ಎಲೈ 2007, ಅದಕೇಳು ಇದಕೇಳು...
ಶುಭಾಶಯ
ವಿನಿಮಯಗಳ
ಸದ್ದು,
ಎಸ್ಎಂಎಸ್ಗಳ
ಗಲಾಟೆ,
ಗುಂಡಿನ
ಬಾಟಲಿಗಳ
ಕರಾಮತ್ತು...
ಈ
ಮತ್ತಿನಿಂದ,
ಕೆಲವರಿನ್ನೂ
ಹೊರಬಂದಿಲ್ಲ!
ಆದರೆ
ಹೊಸವರ್ಷ
‘2007’ರ
ಮನದಲ್ಲಿ
ಏನೋ
ಲೆಕ್ಕಾಚಾರ
ನಡೆದಿದೆ!
ಏನೇನೋ
ಸಂಗತಿಗಳು
ದಾಖಲಾಗಿವೆ!
ಅವುಗಳನ್ನು
ಆಲಿಸಲು,
ಕಿವಿ
ಕೊಡಿ...!
- ಶ್ರೀವತ್ಸ ಜೋಶಿ
ಈ ಸಂದರ್ಭದಲ್ಲಿ ಈವರ್ಷ ಎಂದರೆ 2007ನೇ ಇಸವಿಯು ನಮ್ಮೀ ಪ್ರಪಂಚದಲ್ಲಿ ಒಬ್ಸರ್ವಿಸಬಹುದಾದ ಕೆಲವು ಸಂಗತಿಗಳು, ಕೇಳಬಹುದಾದ ಕೆಲವು ಉಕ್ತಿಗಳು, ನೋಡಬಹುದಾದ ಕೆಲವು ದೃಶ್ಯಗಳು, ನಕ್ಕುನಲಿಯಬಹುದಾದ ಕೆಲವು ತಮಾಷೆಗಳು ಇಲ್ಲಿ ಪಟ್ಟಿಯಾಗಿವೆ. ಪಟ್ಟಿಗೊಂದು ಲಾಜಿಕ್ ಇರಲಿ ಎಂಬ ದೃಷ್ಟಿಯಿಂದ ‘‘ಎರಡು ಸಾವಿರದ ಏಳು’’ ಎಂಬುದಕ್ಕೆ ಪ್ರಾಸವಾಗುವಂತೆ ಪ್ರತಿಯಾಂದು ಸಂಗತಿಗೂ ಉಪಶೀರ್ಷಿಕೆ (subtitle) ಕೊಡಲಾಗಿದೆ. ನೀವೂ ಒಮ್ಮೆ ಪರಾಂಬರಿಸಿ, ಇದನ್ನೋದಿ 2007ಕ್ಕೆ ಏನನ್ನಿಸಬಹುದು ಎಂದು ನೀವೂ ಊಹಿಸಿಕೊಳ್ಳಿ!
*
‘‘ಇನ್ನಾದ್ರೂ ನಿದ್ದೆಯಿಂದ ಏಳು’’
ಇದು ಕನ್ನಡದ ಕಂದನಿಗೆ ತಾಯಿ ಭುವನೇಶ್ವರಿಯ ಕಳಕಳಿಯ ಕರೆ. ತುಂಬಾಹೊತ್ತು ನಿದ್ದೆ ಮಾಡುವ ಕುಂಭಕರ್ಣನೇ ಅಬ್ಬಬ್ಬಾ ಎಂದರೆ 6 ತಿಂಗಳು ನಿದ್ದೆ ಮಾಡುತ್ತಾನೆ, ಅವನ ನೂರರಷ್ಟು (= 50 ವರ್ಷ) ನಿದ್ದೆ ಮಾಡಿರುವ ಕನ್ನಡಕಂದನೇ ಇನ್ನಾದರೂ ಏಳು ಎಂದು ಕನ್ನಡಮ್ಮ ಕೂಗುತ್ತಿದ್ದಾಳೆ. ಆದರೆ ಕನ್ನಡಕಂದನದು ಇದರಲ್ಲಿ ತಪ್ಪಿಲ್ಲ, ಕನ್ನಡಮ್ಮನೇ ಹಾಗಾಗುವಂತೆ ಮಾಡಿದ್ದು. ‘‘ಜೋಗುಳದ ಹರಕೆಯಿದು ಮರೆಯದಿರು ಚಿನ್ನ...’’ ಎಂದು ಜೋಗುಳ ಹಾಡುತ್ತ, ‘‘ಕನ್ನಡಕೆ ಹೋರಾಡು...’’ ಎಂದರೆ ಯಾವ ಕಂದ ತಾನೆ ನಿದ್ದೆ ಮಾಡದೆ ಇರುತ್ತಾನೆ!?
‘‘ಓಳು ಸಾರ್ ಬರೀ ಓಳು!’’:
ಈಗೀಗ ಕನ್ನಡದಲ್ಲಿ ಬರುವ ರಿಮೇಕ್ ಚಿತ್ರಗಳೂ ಥರ್ಡ್ಕ್ಲಾಸ್ ಕಾಮಿಡಿ ಚಿತ್ರಗಳೂ ಎಲ್ಲ ನಿಜವಾಗ್ಲೂ ಓಳು. ಅದಕ್ಕಿಂತ, ಐದು ವರ್ಷಗಳ ಹಿಂದೆ ರಮೇಶ್ ಅಭಿನಯಿಸಿ ಚಮಕ್ ತೋರಿಸಿದ್ರಲ್ಲಾ, ‘‘ಓಳು ಸಾರ್ ಬರೀ ಓಳು’’ ಅಂಥ ಚಿತ್ರಗಳಾದ್ರೂ ಬರ್ತಿರಬೇಕು. ಜಡ್ಡುಗಟ್ಟಿದ ಚಿತ್ರರಂಗಕ್ಕೆ ಅಗತ್ಯವಾಗಿ ಬೇಕೊಂದು ಬ್ರೇಕು ಎನ್ನುವುದು ಸಹೃದಯಿ ಕನ್ನಡಚಿತ್ರರಸಿಕನ ಹೊಸವರ್ಷದ ಹೊಸ ಆಶಯ.
‘‘ವರ್ಷವಿಡೀ ಸಿಗುತ್ತಿರಲಿ ಬೇಳೆಕಾಳು’’:
ಕಳೆದವರ್ಷ (2006) ಒಮ್ಮೆ ಅಮೆರಿಕದಲ್ಲಿ ತೊಗರಿಬೇಳೆಯ ಕೃತಕ ಅಭಾವ ಸಂಭವಿಸಿತ್ತು, ಹಾಗಾಗಿ ಕನ್ನಡಿಗರ ಗೆಟ್-ಟುಗೆದರ್ಗಳಲ್ಲಿ ಬಿಸಿಬೇಳೆಭಾತು ನಾಪತ್ತೆಯಾಗಿತ್ತು! ಈವರ್ಷ ಹಾಗಾಗದಿರಲಿ ಎಂಬ ಆಶಯದಿಂದ ಬಿ.ಬೇ.ಭಾ.ಭಕ್ತರ ಅಂತಾರಾಷ್ಟ್ರೀಯ ವೇದಿಕೆಯು ‘‘ವರ್ಷವಿಡೀ ಸಿಗುತ್ತಿರಲಿ ಬೇಳೆಕಾಳು’’ ಎಂದು ಹಾರೈಸಿದೆ.
‘‘ಮೇಲುಕೀಳು ಭೇದಭಾವವನ್ನು ಕೀಳು’’:
ಮೇಲಿನವರಿಗೆ ಇಂಗ್ಲಿಷು, ಕೆಳಗಿನವರಿಗೆ ಕನ್ನಡ ಎಂಬ ತಾರತಮ್ಯವನ್ನು ಬುಡಸಮೇತ ಕಿತ್ತೆಸೆದು ಎಲ್ಲರೂ ಇಂಗ್ಲಿಷನ್ನೇ ಕಲಿಯಬೇಕು, ಒಂದನೇ ಕ್ಲಾಸಿನಿಂದಲೇ! ಇದು ಸರಕಾರದ ಅಧ್ಯಾದೇಶ. ಆರ್ಥಿಕವಾಗಿ ಬಡತನರೇಖೆಯ ಕೆಳಗಿರುವವರನ್ನು ಮೇಲಕ್ಕೆತ್ತಲಾಗದಿದ್ದರೆ ಕನಿಷ್ಠಪಕ್ಷ ಭಾಷೆಯ ವಿಷಯದಲ್ಲಾದರೂ ಸಮಾನರಾಗಿಸೋಣವೆಂದಿರಬಹುದು.