲನೆ ಮಾಡಿದ್ದೇನೆ ಅದು ದೂರ ಪ್ರಯಾಣ ಮಾಡುವಾಗ ಎಂದಿಗೂ ನಾನು ಕಾರು ಚಲಾಯಿಸುವುದಿಲ್ಲ" ಎಂದು ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ.
"ನಾನು ಕಾರಿನಲ್ಲಿ ನಿದ್ದೆಗೆ ಜಾರಿದಾಗ ಅಪಘಾತವಾಗಿತ್ತು. ಏರ್ ಬ್ಯಾಗ್ ಓಪನ್ ಆದಾಗಲೇ ನನಗೆ ಗೊತ್ತಾಗಿದ್ದು ಕಾರು ಅಪಘಾತವಾಗಿದೆ ಎಂದು. ತಕ್ಷಣವೇ ಪೊಲೀಸರಿಗೆ ಮತ್ತು ಅಂಬುಲೆನ್ಸ್ಗೆ ಫೋನ್ ಮಾಡಿ ಮೃತ ದೇಹಗಳನ್ನು ಮತ್ತು ಅಪಘಾತದಲ್ಲಿ ಗಾಯಗೊಂಡವರನ್ನು ಅಂಬುಲೆನ್ಸ್ನಲ್ಲಿ ಕೂರಿಸಿ ಆಸ್ಪತ್ರೆಗೆ ದಾಖಲಿಸಿದ ಮೇಲೆಯೇ ನಾನು ಬೆಂಗಳೂರಿಗೆ ತೆರಳಿ ವಿಕ್ರಂ ಆಸ್ಪತ್ರೆಗೆ ದಾಖಲಾದೆ" ಎಂದು ಅಂದು ನಡೆದಿದ್ದನ್ನು ಮತ್ತೊಮ್ಮೆ ಸಿಟಿ ರವಿ ವಿವರಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕರ ಮೇಲೆ ಕಾನೂನು ಕ್ರಮದ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಕಾಫಿಯನ್ನೇ ಕುಡಿಯಲ್ಲ, ಡ್ರಿಂಕ್ಸ್ ಹೇಗೆ ಮಾಡ್ತಾರೆ?:ಸಿ.ಟಿ.ರವಿ ಪತ್ನಿ
ಕಾಂಗ್ರೆಸ್ ನಾಯಕರ ಮೇಲೆ ಕಾನೂನು ಸಮರ!
ತಮ್ಮ ಮೇಲೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಗಳನ್ನು ಸಿ.ಟಿ. ರವಿ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಕಾನೂನು ಸಮರ ನಡೆಸಲು ತೀರ್ಮಾನಿಸಿದ್ದಾಗಿ ಅವರು ಹೇಳಿದ್ದಾರೆ. "ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಧ್ರುವನಾರಾಯಣ್ ಮತ್ತು ವಕ್ತಾರ ಲಕ್ಷ್ಮಣ್ ಮತ್ತಿತರ ಕಾಂಗ್ರೆಸಿಗರು ನನ್ನ ಮೇಲೆ ತೇಜೋವಧೆ ಮಾಡುತ್ತಾ ಬಂದಿದ್ದಾರೆ. ಅವರ ಮೇಲೆ ನ್ಯಾಯಾಲಯದಲ್ಲಿ ಮಾನ ನಷ್ಟ ಮುಕದ್ದಮೆ ಹೂಡುವ ಬಗ್ಗೆ ನನ್ನ ವಕೀಲರ ಜೊತೆ ಚರ್ಚೆ ನಡೆಸಿದ್ದೇನೆ" ಎಂದು ಸಿಟಿ ರವಿ ತಿಳಿಸಿದ್ದಾರೆ.
"ನಾನು 1000 ಕೋಟಿ ಆಸ್ತಿ ಮಾಡಿದ್ದೇನೆ ಎಂದು ಕೆಪಿಸಿಸಿ ವಕ್ತಾರ ಬ್ರಿಜೇಷ್ ಕಾಳಪ್ಪ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದಾರೆ. ನನ್ನ ಬಳಿ ಬೇನಾಮಿ ಆಸ್ತಿ ಇದ್ದರೆ ಕಾಂಗ್ರೆಸ್ ನಾಯಕರು ದಾಖಲೆ ಸಹಿತ ಚರ್ಚೆಗೆ ಬರಲಿ. ಅದು ಸ್ಪಷ್ಟವಾಗಿದ್ದರೆ ಅದನ್ನು ಅವರಿಗೆ ದಾನ ಕೊಟ್ಟುಬಿಡುತ್ತೇನೆ. ಅವರ ಸುಳ್ಳು ಆರೋಪಕ್ಕೆ ಸಂಬಂಧಿಸಿದಂತೆ ಅವರ ಮೇಲೂ ಮಾನನಷ್ಟ ಮೊಕದ್ದಮೆಯನ್ನು ಹಾಕಲು ನನ್ನ ವಕೀಲರಲ್ಲಿ ಚರ್ಚಿಸಿದ್ದೇನೆ" ಎಂದಿದ್ದಾರೆ.
ರವಿ ಮದ್ಯಪಾನ ಮಾಡಿದ್ದರು ಅನ್ನೋದನ್ನು ನಾನು ನಂಬಲ್ಲ ಎಂದರು ಖಾದರ್
ಕಾಂಗ್ರೆಸ್ ನಾಯಕರ ಆಸ್ತಿ ಬಹಿರಂಗ ಪಡಿಸಲಿ!
ನಿಮ್ಮ ಪಕ್ಷದ ಬಿಳಿ ಆನೆಗಳ ಅಕ್ರಮ ಆಸ್ತಿಯನ್ನು ಬಹಿರಂಗಪಡಿಸಿ ನಂತರ ಬೇರೊಬ್ಬರ ಬಗ್ಗೆ ಮಾತನಾಡಿ. ಕೆಲವರು ಈಗಾಗಲೇ ಈ ಬಗ್ಗೆ ನ್ಯಾಯಾಲಯಗಳಲ್ಲಿ ಹೂಡಿರುವ ದಾವೆಗಳೆಲ್ಲವೂ ವಜಾವಾಗಿದೆ . ಅಲ್ಲದೇ ಲೋಕಾಯಕ್ತ ರಲ್ಲಿ ಕೆಲ ವ್ಯಕ್ತಿಗಳು ಸಲ್ಲಿಸಿದ್ದ ಎರಡು ಪ್ರಕರಣಗಳಿಗೂ ಈಗಾಗಲೇ ಬಿ ರಿಪೋರ್ಟ್ ಬಂದಿದೆ . ಅದಕ್ಕೆ ನಾವು ನ್ಯಾಯಾಲಯದಲ್ಲಿ ಇವರಿಗೆ ಸಾಕ್ಷಿ ಸಹಿತ ತಕ್ಕ ಉತ್ತರವನ್ನೇ ಕೊಟ್ಟಿದ್ದೇವೆ. ಆದರೂ ಸಹ ನಿರಾಧಾರವಾಗಿ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರ ನೈತಿಕತೆಯನ್ನು ನಾನು ಪ್ರಶ್ನಿಸುತ್ತೇನೆ.
ಪ್ರಧಾನಿ ಮೋದಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಿಸಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರು ನಾಮಕರಣ ಮಾಡಿದ್ದರು. ಅದಾದ ಬಳಿಕ ರಾಜ್ಯದಲ್ಲಿಯೂ ಕೂಡ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒತ್ತಾಯಿಸಿದ್ದರು. ನಂತರ ಆರಂಭವಾದ ಚರ್ಚೆಯಲ್ಲಿ ಹಲವು ವಿಷಯಗಳು ಬಂದಿದೆ.