ಇವತ್ತು ‘ಅಂಗಾರಕಿ’ ಸಂಕಷ್ಟ ಚತುರ್ಥಿ
ವಿನಾಯಕಿ ಚತುರ್ಥಿ - ಸಂಕಷ್ಟ ಚತುರ್ಥಿ
ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಪ್ರತಿ ತಿಂಗಳೂ ಶುಕ್ಲಪಕ್ಷದ ಚತುರ್ಥಿಗೆ (ಅಮಾವಾಸ್ಯೆಯ ನಂತರ ಬರುವಂಥದ್ದು) ವಿನಾಯಕಿ ಚತುರ್ಥಿಯೆಂದೂ ಕೃಷ್ಣಪಕ್ಷದ ಚತುರ್ಥಿಗೆ (ಹುಣ್ಣಿಮೆಯ ನಂತರ ಬರುವಂಥದ್ದು) ಸಂಕಷ್ಟಚತುರ್ಥಿಯೆಂದೂ ಹೆಸರು. ಚುಟುಕಾಗಿ 'ಸಂಕಷ್ಟಿ" ಎಂದೂ ಹೇಳುವುದುಂಟು. ಹುಣ್ಣಿಮೆಯ ತರುವಾಯ ನಾಲ್ಕನೇದಿನ ಗಣೇಶಶಕ್ತಿಯ ತೇಜೋತರಂಗಗಳು ಭೂಮಂಡಲದಲ್ಲಿ ಗರಿಷ್ಠಪ್ರಮಾಣದಲ್ಲಿ ಇರುತ್ತವಂತೆ. ಆ ಕಾರಣದಿಂದ ಅವತ್ತು ಗಣೇಶಾರಾಧನೆಗೆ ಮಹತ್ವ. ಸಂಕಷ್ಟಚತುರ್ಥಿಯ ವ್ರತ ಕೈಗೊಂಡವರು ಆ ದಿನವಿಡೀ ಉಪವಾಸ ಮಾಡಿ ಗಣೇಶನಿಗೆ ಪೂಜೆಯ ನಂತರ ಚಂದ್ರದರ್ಶನ ಮಾಡಿ ಆಮೇಲಷ್ಟೆ ಪ್ರಸಾದ ಸ್ವೀಕರಿಸುವರು. ಶ್ರೀ ಗಣಪತ್ಯಥರ್ವಶೀರ್ಷವನ್ನು 21 ಸಲ ಪಠಿಸಿ, ಗಣೇಶನಿಗೆ ಷೋಡಷೋಪಚಾರಗಳಿಂದ ಪೂಜಿಸಿ 21 ದೂರ್ವಾಂಕುರ ಅರ್ಪಿಸಿ ಮೋದಕ ಭಕ್ಷ್ಯನೈವೇದ್ಯ ಮಾಡಬೇಕೆಂದು ಸಂಕಷ್ಟಿ ವ್ರತದ ಆಚರಣಾ ನಿಯಮಗಳು ತಿಳಿಸುತ್ತವೆ.
ಕರ್ನಾಟಕ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಮಹಾರಾಷ್ಟ್ರದಲ್ಲಿ ಸಂಕಷ್ಟಿ ವ್ರತಧಾರಿಗಳ ಸಂಖ್ಯೆ ಅಧಿಕ. ಪ್ರತಿ ತಿಂಗಳ ಸಂಕಷ್ಟಿಯಂದು ಉಪವಾಸ ಮಾಡಿ ಭಕ್ತಿ-ಶ್ರದ್ಧೆಗಳಿಂದ ಗಣೇಶನನ್ನು ಆರಾಧಿಸಿ ಸಂಕಷ್ಟ (ಸಂಕಟ)ಗಳೆಲ್ಲ ನಿರ್ನಾಮವಾಗಿ ಇಷ್ಟಾರ್ಥಸಿದ್ಧಿಯಾಗುವಂತೆ ಕೇಳಿಕೊಳ್ಳುತ್ತಾರೆ. ಉತ್ತರಭಾರತದಲ್ಲಿ 'ಕಡ್ವಾ ಚೌತ್" ಎಂಬ ಆಚರಣೆ ಸಂಕಷ್ಟಚತುರ್ಥಿಯಂದೇ, ಹೆಚ್ಚುಕಡಿಮೆ ಅದೇ ಮಾದರಿಯಲ್ಲಿ (ದಿನವಿಡೀ ಉಪವಾಸ, ರಾತ್ರಿ ಚಂದ್ರನನ್ನು ನೋಡಿದ ಮೇಲೆ ಊಟ... ಇತ್ಯಾದಿ) ಇದೆ; ಆದರೆ ಅದು ಕಾರ್ತೀಕ ಮಾಸದ (ಶರದ್ ಪೂರ್ಣಿಮಾ ನಂತರದ) ಸಂಕಷ್ಟಚತುರ್ಥಿಯಂದು ಮಾತ್ರ.
ಅಂಗಾರಕಿ ಸಂಕಷ್ಟಚತುರ್ಥಿ
ಸಂಕಷ್ಟ ಚತುರ್ಥಿಯು ಮಂಗಳವಾರದಂದು ಬಂದರೆ ಅದಕ್ಕೆ 'ಅಂಗಾರಕಿ" ಎಂಬ ವಿಶೇಷ ಮಹತ್ವ. ಅಂಗಾರ ಅಂದರೆ ಸಂಸ್ಕೃತದಲ್ಲಿ ಕೆಂಡ ಎಂದರ್ಥ. ಕೆಂಡದಂತೆ ನಿಗಿನಿಗಿ ಹೊಳೆಯುವುದು ಅಂಗಾರಕ - ಮಂಗಳಗ್ರಹ. ಮಂಗಳನನ್ನು ಭೂಮಿಪುತ್ರನೆಂದೂ ಪುರಾಣಗಳು ಹೇಳುತ್ತವೆ. ಭೂಮಿಪುತ್ರನಾದ್ದರಿಂದ ಭೌಮ. ಮಂಗಳವಾರಕ್ಕೆ ಭೌಮವಾರವೆಂದೂ ಹೆಸರಿದೆ. ಭೂಲೋಕಕ್ಕೆ ಗಣೇಶ ಅಧಿದೇವತೆಯಾಗಿರುವಂತೆಯೇ ಮಂಗಳಕ್ಕೂ ಕೂಡ. ಅದಕ್ಕೆಂದೇ ಮಂಗಳವಾರ ಸಂಕಷ್ಟಿ ಬಂದರೆ ಅದಕ್ಕೆ 'ಅಂಗಾರಕಿ"ಯೆಂಬ ವಿಶೇಷ.