ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂದಾರವತಿ ಕಲ್ಯಾಣ - ಉತ್ತರಕಾಂಡ

By Staff
|
Google Oneindia Kannada News


ಪ್ರಶ್ನೆ 1. ‘ಯೋಗ್ಯನಾದ ವರ’ನೆನಿಸಿಕೊಂಡ ಆ ಎರಡನೆ ಯುವಕನೊಂದಿಗೆ ಹೊಳೆದಂಡೆಯ ಗುಡಿಸಲಲ್ಲಿ ಜೀವನಕ್ಕೆ ಮಂದಾರವತಿ ‘ಓಕೆ’ ಎಂದಳೇ? ಅಥವಾ ಬೇರೆ ಫ್ಲಾಟ್‌ ಕೊಳ್ಳುವಂತೆ/ ಮನೆ ಕಟ್ಟಿಸುವಂತೆ ಅವನನ್ನು ಅವಳು ಒತ್ತಾಯಿಸಿದಳೇ?

ಪ್ರಶ್ನೆ 2. ಮಂದಾರವತಿಯ ತಂದೆ ಕೇಶವ ಏನಾದನು? ಕಥೆಯಲ್ಲಿ ಆಮೇಲೆ ಅವನ ಪ್ರಸ್ತಾಪವೇ ಇಲ್ಲ!

ಪ್ರಶ್ನೆ 3. ಮೂರನೆಯ ಯುವಕ (ಸನ್ಯಾಸಿ) ಯಾವ ಬ್ರಾಹ್ಮಣನ ಮನೆಯಿಂದ ಗ್ರಂಥವನ್ನು ಕದ್ದಿದ್ದನೋ ಆ ಬ್ರಾಹ್ಮಣನು ಪೊಲೀಸ್‌ಕಂಪ್ಲೇಂಟ್‌ ಏನಾದರೂ ಕೊಟ್ಟನೇ? ಅದರ ಬಗ್ಗೆ ಇನ್ವೆಸ್ಟಿಗೇಶನ್‌ ನಡೆಯಿತೇ?

ಬೇತಾಳವು ಪ್ರಶ್ನೆ ಕೇಳುವುದು ರಾಜನಿಗೆ ಇದೇ ಹೊಸತೇನಲ್ಲ, ಅವನಿಗೆ ರೂಢಿಯಾಗಿಬಿಟ್ಟಿದೆ. ಆದರೆ ಈಸಲ ಹೊಸದಾಗಿ ಕಥೆಯನ್ನೇನೂ ಹೇಳದೆ ಎಡಿಷನಲ್‌ಆಗಿ ಕಿರಿಕ್‌ ಕೊಶ್ನೆಗಳನ್ನು ಕೇಳಿದೆಯಲ್ಲ ಈ ಬೆಂಬಿಡದ ಭೂತ... ಎಂದು ಅವನಿಗೆ ಸ್ವಲ್ಪ ತಬ್ಬಿಬ್ಬಾದದ್ದು ನಿಜ. ಅದಕ್ಕಿಂತಲೂ ಆಶ್ಚರ್ಯವಾದದ್ದೆಂದರೆ ‘ತಲೆ ಸಾವಿರ ಹೋಳಾಗುತ್ತದೆ...’ ಎನ್ನುವ ಬದಲು ಬೇತಾಳವು ‘ತಲೆ 1024 ಹೋಳಾಗುತ್ತದೆ’ ಎಂದೇಕೆ ಹೇಳಿತು ಎಂಬ ಕೆಟ್ಟಕುತೂಹಲ!

ರಾಜಾತ್ರಿವಿಕ್ರಮ ಪ್ರಪ್ರಥಮ ಬಾರಿಗೆ ಬೇತಾಳವನ್ನು ಕೇಳಿಯೇ ಬಿಟ್ಟ - ‘‘1024ರ ಮಹತ್ವ ಗೊತ್ತಾಗ್ಲಿಲ್ಲ, ಒಂಚೂರು ಎಕ್ಸ್‌ಪ್ಲೈನ್‌ ಮಾಡ್ತೀಯಾ?’’ ಬೇತಾಳವು ಸ್ಮೈಲಿ ಇಮೊಟಿಕೊನ್‌ಗಳ ವೆರೈಟಿಯನ್ನೆಲ್ಲ ಉಪಯೋಗಿಸಿ ಗಹಗಹಿಸಿ ನಕ್ಕು, ‘‘ನೀನೊಬ್ಬ ಹದಿನೆಂಟನೆ ಶತಮಾನದ ಪರಮ ಗುಗ್ಗು! ಅಲ್ಲಯ್ಯಾ, ಇದು 21ನೇ ಶತಮಾನದ ಐಟಿ ಯುಗ. ಈಗ ಸಾವಿರ ಅಥವಾ 1K ಎಂದರೆ 1000 ಅಲ್ಲ, ಅದು 2ರ ಘಾತ 10 = 1024. ನಿನ್ನ ತಲೆ ಹೋಳಾಗುವ ಮೊದಲೇ ಅದನ್ನು ಅಪ್‌ಗ್ರೇಡ್‌ ಮಾಡಿಕೋ!’’

ಒಂದುರೀತಿಯಲ್ಲಿ ‘ಶಂಕರಾಭರಣಂ’ನಲ್ಲಿ ಮಾಡರ್ನ್‌ ಸಂಗೀತಗುರು ದಾಸು, ಸಂಪ್ರದಾಯಸ್ಥ ಶಂಕರಶಾಸ್ತ್ರಿಗಳಿಗೆ ‘ವಿಮಾನಾಲು... ರಾಕೆಟ್ಲು... ಜಾಕೆಟ್ಲು... ಜೆಟ್ಲು... ಲೋಕಮಂತಾ ಸ್ಪೀಡೇ...!’ ಎಂದು ಕುಹಕವಾಡಿದಂತೆಯೇ ಬೇತಾಳವೂ ಮೊಟ್ಟಮೊದಲಬಾರಿಗೆ ತ್ರಿವಿಕ್ರಮನಲ್ಲಿ ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್‌ನ ವಿಷಬೀಜ ಬಿತ್ತಲು ಯತ್ನಿಸಿತ್ತು.

ಈ ಹಂತದಲ್ಲೊಂದು ಪ್ರಮಾದ ಸಂಭವಿಸಿತು. ಬೇತಾಳನ ಅಸಡ್ಡೆಯಿಂದಾಗಿ ಈಮೂರು ಪ್ರಶ್ನೆಗಳ ಕೊಶ್ಚನ್‌ಪೇಪರ್‌ ಲೀಕ್‌ ಆಗಿ ಅದು ಹೇಗೋ ವಿಚಿತ್ರಾನ್ನಭಟ್ಟನನ್ನು ತಲುಪಿತು. ಪ್ರಶ್ನೆಗಳನ್ನೆಸೆಯುವುದರಲ್ಲಿ ಅವನೂ ಒಬ್ಬ ಬೇತಾಳನೇ, ಹಾಗಾಗಿ ಲೀಕಾದ ಕೊಶ್ನೆಪತ್ರಿಕೆಯು, ಮಂದಾರವತಿಕಲ್ಯಾಣದ ಪ್ರಶ್ನೆಗೆ ಉತ್ತರಿಸಿದ್ದ ಆಯ್ದ ಕೆಲ ವಿಚಿತ್ರಾನ್ನರೀಡರ್ಸ್‌ಗೆ ಫ‚ಾರ್ವರ್ಡಿಸಲ್ಪಟ್ಟಿತು. ತಗೊಳ್ಳಿ, ಅವರೆಲ್ಲ ಸೇರಿ ಪ್ರಶ್ನೆಗಳನ್ನು ಚಿಂದಿಚಿತ್ರಾನ್ನ ಮಾಡಿ ಮಂದಾರವತಿಕಲ್ಯಾಣದ ಉತ್ತರಕಾಂಡಕ್ಕೆ ಟೊಂಗೆಟಿಸಿಲುಗಳನ್ನು ಚಿಗುರಿಸಿದರು. ಆ ಹ್ಯೂ‘ಮರ’ ಅದೆಷ್ಟು ಅದ್ಭುತವಾಗಿ ಬೆಳೆದಿದೆ, ನೀವೇ ಪರಾಂಬರಿಸಿ.

ಒಂದನೇ ಪ್ರಶ್ನೆ - ಮಂದಾರವತಿಯ ’ಗುಡಿಸಲು’ ಪ್ರಿಫರೆನ್ಸ್‌ ವಿಚಾರ...

- ಮಂದಾರವತಿ ಸತ್ತಾಗ ಮೊದಲನೆಯವನು ತಾನೂ ಸತ್ತ; ಮೂರನೆಯವನು ಸನ್ಯಾಸಿಯಾಗಿ ಏನೇನೆಲ್ಲ ಕಿತಾಪತಿ ಮಾಡಿದ. ಆದರೆ ಈ ಎರಡನೆಯವನು ಯಾವ ಕೆಲಸವೂ ಮಾಡದೆ ಒಂದು ಗುಡಿಸಲಲ್ಲಿ ಕಾಲಕ್ಷೇಪ ಮಾಡಿದ. ಇಂತಹ ಸೋಮಾರಿಯಿಂದ ಬಂಗಲೆ, ಕಾರು ನಿರೀಕ್ಷೆ/ಅಪೇಕ್ಷೆ ಕಷ್ಟ. ಹಾಗಾಗಿ ಅವರು ಜೀವನಪರ್ಯಂತ ಗುಡಿಸಲಲ್ಲೇ ವಾಸಿಸಿದರು. (‘ಬರಹ’ವಾಸು, ನ್ಯೂಜೆರ್ಸಿ)

- ಮಂದಾರವತಿಯು, ‘ಚಂದಮಾಮ’ ಅಥವಾ ಅನುಪಮಾನಿರಂಜನರ ‘ದಿನಕ್ಕೊಂದು ಕತೆ’ಯಂತಹ ಕತೆಗಳನ್ನೋದುವವಳಾಗಿದ್ದರೆ ಮದುವೆಯಾಗಿ ಗುಡಿಸಲಿನಲ್ಲಿ ‘‘ಬಹಳ ವರುಷ ಸುಖವಾಗಿ ಬಾಳಿದಳು’’ ಎಂದು ಹೇಳಬಹುದು. ಇಲ್ಲಾ, ಈಗಿನ ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುವ ಮಧ್ಯಾಹ್ನದ ಧಾರಾವಾಹಿಗಳನ್ನು ನೋಡುವವಳಾಗಿದ್ದರೆ ಖಂಡಿತವಾಗಿ ಆ ಗುಡಿಸಲಿನಲ್ಲಿ ಸಾಧ್ಯವಾದಷ್ಟು ರಂಪ ಮಾಡಿ 2 ದಿನ ಕಳೆದು ಮೂರನೆಯ ದಿನವೇ ಬೆಂಗಳೂರಿನ ಸದಾಶಿವನಗರದಲ್ಲೇ ಮನೆಬೇಕೆಂಬ ಬಾಲಿಶ ಬೇಡಿಕೆಯನ್ನು ಮುಂದಿರಿಸಿ ಗಂಡನನ್ನು ಪ್ರೆಶ್ಷರಿಸುವ ಸಾಧ್ಯತೆಗಳು ದಟ್ಟವಾಗಿವೆ. (ವಿವೇಕ್‌ ಐತಾಳ, ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X