ವಿಕೃತ ಸ್ವಾತಂತ್ರ್ಯದ ಹುಚ್ಚು ಹೊಳೆಯ ಪ್ರವಾಹದಲ್ಲಿ...
ಸಮಕಾಲೀನ ಜಗತ್ತಿನಲ್ಲಿ ಅತ್ಯಂತ ಸಮಾಜಮುಖಿಯಾದ ಹಿಂದೂ ಧಾರ್ಮಿಕ ಗುರುಗಳಲ್ಲಿ ಪುತ್ತಿಗೆ ಮಠದ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಗ್ರಗಣ್ಯರು. ಜಗತ್ತಿನಲ್ಲೆಲ್ಲಾ ಸಂಚರಿಸಿ ವಿದೇಶಗಳಲ್ಲಿ ನೆಲೆಸಿರುವ ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟ ನನ್ನಂತಹ ಸಹಸ್ರಾರು ಭಕ್ತರಿಗೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಮಾರ್ಗದರ್ಶನ ಮಾಡಿ ಕೃತಾರ್ಥಗೊಳಿಸುತ್ತಿದ್ದಾರೆ. ಶ್ರೀಗಳು ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಜಗತ್ತಿನಲ್ಲಿ ಶಾಂತಿ ನೆಲೆಸುವಂತಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಆಗಾಗ ಭಾಗವಹಿಸಿ ಸಮಾಜದ ಏಳಿಗೆಯ ಬಗ್ಗೆ ಕಳಕಳಿಯ ತಮ್ಮ ಮತ್ತೊಂದು ಮುಖವನ್ನು ಪರಿಚಯಿಸುತ್ತಾರೆ.
ಕೆಲವು ದಿನಗಳ ಹಿಂದೆ ನನ್ನ ವಾಟ್ಸಾಪ್ನಲ್ಲಿ, ಶ್ರೀಗಳು ನವದೆಹಲಿಯ ಗಾಂಧಿದರ್ಶನದಲ್ಲಿ ಶಿಶುಗಳ ಮೇಲಿನ ಅತ್ಯಾಚಾರದ ತಡೆಗಾಗಿ ಅರಬ್ ರಾಷ್ಟ್ರಗಳ ಒಕ್ಕೂಟದಿಂದ ಪ್ರಾಯೋಜಿತವಾದ ಜಾಗತಿಕ ಧಾರ್ಮಿಕ ನಾಯಕರ ಸಮಾವೇಶದಲ್ಲಿ ಮಾಡಿದ ಭಾಷಣದ ಬರಹ ರೂಪ ಹರಿದು ಬಂದಿತು. "ವ್ಯಕ್ತಿ ಸ್ವಾತಂತ್ರ್ಯದ ಅತಿರೇಕದ ಕಲ್ಪನೆ"ಯತ್ತ ಚಿಂತಕರನ್ನು ಪ್ರೇರೇಪಿಸಲು ಮಾಡಿದ ಈ ಭಾಷಣ ನನ್ನ ಮನಸ್ಸನ್ನು ಸೆಳೆಯಿತು.
ಸಿಂಗಪುರದಲ್ಲೂ ಅನುರಣಿಸಿದ ಭಗವದ್ಗೀತೆ: ಪುತ್ತಿಗೆ ಶ್ರೀಗಳ ಪ್ರವಚನ
ಅತಿ ಸ್ವಾತಂತ್ರ್ಯ ಮತ್ತು ಸ್ವಚ್ಛಂದತೆ ಇಂದು ಮಾಡುತ್ತಿರುವ ಹಾನಿಯ ಬಗೆಗಿನ ಆ ಸಮಯೋಚಿತ ಬರಹದ ಬಗ್ಗೆ ಯೋಚಿಸುತ್ತಿರುವಾಗಲೇ ಶ್ರೀಗಳು ಸಿಂಗಪುರಕ್ಕೆ ಬಂದ ಸುದ್ದಿ ದೊರಕಿತು. ಭೇಟಿಯಾಗಿ ಆಶೀರ್ವಾದ ಪಡೆಯಲು ಹೋದಾಗ ಶ್ರೀಗಳ ಶಿಷ್ಯರಾದ ಶ್ರೀ ಪ್ರಸನ್ನಾಚಾರ್ಯರ ಜೊತೆ ಈ ಬರಹವನ್ನು ಕುರಿತು ಚರ್ಚಿಸಿದೆ. ಅವರು ಬರಹದ ಆಂತರ್ಯವನ್ನು ಕುರಿತು ನನ್ನ ಅಂಕಣದಲ್ಲಿ ಬರೆಯಲು ಸೂಚಿಸಿದರು. ಶ್ರೀಗಳ ಒಪ್ಪಿಗೆ ಕೇಳಿದಾಗ ಅವರು ಒಪ್ಪಿಗೆಕೊಟ್ಟು ಆಶೀರ್ವದಿಸಿದರು. ಅವರ ಭಾಷಣವನ್ನು ಬರಹ ರೂಪದಲ್ಲಿ ಕೆಳಗಿನ ಕೆಲವು ಪ್ಯಾರಾಗ್ರಾಫುಗಳಲ್ಲಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದೇನೆ.
'ನಾನು' ಎಂಬ ಅಹಂಕಾರದ ಮಿಥ್ಯೆಯ ಕತ್ತಲೆ, ಮಾಯದ ಪರದೆ!
ಕೆಲವು ಪಡ್ಡೆರಾಯರುಗಳ ದುಷ್ಪ್ರಭಾವದಿಂದ ಇತ್ತೀಚಿನ ಕೆಲವು ದಶಕಗಳಲ್ಲಿ ಮುಕ್ತ ಸ್ವಾತಂತ್ರ್ಯದ ಅವಾಸ್ತವ ಕಲ್ಪನೆ ಅನೇಕರ ಮನಸ್ಸಿನಲ್ಲಿ ಭುಗಿಲೆದ್ದಿದೆ. ಸರಕಾರ, ನ್ಯಾಯಾಲಯಗಳಾದಿಯಾಗಿ ಇಡೀ ಜಗತ್ತೇ ದಾರಿ ತಪ್ಪಿ ಮುಕ್ತ ಕಾಮದ ಪ್ರಪಾತಕ್ಕೆ ಬೀಳುತ್ತಿದೆ. ಶಿಶುಗಳ ಮೇಲಿನ ಅತ್ಯಾಚಾರದಂತಹ ಘೋರ ಕೃತ್ಯಗಳು ಇದೇ ಮುಕ್ತಕಾಮದ ವಿಕೃತ ಕಲ್ಪನೆಯ ಪರಿಣಾಮಗಳು. ಇವುಗಳನ್ನು ತಡೆಗಟ್ಟಲು ಸರಿಯಾದ ಚಿಂತನೆ ಮಾಡುವ ಎಲ್ಲರೂ ಧೈರ್ಯದಿಂದ ಮುಂದೆ ಬಂದು ಈ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕಾಗಿದೆ.
ಸಿಂಗಪುರದಲ್ಲಿ ಶ್ರೀ ಸುಗುಣೇಂದ್ರ ತೀರ್ಥರೊಂದಿಗೆ ಸಂವಾದ
ಸರ್ವ ಜನರಿಗೆ ಒಳ್ಳೆಯದನ್ನು ಮಾಡಲು ನಡೆಯುತ್ತಿರುವ ವಿಚಾರ ಮತ್ತು ಯೋಜನೆಗಳ ನಡುವೆ ಕೆಲವು ಅನೈತಿಕತೆಯ ದಲ್ಲಾಳಿಗಳು ತಮ್ಮ ಸ್ವಾರ್ಥದ ಉದ್ದೇಶಗಳನ್ನು ಅವುಗಳಲ್ಲಿ ತೂರಿಸುವ ಯತ್ನವನ್ನು ಮಾಡುತ್ತಿದ್ದಾರೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದ ಎಲ್ಲ ಜೀವನ ಮೌಲ್ಯಗಳ ವಿರುದ್ಧ ಈ ಯತ್ನಗಳು ಸಾಗುತ್ತಿವೆ. ಭಗವಂತ ಜನರನ್ನು ತಮ್ಮ ಭೋಗಾಸಕ್ತಿಯಿಂದ ಹೊರಬಿದ್ದು ಅಲೌಕಿಕ ಚಿಂತನೆ ನಡೆಸಲು ಕರೆ ನೀಡಿದ್ದರೆ, ಇಂದಿನ ಕೆಲವು ಅತಿವಿಚಾರವಾದಿಗಳು ಮತ್ತು ಅವರನ್ನು ಬೆಂಬಲಿಸುತ್ತಿರುವ ಮಾಧ್ಯಮಗಳು ಈ ಕರೆಗೆ ವಿರುದ್ಧದ ಮೌಲ್ಯಗಳಾದ ಸ್ವಚ್ಛಂದತೆ ಮತ್ತು ಮುಕ್ತಕಾಮಗಳಂತಹ ವಿಷ ಬೀಜಗಳನ್ನು ಬಿತ್ತಲು ಪ್ರಯತ್ನಿಸುತ್ತಿವೆ. ಇಂತಹ ಪ್ರಯತ್ನದ ಫಲಗಳೇ ಇಂದು ನಡೆಯುತ್ತಿರುವ ಶಿಶುಗಳ ಅತ್ಯಾಚಾರಗಳಂತಹ ಘೋರ ಕೃತ್ಯಗಳು.
ಆಚಾರ್ಯ ಮಧ್ವರು ತಮ್ಮ ಸಿದ್ಧಾಂತದಲ್ಲಿ ಭಗವಂತನೊಬ್ಬನೇ ಈ ಜಗತ್ತಿನಲ್ಲಿ ಸ್ವತಂತ್ರನಾಗಿದ್ದು ಉಳಿದೆಲ್ಲ ಜೀವಿಗಳು ಭಗವಂತನ ಆಧೀನದಲ್ಲಿವೆ. ಈ ಜೀವಿಗಳು ಭಗವಂತನ ಆಶಯದಂತೆ ನಡೆಯುವುದನ್ನು ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಹೊರಟರೆ ವಿಶ್ವವೇ ನಷ್ಟವಾಗುವ ಪರಿಸ್ಥಿತಿ ಉಂಟಾಗುತ್ತದೆ. ಉದಾಹರಣೆಗೆ ಕಾರಿನಲ್ಲಿ ಕುಳಿತಾಗ ಸೀಟು ಬೆಲ್ಟ್ ಅನ್ನು ಹಾಕಿಕೊಳ್ಳುವುದು ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದಂತಾದರೂ ಸುರಕ್ಷಿತತೆಯ ದೃಷ್ಟಿಯಿಂದ ಸೀಟು ಬೆಲ್ಟ್ ಅನ್ನು ಹಾಕಿಕೊಳ್ಳುವುದು ಕಡ್ಡಾಯವಾದ ಅಂಶ. ಅದರಂತೆಯೇ ವೈಯುಕ್ತಿಕ ವಿಕೃತ ಕಾಮನೆಗಳ ಮೇಲೆ ಕಡಿವಾಣ ಹಾಕಿಕೊಂಡು ಧಾರ್ಮಿಕ ಮತ್ತು ಅಧ್ಯಾತ್ಮಿಕ ಪಥವನ್ನು ಅನುಸರಿಸುವುದು ಸಮಾಜದ ಹಿತದೃಷ್ಟಿಯಿಂದ ಸರಿಯಾದ ಮಾರ್ಗ.
ಟೆಕ್ಸಾಸ್ನಲ್ಲಿ ಪುತ್ತಿಗೆ ಶ್ರೀಗಳಿಂದ ಶ್ರೀಕೃಷ್ಣ ವೃಂದಾವನ ಉದ್ಘಾಟನೆ
ಯಾವಾಗ ಜನನ ಮರಣಗಳಾದಿಯಾಗಿ ದಿನ ನಿತ್ಯದ ಚಟುವಟಿಕೆಗಳೇ ನಮ್ಮ ನಿಯಂತ್ರಣದಲ್ಲಿಲ್ಲದಿದ್ದಾಗ, ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಸ್ವಚ್ಛಂದತೆ ಮತ್ತು ವ್ಯಕ್ತಿ ಸ್ವಾತಂತ್ರ್ಯಗಳ ಮಿಥ್ಯಾವಾದವನ್ನು ಪುಷ್ಟೀಕರಿಸಿ ಹರಡತೊಡಗಿದರೆ ಸಮಾಜ ತನ್ನನ್ನು ತಾನೇ ವಂಚಿಸಿಕೊಂಡಂತಾಗುತ್ತದೆ.
ಇದನ್ನು ತಪ್ಪಿಸಲು ಸರಕಾರಗಳು ಮತ್ತು ನ್ಯಾಯವ್ಯವಸ್ಥೆ ತಪ್ಪುದಾರಿಯತ್ತ ಸಾಗುವುದನ್ನು ಮತ್ತು ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ ಸೂಕ್ತ ಕಾನೂನುಗಳನ್ನು ರಚಿಸಿ, ದುರಂತಕ್ಕೆ ಕಾರಣವಾಗುತ್ತಿರುವ ದುಷ್ಟ ವೆಬ್ ಸೈಟುಗಳು, ಅವುಗಳ ಹಿಂದಿರುವ ವಿಕೃತ ವ್ಯಕ್ತಿಗಳನ್ನೂ ದಂಡಿಸಬೇಕು. ಅದಕ್ಕಿಂತಲೂ ಮುಖ್ಯವಾಗಿ ಜನರಲ್ಲಿರುವ ವ್ಯಕ್ತಿ ಸ್ವಾತಂತ್ರ್ಯ, ಸ್ವಚ್ಛಂದತೆಗಳ ಮೇಲಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನ ಪಡಬೇಕು. ಈ ವಿಷಯದಲ್ಲಿ ಸರಕಾರ ಮತ್ತು ನ್ಯಾಯಾಂಗಗಳು ಪ್ರಖರ ಇಚ್ಚಾಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಇಂತಹ ಭಂಡತನದ ವಿಕೃತ ಸ್ವಾತಂತ್ರ್ಯಕ್ಕೆ ಸಮಾಜ ತಿಲಾಂಜಲಿ ನೀಡಬೇಕಾಗಿದೆ. ಇಲ್ಲದಿದ್ದರೆ ಮುಂಬರುವ ಪೀಳಿಗೆಗಳ ಸರ್ವನಾಶ ಕಟ್ಟಿಟ್ಟದ್ದು.
ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದ ಆ ಮಹಾನ್ ಯುದ್ಧಗಳು
ಅನೇಕ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಲ್ಲಿ ರಾಷ್ಟ್ರಗಳ ಪ್ರತಿನಿಧಿ ಮತ್ತು ಮಂತ್ರಿ ಹಮೀದ್ ಪುತ್ತಿಗೆ ಶ್ರೀಗಳನ್ನು ಮತ್ತು ಇತರ ಪ್ರತಿನಿಧಿಗಳನ್ನು ಡಿಸೆಂಬರ್ ನಲ್ಲಿ ಅಬುಧಾಬಿಯಲ್ಲಿ ನಡೆಯಲಿರುವ ಮುಂದಿನ ಶೃಂಗ ಸಭೆಗೆ ಆಹ್ವಾನಿಸಿದ್ದಾರೆ. ಮುಕ್ತ ಸ್ವಾತಂತ್ರ್ಯದ ಹುಚ್ಚು ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಸಮಾಜವನ್ನು ಬಡಿದೆಬ್ಬಿಸುವ ಈ ಕಾರ್ಯವನ್ನು ಧೈರ್ಯವಾಗಿ ಮಾಡುತ್ತಿರುವ ಈ ಶೃಂಗಸಭೆಗೆ ಪುತ್ತಿಗೆ ಶ್ರೀಗಳ ಆಶೀರ್ವಾದ ದೊರಕಿದೆ. ಸಮಾಜವನ್ನು ಸರಿಯಾದ ಮಾರ್ಗಕ್ಕೆ ಕರೆದೊಯ್ಯುವ ಈ ಪ್ರಯತ್ನಕ್ಕೆ ಅಭೂತಪೂರ್ವ ಯಶಸ್ಸು ದೊರಕುವದು ಖಂಡಿತ ಎಂದು ನನ್ನ ಭಾವನೆ.