ಸಂತೃಪ್ತಿ ಅಂದರೇನು? ವಸ್ತುಗಳ ಖರೀದಿಯಲ್ಲೇ ಖುಷಿಯಿದೆಯೇ?
ಸಿಂಗಪುರದ ಜನರಿಗೆ ಪ್ರದರ್ಶನಗಳ ಹುಚ್ಚು. ವರುಷದಾದ್ಯಂತ ಐಟಿ, ಎಲೆಕ್ಟ್ರಾನಿಕ್ಸ್, ಉಡುಪುಗಳು, ಪ್ರವಾಸ ಇತ್ಯಾದಿ ಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ. ಯಾವಾಗ ನೋಡಿದರೂ ಹೊರಲಾಗದಷ್ಟು ಸಾಮಗ್ರಿಗಳನ್ನು ಖರೀದಿ ಮಾಡಿ ಜನ ಈ ಪ್ರದರ್ಶನ ಕೇಂದ್ರಗಳಿಂದ ಹೊರ ಬರುವುದು ಕಾಣುತ್ತಲೇ ಇರುತ್ತದೆ.
ವರ್ಷವಿಡೀ ಅನೇಕ ಸಾಮಾನುಗಳನ್ನು ಖರೀದಿ ಮಾಡಿ, ಮತ್ತೆ ಅನೇಕ ಸಾಮಾನುಗಳನ್ನು ತ್ಯಜಿಸುತ್ತಲೇ ಇರುವುದೂ ಕಾಣುತ್ತದೆ. ಸಿಂಗಪುರ ಒಂದು ವರ್ಷದಲ್ಲಿ ಸುಮಾರು ಏಳೂವರೆ ಮಿಲಿಯನ್ ಟನ್ ಗಳಷ್ಟು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸುತ್ತದೆ. ಕೇವಲ ಐದೂವರೆ ಮಿಲಿಯನ್ ಜನಸಂಖ್ಯೆ ಇಷ್ಟೊಂದು ತ್ಯಾಜ್ಯ ವಸ್ತುಗಳನ್ನು ಉಂಟು ಮಾಡುತ್ತದೆ ಎಂದರೆ ಇಲ್ಲಿ ಕೊಳ್ಳುಬಾಕತನ ಅದೆಷ್ಟರ ಮಟ್ಟಿಗೆ ಮುಟ್ಟಿದೆ ಎಂಬುದನ್ನು ಕಾಣಬಹುದು.
ಸಿಂಗಪುರದಂತಹ ಪುಟ್ಟ ದೇಶ ಇಷ್ಟೊಂದು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸುವುದಾದರೆ, ಇಡೀ ಜಗತ್ತು ಅದೆಷ್ಟು ಉತ್ಪಾದಿಸುತ್ತಿರಬಹುದು ಎಂದು ಕಲ್ಪಿಸಿದರೂ ನಡುಕ ಉಂಟಾಗುವುದು. ಸಿಕ್ಕಾಪಟ್ಟೆ ಕೊಳ್ಳುವುದು ಮತ್ತು ಹಾಗೆಯೇ ಎಸೆಯುವುದು ಇಂದಿನ ದಿನಗಳಲ್ಲಿ ವಾಡಿಕೆಯಾದಂತೆ ತೋರಿಸುತ್ತದೆ.
ದೊಡ್ಡ ಕನಸು ಕಾಣುವವರಿಗೆ ಅಲ್ಪತನ ಇರುವುದಿಲ್ಲ!
ಈ ವಸ್ತುಗಳ ಉತ್ಪಾದನೆ ಮತ್ತು ತ್ಯಜಿಸುವಿಕೆಯ ಕಾರಣದಿಂದ ಭೂಮಿಯ ಎಲ್ಲ ಸಂಪನ್ಮೂಲಗಳ ದುರುಪಯೋಗವೇ ಹೆಚ್ಚಾಗಿದೆ ಎಂದೆನಿಸುತ್ತದೆ. ಬೇಕಾದ ಬೇಡದಿರುವ ವಸ್ತುಗಳ ಭಾರೀ ಉತ್ಪಾದನೆ ಈಗ ಅತೀ ಹೆಚ್ಚಾಗಿದೆ. ಈ ಕಾರಣದಿಂದ ಭೂಮಿಯ ವಾತಾವರಣ ಕಲುಷಿತಗೊಳ್ಳುತ್ತಿರುವುದಂತೂ ಸತ್ಯ.
ಕೆಲವು ದಿನಗಳ ಹಿಂದೆ World wildlife fund ನ Living Planet Report ವರದಿಯ ಸಾರಾಂಶವೊಂದು ಇಲ್ಲಿಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅದರಲ್ಲಿ, ಭೂಮಿಯ ಮೇಲೆ ಮನುಷ್ಯ ತನ್ನ ಸದ್ಯದ ಚಟುವಟಿಕೆಗಳಲ್ಲಿ ಕಡಿತ ಮಾಡದಿದ್ದರೆ, ಕ್ರಿ. ಶ. 2030ರವರೆಗೆ ಎರಡು ಭೂಮಿಗಳಿದ್ದರೂ ತನ್ನ ಈಗಿನ ಚಟುವಟಿಕೆಗಳನ್ನು ಉಳಿಸಿಕೊಂಡು ಹೋಗಲು ಸಾಕಾಗುವದಿಲ್ಲ ಎಂದು ಹೇಳಲಾಗಿದೆ.
ಮನುಷ್ಯ ಮಿತಿ ಮೀರಿ ಸ್ವಾಭಾವಿಕವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸುತ್ತಿದ್ದಾನೆ. ಅದರಿಂದ ನೀರು, ಗಾಳಿ ಮತ್ತು ಅರಣ್ಯಗಳು ತಮ್ಮ ಸ್ವಾಭಾವಿಕ ನವೀಕರಣದ ಗತಿಗಿಂತ ಹೆಚ್ಚು ವೇಗದಲ್ಲಿ ನಾಶ ಹೊಂದುತ್ತಿವೆ. ಹೀಗಾಗಿ ಪರ್ಯಾವರಣ ಮತ್ತೆ ಚೇತರಿಸಿಕೊಳ್ಳಲಾಗದಷ್ಟು ನಾಶಗೊಳ್ಳುತ್ತಿದೆ ಮತ್ತು ಇದರಿಂದ ಮುಂಬರುವ ಪೀಳಿಗೆಗಳ ಭವಿಷ್ಯ ಅಂಧಕಾರದಲ್ಲಿ ಮುಳುಗಲಿದೆ ಎಂದು ಹೇಳಲಾಗಿದೆ.
ದೇವರು, ನಾನು ಯಾರು ಎಂಬ ಹುಡುಕಾಟ- ಬ್ರಹ್ಮಾಂಡ ಕುತೂಹಲ
ಸದ್ಯದ ಕೊಳ್ಳುಬಾಕತನದ ಪ್ರವೃತ್ತಿಗೆ ಮತ್ತು ಅದರ ಕರಾಳ ಪರಿಣಾಮದ ಬಗ್ಗೆ ಹಿಡಿದ ಕನ್ನಡಿಯಾಗಿದೆ ಈ ವರದಿ. ಪ್ರತಿನಿತ್ಯ ಹೊಸ ರಂಗು ರಂಗಿನ ಪದಾರ್ಥಗಳನ್ನು ಮಾರುಕಟ್ಟೆಗೆ ಹೊರತಂದು, ಜಾಹೀರಾತುಗಳಿಂದ ಜನರ ಮನಸೆಳೆದು ಅವರನ್ನು ಬೇಕಾಬಿಟ್ಟಿ ಪದಾರ್ಥಗಳನ್ನು ಕೊಳ್ಳಲು ಪ್ರೇರೇಪಿಸುತ್ತಿರುವ ಸಂಸ್ಥೆಗಳು, ಹಳೆಯದನ್ನು ತಿರಸ್ಕರಿಸುವ ಸಂಸ್ಕೃತಿಯನ್ನು ವೈಭವೀಕರಿಸುತ್ತಿರುವ ನಮ್ಮ ಮಾಧ್ಯಮಗಳು ಮತ್ತು ಅದಕ್ಕೆ ಪ್ರೋತ್ಸಾಹ ಕೊಡುತ್ತಿರುವ ಸರಕಾರಗಳು, ತಮ್ಮ ವರ್ತಮಾನದ ಲಾಭದ ಲೋಭಕ್ಕೆ ಮುಂದಿನ ಪೀಳಿಗೆಗಳ ಭವಿಷ್ಯವನ್ನು ಬಲಿಗೊಡುತ್ತಿವೆ ಎಂದೆನಿಸುತ್ತದೆ.
ಹೊಸ ಹೊಸ ಪದಾರ್ಥಗಳ ಮೋಹಕ್ಕೆ ಬಲಿಯಾಗುತ್ತಿರುವ ನಾವೆಲ್ಲ ನಾಳಿನ ಕರಾಳತೆಯನ್ನು ನೋಡಲು ಅಸಮರ್ಥರಾಗಿದ್ದೇವೆ. 1960ರಲ್ಲಿ ಇದ್ದ ಪ್ರತಿ ವ್ಯಕ್ತಿ ಸಂಪನ್ಮೂಲಗಳ ಬಳಕೆ (per capita consumption)ಗಿಂತ ಇಂದು ಮೂರು ಪಟ್ಟು ಹೆಚ್ಚಳವಾಗಿದೆ. ಅದಕ್ಕೆ ತಕ್ಕಂತೆ, ಲೋಹಗಳ ಉತ್ಪಾದನೆ ಆರು ಪಟ್ಟು ಮತ್ತು ಕಚ್ಚಾ ತೈಲದ ಉತ್ಪಾದನೆ ಎಂಟು ಪಟ್ಟು ಹೆಚ್ಚಾಗಿದೆ.
ಕೆಲವೇ ದಶಕಗಳಲ್ಲಿ ಈ ಸಂಪನ್ಮೂಲಗಳು ಸಂಪೂರ್ಣವಾಗಿ ಮುಗಿದು ಹೋಗಿ, ಹಾಹಾಕಾರವೇಳುವ ಪ್ರಸಂಗ ಬಂದೀತು ಎಂದು ಪರ್ಯಾವರಣ ತಜ್ಞರು ಎಚ್ಚರಿಕೆಯನ್ನು ಕೊಡುತ್ತಿದ್ದಾರೆ. ಅದಕ್ಕೆಯೇ ಈ ಕಬಳಿಕೆಯ ಸಂಸ್ಕೃತಿಗೆ ಕೊನೆ ಎಂದು, ಎಂಬ ಪ್ರಶ್ನೆ ಮೂಡತೊಡಗಿದೆ. ಭೂಮಿಯ ಎಲ್ಲ ಸ್ವಾಭಾವಿಕ ಸಂಪನ್ಮೂಲಗಳು ಮಲಿನಗೊಂಡು, ಭೂಮಿಗೆ ಅಪರಿವರ್ತನೀಯ ಕ್ಷತಿ (irreversible damage) ಉಂಟಾದರೆ ಇಡೀ ಜೀವ ಸಂಕುಲದ ನಾಶಕ್ಕೆ ಕಾರಣವಾಗುತ್ತದೆ, ನಮ್ಮ ಈ ಕೊಳ್ಳುಬಾಕ ಸಂಸ್ಕೃತಿ. ತುಂಬಾ ತಡವಾಗುವದರ ಮೊದಲೇ ಎಚ್ಚೆತ್ತುಕೊಳ್ಳುವದು ಉಚಿತ ಎಂದು ಘೋಷಿಸುತ್ತಿದ್ದಾರೆ ತಜ್ಞರು.
ಇಂದಿನ ಭೌತವಾದ ಅಥವಾ ಕೊಳ್ಳುಬಾಕತನದ ಮೂಲ ಯುರೋಪಿನಲ್ಲುಂಟಾದ ಕೈಗಾರಿಕಾ ಕ್ರಾಂತಿಯಲ್ಲಡಗಿದೆ ಮತ್ತು ಯುರೋಪು ಮತ್ತು ಅಮೆರಿಕಗಳಲ್ಲಿ ಜನ್ಮ ತಳೆದ ವಸಾಹತುಶಾಹಿಯಿಂದ ಅದು ಬೆಳೆದು ಇಂದಿನ ದೈತ್ಯಾಕಾರ ಪಡೆದಿದೆ ಎಂದು ನನ್ನ ಭಾವನೆ. ಅಂದಿನಿಂದ ಇಂದಿನವರೆಗೆ ನಡೆಯುತ್ತಿರುವ ಕೈಗಾರಿಕಾ ಮತ್ತು ತಂತ್ರಜ್ಞಾನದ ಕ್ರಾಂತಿಗಳಿಂದ ಮತ್ತು ಅವು ಹುಟ್ಟು ಹಾಕಿದ ತಳುಕು ಬಳುಕಿನಿಂದ ನಮ್ಮ ಕೊಳ್ಳುಬಾಕತನದ ಪ್ರವೃತ್ತಿ ಹೆಚ್ಚಾಗಿದೆ.
ಆದರೆ, ಈ ಅತಿ ಉಪಭೋಗದಿಂದ ಜನರಲ್ಲಿ ಶಾಂತಿ ಮತ್ತು ಸಂತೃಪ್ತಿಗಳು ಹೆಚ್ಚಾಗಿವೆಯೆ? ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಕೊಳ್ಳುಬಾಕ ರಾಷ್ಟ್ರವಾದ ಅಮೆರಿಕದಲ್ಲಿ ಸಾಕಷ್ಟು ಕ್ಲೇಶವಿದೆ. ನಿತ್ಯವೂ ಅದಾರೋ ಇನ್ನಾರನ್ನೋ ವಿನಾಕಾರಣ ಗುಂಡಿಕ್ಕಿ ಕೊಲ್ಲುವದು ಅಲ್ಲಿ ಸರ್ವೇ ಸಾಮಾನ್ಯ. ಆದರೆ ಜಗತ್ತಿನ ಅತೀ ಬಡ ರಾಷ್ಟ್ರಗಳಲ್ಲಿ ಒಂದಾದ ಭೂತಾನ್ ವಿಶ್ವದಲ್ಲಿಯೇ ಅತ್ಯಂತ ಸಂತೃಪ್ತ ಮತ್ತು ಶಾಂತಿಪೂರ್ಣ ದೇಶ ಎಂದು ಹೆಸರಾಗಿದೆ. ಆದುದರಿಂದ ಮನುಜಕುಲದ ನಿಜವಾದ ಬೆಳವಣಿಗೆ ಮತ್ತು ಈ ಭೂಮಿಯ ಸುರಕ್ಷೆ ಈಗ ಎಂದಿಗಿಂತಲೂ ಹೆಚ್ಚು ಪ್ರಸ್ತುತ.
ಪರ್ಯಾವರಣದ ನಿರಂತರತೆ (environmental sustainability)ಯ ಬಗ್ಗೆ ಗಂಭೀರ ಚಿಂತನೆ ಅಷ್ಟೇ ಅಲ್ಲದೇ, ತತ್ಕ್ಷಣ ಯಾವುದಾದರೂ ಒಂದು ತಕ್ಕ ಕ್ರಮವನ್ನು (immediate action) ಕೈಗೊಳ್ಳುವುದು ಇಂದು ಅತ್ಯಗತ್ಯವಾಗಿದೆ. ಇಂದು ನಾವು ಬಳಸುತ್ತಿರುವ ತಂತ್ರಜ್ಞಾನಗಳು ಬದಲಾಗಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆ ಆರಂಭವಾಗಬೇಕಾಗಿದೆ. ಇಷ್ಟೇ ಅಲ್ಲದೇ, ನಮ್ಮ ಸದ್ಯದ ಕೊಳ್ಳುಬಾಕ ಪ್ರವೃತ್ತಿಯ ಮೂಲವಾದ ಪದಾರ್ಥದ ಅತೀ ಬಳಕೆಯ ಚಟವನ್ನು ಬುಡ ಸಮೇತ ಕಿತ್ತೆಸೆಯಬೇಕಾಗಿದೆ.
ಬಹಳ ವರ್ಷಗಳಷ್ಟು ಹಿಂದೆಯೇ ಅಮೆರಿಕದ ಅಧ್ಯಕ್ಷ ಜಾನ್ ಕೆನೆಡಿ "ಈಗಿನ ಕಾಲದ ಸರ್ವೋಚ್ಚ ಸತ್ಯ ಎಂದರೆ ನಮ್ಮ ಭೂಮಿಯ ಅತಿಸಂವೇದನಶೀಲತೆ ಅಥವಾ ನಾಜೂಕುತನ". ಅನೇಕ ನಾಜೂಕು ವ್ಯವಸ್ಥೆಗಳ ಅತೀ ನಾಜೂಕು ಜೋಡಣೆ ನಮ್ಮ ಭೂಮಿ. ನಮ್ಮ ಅಜಾಗರೂಕ ವ್ಯವಹಾರದಿಂದ ಈ ನಾಜೂಕು ವ್ಯವಸ್ಥೆ ಕುಸಿದು ಬೀಳದಿರುವಂತೆ ನೋಡಿಕೊಳ್ಳುವದು ನಮ್ಮ ಮುಂದಿರುವ ಆಯ್ಕೆ ಅಲ್ಲ, ಕಡ್ಡಾಯವಾದ ಕರ್ತವ್ಯವಾಗಿದೆ.