ಐನ್ ಸ್ಟೀನ್ ನ ಸಾಪೇಕ್ಷ ಸಿದ್ಧಾಂತದ ಬಗ್ಗೆ ನಿಮಗೆಷ್ಟು ತಿಳಿದಿದೆ?
ಕಳೆದ ವರ್ಷ ನನ್ನ ಮಗಳು ಎಂಜಿನಿಯರಿಂಗ್ ಮೊದಲ ವರ್ಷ ಓದುತ್ತಿದ್ದಾಗ ಭೌತ ವಿಜ್ಞಾನದಲ್ಲಿ ಐನ್ ಸ್ಟೀನ್ ನ ವಿಶೇಷ ಸಾಪೇಕ್ಷ ಸಿದ್ಧಾಂತ(Theory of Relativity)ವನ್ನು ಕುರಿತು ಒಂದು ಅಧ್ಯಾಯವಿತ್ತು. ಸ್ವಲ್ಪ ಕ್ಲಿಷ್ಟವಾದ ಈ ವಿಷಯವನ್ನು ತಿಳಿದುಕೊಳ್ಳಲು ನನ್ನ ಸಹಾಯವನ್ನು ಕೇಳಿದಳು.
ನಾನೇನೋ ಈ ಸಾಪೇಕ್ಷ ಸಿದ್ಧಾಂತದ ಹೆಸರನ್ನು ಕೇಳಿದ್ದೆನೇ ಹೊರತು ಅದನ್ನು ಕುರಿತು ಅಭ್ಯಸಿಸಿರಲಿಲ್ಲ. ಬರೀ ಐನ್ ಸ್ಟೀನ್ ನ ಪ್ರಸಿದ್ಧ ಸಮೀಕರಣ E=mC2 ಅನ್ನು ಕುರಿತು ಕೇಳಿದ್ದೆ. ಈ ಸಮೀಕರಣ ಮತ್ತು ಸಾಪೇಕ್ಷ ಸಿದ್ಧಾಂತದ ಆಧಾರದ ಮೇಲೆ ಕೆಲವು ಕಥೆಗಳನ್ನು ಓದಿದ್ದೆ. ಆ ಕಥೆಗಳ ಮೂಲಕ ಸ್ವಲ್ಪ ಮಟ್ಟಿಗೆ ಅದರ ಬಗ್ಗೆ ತಿಳಿದುಕೊಂಡಿದ್ದೆನೇ ಹೊರತು ಕ್ರಮವಾಗಿ ಅಧ್ಯಯನ ಮಾಡಿರಲಿಲ್ಲ.
'ಬಾರಿಸು ಕನ್ನಡ ಡಿಂಡಿಮವ' ಕವನದ ಸಾಲುಗಳಲ್ಲಿನ ಪದಲಾಲಿತ್ಯ
ನನ್ನ ಮಗಳಿಗೆ ಸಹಾಯ ಮಾಡಲು ನಾನು ಮೊತ್ತ ಮೊದಲ ಬಾರಿಗೆ ಕಳೆದ ವರ್ಷ ಭೌತವಿಜ್ಞಾನದ ಪಠ್ಯ ಪುಸ್ತಕವನ್ನು ಓದಿ, ಅಭ್ಯಸಿಸಿ ವಿಶೇಷ ಸಾಪೇಕ್ಷ ಸಿದ್ಧಾಂತವನ್ನು ತಿಳಿದುಕೊಂಡೆ. ಈ ಸಿದ್ಧಾಂತದ ನಾಲ್ಕಾರು ಮುಖ್ಯ ಅಂಶಗಳೆಂದರೆ:
* ಈ ವಿಶ್ವದಲ್ಲಿ ಶುದ್ಧ ಚಲನೆ (Absolute motion) ಎಂಬುದು ಇಲ್ಲವೇ ಇಲ್ಲ. ಎಲ್ಲ ವಸ್ತುಗಳೂ ಮತ್ತೊಂದರ ಜೊತೆ ತುಲನಾತ್ಮಕವಾಗಿ (Relative) ಚಲಿಸುತ್ತವೆ.
* ಬೆಳಕಿನ ವೇಗ ಮಾತ್ರ ಯಾವಾಗಲೂ ಒಂದೇ ಇರುತ್ತದೆ (ಸೆಕೆಂಡಿಗೆ ಮೂರು ಲಕ್ಷ ಕಿಲೋ ಮೀಟರ್).
* ಹೆಚ್ಚಿನ ವೇಗದಲ್ಲಿ (ಬೆಳಕಿನ ವೇಗ) ಚಲಿಸುವ ಯಾನದಲ್ಲಿನ ಸಮಯ ಕಡಿಮೆ ವೇಗದಲ್ಲಿ ಚಲಿಸುವ ಯಾನದ ಸಮಯಕ್ಕಿಂತ ಹೆಚ್ಚಿರುತ್ತದೆ. ಎಂದರೆ ವೇಗದಲ್ಲಿ ಚಲಿಸುವ ಯಾನದ ಸಮಯ ಹಿಗ್ಗುತ್ತದೆ (Time Dilation). ಅಂತೆಯೇ ಬೆಳಕಿನ ವೇಗದಲ್ಲಿ ಚಲಿಸುವ ಯಾನ ತನ್ನ ಗಾತ್ರದಲ್ಲಿ ಕುಗ್ಗುತ್ತದೆ (Space Contraction).
* ದ್ರವ್ಯರಾಶಿ ಮತ್ತು ಶಕ್ತಿಗಳು ಪರಸ್ಪರ ಮಾರ್ಪಾಟುಗೊಳ್ಳಬಲ್ಲವು, E=mC2.
ಬೆಳಗಾವಿಯ 'ಭಜನ ಸಂಗೀತ ಚೂಡಾಮಣಿ' ಕಡ್ಲಾಸ್ಕರ್ ಬುವಾ
* ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗವನ್ನು ಪಡೆಯಲು ಸಾಧ್ಯವಿಲ್ಲ. ಅಕಸ್ಮಾತ್ತಾಗಿ ಯಾವುದೇ ಯಾನಗಳು ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ಸಾಮರ್ಥ್ಯ ಪಡೆದುಕೊಂಡರೆ, ಆ ಯಾನಗಳನ್ನು ಸಮಯದ ಯಾತ್ರೆ(Time Travel)ಗೆ ಬಳಸಬಹುದು!
* ಬೃಹತ್ ವಸ್ತುಗಳು ಅವಕಾಶ-ಸಮಯಗಳ ನಿರಂತತೆ(Space-time continuum)ಯನ್ನು ವಕ್ರ (warp)ಗೊಳಿಸುತ್ತವೆ. ಈ ವಕ್ರಗೊಳಿಸುವಿಕೆಯ ಫಲವೇ ನಾವು ಅನುಭವಿಸುವ ಗುರುತ್ವಾಕರ್ಷಣ ಶಕ್ತಿ.
ಅತಿಮಾನುಷ ವಿಷಯಗಳಿಗೆ ಸೈದ್ಧಾಂತಿಕ ತಳಹದಿ
ಈ ಸಿದ್ಧಾಂತ ವಿಜ್ಞಾನಿಗಳ ಅಲ್ಲಿಯವರೆಗಿನ ಎಲ್ಲ ತಿಳಿವಳಿಕೆಯನ್ನು ಸಂಪೂರ್ಣವಾಗಿ ಬುಡಮೇಲುಗೊಳಿಸಿತು ಎಂದು ಕೇಳಿದ್ದೆ. ಓದಿ ಅರಿತ ಮೇಲೆ ಅದು ನಿಜವೆನಿಸಿತು. ಅಲ್ಲದೇ ಸಮಯ ಯಾತ್ರೆ (Time Travel), Worm Holes ಮುಂತಾದ ಅತಿಮಾನುಷ ವಿಷಯಗಳಿಗೆ ಸೈದ್ಧಾಂತಿಕ ತಳಹದಿಯನ್ನು ಈ ಸಾಪೇಕ್ಷ ಸಿದ್ಧಾಂತ ಒದಗಿಸಿತು, ಅತ್ಯದ್ಭುತ ವಿಚಾರವಲ್ಲವೇ? ಅದುದರಿಂದಲೇ ವೈಜ್ಞಾನಿಕ ಜಗತ್ತಿನಲ್ಲಿ ಅತ್ಯಂತ ಕ್ರಾಂತಿಕಾರಿ ಸಂಶೋಧನೆ ಈ ಸಾಪೇಕ್ಷ ಸಿದ್ಧಾಂತ.
ಇಂಟರ್ ಸ್ಟೆಲ್ಲರ್ ಅದ್ಭುತ ಚಲನಚಿತ್ರ
ಸಾಪೇಕ್ಷ ಸಿದ್ಧಾಂತವನ್ನು ಆಧರಿಸಿ ಅನೇಕ ಚಲನ ಚಿತ್ರಗಳು, ಕಥೆಗಳು ಮತ್ತು ಕಾದಂಬರಿಗಳು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಂಡಿವೆ. 2014ರಲ್ಲಿ ಪ್ರದರ್ಶನ ಕಂಡ "ಇಂಟರ್ ಸ್ಟೆಲ್ಲರ್" ಚಲನಚಿತ್ರ ಬಹಳ ಅಮೋಘವಾದ ವೈಜ್ಞಾನಿಕ ಚಲನಚಿತ್ರ. ಸಾಪೇಕ್ಷ ಸಿದ್ಧಾಂತದ ಅಂಶಗಳಾದ Time Dilation ಮತ್ತು Worm Holeಗಳನ್ನು ಬಹಳ ನೈಜವಾಗಿ ಚಿತ್ರಕಥೆಯಲ್ಲಿ ಅಳವಡಿಸಿ ಚಿತ್ರೀಕರಿಸಿದ್ದಾರೆ. ಇನ್ನೂ ಅನೇಕ ವೈಜ್ಞಾನಿಕ ಸಿದ್ಧಾಂತಗಳನ್ನು ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ಹೆಣೆದಿದ್ದಾರೆ. ಎಲ್ಲರೂ ನೋಡಬಹುದಾದ ಈ ಚಿತ್ರ ನನ್ನ ಸಾರ್ವಕಾಲಿಕ ಅಚ್ಚುಮೆಚ್ಚಿನ ಚಿತ್ರಗಳಲ್ಲೊಂದು.
ವಜ್ರಗಳು, ವಣಖೊಬ್ರಿ ಮತ್ತು E=mC2
ಆದರೂ ಈ ಸಾಪೇಕ್ಷ ಸಿದ್ದಾಂತ ಮತ್ತು E=mC2 ಎಂದ ಕೂಡಲೆ ನನಗೆ ಮೊಟ್ಟ ಮೊದಲು ನೆನಪಿಗೆ ಬರುವದು ಬಹಳ ವರ್ಷಗಳ ಹಿಂದೆ ಮಯೂರ ಮಾಸ ಪತ್ರಿಕೆಯಲ್ಲಿ ಓದಿದ್ದ ಕನ್ನಡ ಕಥೆ "ವಜ್ರಗಳು, ವಣಖೊಬ್ರಿ ಮತ್ತು E=mC2" ಎಂಬ ರೋಮಾಂಚಕ ಕಥೆ. ಈ ಕಥೆಯಲ್ಲಿ ಡಾ. ವಣಖೊಬ್ರಿ ಎಂಬ ಮೇಧಾವಿ ಭೌತ ಶಾಸ್ತ್ರಜ್ಞ ಈ ಐನ್ ಸ್ಟೀನ್ ಅವರ ಸಮೀಕರಣದ ಆಧಾರದ ಮೇಲೆ ಸಂಶೋಧನೆ ಮಾಡಿ ವಸ್ತುಗಳನ್ನು ಸಂಪೂರ್ಣವಾಗಿ ಶಕ್ತಿಯಾಗಿ ಪರಿವರ್ತಿಸಿ ಮಾಯ ಮಾಡಿ ಮತ್ತೆ ತಿರುಗಿ ಆ ವಸ್ತುವನ್ನು ಪ್ರತ್ಯಕ್ಷ ಮಾಡುವ ಸಲಕರಣೆಯನ್ನು ಕಂಡು ಹಿಡಿಯುತ್ತಾನೆ. ನಂತರ ಅದನ್ನು ತನ್ನ ಮೇಲೆಯೇ ಪ್ರಯೋಗಿಸಿ ತಾನೇ ಮಾಯವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅದೃಶ್ಯವಾಗಿಯೇ ಹೋಗಿ ಬರುತ್ತಾನೆ.
ಸ್ವಿಟ್ಜರ್ಲೆಂಡಲ್ಲಿ ನಾ ಕಂಡ ಐನ್ಸ್ಟೀನ್ ಎಂಬ ಕೌತುಕ!
ವಜ್ರ ಕದಿಯುವ ಕಾಯಕಕ್ಕೆ ವಣಖೊಬ್ರಿ
ನಂತರ ಈ ಸಲಕರಣೆಯ ಪ್ರಭಾವದಿಂದ ನಗರದ ದೊಡ್ಡ ಆಭರಣಗಳ ಅಂಗಡಿಗಳಲ್ಲಿ ಅದೃಶ್ಯವಾಗಿಯೇ ಪ್ರವೇಶಿಸಿ ಅಲ್ಲಿಂದ ವಜ್ರಗಳನ್ನು ಕದಿಯುವ ಕೆಲಸವನ್ನು ಆರಂಭಿಸುತ್ತಾನೆ. ನಗರದಲ್ಲಿ ಯಾವುದೇ ಸುಳಿವು ನೀಡದೆ ದರೋಡೆ ಮಾಡುತ್ತಿರುವ ಕಳ್ಳನ ರಹಸ್ಯವನ್ನು ಭೇದಿಸಲು ಪೋಲಿಸರು ವಿಜ್ಞಾನಿಯೊರ್ವನ ಸಹಾಯ ಪಡೆಯುತ್ತಾರೆ. ಆ ವಿಜ್ಞಾನಿ ಡಾ.ವಣಖೊಬ್ರಿಯ ಗುರುವೇ ಆಗಿರುತ್ತಾರೆ. ಅವರಿಗೇನೋ ಸಂಶಯ ಬಂದು ವಣಖೊಬ್ರಿಯ ಸಂಶೋಧನೆಯ ಜಾಡನ್ನು ಹಿಡಿದು ವಣಖೊಬ್ರಿಯ ಸಲಕರಣೆಯನ್ನು ತಾವೇ ಕಂಡು ಹಿಡಿಯುತ್ತಾರೆ. ಕೊನೆಗೆ ಪೋಲೀಸರಿಗೆ ಸಹಾಯ ಮಾಡಿ ವಣಖೊಬ್ರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಡುತ್ತಾರೆ.
ಈ ಕಥೆ ಓದಿದಾಗ ನಾನು ಎಂಟನೇ ತರಗತಿಯಲ್ಲಿ ಓದುತ್ತಿರಬಹುದು. ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ವೈಜ್ಞಾನಿಕ ಕಥೆಗಳಲ್ಲಿ ಇದೂ ಒಂದು. ಈ ಕಥೆ ನನಗೆ ಮೊತ್ತ ಮೊದಲ ಬಾರಿಗೆ E=mC2 ಸಮೀಕರಣವನ್ನು ಪರಿಚಯಿಸಿತ್ತು. ಅಲ್ಲದೇ ವಸ್ತುಗಳನ್ನು ಸಂಪೂರ್ಣವಾಗಿ ಶಕ್ತಿಯಾಗಿ ಬದಲಾಯಿಸಬಹುದು ಎಂಬ ವಿಷಯವನ್ನು ತಿಳಿಸಿತ್ತು. ಈ ಅದ್ಭುತ ಕಥೆಯ ಕಥೆಗಾರ ಯಾರು ಎಂಬುದು ನನಗೆ ನೆನಪಿಲ್ಲ. ಆದರೆ ಕಥೆ ನನ್ನ ಮನದಲ್ಲಿ ಚಿರಾಯುವಾಗಿ ಉಳಿದಿದೆ.
ಇದೇ ಬಗೆಯ ವೈಜ್ಞಾನಿಕ ಕಥೆಗಳಿವೆಯೆ?
ಈ ಕಥೆಯ ನಂತರ ನಾನು ಸಾಪೇಕ್ಷ ಸಿದ್ಧಾಂತದ ಮೇಲೇ ಆಧರಿಸಿದ ಮತ್ತೊಂದು ಕನ್ನಡ ಕಥೆಯನ್ನು ಓದಿಲ್ಲ. (ಓದುಗರೇನಾದರೂ ಓದಿದ್ದರೆ ದಯವಿಟ್ಟು ತಿಳಿಸಿ). ಇನ್ನೂ ಕೆಲವು ಕನ್ನಡದ ಕಥೆಗಳು ಇರಬಹುದು. ಆದರೂ ಅಷ್ಟೊಂದು ಪ್ರಚಲಿತವಾಗಿಲ್ಲ. ನಾನು ಚಿಕ್ಕವನಿದ್ದಾಗ ಮನು, ರಾಜಶೇಖರ ಭೂಸನೂರಮಠ, ಜಿ ಟಿ ನಾರಾಯಣರಾವ್ ಮತ್ತು ಬಿ ಜಿ ಎಲ್ ಸ್ವಾಮಿ ಮುಂತಾದವರ ಬರಹಗಳನ್ನು ಓದಿದ್ದೆ. ನಂತರ ಕೆ ಪಿ ಪೂರ್ಣಚಂದ್ರ ತೇಜಸ್ವಿ, ಟಿ ಆರ್ ಅನಂತರಾಮು, ನೇಮಿ ಚಂದ್ರ ಮತ್ತು ಹಾಲ್ದೊಡ್ಡೇರಿ ಸುಧೀಂದ್ರ ಅವರ ವೈಜ್ಞಾನಿಕ ಬರಹಗಳು ಕನ್ನಡದಲ್ಲಿ ಬರಲಾರಂಭಿಸಿದವು. ಆದರೂ ನನಗನಿಸುವ ಮಟ್ಟಿಗೆ ಕನ್ನಡದಲ್ಲಿ ವೈಜ್ಞಾನಿಕ ಬರಹಗಾರರ ಕೊರತೆ ಇದೆ.
ವಿನಮ್ರತೆಯ ಸಾಕಾರ ಮೂರ್ತಿ, ರಸಾಯನ ಶಾಸ್ತ್ರಜ್ಞ ವೆಂಕಟೇಶಮೂರ್ತಿ
ಕನ್ನಡದ ವೈಜ್ಞಾನಿಕ ಸಾಹಿತ್ಯ ಶ್ರೀಮಂತ ಮಾಡಬೇಕಿದೆ
ಕನ್ನಡದಲ್ಲಿ ವೈಜ್ಞಾನಿಕ ಸಾಹಿತ್ಯ ಅಷ್ಟೊಂದು ಬೆಳೆಯದಿರಲು ಮುಖ್ಯ ಕಾರಣ ಏನೆಂದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿಜ್ಞಾನದ ಅಧ್ಯಯನ ಆಗುತ್ತಿರುವುದು ನಮ್ಮದಲ್ಲದ ಭಾಷೆಯಲ್ಲಿ ಎಂದು ನನಗೆ ಅನಿಸುತ್ತದೆ. ಜಾಗತೀಕರಣದ ಗಾಳಿಗೆ ಸಿಲುಕಿ ನಲುಗುತ್ತಿರುವ ನಮಗೆ ಉದ್ಯೋಗಾವಕಾಶ ದೊರಕುವುದು ನಮ್ಮ ಇಂಗ್ಲಿಷು ಭಾಷೆಯ ಸಾಮರ್ಥ್ಯದಿಂದಲೇ ಎಂಬ ನಂಬಿಕೆ ಬಲವಾಗಿ ಬೇರೂರಿ ಹಲವು ದಶಕಗಳೇ ಆಗಿ ಹೋಗಿವೆ. ಆದುದರಿಂದಲೇ ತಾನೇ ನಾವೆಲ್ಲ ನಮ್ಮದಲ್ಲದ ಭಾಷೆಯಲ್ಲಿ ಉಚ್ಛ ಶಿಕ್ಷಣ ನಡೆಯುವುದು? ನಮ್ಮಲ್ಲನೇಕರ ಶಕ್ತಿ ಈ ಭಾಷೆಯನ್ನು ಕಲಿಯುವುದರಲ್ಲಿಯೇ ವ್ಯರ್ಥವಾಗುತ್ತಿದೆ. ಹೀಗಾಗಿ ನಮ್ಮಲ್ಲಿ ವೈಜ್ಞಾನಿಕ ಮೂಲ ಸಿದ್ಧಾಂತಗಳ ಮೇಲೆ ಸಂಶೋಧನೆ ಅಷ್ಟೊಂದು ಹೆಚ್ಚಾಗಿ ನಡೆಯುತ್ತಿಲ್ಲ. ಅಲ್ಲದೇ ಕನ್ನಡ ಭಾಷೆ ವೈಜ್ಞಾನಿಕ ಪದಗಳನ್ನು ಪಡೆಯದೆಯೇ ಈ ನಿಟ್ಟಿನಲ್ಲಿ ಶ್ರೀಮಂತವಾಗಿ ಬೆಳೆಯುತ್ತಿಲ್ಲ. ವೈಜ್ಞಾನಿಕ ಸಾಧನೆ ಮಾಡಿದ ಮತ್ತು ಮಾಡುತ್ತಿರುವ ಕನ್ನಡಿಗರು ಮುಂದೆ ಬಂದು ಕನ್ನಡದ ವೈಜ್ಞಾನಿಕ ಸಾಹಿತ್ಯವನ್ನು ಶ್ರೀಮಂತವಾಗಿ ಬೆಳೆಸಲು ಸಹಾಯಮಾಡಬೇಕಾಗಿದೆ.