ಕಾಂಗ್ರೆಸ್ಗೆ ಮತ್ತೆ ಬಂಡಾಯಗಾರರ ಕಾಟ: ಎಚ್ಚರ ತಪ್ಪಿದರೆ 'ಕೈ' ಜಾರೀತು ಆಡಳಿತ
ನವದೆಹಲಿ, ಆಗಸ್ಟ್ 26: ಕಾಂಗ್ರೆಸ್ ಈಗ ಮತ್ತೆ ಪಂಜಾಬ್ ಹಾಗೂ ಛತ್ತೀಸ್ಗಢದಲ್ಲಿ ಬಂಡಾಯಗಾರರ ಕಾಟವನ್ನು ಅನುಭವಿಸುತ್ತಿದೆ. ಉಭಯ ರಾಜ್ಯಗಳಲ್ಲಿ ತನ್ನ ಸರ್ಕಾರಗವನ್ನು ಬಂಡಾಯಗಾರರು ಕೆಡವದಂತೆ ನೋಡಿಕೊಳ್ಳಲು ಕಾಂಗ್ರೆಸ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಹೈಕಮಾಂಡ್ ಮಧ್ಯಪ್ರದೇಶವಾದರೂ ಪಂಜಾಬ್ ಹಾಗೂ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಬಂಡಾಯಗಾರರನ್ನು ಮನವೊಲಿಸುವುದು ಸಾಧ್ಯವಾಗುತ್ತಿಲ್ಲ ಎಂದು ವರದಿಗಳು ತಿಳಿಸಿದೆ.
ಪಂಜಾಬ್ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ರ ಪದಚ್ಯುತಿ ಮಾಡಬೇಕೆಂದು ಪಟ್ಟು ಹಿಡಿದಿರುವ ಮಂತ್ರಿಗಳು ಮತ್ತು ಶಾಸಕರು ಏನೇ ಆದರೂ ತಮ್ಮ ನಿಲುವಿನಿಂದ ಹಿಂದೆ ಸರಿವೆವು ಎಂಬಂತೆ ವರ್ತಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಪಂಜಾಬ್ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ರ ಪದಚ್ಯುತಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಪಂಜಾಬ್ನಲ್ಲಿ ನಾಲ್ಕು ಕಾಂಗ್ರೆಸ್ ಸಚಿವರುಗಳು ಹಾಗೂ ಮೂರು ಶಾಸಕರುಗಳು ಬುಧವಾರ ಪಂಜಾಬ್ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿಯನ್ನು ಪದಚ್ಯುತಿ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ಹರೀಶ್ ರಾವತ್ ಮಾತ್ರ ಕಾಂಗ್ರೆಸ್ ಹೈಕಮಾಂಡ್ ಮಾತಿನಂತೆ ಇದು ಸಾಧ್ಯವಿಲ್ಲ ಎಂದಿದ್ದಾರೆ. ಹಾಗೆಯೇ ಮುಂದಿನ ಚುನಾವಣೆಯನ್ನು ಪಂಜಾಬ್ ಮುಖ್ಯುಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಹೇಳುವ ಮೂಲಕ ಮುಂದೆ ಕಾಂಗ್ರೆಸ್ ಪಂಜಾಬ್ನಲ್ಲಿ ಜಯ ಗಳಿಸಿದರೂ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.
ಬಿಜೆಪಿ ಸೋಲಿಸಲು ಜಾಣ ನಡೆ ಇಡಬೇಕಿದೆ; ವಿಪಕ್ಷಗಳಿಗೆ ಶಿವಸೇನಾ ಸಲಹೆ
ಈ ನಡುವೆ ಛತ್ತೀಸ್ಗಢದಲ್ಲಿ ಸಿಎಂ ಭೂಪೇಶ್ ಬಘೇಲ್ ಮತ್ತೆ ಪ್ರತಿಸ್ಪರ್ಧಿ ಟಿ ಎಸ್ ಸಿಂಗ್ ದಿಯೋರನ್ನು ಎದುರು ಹಾಕಿಕೊಂಡಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿಯೊಂದಿಗೆ ಶಾಂತಿ ಸ್ಥಾಪನೆ ಸಭೆ ನಡೆಸಲಾಗಿದೆ. ಇನ್ನೊಂದೆಡೆ ಟಿ ಎಸ್ ಸಿಂಗ್ ದಿಯೋ ಮುಖ್ಯಮಂತ್ರಿಯಾಗಲು ಎಲ್ಲಾ ತಂತ್ರ ನಡೆಸುತ್ತಿದ್ದಾರೆ. ನಾನು ಭೂಪೇಶ್ ಬಘೇಲ್ ಪರವಾಗಿ ಹೇಳಿಕೆ ನೀಡಿದ ಕಾರಣಕ್ಕೆ ನನ್ನನ್ನು ಕೊಲ್ಲುವ ಯತ್ನ ನಡೆಸಲಾಗುತ್ತಿದೆ ಎಂದು ಶಾಸಕ ಬೃಹಸ್ಪತಿ ಸಿಂಗ್ ಹೇಳಿದ್ದಾರೆ. ರಾಮಾನುಜ್ಗಂಜ್ ಶಾಸಕರಾಗಿರುವ ಸಿಂಗ್, "ಮಹಾರಾಜ" (ಸಿಂಗ್ ದಿಯೋ) ನನ್ನನ್ನು ಕೊಲ್ಲಬಹುದು ಎಂದು ಆರೋಪ ಮಾಡಿದ್ದಾರೆ. ಹಾಗೆಯೇ ತನ್ನ ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು ದೂರಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯೇ ಸಮಸ್ಯೆ ಬಗೆಹರಿಸುತ್ತಾರೆ
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್, ನಾಯಕತ್ವ ಬದಲಾವಣೆಗೆ ಕೋರಿ ನನಗೆ ಅಧಿಕೃತವಾಗಿ ಒಂದು ಸುತ್ತೋಲೆ ಅಥವಾ ಏನೋ ನೀಡಿದ್ದಾರೆ ಎಂದು, ಈ ಮನವಿಯು ಪಂಜಾಬ್ನಿಂದ ಬಂದಿದೆ ಎಂದು ಮಾಧ್ಯಮಗಳು ಹಾಗೂ ಇತರರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಹಾಗೆ ಇದೆ ಎಂದು ನನಗೆ ಅನಿಸುತ್ತಿಲ್ಲ. ಪಂಜಾಬ್ನಲ್ಲಿ ಕೆಲವೊಂದು ಸಮಸ್ಯೆಗಳು ಇದೆ. ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಇದನ್ನು ಮುಖ್ಯಮಂತ್ರಿಯೇ ಪರಿಹರಿಸಿಕೊಳ್ಳಬೇಕು. ಮುಖ್ಯಮಂತ್ರಿ ಅಮರಿಂದರ್ ಈ ಸಮಸ್ಯೆ ಪರಿಹಾರಕ್ಕೆ ಖಂಡಿತವಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಇನ್ನು ಈ ಸಂದರ್ಭದಲ್ಲೇ ಅಮರಿಂದರ್ ಮುಂದಿನ ಚುನಾವಣೆಯ ನೇತೃತ್ವ ವಹಿಸಲಿದ್ದಾರೆಯೇ? ಎಂದು ಮಾಧ್ಯಮ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರೀಶ್ ರಾವತ್, "ಮುಂದಿನ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂದು ನಿರ್ಧಾರ ಮಾಡುವುದು ಹೈಕಮಾಂಡ್. ನಾನು ಈ ಬಗ್ಗೆ ಏನು ಹೇಳುವುದಿಲ್ಲ," ಎಂದು ಹೇಳಿದರು. ಹಾಗೆಯೇ ಮುಂದಿನ ಚುನಾವಣೆವರೆಗೂ ಅಮರಿಂದರ್ ಮುಖ್ಯಮಂತ್ರಿ ಆಗಿ ಇರುತ್ತಾರೆಯೇ ಎಂದು ಕೇಳಿದಾಗ, "ಈ ಸಂದರ್ಭದಲ್ಲಿ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಅಲ್ಲವೇ," ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಸಮಸ್ಯೆ ಬಗೆಹರಿಸುತ್ತೇನೆ ಎಂದ ನವಜೋತ್ ಸಿಧು
ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ರನ್ನು ಭೇಟಿಯಾದವರಲ್ಲಿ ಸಚಿವರುಗಳಾದ ರಾಜೇಂದ್ರ ಸಿಂಗ್ ಭಾಜ್ವ, ಸುಖಿಜಿಂದರ್ ಸಿಂಗ್ ರಾಂಧಾವ, ಚರಣ್ಜೀತ್ ಸಿಂಗ್ ಚನ್ನಿ, ಸುಖಬೀರ್ ಸರ್ಕಾರಿಯಾ ಸೇರಿದ್ದಾರೆ. ಇದನ್ನು ಹೊರತುಪಡಿಸಿ ಶಾಸಕರಾದ ಬರೀಂದರ್ ಮೀತ್, ಕುಲ್ಬೀರ್ ಜಿರಾ, ಸುರ್ಜಿತ್ ದೀಮನ್ ಈ ಸಭೆಯಲ್ಲಿ ಇದ್ದರು. ಅಮರಿಂದರ್ ಸಿಂಗ್ ಪದಚ್ಯುತಿಯ ಬಗ್ಗೆ ಈ ಕಾಂಗ್ರೆಸ್ ನಾಯಕರು ಮಂಗಳವಾರ ಭಾಜ್ವ ಮನೆಯಲ್ಲಿ ಸಭೆ ಸೇರಿದ್ದಾರೆ ಎಂದು ಹೇಳಲಾಗಿದೆ. ಈ ನಾಯಕರು ಏನೇ ಆದರೂ ತಮ್ಮ ಪಟ್ಟು ಮಾತ್ರ ಬಿಡುತ್ತಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ಕೂಡಾ ಅಮರಿಂದರ್ ರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವುದಕ್ಕೆ ಒಪ್ಪಿಲ್ಲ. ಹೊಸದಾಗಿ ನೇಮಕಗೊಂಡ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಹಾಯಕರು ಇತ್ತೀಚೆಗೆ ನೀಡಿದ ಕೆಲವು ವಿವಾದಾತ್ಮಕ ಹೇಳಿಕೆಗಳು ಒಂದು ಸಮಸ್ಯೆಯನ್ನು ಹುಟ್ಟು ಹಾಕಿದೆ ಎಂಬುವದನ್ನು ಮಾತ್ರ ಈ ಸಂದರ್ಭದಲ್ಲಿ ಹರೀಶ್ ರಾವತ್ ಒಪ್ಪಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ, "ನಾನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಇನ್ನು ಈ ಸಂದರ್ಭದಲ್ಲೇ ನಾನು ಕೆಲವು ಹೇಳಿಕೆಗಳು ಪಕ್ಷಕ್ಕೆ ವಿರುದ್ದವಾಗಿದೆ. ಅದನ್ನು ಪಕ್ಷ ಒಪ್ಪಲಾರದು ಎಂದು ಸ್ಪಷ್ಟ ಪಡಿಸಿದ್ದೇನೆ," ಎಂದು ಹರೀಶ್ ರಾವತ್ ಹೇಳಿದ್ದಾರೆ. ಇನ್ನು ತನ್ನ ಸಭೆಯ ಬಗ್ಗೆ ಮಾತನಾಡಿದ ರಾವತ್ ಇದು ಕ್ಷೇತ್ರ ಮಟ್ಟಕ್ಕೆ ಸಂಬಂಧಿಸಿದ ಕುಂದುಕೊರತೆಗಳು ಅಷ್ಟೇ ಎಂದಿದ್ದಾರೆ.
ಕಲ್ಯಾಣ್ ಅಂತಿಮ ನಮನದ ವೇಳೆ ರಾಷ್ಟ್ರ ಧ್ವಜದ ಮೇಲೆ ಬಿಜೆಪಿ ಧ್ವಜ: ತೀವ್ರ ವಿವಾದ ಸೃಷ್ಟಿ
ಚುನಾವಣೆಗೂ ಮುನ್ನ ಸಮಸ್ಯೆಗೆ ಪರಿಹಾರ
"ನನ್ನನ್ನು ಭೇಟಿಯಾದ ನಾಯಕರು ಕೆಲವು ವಿಷಯಗಳನ್ನು ಬಗೆಹರಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸರ್ಕಾರ ಈ ಬಗ್ಗೆ ಕಾರ್ಯಪ್ರವೃತ್ತವಾಗಲಿದೆ. ಚುನಾವಣೆ ಬರುತ್ತಿರುವ ಹಿನ್ನೆಲೆ ಎಲ್ಲಾ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುತ್ತದೆ. ಕೆಲವರು ಸರಿಯಾಗಿ ಹೇಳಿದ್ದಾರೆ, ಕೆಲವರು ನಿಧಿ ಬರುವುದು ನಿಂತು ಬಿಡುತ್ತದೆ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವರು ರಾಜಕೀಯದ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ನನ್ನನ್ನು ಭೇಟಿಯಾದವರು ಹಲವಾರು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಎಲ್ಲಾ ವಿಷಯಗಳು ವೈಯಕ್ತಿಕವಲ್ಲ," ಎಂದು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಸ್ಪಷ್ಟಣೆ ನೀಡಿದ್ದಾರೆ. ಹಾಗೆಯೇ ನನ್ನಿಂದ ಏನು ಸಾಧ್ಯವೋ ಅದನ್ನು ಮಾಡುವುದಾಗಿ ನಾನು ನಾಯಕರಿಗೆ ಭರವಸೆ ನೀಡಿದ್ದೇನೆ ಎಂದು ಕೂಡಾ ತಿಳಿಸಿದ್ದಾರೆ. "ಸ್ಥಳೀಯ ಸಮಸ್ಯೆಗಳನ್ನು ನನ್ನ ಮುಂದೆ ಇಡಲಾಗಿದೆ. ನಾನು ಅದನ್ನು ಪರಿಹರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ಹಾಗೆಯೇ ಈ ಬಗ್ಗೆ ನಾಯಕತ್ವದ ಗಮನಕ್ಕೂ ತರುತ್ತೇನೆ," ಎಂದು ಹರೀಶ್ ಹೇಳಿದ್ದಾರೆ. ಆದರೆ ಮೂಲಗಳು ಈ ಭೇಟಿಯು ಬರೀ ಅಮರಿಂದರ್ ವಿಷಯದಲ್ಲಿ ನಡೆದಿದೆ. ಅಮರಿಂದರ್ ಮುಂದಿನ ಚುನಾವಣೆ ನೇತೃತ್ವ ವಹಿಸುವುದರ ವಿರುದ್ದ ಮಾತ್ರ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. "ಸರ್ಕಾರ ಈ ನಾಯಕರ ಎಲ್ಲಾ ಬೇಡಿಕೆಗಳನ್ನು ಕೆಲವೇ ತಿಂಗಳಿನಲ್ಲಿ ಪರಿಹರಿಸುತ್ತದೆ ಎಂದು ಮೂಲಗಳು ತಿಳಿಸಿದೆ.
ಛತ್ತೀಸ್ಗಢದಲ್ಲಿ ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರ ತಿಕ್ಕಾಟ
ಛತ್ತೀಸ್ಗಢ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ತಿಕ್ಕಾಟ ನಡೆಯುತ್ತಿದೆ. ಒಂದೆಡೆ ಛತ್ತೀಸ್ಗಢದಲ್ಲಿ ಅರ್ಧ ಆಡಳಿತವಧಿಯಲ್ಲಿ ಸಿಎಂ ಬದಲಾವಣೆ ಮಾಡುವ ಬೇಡಿಕೆಯನ್ನು ಇಟ್ಟಿರುವವರು ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡುವ ಯತ್ನ ಮಾಡುತ್ತಿದ್ದಾರೆ ಎಂದು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ, ಆದರೆ ನಾನು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಬೇಡಿಕೆ ಮುಂದಿಟ್ಟಿರುವ ಟಿ ಎಸ್ ಸಿಂಗ್ ದಿಯೋ, 2018 ರಲ್ಲಿ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿಯೇ ಎರಡೂವರೆ ವರ್ಷದ ಬಳಿಕ ನನ್ನನ್ನು ಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ದೆಹಲಿಯಿಂದ ಬುಧವಾರ ವಾಪಾಸ್ ಬಂದ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ರನ್ನು ಸ್ವಾಗತಿಸಲು ಸಚಿವರಾದ ರವೀಂದ್ರ ಚೌಬೆ ಮತ್ತು ಅಮರ್ಜೀತ್ ಭಗತ್ ಸೇರಿದಂತೆ 15 ಶಾಸಕರು, ನೂರಾರು ಜನರು ರಾಯಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದು ಭೂಪೇಶ್ ಬಘೇಲ್ ಪರವಾಗಿ ಇರುವ ಶಕ್ತಿಯ ಪ್ರದರ್ಶನವೂ ಆಗಿದೆ. ಈ ಸಂದರ್ಭದಲ್ಲಿ ಘೋಷಣೆಗಳನ್ನು ಕೂಡಾ ಕೂಗಲಾಗಿದೆ. "ಛತ್ತೀಸ್ಗಢ ಗಟ್ಟಿಯಾಗಿ ನಿಂತಿದೆ, ಸಿಎಂ ಬಘೇಲ್ ಜೊತೆ ಛತ್ತೀಸ್ಗಢ ನಿಂತಿದೆ" ಎಂದು ಘೋಷಣೆ ಕೂಗಲಾಗಿದೆ. ಆ ಬಳಿಕ ಸುಮಾರು 25 ಶಾಸಕರು ಬಘೇಲ್ ನಿವಾಸಕ್ಕೆ ಬಂದು ಸಭೆ ನಡೆಸಿದ್ದಾರೆ. ಆದರೆ ಈ ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂಬ ಮಾಹಿತಿಯನ್ನು ಮುಚ್ಚಿಡಲಾಗಿದೆ. ಆದರೆ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ, ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಛತ್ತೀಸ್ಗಡ ಉಸ್ತುವಾರಿ ಪಿಎಲ್ ಪುನಿಯಾ ಹೇಳಿದ್ದಾರೆ.
'2024 ಚುನಾವಣೆಗೆ ಈಗಲೇ ವ್ಯವಸ್ಥಿತ ಯೋಜನೆ ರೂಪಿಸೋಣ': ವಿಪಕ್ಷ ಸಭೆಯಲ್ಲಿ ಸೋನಿಯಾ
ಹೈಕಮಾಂಡ್ ತೀರ್ಪಿನಂತೆ ನನ್ನ ನಡೆ
"ರಾಜ್ಯ ಸರ್ಕಾರ, ಅಭಿವೃದ್ಧಿ ಮತ್ತು ರಾಜಕೀಯ ಪರಿಸ್ಥಿತಿ" ಯ ಯೋಜನೆಗಳ ಬಗ್ಗೆ ದೆಹಲಿಯಲ್ಲಿ ಪಕ್ಷದ ನಾಯಕತ್ವದೊಂದಿಗೆ ಮಾತನಾಡಿದ್ದೇನೆ ಎಂದು ಬಘೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲೇ ನಾಯಕತ್ವ ಬದಲಾವಣೆಯ ವದಂತಿಗಳ ಬಗ್ಗೆ ಪುನಿಯಾ ಜೀ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯ ನಂತರ, ಈಗಲೂ ಏನಾದರೂ ಹೇಳಲು ಇದೆಯೇ? ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಸಿಎಂ ಭೂಪೇಶ್ ಬಘೇಲ್ ಮತ್ತೆ ಟಿ ಎಸ್ ಸಿಂಗ್ ದಿಯೋ ಮಂಗಳವಾರ ಮಂಗಳವಾರ ರಾಹುಲ್ ಗಾಂಧಿಯನ್ನು ಒಟ್ಟಿಗೆ ಮತ್ತು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ರಾಯಪುರಕ್ಕೆ ಹಿಂದಿರುಗುವ ಮೊದಲು ಬುಧವಾರ ಬೆಳಗ್ಗೆ ಎಐಸಿಸಿ ಮುಖ್ಯಸ್ಥ ಕೆ ಸಿ ವೇಣುಗೋಪಾಲ್ ರನ್ನು ಭೇಟಿ ಮಾಡಿದ್ದಾರೆ. ಇನ್ನು ಈ ವೇಳೆಯೇ ತಾನು ಯಾವುದೇ ಸ್ಥಾನಕ್ಕೆ ಹಂಬಲಿಸುವುದಿಲ್ಲ ಎಂದು ಭೂಪೇಶ್ ಬಘೇಲ್ ಹೇಳಿದ್ದಾರೆ. ಹೈಕಮಾಂಡ್ ನಾನು ಸ್ಥಾನ ತ್ಯಜಿಸಲು ಸೂಚನೆ ನೀಡಿದಾಗ ನನ್ನ ಸ್ಥಾನವನ್ನು ನಾನು ತ್ಯಜಿಸುತ್ತೇನೆ ಎಂದು ಹೇಳಿದ್ದಾರೆ. "ಎರಡೂವರೆ ವರ್ಷದ ಬಗ್ಗೆ ಯಾರು ಮಾತನಾಡುತ್ತಾರೋ ಅವರು ರಾಜಕೀಯ ಅಸ್ಥಿರತೆಯನ್ನು ಸೃಷ್ಟಿ ಮಾಡುವ ಯತ್ನವನ್ನು ಮಾಡುತ್ತಿದ್ದಾರೆ. ಅವರು ಸಫಲವಾಗುವುದಿಲ್ಲ," ಎಂದಿದ್ದಾರೆ. ಈ ಸಂದರ್ಭದಲ್ಲೇ ಕಾಂಗ್ರೆಸ್ ಹಂಗಾಮಿ ರಾಷ್ಟ್ರಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಧನ್ಯವಾದ ತಿಳಿಸಿದ ಭೂಪೇಶ್ ಬಘೇಲ್, ರಾಜ್ಯದ ರೈತರು, ಆದಿವಾಸಿಗಳು, ಕಾರ್ಮಿಕರು ಮತ್ತು 2.8 ಕೋಟಿ ಜನರಿಂದಾಗಿ ಸರ್ಕಾರ ಇದೆ ಎಂದು ಹೇಳಿದ್ದಾರೆ. ಹಾಗೆಯೇ ಬಿಜೆಪಿ ನನ್ನ ಮೇಲೆ ದಾಳಿ ನಡೆಸುತ್ತಿದೆ. ಯಾಕೆಂದರೆ ನನ್ನದು ರೈತರ ಸರ್ಕಾರ. "ರೈತರ ಮಗ ಈಗ ಮುಖ್ಯಮಂತ್ರಿ. ಬಿಜೆಪಿಗರಿಗೆ ಈ ರೈತರ ಮಗ ದೊಡ್ಡ ಸವಾಲಾಗಿದ್ಧಾನೆ," ಎಂದು ಹೇಳಿದ್ದಾರೆ. ಇನ್ನು ವಿಮಾನ ನಿಲ್ದಾಣದಲ್ಲಿ ಎದ್ದ ಘೋಷಣೆಗಳ ಬಗ್ಗೆ ಪ್ರಶ್ನಿಸಿದಾಗ, "ಎಲ್ಲರೂ ಕಾಂಗ್ರೆಸ್, ಸೋನಿಯಾ ಜೀ, ರಾಹುಲ್ ಜೀ ಬಗ್ಗೆ ಘೋಷಣೆಗಳನ್ನೂ ಕೂಗುತ್ತಿದ್ದರು," ಎಂದಿದ್ದಾರೆ.
(ಒನ್ ಇಂಡಿಯಾ ಸುದ್ದಿ)