ಬಂದ್ ಬಗ್ಗೆ ಒಂದಿಷ್ಟು ಓpun ಹರಟೆ...
ಒಂದು
ದಿನ
ಬಂದ್ಗಳನ್ನು
ವಿರೋಧಿಸಿ,
ಬಂದ್
ನಡೆದರೆ
ಅಚ್ಚರಿಯೇನಿಲ್ಲ!
ಬಂದ್
ಬಗ್ಗೆ
ಗಂಭೀರ
ಸುದ್ದಿಗಳನ್ನು
ಓದಿಓದಿ,
ನೋಡಿನೋಡಿ
ದಣಿದ
ಮನಸ್ಸುಗಳಿಗೆ
ಇಲ್ಲೊಂದು
ಸಕತ್ತು
ಹರಟೆ!
- ಶ್ರೀವತ್ಸ ಜೋಶಿ
ಇರಲಿ, ‘ಬಂದ ಆಚೆ’ಯಿಂದ ಆಚೆಯನ್ನು ಪ್ರತ್ಯೇಕಿಸಿ ಹುರಿದಂತೆ ಉಳಿದರ್ಧ ಭಾಗವಾದ ‘ಬಂದ’ವನ್ನೂ ಬೇಯಿಸಿ ವಿಚಿತ್ರಾನ್ನದಲ್ಲಿ ಒಂದು ಲಘುಹರಟೆಯನ್ನು ಹೆಣೆಯಬಹುದಲ್ಲ ಎಂಬ ಯೋಚ(ಜ)ನೆಯ ಫಲವೇ ಇವತ್ತಿನ ಈ ಬಂದೋಪಾಖ್ಯಾನ. ಮೊನ್ನೆಮೊನ್ನೆಯಷ್ಟೇ ಯಶಸ್ವಿಯಾಗಿ ನಡೆದ ಕರ್ನಾಟಕ ಬಂದ್ ಸಹ ಇದಕ್ಕೆ ಸಂದರ್ಭೋಚಿತವಾದ ಪ್ರೇರಣೆಯೆಂಬ ಸತ್ಯಾಂಶದ ಅರಿಕೆಯಾಂದಿಗೆ ಬಂದ್ ಬಗ್ಗೆ ಒಂದಿಷ್ಟು ಓpun ಹರಟೆಯ ಭಾಂಡಾರ ಓಪನ್ ಆಗುತ್ತದೆ (ಇಷ್ಟರೊಳಗೆ ನೀವು ಬ್ರೌಸರ್ವಿಂಡೊ ಬಂದ್ ಮಾಡಿರದಿದ್ದರೆ).
*
ಸಂಸ್ಕೃತದ ‘ಬಂಧ್’ (= ಕಟ್ಟು, ಬಿಗಿ, ಮುಚ್ಚು ಇತ್ಯಾದಿ ಕ್ರಿಯಾರ್ಥಕ) ಪದದಿಂದ ವ್ಯುತ್ಪತ್ತಿಯಾಗಿರುವ ‘ಬಂದ್’ ಹಿಂದಿ ಶಬ್ದ, ಭಾರತದಾದ್ಯಂತ (ಹಿಂದಿಭಾಷೆಯನ್ನು ದ್ವೇಷಿಸುವ ಪ್ರದೇಶಗಳಲ್ಲಿಯೂ) ಬಹಳವಾಗಿ ಬಳಕೆಯಲ್ಲಿದೆ. 70ರ ದಶಕದ ಸುಪರ್ಹಿಟ್ ಬಾಬ್ಬಿ ಚಿತ್ರದಲ್ಲಿ ಹಮ್ ತುಮ್ ಏಕ್ ಕಮರೇ ಮೆ ‘ಬಂದ್’ ಹೋ... ಹಾಡನ್ನು ಕೇಳಿಯಾದರೂ ಬಂದ್ ಎಂದರೇನೆಂದು ಎಲ್ಲರೂ ಬಲ್ಲರು. ಇನ್ನು ರಾಜಕೀಯ ಪ್ರೇರಿತ ಬಂದ್ ಬಗ್ಗೆ ಹೇಳೋದೇನಿದೆ, ಎಲ್ಲರಿಗೂ ಗೊತ್ತೇ ಇದೆ. ಈಗೀಗಂತೂ ಟೋಪಿ ಕೆಳಗೆ ಬಿದ್ದರೆ (at the drop of a hat) ಬಂದ್ ಘೋಷಿಸಲ್ಪಡುವುದರಿಂದ ಗಲ್ಲಿಬಂದ್, ಊರು ಬಂದ್, ತಾಲೂಕ್ಬಂದ್, ಜಿಲ್ಲಾಬಂದ್, ಕರ್ನಾಟಕಬಂದ್, ಭಾರತ್ಬಂದ್ - ಹೀಗೆ ವಿವಿಧ ಸ್ತರಗಳಲ್ಲಿ ಬಂದ್ ಆಗಾಗ ತೆರೆದುಕೊಳ್ಳುತ್ತಲೇ ಇರುವುದರಿಂದ ಬಂದ್ ಎಲ್ಲರಿಗೂ ಚಿರಪರಿಚಿತ.
ಕನ್ನಡದಲ್ಲಿ ‘ಬಂದ್’ಗೆ ಪ್ರತ್ಯೇಕ ಪದ ಇದ್ದಂತಿಲ್ಲ. ಕಡೇಪಕ್ಷ ಕನ್ನಡ ಮಾಧ್ಯಮಗಳಂತೂ ಬಂದ್ ಸಂದರ್ಭದಲ್ಲಿ ‘ಬಂದ್’ ಎಂದೇ ಬಳಸುತ್ತವೆ. ಮೊನ್ನೆ ಕರ್ನಾಟಕ ಬಂದ್ನ ಮರುದಿನ ವಿಜಯಕರ್ನಾಟಕ ಪತ್ರಿಕೆಯಲ್ಲಿ ‘‘ಮರಾಠಿಗರ ಬಾಯಿ ಬಂದ್’’ ಎಂಬ ತಲೆಬರಹವಿತ್ತು. ಪ್ರಜಾವಾಣಿಯಲ್ಲಿ ‘‘ಬಂದ್’ ಆಯ್ತು!’’ ಎಂಬ ಶೀರ್ಷಿಕೆಯಿತ್ತು. ಹಾಗೆಯೇ ಬಂದ್ ದಿನದ ಪತ್ರಿಕೆಯಲ್ಲಿದ್ದ ‘ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಂದೋಬಸ್ತ್’ ಎಂಬ ತಲೆಬರಹದಲ್ಲಿ ಬಂದ್ ಮತ್ತು ಬಂದೋಬಸ್ತ್ - ಮಸ್ತ್ ಆಗಿತ್ತು!
ಮೊನ್ನೆಯ ಬಂದ್ ಜನಸಾಮಾನ್ಯ ಕನ್ನಡಿಗರ ಮುಕ್ತಪ್ರಶಂಸೆಗೆ ಪಾತ್ರವಾದದ್ದೂ ಮಾಧ್ಯಮಗಳಿಂದ ತಿಳಿದುಬಂದಿದೆ. ‘‘ಇಂಥ ಬಂದ್ ವರ್ಷಕ್ಕೊಮ್ಮೆಯಾದರೂ ಬರಬೇಕು...’’ ಎನ್ನುವ ಧಾಟಿಯ ಪತ್ರವೊಂದು ದಟ್ಸ್ಕನ್ನಡದಲ್ಲಿ ಪ್ರಕಟವಾಗಿತ್ತು. ವಿಜಯ್ ಟೈಮ್ಸ್ನಲ್ಲಿ ಪ್ರಕಟವಾದ ಪತ್ರದಲ್ಲಿ ಕನ್ನಡಾಭಿಮಾನಿ ಓದುಗರೊಬ್ಬರು ‘‘ಕನ್ನಡದ ಉದ್ದೇಶಕ್ಕಾಗಿ ಶಾಂತಿಯುತವಾಗಿ ನಡೆದ ಬಂದ್ನ ಸವಿಯ ಮುಂದೆ ವಿಜಯದಶಮಿ ಹಬ್ಬದ ಒಬ್ಬಟ್ಟು ಸಪ್ಪೆಯೆನಿಸಿತ್ತು!’’ ಎಂದಿದ್ದರು.
ವಿಜಯಕರ್ನಾಟಕ ಪತ್ರಿಕೆಯ ಅಂಕಣಕಾರ ಸಿ.ಆರ್.ಸಿಂಹ ತನ್ನ ‘ಗುಹೆ’ಯಾಳಗಿಂದಲೇ ಬಂದ್ಅನ್ನು ಆನಂದಿಸಿ ‘‘ನಿಶ್ಶಬ್ದ, ವಾಯು ನೈರ್ಮಲ್ಯ, ಶಾಂತಿ ತಂದ ಬಂದ್’’ ಎಂದು ಕೊಂಡಾಡಿದ್ದರು. ಅಂತೂ ಈ ಸಲದ ಬಂದ್ ಎಲ್ಲರಿಗೂ ಒಂಥರಾ music to ears ಆಗಿತ್ತು ಎಂದು ಬಹುಜನರ ಅಭಿಪ್ರಾಯ. (ವಿವರಗಳಿಗೆ ಇದೇ ಲೇಖನದಲ್ಲಿ ಮುಂದೆ ‘ಓಪನ್ ಕಿವಿಗಳಿಗೆ ಇಂಪಾದ ಬಂದ್’ ಉಪಹರಟೆಯನ್ನು ಓದಿ).