ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರ

By ವಸಂತ ಕುಲಕರ್ಣಿ, ಸಿಂಗಾಪುರ
|
Google Oneindia Kannada News

ಕನ್ನಡಿಗರಿಗೂ ಮತ್ತು ಸಂಗೀತಕ್ಕೂ ಬಹಳ ಆತ್ಮೀಯ ಸಂಬಂಧ. ಸದ್ಯ ಪ್ರಚಲಿತವಿರುವ ಶಾಸ್ತ್ರೀಯ ಸಂಗೀತದ ಎರಡೂ ಪದ್ಧತಿಗಳಲ್ಲೂ ಅನೇಕ ಅಪ್ರತಿಮ ಸಂಗೀತಕಾರರ ಜನ್ಮ ಭೂಮಿ ಕರ್ನಾಟಕ. ಹೆಸರೇ ಹೇಳುವಂತೆ ಕರ್ನಾಟಕ ಸಂಗೀತದ ತವರು ನಮ್ಮ ಕನ್ನಡ ನೆಲ.

ವೀಣೆ ಶೇಷಣ್ಣನವರು, ಪಿಟೀಲು ಚೌಡಯ್ಯ, ದೊರೆಸ್ವಾಮಿ ಅಯ್ಯಂಗಾರರು ಮುಂತಾದ ಮಹಾನ್ ವಿದ್ವಾಂಸರು ಕರ್ನಾಟಕ ಸಂಗೀತದ ಮೈಸೂರು ಪರಂಪರೆಯ ಪತಾಕೆಯನ್ನು ಎತ್ತಿ ಹಿಡಿದರೆ, ಸವಾಯಿ ಗಂಧರ್ವ, ಭೀಮಸೇನ್ ಜೋಶಿ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್ ಮುಂತಾದವರು ಹಿಂದೂಸ್ತಾನಿ ಸಂಗೀತದ ದಿಗ್ಗಜರು. ಎರಡೂ ಸಂಗೀತ ಪದ್ಧತಿಗಳು ಅಷ್ಟೇ ಜನಪ್ರಿಯವಾಗಿರುವ ಭಾರತ ದೇಶದ ಏಕೈಕ ರಾಜ್ಯ ನಮ್ಮ ಕರ್ನಾಟಕ.

ಅಪ್ರತಿಮ ಸೇನಾನಿ ಲಚಿತ್ ಬೋರ್ ಫುಕಾನ್ ಬಗ್ಗೆ ನಿಮಗೆಷ್ಟು ಗೊತ್ತು?ಅಪ್ರತಿಮ ಸೇನಾನಿ ಲಚಿತ್ ಬೋರ್ ಫುಕಾನ್ ಬಗ್ಗೆ ನಿಮಗೆಷ್ಟು ಗೊತ್ತು?

ಕರ್ನಾಟಕ ಸಂಗೀತದ ಪಿತಾಮಹರೆನಿಸಿದ ಪುರಂದರದಾಸರು ಕರ್ನಾಟಕದವರು ಎಂಬ ಹೆಮ್ಮೆಯ ವಿಚಾರ ನಮಗೆಲ್ಲ ಗೊತ್ತು. ಆದರೆ ಹಿಂದೂಸ್ತಾನಿ ಸಂಗೀತದ ಮೂಲ ಪ್ರವರ್ತಕರಾದ ಸ್ವಾಮಿ ಹರಿದಾಸರು ಪುರಂದರದಾಸರ ಶಿಷ್ಯರು ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ. ಸ್ವಾಮಿ ಹರಿದಾಸರು ಪುರಂದರದಾಸರಲ್ಲಿ ಸಂಗೀತ ಮತ್ತು ಅಧ್ಯಾತ್ಮಗಳೆರಡನ್ನೂ ಅಭ್ಯಸಿಸಿದರೆಂಬ ನಂಬಿಕೆ ಇದೆ.

Greatest icons of music from Karnataka, we should remember and salute them

ಸ್ವಾಮಿ ಹರಿದಾಸರು ಮಹಾನ್ ಸಂಗೀತಕಾರನಾದ ತಾನ್ ಸೇನ್ ನ ಗುರುಗಳು. ನಿಂಬಾರಕ ಸಂಪ್ರದಾಯದ ಸ್ವಾಮಿ ಹರಿದಾಸರು ಭಕ್ತಿ ಪ್ರಧಾನ ಸಂಗೀತವನ್ನು ಉತ್ತರ ಭಾರತದಲ್ಲಿ ಪ್ರಚಲಿತಗೊಳಿಸಿದರು. ಕನ್ನಡ ನೆಲದಲ್ಲಿ ಹಿಂದೂಸ್ತಾನಿ ಸಂಗೀತದ ಮೂಲ ಸೆಲೆ ಇಲ್ಲಿಂದಲೇ ಆರಂಭವಾಯಿತೇ? ಈ ವಿಷಯದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಆದರೆ, ಹಿಂದೂಸ್ತಾನಿ ಸಂಗೀತ ಉತ್ತರ ಕರ್ನಾಟಕದಲ್ಲಿ ಜನಪ್ರಿಯಗೊಂಡು ಬೇರು ಬಿಡಲಿಕ್ಕೆ ದಕ್ಷಿಣ ಕರ್ನಾಟಕದ ಸಂಗೀತ ರಸಿಕರ ದೊಡ್ಡ ಕಾಣಿಕೆ ಇದೆ ಎನ್ನುವುದಂತೂ ನೂರಕ್ಕೆ ನೂರರಷ್ಟು ಸತ್ಯ.

ಕರ್ನಾಟಕದ ಶೇಕ್ಸ್ ಪಿಯರ್ ಕಂದಗಲ್ ಹನುಮಂತರಾಯರುಕರ್ನಾಟಕದ ಶೇಕ್ಸ್ ಪಿಯರ್ ಕಂದಗಲ್ ಹನುಮಂತರಾಯರು

ವಿಜಯ ನಗರದ ಅವಿಭಾಜ್ಯ ಅಂಗವಾಗಿದ್ದ ಈ ಪ್ರದೇಶ, ವಿಜಯನಗರದ ಪತನದ ನಂತರ ಹೊರಗಿನವರ ಆಳ್ವಿಕೆಗೆ ಒಳಪಟ್ಟಿತು. ಹೀಗೆ ಈ ಪ್ರದೇಶವನ್ನು ಆದಿಲ್ ಶಾಹಿಗಳು, ಅವರ ನಂತರ ಮರಾಠರು ಆಳಿದರು. ಆ ದಿನಗಳಲ್ಲಿ ಇಲ್ಲಿಯ ಜನರ ಸಂಸ್ಕೃತಿಯಲ್ಲಿ ಹೊರಗಿನವರ ಪ್ರಭಾವದಿಂದ ಬದಲಾವಣೆ ಕಂಡು ಬಂದಿತು.

Greatest icons of music from Karnataka, we should remember and salute them

ಹಾಗೆಯೇ ಕರ್ನಾಟಕ ಸಂಗೀತದ ಸಂಸ್ಕೃತಿ ಬದಲಾವಣೆ ಹೊಂದಿ ಜನ ಹಿಂದೂಸ್ತಾನಿ ಸಂಗೀತಕ್ಕೆ ಮನ್ನಣೆ ನೀಡತೊಡಗಿದರು. ಆದಿಲ್ ಶಾಹಿಯ ಪತನದ ನಂತರ ಬಹುತೇಕ ಚಿಕ್ಕ ಪುಟ್ಟ ಸಂಸ್ಥಾನಿಕರು ಮರಾಠರಾಗಿರುವುದು ಇದಕ್ಕೆ ಕಾರಣವಾಗಿರಬಹುದು.

ಆದರೆ, ಮುಖ್ಯವಾಗಿ ಸಂಗೀತ ಪ್ರೇಮಿಗಳಾದ ಮೈಸೂರು ಅರಸರ ಆಹ್ವಾನದಿಂದ ಮೈಸೂರು ರಾಜ್ಯಕ್ಕೆ ಪ್ರಯಾಣಿಸುತ್ತಿದ್ದ ಉತ್ತರ ಭಾರತದ ಸಂಗೀತ ವಿದ್ವಾಂಸರು ಉತ್ತರ ಕರ್ನಾಟಕದ ಮಾರ್ಗದಲ್ಲಿ ಪಯಣಿಸುತ್ತಿದ್ದರು. ಈ ಸಂಗೀತ ವಿದ್ವಾಂಸರು ಬೆಳಗಾವಿ ಮತ್ತು ಧಾರವಾಡಗಳಲ್ಲಿ ಕೆಲವು ತಿಂಗಳು ವಾಸವಾಗಿದ್ದು, ಅಲ್ಲಿಂದ ಮುಂದೆ ಪ್ರಯಾಣ ಮಾಡುತ್ತಿದ್ದರು.

ಈ ಸಂಗೀತ ವಿದ್ವಾಂಸರಿಂದ ಪ್ರಭಾವಿತರಾದ ಈ ಪ್ರದೇಶದ ಜನರು ಹಿಂದೂಸ್ತಾನಿ ಸಂಗೀತ ಕಲಿಯತೊಡಗಿದರು. ಕಿರಾಣಾ ಘರಾಣೆಯ ಉಸ್ತಾದ್ ಅಬ್ದುಲ್ ಕರೀಂ ಖಾನರು ಇಲ್ಲಿಯ ಜನಕ್ಕೆ ಸಂಗೀತ ಕಲಿಸಿದ ಮಹನೀಯರಲ್ಲಿ ಪ್ರಮುಖರು.

Greatest icons of music from Karnataka, we should remember and salute them

ಹಿಂದೂಸ್ತಾನಿ ಸಂಗೀತದ ಮಹಾನ್ ಗಾಯಕಿ ಗಂಗೂಬಾಯಿ ಹಾನಗಲ್ ಅವರ ತಾಯಿ ಶ್ರೀಮತಿ ಅಂಬಾಬಾಯಿ ಸ್ವತಃ ಕರ್ನಾಟಕ ಸಂಗೀತದ ವಿದುಷಿಯಾಗಿದ್ದರೂ ಕೂಡ ಮಗಳಿಗೆ ಉಸ್ತಾದ್ ಅಬ್ದುಲ್ ಕರೀಂ ಖಾನರ ಪಟ್ಟ ಶಿಷ್ಯ ರಾಮಭಾವು ಕುಂದಗೋಳಕರ್ (ಸವಾಯಿ ಗಂಧರ್ವ)ರ ಕಡೆಯಿಂದ ಹಿಂದೂಸ್ತಾನಿ ಪಾಠ ಹೇಳಿಸಿದರು.

ಹೀಗಾಗಿ ಉತ್ತರ ಕರ್ನಾಟಕ ಇಂದಿಗೂ ಹಿಂದೂಸ್ತಾನಿ ಸಂಗೀತದ ಕಿರಾಣಾ ಘರಾಣದ ಪಥ ಪ್ರದರ್ಶಕ ಭೂಮಿ ಎಂದೆನಿಸಿದೆ. ಈಗಲೂ ಕೂಡ ಈ ಪ್ರದೇಶದಿಂದ ಪಂ. ಕೈವಲ್ಯಕುಮಾರ, ಪಂ. ಜಯತೀರ್ಥ ಮೇವುಂಡಿ, ಪಂ. ಪ್ರವೀಣ್ ಗೋಡಖಿಂಡಿ ಮತ್ತು ಪಂ. ಕುಮಾರ್ ಮರಡೂರರಂತಹ ಉಜ್ವಲ ಪ್ರತಿಭೆಗಳು ಹೊರ ಹೊಮ್ಮುತ್ತಿವೆ.

ಇತ್ತೀಚೆಗೆ ನಾನು ಪಂ. ಕೈವಲ್ಯಕುಮಾರ್ ಅವರೊಂದಿಗೆ ಮಾತನಾಡುತ್ತಿದ್ದಾಗ ತಿಳಿದು ಬಂದದ್ದೇನೆಂದರೆ ನಾಟ್ಯ ಸಂಗೀತದ ಮೂಲ ಕೂಡ ಕನ್ನಡಿಗರೇ ಎಂಬ ವಿಷಯ. ನಾಟ್ಯ ಸಂಗೀತ ಮಹಾರಾಷ್ಟ್ರದಲ್ಲಿ ತುಂಬಾ ಜನಪ್ರಿಯವಾದ ಸಂಗೀತ ಪದ್ಧತಿ. ಅಲ್ಲಿಯವರೆಗೆ ನಾನು ಈ ಪದ್ಧತಿ ಮಹಾರಾಷ್ಟ್ರದ ಕಾಣಿಕೆ ಎಂದುಕೊಂಡಿದ್ದೆ. ನನಗೆ ಥಟ್ಟನೇ ನೆನಪಾದದ್ದು ಒಂದು ಕಾಲದಲ್ಲಿ ಕರ್ನಾಟಕದ ಶೇಕ್ಸ್ ಪಿಯರ್ ಎನಿಸಿಕೊಂಡ ಕಂದಗಲ್ ಹನುಮಂತರಾಯರ ನಾಟಕಗಳ ಬಗ್ಗೆ.

ಅವರ ಮತ್ತು ಅವರಂತಹ ಇನ್ನೂ ಕೆಲವು ಸಾಹಿತಿಗಳ ಕನ್ನಡ ನಾಟಕಗಳು ಅನೇಕ ನಾಟ್ಯಗೀತೆಗಳನ್ನು ಹೊಂದಿದ್ದವು. ದುರದೃಷ್ಟವಶಾತ್ ಇಂದು ಯಾರೂ ಅವರ ಬಗ್ಗೆ ಅಥವಾ ಅವರ ನಾಟಕ ಮತ್ತು ನಾಟ್ಯಗೀತೆಗಳ ಬಗ್ಗೆ ಅಭ್ಯಾಸ ಮಾಡುತ್ತಿಲ್ಲ.

ಆದರೆ, ಹಿಂದೊಮ್ಮೆ ಪಂ. ಕೈವಲ್ಯಕುಮಾರ್ ಅವರು ಸಿಂಗಾಪುರಕ್ಕೆ ಕಾರ್ಯಕ್ರಮ ನೀಡಲು ಬಂದಿದ್ದಾಗ ನನಗೆ ಅವರೊಂದಿಗೆ ಮಾತನಾಡುವ ಅವಕಾಶ ದೊರಕಿತ್ತು. ಅವರೊಂದಿಗಿನ ಸಂವಾದದಲ್ಲಿ ಅವರೊಂದು ಮಾತನ್ನು ಹೇಳಿದರು. "ನಮ್ಮ ಜನ ತುಂಬಾ ರಚನಾತ್ಮಕ ಹೌದು, ಆದರೆ ತಮ್ಮತನದ ಬಗ್ಗೆ ಅಭಿಮಾನ ಸ್ವಲ್ಪ ಕಡಿಮೆ" ಎಂಬ ಎಚ್ಚರಿಕೆಯ ಗಂಟೆ ನನ್ನಲ್ಲೇ ಮೊಳಗಿತು.

ಈ ಎಚ್ಚರಿಕೆಯ ಗಂಟೆ ಮತ್ತೆ ಮತ್ತೆ ಅನೇಕ ಕನ್ನಡಿಗರ ಮನದಲ್ಲಿ ಮೊಳಗಿ, ನಮ್ಮತನದ ಬಗ್ಗೆ ಮತ್ತು ನಮ್ಮವರ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲು ನಾಂದಿಯಾಗಬಹುದೇ? ಕನ್ನಡ ನೆಲದ ಪ್ರತಿಭೆಗಳು ಬೇರೊಬ್ಬರ ಆಶ್ರಯಕ್ಕೆ ಪರದಾಡುವದನ್ನು ತಪ್ಪಿಸಲು ನಾವೆಲ್ಲ ಕನ್ನಡಿಗರು ಮುಂದೆ ಬರಬೇಕಲ್ಲವೇ?

English summary
Carnatic and Hindustani music both originated from Karnataka. As a Kannadigas we should be proud for that. Here is the brief introduction of Karnataka music icons, who contributed to the world of music.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X