ರಾಮ್ ಪ್ರಸಾದ್ ಬಿಸ್ಮಿಲ್ ಜನ್ಮದಿನ ಯಾಕೆ ನೆನಪಾಗಲಿಲ್ಲ?
ಸುಮಾರು ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆ ಬ್ರಿಟಿಷರ ಆಡಳಿತದಲ್ಲಿ ಮರಣದಂಡನೆಗೆ ಒಳಗಾದ ಒಬ್ಬ ಕೈದಿಯನ್ನು ಹಿಡಿದುಕೊಂಡು ಪೊಲೀಸನೊಬ್ಬ ನ್ಯಾಯಾಲಯದಿಂದ ಜೈಲಿಗೆ ಬರುತ್ತಿದ್ದ. ಆಗ ಹಾದಿಯಲ್ಲಿ ಕುಸ್ತಿ ಪಂದ್ಯವೊಂದು ನಡೆಯುತ್ತಿತ್ತು. ಆಗ ಕೈದಿಯನ್ನು ಅಲ್ಲಿಯೇ ಬಿಟ್ಟು ಪೋಲಿಸ್, ಕುಸ್ತಿ ಪಂದ್ಯವನ್ನು ನೋಡುವುದರಲ್ಲಿ ಮಗ್ನನಾದ. ಆಗ ಸುತ್ತ ಮುತ್ತಲಿನವರು ಪೊಲೀಸನಿಗೆ ಕೈದಿಯನ್ನು ಬೇಡಿಯಿಂದ ಬಂಧಿಸಿಡಲು ಸಲಹೆ ನೀಡಿದರು. ಆದರೆ ಪೊಲೀಸಿನವ "ಇಲ್ಲ ನನಗೆ ಈ ಕೈದಿಯ ಮೇಲೆ ಭರವಸೆಯಿದೆ, ಆತನೆಂದೂ ಮೋಸ ಮಾಡಿ ಓಡಿ ಹೋಗುವುದಿಲ್ಲ" ಎಂದು ಹೇಳಿ ಕುಸ್ತಿ ನೋಡುವತ್ತ ನಿರತನಾದ.
ಆಗ ಆ ಕೈದಿಗೆ ನಿಜವಾಗಿಯೂ ಅಲ್ಲಿಂದ ತಪ್ಪಿಸಿಕೊಳ್ಳುವ ಅವಕಾಶವಿತ್ತು. ಆದರೆ ಕೈದಿಗೆ ಪೊಲೀಸಿನವನ ಭರವಸೆಯನ್ನು ಮುರಿಯುವ ಮನಸ್ಸಾಗಲಿಲ್ಲ. ಆದುದರಿಂದ ಯಾವುದೇ ಬೇಡಿ ಸಲಾಖೆಗಳಿರದೆಯೂ ಕೈದಿ ಕುಸ್ತಿ ಪಂದ್ಯ ಮುಗಿಯುವವರೆಗೆ ಅಲ್ಲಿಯೇ ನಿಂತ. ಕುಸ್ತಿ ಪಂದ್ಯ ಮುಗಿದ ಮೇಲೆ ಆ ಪೊಲೀಸು ಕೈದಿಯನ್ನು ಕರೆದುಕೊಂಡು ಜೈಲು ಸೇರಿ ಕೈದಿಯನ್ನು ಮರಣ ದಂಡನೆಗೆ ಒಳಗಾಗುವ ಕೈದಿಗಳನ್ನು ಬಂಧಿಸಿಡುವ ಕೋಣೆಯಲ್ಲಿ ಬಂಧಿಸಿಟ್ಟ. ಆ ಕೈದಿ ಬೇರಾರೂ ಅಲ್ಲ. ಮಹಾನ್ ಸ್ವಾತಂತ್ರ್ಯವೀರ ರಾಮ್ಪ್ರಸಾದ್ ಬಿಸ್ಮಿಲ್.
ಹಿಂದೂಸ್ತಾನಿ ದಿಗ್ಗಜರನ್ನು ಬೆಳೆಸಿದ ಪುಣ್ಯನೆಲ ಬೆಳಗಾವಿ
ರಾಮ್ ಪ್ರಸಾದ್ ಬಿಸ್ಮಿಲ್ ಹುಟ್ಟಿದ್ದು ಈಗಿನ ಉತ್ತರಪ್ರದೇಶದ ಶಾಹಜಹಾನ್ಪುರದಲ್ಲಿ, 12 ಜೂನ್ 1897ರಂದು. ಹಿಂದಿ ಪಾರಂಗತರಾದ ತನ್ನ ತಂದೆಯಿಂದ ಹಿಂದಿಯನ್ನೂ ಮತ್ತು ಮೌಲ್ವಿಯೊಬ್ಬರಿಂದ ಉರ್ದುವನ್ನು ಅಭ್ಯಸಿಸಿ ಪ್ರಾವೀಣ್ಯತೆ ಪಡೆದ ರಾಮ್ ಪ್ರಸಾದ್ ಬಿಸ್ಮಿಲ್ಗೆ ದೇಶಭಕ್ತಿ ಗೀತೆಗಳನ್ನು ಬರೆಯುವ ಆಸಕ್ತಿಯೂ ಇತ್ತು. ಅವನ ಕವಿತೆಗಳಿಂದಲೇ ಆಕರ್ಷಿತನಾದ ಅವನ ಪ್ರಾಣ ಮಿತ್ರ ಅಶ್ಫಾಕ್ ಉಲ್ಲಾ ಖಾನ್ ಮುಂದೆ ತನ್ನ ಗೆಳೆಯನೊಂದಿಗೆ ದೇಶಕ್ಕಾಗಿ ಗಲ್ಲಿಗೇರಿದ ಮತ್ತೊಬ್ಬ ಮಹಾನ್ ಕ್ರಾಂತಿಕಾರಿ.
ಆರ್ಯ ಸಮಾಜದ ತತ್ವಗಳು ಮತ್ತು ಸುಧಾರಣೆಗಳಿಂದ ಆಕರ್ಷಿತನಾದ ರಾಮ್ ಪ್ರಸಾದ್ ಬಿಸ್ಮಿಲ್ ಆರ್ಯ ಸಮಾಜವನ್ನು ಸೇರಿದ. ಮೊದಲು ಕಾಂಗ್ರೆಸ್ಸನ್ನು ಸೇರಿ ಬ್ರಿಟಿಷರ ವಿರುದ್ಧ ಚಳವಳಿಯನ್ನು ಮಾಡುತ್ತಿದ್ದ ರಾಮ್ ಪ್ರಸಾದ್ ಬಿಸ್ಮಿಲ್ನಿಗೆ ಕಾಂಗ್ರೆಸ್ನ ಮೃದು ಧೋರಣೆಗಳು ಸರಿಬರಲಿಲ್ಲ. ಮಹಾತ್ಮ ಗಾಂಧಿಯವರು ಚೌರಿಚೌರ ಕಾಂಡದ ನಂತರ ಕಾಂಗ್ರೆಸ್ನ ಅಸಹಕಾರ ಚಳವಳಿಯನ್ನು ಹಠಾತ್ತಾಗಿ ಹಿಂತೆಗೆದುಕೊಂಡಾಗ ಬಹಳ ಅಸಮಾಧಾನಗೊಂಡ ರಾಮ್ ಪ್ರಸಾದ್ ಬಿಸ್ಮಿಲ್, ಕಾಂಗ್ರೆಸ್ಸನ್ನು ತ್ಯಜಿಸಿ ತನ್ನ ಇತರ ಕ್ರಾಂತಿಕಾರಿ ಮಿತ್ರರಾದ ಚಂದ್ರಶೇಖರ್ ಆಜಾದ್, ಭಗತ್ಸಿಂಗ್ ಮುಂತಾದವರೊಡನೆ ತಮ್ಮದೇ ಆದ Hindustan Republican Association ಎಂಬ ಕ್ರಾಂತಿಕಾರಿ ಪಕ್ಷವನ್ನು ಸ್ಥಾಪಿಸಿದನು. ಕ್ರಾಂತಿಕಾರಿ ಚಟುವಟಿಕೆಗಳಿಂದ ದೇಶದ ಸ್ವಾತಂತ್ರ್ಯ ಗಳಿಸುವುದು ಈ ಪಕ್ಷದ ಗುರಿಯಾಗಿತ್ತು.
ಚಂದಮಾಮಾದ ಚೆಂದದ ಪೌರಾಣಿಕ ಕಥೆಗಳ ಯುಗಾಂತ್ಯ
ಈ ತಂಡದ ಅನೇಕ ಕ್ರಾಂತಿಕಾರಿ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ರಾಮ್ ಪ್ರಸಾದ್ ಬಿಸ್ಮಿಲ್ ಮುಂದಾಳು. ಮುಖ್ಯವಾಗಿ ಕಾಕೋರಿ ಎಂಬಲ್ಲಿ ಸರಕಾರದ ಖಜಾನೆಯನ್ನು ಸಾಗಿಸುವ ರೈಲನ್ನು ಲೂಟಿ ಮಾಡಲು ಯೋಜನೆ ತಯಾರಿಸಿ ಕಾರ್ಯಗತಗೊಳಿಸಿದನು. ಅದರೆ ಈ ಘಟನೆಯ ನಂತರ ಅಂದಿನ ಬ್ರಿಟಿಶ್ ಸರಕಾರ ಶತಾಯ ಗತಾಯ ಪ್ರಯತ್ನ ಮಾಡಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಆಶ್ಫಾಕ್ ಉಲ್ಲಾ ಖಾನ್ ಒಳಗೊಂಡಂತೆ ಅವನ ತಂಡದ ಕೆಲವು ಪ್ರಮುಖರನ್ನು ಬಂಧಿಸಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಿತು.
ಕೇವಲ ಮೂವತ್ತಾರನೇ ವಯಸ್ಸಿನಲ್ಲಿ ಧೈರ್ಯದಿಂದ ಗಲ್ಲಿಗೇರಿ ಮಾತೃ ಭೂಮಿಗೆ ತನ್ನ ಸರ್ವಸ್ವವನ್ನು ಮುಡಿಪಿಟ್ಟ ಧೀರ ರಾಮ್ ಪ್ರಸಾದ್ ಬಿಸ್ಮಿಲ್. ಉರ್ದು ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದ ರಾಮ್ ಪ್ರಸಾದ್ ಬಿಸ್ಮಿಲ್, ಬಿಸ್ಮಿಲ್ ಅಜೀಮಾಬಾದಿ ಎಂಬ ಕವಿಯ "ಸರ್ ಫರೋಶಿಕಿ ತಮನ್ನಾ ಅಬ್ ಹಮಾರೇ ದಿಲ್ ಮೇ ಹೈ (ಬಲಿದಾನ ಹೊಂದುವ ತೀವ್ರ ಇಚ್ಛೆ ನಮ್ಮ ಹೃದಯದಲ್ಲಿದೆ)" ಎಂಬ ಕವಿತೆಯನ್ನು ತಮ್ಮ ಕ್ರಾಂತಿಕಾರಿ ಸಂಘದ ಉದ್ಘೋಷಣೆಯನ್ನಾಗಿ ಪರಿವರ್ತಿಸಿ ಅದನ್ನು ಅಜರಾಮರಗೊಳಿಸಿದ ಸ್ವಾತ್ರಂತ್ರ್ಯ ಸೇನಾನಿ.
ಸಿಂಗಪುರದಲ್ಲಿಯೂ ಇಣುಕುತ್ತಿದೆ ಉದ್ಯೋಗದ ಅಭದ್ರತೆ!
ಈಗ ತಾನೇ ಕಳೆದ ಸೋಮವಾರದಂದು, ಅವನ 120ನೇ ಜನ್ಮದಿನವಿತ್ತು. ಯಾವ ಯಾವದೋ ಚಿತ್ರ ವಿಚಿತ್ರ ದಿನಗಳನ್ನು ಆಚರಿಸಿ ವಿನೋದವಾಗಿ ಕಾಲ ಕಳೆಯುವ ನಮಗೆ ಈ ಮಹಾತ್ಮನ ಜನ್ಮದಿನ ಏಕೆ ನೆನಪಾಗಲಿಲ್ಲವೋ ಎಂದು ದುಃಖವುಂಟಾಗುತ್ತದೆ. ಕೇವಲ ರಾಮ್ಪ್ರಸಾದ್ ಬಿಸ್ಮಿಲ್ ಅಷ್ಟೇ ಅಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ರಾಜಗುರು, ಅಶ್ಫಾಕ್ ಉಲ್ಲಾ ಖಾನ್, ಮದನ್ಲಾಲ್ ಧಿಂಗ್ರಾ, ಚಾಫೇಕರ್ ಸಹೋದರರು, ವಾಸುದೇವ ಬಳವಂತ್ ಫಡ್ಕೆ ಹಾಗೂ ಇನ್ನೂ ಅನೇಕರು ನಮ್ಮ ಸಮಾಜದಲ್ಲಿ ಮರೆತು ಹೋಗಿದ್ದಾರೆ. ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ನಮ್ಮ ಇತಿಹಾಸದ ಪುಸ್ತಕಗಳ ಯಾವುದೋ ಮೂಲೆಯಲ್ಲಿ ಉಲ್ಲೇಖಗೊಂಡರೆ, ಉಳಿದವರು ನಮ್ಮ ಇತಿಹಾಸದಲ್ಲಿ ಸ್ಥಾನ ಪಡೆದೇ ಇಲ್ಲ.
ಬಹುಶಃ ದೇಶಭಕ್ತಿಯನ್ನು ಕುರಿತು ನಮ್ಮ ಇಂದಿನ ಸಮಾಜದಲ್ಲಿ ಉಂಟಾಗಿರುವ ಗೊಂದಲವನ್ನು ಈ ಅಂಶ ವಿವರಿಸುತ್ತದೆ ಎಂದು ನನಗನಿಸುತ್ತದೆ. ಏಕೆಂದರೆ ಯಾವ ಮಹಾನುಭಾವರು ನಮ್ಮ ದೇಶವನ್ನು ಕಟ್ಟಲು ತಮ್ಮ ಪ್ರಾಣವನ್ನು ಲೆಕ್ಕಿಸಲಿಲ್ಲವೋ ಅವರನ್ನು ನಮ್ಮ ಇತಿಹಾಸ ಮರೇತೇ ಬಿಟ್ಟಿದೆ. ಆದುದರಿಂದ ನಮ್ಮ ದೇಶದ ಸ್ವಾತಂತ್ರ್ಯವನ್ನು ಪಡೆಯಲು ಅದೆಂತಹ ತ್ಯಾಗವನ್ನು ನಮ್ಮದೇ ಆದ ಯುವಕರು ಕೆಲವೇ ದಶಕಗಳ ಹಿಂದೆ ಮಾಡಿದ್ದಾರೆ ಎಂಬುದರ ಅರಿವೇ ಇಲ್ಲದಿರುವ ಇಂದಿನ ಅನೇಕ ಹಾದಿ ತಪ್ಪಿದ ಯುವಕರು, ನಮ್ಮ ದೇಶವನ್ನು ಒಡೆಯುತ್ತೇವೆ ಎನ್ನುವ ಜನರನ್ನು ಬೆಂಬಲಿಸುತ್ತಾರೆ. ಇಂತಹ ಯುವಕರಿಗೆ ನರಿ ಬುದ್ಧಿಯ ಪುಢಾರಿಗಳಿಂದ ಕುಮ್ಮಕ್ಕು ಬೇರೆ ದೊರಕುತ್ತದೆ.
ಯಾವುದು ನಮಗೆ ಮುಖ್ಯ ಯಾವುದು ಅಲ್ಲ ಎಂಬುದರ ಆದ್ಯತೆಗಳನ್ನು ನಿಶ್ಚಯಿಸದೇ ನಮ್ಮ ದೇಶದ ಬಗ್ಗೆ ಮತ್ತು ದೇಶ ರಕ್ಷಕ ಸೇನೆಯ ಬಗ್ಗೆ ಇಂತಹ ಜನ ಏನು ಬೇಕಾದರೂ ಆಡಿಕೊಳ್ಳುತ್ತಾರೆ. ಅದಕ್ಕೆ ನಮ್ಮ ಸ್ವತಂತ್ರ ಸಮೂಹ ಮಾಧ್ಯಮ ಕೂಡ ಬೆಂಬಲಿಸುತ್ತದೆ. ಇಂದಿನ ಈ ದಿನಗಳನ್ನು ನೋಡಿದ್ದರೆ ರಾಮ್ ಬಿಸ್ಮಿಲ್ ಅಂತಹ ಕ್ರಾಂತಿಕಾರಿಗಳು ತಾವು ಯಾವ ಜನರಿಗಾಗಿ ತ್ಯಾಗ ಮಾಡಿದೆವು ಎಂಬುದರ ಬಗ್ಗೆ ವ್ಯಥೆ ಪಡುತ್ತಿದ್ದರೇನೋ?
ಇಂದು ಈ ಸ್ಥಿತಿಯನ್ನು ಬದಲಿಸುವ ಕಾಲ ಒದಗಿ ಬಂದಿದೆ ಎಂದು ನನ್ನ ತೀವ್ರ ಅನಿಸಿಕೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕಥೆಯನ್ನು ಸಮಗ್ರವಾಗಿ, ಏನನ್ನೂ ಮುಚ್ಚಿಡದೇ, ಯಾರೊಬ್ಬರನ್ನೂ ವೈಭವೀಕರಿಸದೇ, ಮತ್ಯಾರ ಪಾತ್ರವನ್ನು ಮುಚ್ಚಿ ಹಾಕದೇ ಇದ್ದುದನ್ನು ಇದ್ದ ಹಾಗೆ ಜನಸಾಮಾನ್ಯರ ಮುಂದಿಡಬೇಕು. ಹೀಗೆ ಮಾಡುವುದರಿಂದ ಇಂದಿನ ಮತ್ತು ಮುಂದಿನ ನಮ್ಮ ಪ್ರಜೆಗಳಿಗೆ.
ನಮ್ಮ ದೇಶದ ಹೋರಾಟದಲ್ಲಿ ಹೇಗೆ ಸಾಮಾನ್ಯ ಜನರು ಜಾತಿ, ಧರ್ಮ, ವರ್ಗ ಭೇದಗಳಿರದೇ ಒಮ್ಮನಸ್ಸಿನಿಂದ ಪಾಲ್ಗೊಂಡಿದ್ದರು ಮತ್ತು ಇದೇ ಸಾಮಾನ್ಯ ಜನರ ಮಧ್ಯದಿಂದ ತಮ್ಮ ಸಕಲವನ್ನು ತ್ಯಾಗ ಮಾಡಿ ಕೆಲವು ಅಸಾಮಾನ್ಯ ವ್ಯಕ್ತಿಗಳು ಮೂಡಿಬಂದರು ಎಂಬುದು ತಿಳಿಯುವಂತಾಗಲಿ ಮತ್ತು ನಮ್ಮ ಜನರಿಗೆ ನಾವು ಇಂದು ಸ್ವೇಚ್ಛೆಯಿಂದ ಅನುಭವಿಸುತ್ತಿರುವ ಸ್ವಾತಂತ್ರ್ಯದ ಬೆಲೆ ಏನು ಎಂಬುದು ತಿಳಿಯಲಿ ಎಂಬುದು ನನ್ನ ಆಶಯ.