ವಿಂಡಿ ಸಿಟಿಯಲ್ಲೂ ಸುರಿದ ಮುಂಗಾರು ಧಾರೆ!
ಮುದ್ದು
ಮೊಲವನ್ನು
ದೇವದಾಸನನ್ನಾಗಿ
ಮಾಡಿ,
ಅದರ
ಜೊತೆಗೆ
ನಡೆಸುವ
ಸಂಭಾಷಣೆ
ನನಗೆ
ಬಹಳ
ಇಷ್ಟವಾಯಿತು.
ಚಿತ್ರದ
ಕೊನೆಗೆ
ಆ
ಮೊಲ
ಸಾಯುವ
ದೃಶ್ಯವಂತೂ
ಬಹಳ
ಜನರ
ಮನ
ಕಲಕಿತು.
ನಾಯಕನನ್ನು ಭಾವನೆಗಳ ಗೌರಿಶಂಕರಕ್ಕೇರಿಸುವ ನಿರ್ದೇಶಕರು, ನಾಯಕಿಯ ವಿಷಯದಲ್ಲಿ ಸ್ವಲ್ಪ ಅನ್ಯಾಯ ಎಸಗಿದ್ದಾರೆಂದೇ ನನ್ನ ಭಾವನೆ. ಪ್ರೀತಂ ಪ್ರೀತಿಸಿದಾಗ ಅವನಿಂದ ಪ್ರೀತಿಸಲ್ಪಡುವ, ಅವನು ಬೇಡವೆಂದು ನಿರ್ಧರಿಸಿದಾಗ ತಣ್ಣಗೆ ಹೋಗಿ ಇನ್ನೊಬ್ಬನನ್ನು ಕೈಹಿಡಿವ ನಂದಿನಿ ಪಾತ್ರಕ್ಕೆ ಇನ್ನಷ್ಟು ಪೋಷಣೆ ಇರಬೇಕಿತ್ತು ಅನಿಸಿತು.
ಹೆಣ್ಣು ಸಾಮಾಜಿಕವಾಗಿ ಹಿಂದಿಗಿಂತಲೂ ಇಂದು ಎತ್ತರದ ಸ್ಥಾನದಲ್ಲಿದ್ದಾಳೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಚಿತ್ರಗಳಲ್ಲಿನ ಹೆಣ್ಣು ಇನ್ನಷ್ಟು ಗಟ್ಟಿಯಾಗಿ ಚಿತ್ರಿತವಾಗಬೇಕಿತ್ತು. ಆದರೆ ನಮ್ಮ ಸಿನಿಮಾ ನಿರ್ದೇಶಕರ ಕಣ್ಣಲ್ಲಿ ಮಾತ್ರ ಹೆಣ್ಣು - "ಬಿಂಕದ ಸಿಂಗಾರಿ, ಮೈಡೊಂಕಿನ ವೈಯಾರಿಗಿಂತ" ಮೇಲೇರಿದಂತಿಲ್ಲ!
ಪುಟ್ಟಣ್ಣ ಕಣಗಾಲ್ ಬಹಳ ಹಿಂದೆಯೇ ಸೃಷ್ಟಿಸಿದ ಸ್ವಾಭಿಮಾನಿ, ಸಾಹಸಿ ಹೆಣ್ಣುಗಳ ಮುಂದೆ, ಇಂದಿನ ಹೈಟೆಕ್ ಸಿನಿಮಾಗಳ ಸ್ತ್ರೀಪಾತ್ರಗಳು ಬಹಳ ಸಪ್ಪೆಯಾಗಿ ತೋರುತ್ತವೆ. ನೋಡಲು ಬಿಚ್ಚೋಲೆ ಗೌರಮ್ಮನಂತಿರುತ್ತಿದ್ದ ಅಂದಿನ ನಾಯಕಿಯರ ಧೀಮಂತ, ದಿಟ್ಟ ವ್ಯಕ್ತಿತ್ವ ಆಧುನಿಕ ಸಿನಿಮಾಗಳಲ್ಲಿ ಅಪರೂಪವಾಗಿರುವುದೊಂದು ವಿಪರ್ಯಾಸವೇ ಸರಿ. ಯೋಗರಾಜ ಭಟ್ಟರಂತಹ ಸೂಕ್ಷ್ಮಜ್ಞ ನಿರ್ದೇಶಕರ ಚಿತ್ರಗಳಲ್ಲಿ ಇಂತಹ ನಿರೀಕ್ಷೆಗಾದರೂ ಅವಕಾಶವಿದೆ, ಉಳಿದಂತೆ ದೊಡ್ಡ ಸೊನ್ನೆ!
ಬೇರೆ ಭಾಷೆಗಳಂತೆ, ಉತ್ತಮ ಕನ್ನಡ ಸಿನಿಮಾ ನೋಡಿ ಅನುಭವಿಸಬೇಕೆಂಬ ಕನ್ನಡಿಗರ ಬರಗೆಟ್ಟ ಹಸಿವು "ಮುಂಗಾರು ಮಳೆ" ಯ ಗೆಲುವಿನ ಹಿಂದೆ ಕೆಲಸ ಮಾಡಿದೆ. ಬಹಳ ಕಾಲದ ನಂತರ ಕನ್ನಡ ಚಿತ್ರವೊಂದು ಯಶಸ್ಸಿನಿಂದ ಮೆರೆಯುತ್ತಿದೆ. ದೇಶ-ವಿದೇಶಗಳಲ್ಲಿ "ಕನ್ನಡ ಡಿಂಡಿಮ" ಬಾರಿಸುತ್ತಿದೆ. ಆ ಸಂತೋಷದಲ್ಲಿ ನಾವೂ ಭಾಗಿಯಾಗೋಣ, ಹರುಷ ಹಂಚಿಕೊಳ್ಳೋಣ. ಅದು ಬಿಟ್ಟು, "ಇದೊಂದು ಅತಿ ಸಾಧಾರಣ ಚಿತ್ರ, ಈ ಚಿತ್ರದ ಗೆಲುವಿನ ರಹಸ್ಯವೇನು?" ಎಂದು ವಿಶ್ಲೇಷಣೆ ಮಾಡುವ ಉಸಾಬರಿ ನಮಗೆ ಬೇಕಿಲ್ಲ. ಬೇಕಿದ್ದರೆ ಆ ಕೆಲಸವನ್ನು ಚಿತ್ರೋದ್ಯಮ ಪಂಡಿತರು ಮಾಡಲಿ. ಆಗ ಅದೊಂದು ಆಸಕ್ತಿಗೆ ಆಹಾರವಾಗಬಲ್ಲ ಅಧ್ಯಯನವಾಗಬಹುದು.
"ನಾ ನೋಡಲಾರೆ ಕನ್ನಡ ಚಿತ್ರ" ಎಂದು ಬೆನ್ನು ತಿರುಗಿಸಿ ಹೊರನಡೆದವರನ್ನೂ ಮತ್ತೆ ಥಿಯೇಟರಿನತ್ತ ಸೆಳೆಯುತ್ತಿರುವುದೇ ಈ ಚಿತ್ರದ ನಿಜವಾದ ಯಶಸ್ಸು! ಈ ಚಿತ್ರವನ್ನು ನಿರ್ಮಾಪಕರು ಯಾವ ಪ್ರತಿಫಲದ ಅಪೇಕ್ಷೆ ಇಲ್ಲದೆ ವಿದೇಶಗಳಲ್ಲಿನ ಕನ್ನಡಿಗರು ನೋಡಲೆಂಬ ಉದ್ದೇಶದಿಂದ ಕಳಿಸಿಕೊಟ್ಟಿದ್ದಾರೆಂದು ಎಲ್ಲೋ ಓದಿದೆ. ಈ ಮಾತು ನಿಜವೇ ಆಗಿದ್ದರೆ ನಿರ್ಮಾಪಕರ ಔದಾರ್ಯಕ್ಕೆ ಶರಣು. ಇಂತಹ ಸುಂದರ, ಸದಭಿರುಚಿಯ ಚಿತ್ರವನ್ನು ಕನ್ನಡಿಗರಿಗೆ ಕೊಟ್ಟಿರುವ ನಿರ್ಮಾಪಕ, ನಿರ್ದೇಶಕರಿಗೆ ಹಾರ್ದಿಕ ಅಭಿನಂದನೆಗಳು.
ಚಿತ್ರ ವಿರಾಮದ ನಡುವೆ ಕನ್ನಡ ಕೂಟದ ಅಧ್ಯಕ್ಷರು, ಕನ್ನಡಿಗರು ಕನ್ನಡ ಚಿತ್ರ ಪ್ರದರ್ಶನಕ್ಕೆ ತಮ್ಮ ಸಹಕಾರ ಇದೇ ರೀತಿ ಮುಂದುವರೆಸುವುದಾದಲ್ಲಿ, ಮತ್ತಷ್ಟು ಉತ್ತಮ ಚಿತ್ರಗಳನ್ನು ತರಿಸುವುದಾಗಿ ಪ್ರಕಟಿಸಿದರು. ಡೆಸ್ ಪ್ಲೈನ್ ಥಿಯೇಟರ್ ಚಿಕ್ಕದಾಗಿದ್ದರೂ, 270ಕ್ಕೂ ಹೆಚ್ಚು ಜನ ಕೂತು ಚಿತ್ರವನ್ನು ಆನಂದದಿಂದ ವೀಕ್ಷಿಸಿದರು. ಹನ್ನೆರಡಕ್ಕಿಂತ ಕಡಿಮೆ ವಯಸ್ಸಿನ 35 ಮಕ್ಕಳು ಉಚಿತ ಪ್ರವೇಶ ಪಡೆದಿದ್ದರು. ಭಾರತೀಯರ ಒಡೆತನದಲ್ಲಿರುವ ಈ ಚಿತ್ರಮಂದಿರದಲ್ಲಿ ಸಮೋಸ ಕೂಡ ಮಾರಾಟಕ್ಕಿದ್ದಿದ್ದೊಂದು ವಿಶೇಷ!
"ಮುಂಗಾರು ಮಳೆ"ಯಲ್ಲಿ ಮುದದಿಂದ ನೆನೆಯಬಯಸುವವರು ಇಲ್ಲಿ ಇನ್ನೂ ಬಹಳ ಜನ ಇದ್ದಾರಾದ್ದರಿಂದ, ಅವರೆಲ್ಲರಿಗಾಗಿ ಮತ್ತೊಮ್ಮೆ ಚಿತ್ರ ಪ್ರದರ್ಶನ ಏರ್ಪಡಿಸುವ ಉದ್ದೇಶ ಕನ್ನಡ ಕೂಟಕ್ಕಿದೆ. ಆ ಬಗ್ಗೆ, ವಿದ್ಯಾರಣ್ಯ ಕನ್ನಡ ಕೂಟದ ವೆಬ್ಸೈಟಿ(http://www.vidyaranyakannadakuta.org/)ನಲ್ಲಿಯೂ , ಇಮೈಲುಗಳ ಮೂಲಕವೂ ಮುಂದೆ ತಿಳಿಸಲಾಗುತ್ತದೆ.