ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಮಾನವಾದರೆ ಒಳ್ಳೆಯದು!

By Staff
|
Google Oneindia Kannada News


ಆದದ್ದೇಲ್ಲ ಒಳ್ಳೆಯದಕ್ಕೆ ಎಂಬ ಮನಸ್ಥಿತಿ, ಬದುಕಿನಲ್ಲಿನ ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆಯಲು ನೆರವು ನೀಡುತ್ತದೆ! ಅದೇ ರೀತಿ ಅವಮಾನವನ್ನು ಸಹಿಸಿಕೊಳ್ಳಬೇಕು. ಇಂದಿನ ಅವಮಾನ, ನಾಳೆಯ ಯಶಸ್ಸಿ ನ ಸೋಪಾನವಾದರೆ ಅಚ್ಚರಿಯೇನಿಲ್ಲ!

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
    ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
    [email protected]
Its My Right to Insult You!ನೀವು ದಿನಪತ್ರಿಕೆಯನ್ನು ತಪ್ಪದೆ ಓದುವವರಾಗಿದ್ದರೆ ಈ ಪದಗಳು ಆಗೀಗ ನಿಮ್ಮ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಆ ಪದಗಳು ಮಾನ, ಅಪಮಾನ ಅಥವಾ ಅವಮಾನ.

ಇಂತಹ ಪ್ರಶಸ್ತಿ ಪಡೆದುಕೊಂಡಿರುವ ಇಂತವರಿಗೆ ಇಂತಹ ದಿನ ಸನ್ಮಾನಿಸಲಾಯಿತು ಎಂಬಂತಹ ಸುದ್ದಿಗಳ ಜೊತೆಯಲ್ಲೇ ರಾಷ್ಟ್ರಧ್ವಜಕ್ಕೆ ಅಪಮಾನ, ರಾಷ್ಟ್ರನಾಯಕರ ಪ್ರತಿಮೆಗೆ ಅಪಮಾನ, ಕನ್ನಡಿಗರಿಂದಲೇ ಕನ್ನಡಕ್ಕೆ ಅಪಮಾನ, ಜನಪ್ರಿಯ ನಾಯಕನಟನಿಗೆ ಅಪಮಾನ, ಚಪ್ಪಲಿ ಹಾರ ಹಾಕಿ ಅವಮಾನ, ಮುಖಕ್ಕೆ ಮಸಿ ಬಳಿದು ಅವಮಾನ ಎಂಬಂತಹ ವರ್ಣರಂಜಿತ ವಾರ್ತೆಗಳು ವರದಿಯಾಗಿರುತ್ತವೆ. ಯಾರದೋ ಮಾನಾಭಿಮಾನಗಳಿಗೆ ಸಂಬಂಧಪಟ್ಟ ಸೂಕ್ಷ್ಮ ಸುದ್ದಿಗಳು ಪತ್ರಿಕೆಯ ಬೊಂಬಾಯಿ ಬಾಯಿಗೆ ಬಿದ್ದು ಹರಾಜಾಗಿ ಹೋಗಿರುತ್ತವೆ. ಈ ಸುದ್ದಿಗಳಿಗೆ ಕೊಸರೆಂಬಂತೆ ಮಾನ ಕಳೆದುಕೊಂಡವರು ಹೂಡುವ ಮಾನನಷ್ಟ ಮೊಕದ್ದಮೆಗಳ ಸಮಾಚಾರ

. ಅಪಮಾನದ ತದ್ಭವವಾಗಿ ಅವಮಾನ ಪದ ರೂಢಿಗೆ ಬಂದಿರಬಹುದಾದರೂ ಅಪಮಾನ ಮತ್ತು ಅವಮಾನ ಈ ಎರಡೂ ಪದಗಳು ಒಂದೇ ಅರ್ಥದಲ್ಲಿ ಬಳಕೆಯಲ್ಲಿವೆ. ಅಪಮಾನ ಮನುಷ್ಯರಿಗೆ ಮಾತ್ರ ಅನ್ವಯ. ಹಾಗಾಗಿ ಒಬ್ಬ ಮನುಷ್ಯ ಮಾತ್ರ ಇನ್ನೊಬ್ಬನನ್ನು ಅವಮಾನಿಸಬಲ್ಲ. ಯಾರನ್ನಾದರೂ ಅವಮಾನಿಸುವುದರಿಂದ ಅವರನ್ನು ಸುಧಾರಿಸುವುದು ಆಗದ ಮಾತು. ಇನ್ನೊಬ್ಬನನ್ನು ಅವಮಾನಿಸುವುದರಿಂದ ವಿಕೃತ ಆನಂದದ ಹೊರತು ಬೇರಾವ ಲಾಭವೂ ಸಿಗದು. ಅಪಮಾನ ಹೊಂದುವುದರಲ್ಲಿ ಎರಡು ವಿಧ. ಒಂದು- ಬೇರೆಯವರಿಂದ ಆಗಬಹುದಾದರೆ ಇನ್ನೊಂದು- ಕೆಟ್ಟ ಕೆಲಸ, ವರ್ತನೆಯಿಂದ ನಮಗೆ ನಾವೇ ತಂದುಕೊಳ್ಳುವಂಥದು.

"ನಾನು ಇಷ್ಟು ವರ್ಷ ಸಂಪಾದಿಸಿದ ಮರ್ಯಾದೆ ಎಲ್ಲಾ ನಿನ್ನಿಂದ ಹಾಳಾಗಿಹೋಯಿತು"- ಎಂಬುದು ಆಗಾಗ ಕೇಳಿಬರುವ ಮಾತು. ತಂದೆ-ಮಗ, ಅಣ್ಣ-ತಮ್ಮ.... ಹೀಗೆ ಯಾವ ಸಂಬಂಧದಲ್ಲಿಯಾದರೂ ಸಾಮಾನ್ಯವಾಗಿರುವ ಬೈಗುಳ.

ಯಾರಾದರೂ ಕಷ್ಟಪಟ್ಟು ಸಂಪಾದಿಸಬೇಕಾಗಿರುವ ಮಾನವನ್ನು ಇನ್ನೊಬ್ಬರು ಸುಲಭವಾಗಿ ಕಳೆದುಬಿಡಬಹುದೇ? ನಾವು ಸಂಪಾದಿಸಿದ ಹಣವನ್ನು ನಾವು ಮಾತ್ರವೇ ಖರ್ಚು ಮಾಡಿ ಕಳೆಯುತ್ತೇವೆನ್ನುವ ನಿಯಮ ಇಲ್ಲಿ ಮಾತ್ರ ಅನ್ವಯವಾಗದು. ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎನ್ನುವಂತೆ ವರ್ಷಗಟ್ಟಲೆ ಗಳಿಸಿಕೊಂಡ ಮಾನಕ್ಕೆ ಯಾರಿಂದ ಬೇಕಾದರೂ ಭಂಗ ಒದಗಿ ಅವಮಾನವಾಗಿಬಿಡಬಹುದು! ಬಹಳ ತಮಾಷೆ ಎನಿಸುವುದಿಲ್ಲವೇ?

"ನಿಂತ ನೆಲ ಬಾಯಿ ಬಿಡಬಾರದೇ?"- ಎನ್ನಿಸುವಂಥ ಅಪಮಾನದ ಸ್ಥಿತಿಯನ್ನು ಯಾರೊಬ್ಬರೂ ಬಯಸದಿದ್ದರೂ ಸಣ್ಣಪುಟ್ಟ ಅವಮಾನಗಳು ಎಲ್ಲರ ಬದುಕಿನಲ್ಲಿ ಎದುರಾಗಿಯೇ ಇರುತ್ತವೆ. ಸಕಾರಣ, ಕೆಲವೊಮ್ಮೆ ನಿಷ್ಕಾರಣ, ಯಾರದೋ ಪಿತೂರಿಯೂ ಇದಕ್ಕೆ ಕಾರಣವಿರಬಹುದು. ಅವಮಾನದ ನೋವು ಬಹುಕಾಲ ಉಳಿಯುತ್ತದೆ. "ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು"- ಎಂಬಂತೆ ಅಪಮಾನದ ನೋವು ಹೃದಯವನ್ನು ಆಳವಾಗಿ ಘಾಸಿಗೊಳಿಸುತ್ತದೆ.

ಕೆಲವರು ಅದೇ ನೋವನ್ನು ಸೇಡಿನ ಬೆಂಕಿಯಾಗಿಸಿಕೊಂಡು ಇಡೀ ಬದುಕಿನುದ್ದಕ್ಕೂ ಧಗಧಗಿಸುತ್ತಿರುವಂತೆ ನೋಡಿಕೊಂಡರೆ, ಹಲವರು ಮರೆವಿನ ಮುಸುಕು ಹೊದಿಸಿ ಸುಮ್ಮನಾಗುವರು. ಅದೇ ಜಾಣತನ ಕೂಡ. ಆಂಗ್ಲ ಉಕ್ತಿಯೊಂದು ನಮಗಾಗುವ ಅಪಮಾನವನ್ನು ಹೇಗೆ ನಿಭಾಯಿಸಬೇಕೆನ್ನುವುದನ್ನು ಸೊಗಸಾಗಿ ತಿಳಿಯಹೇಳುತ್ತದೆ- "If you cant ignore an insult, top it; if you cant top it, laugh it off; and if you cant laugh it off, its probably deserved."

ಆದ ಅಪಮಾನವನ್ನೇ ನೆನೆಸಿಕೊಳ್ಳುತ್ತಾ ಹಳೆಯ ಗಾಯವನ್ನೇ ನೆಕ್ಕಿಕೊಳ್ಳುತ್ತಾ ಕೂಡುವ ಬದಲು ಅದನ್ನೇ ಸಾಧನೆಗೆ ಸೋಪಾನವಾಗಿಸಿಕೊಂಡವರ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅವಮಾನಿತನಾದವನು ವಿವೇಕಿಯಾದರೆ ತನಗಾದ ಅವಮಾನವನ್ನೇ ತನ್ನ ಗೆಲುವಿನ ಮೆಟ್ಟಿಲಾಗಿ ಬಳಸಿಕೊಳ್ಳುತ್ತಾನೆ. ಅವಮಾನಿಸಿದವನಿಗೆ ಸರಿಯಾದ ಪಾಠವನ್ನೂ ಕಲಿಸುತ್ತಾನೆ. ಅದು ಅವನಲ್ಲಿ ಕೀಳರಿಮೆ ಬೆಳೆಸದೆ ಆತ್ಮವಿಶ್ವಾಸ ಹೊರಹೊಮ್ಮಲು ಕಾರಣವಾಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಮೋಹನದಾಸ ಕರಮಚಂದ ಗಾಂಧಿಗಾದ ಅಪಮಾನ, ಅಂಬೇಡ್ಕರ್ ಅವರಿಗೆ ಜಾತಿಯ ಕಾರಣದಿಂದಾದ ಅಪಮಾನ ಈ ವರ್ಗಕ್ಕೆ ಸೇರುವ ಅಪಮಾನಗಳು.

ಶಿವಮೊಗ್ಗ ಜಿಲ್ಲೆಯ ತಾಳಗುಂದದ ಅಗ್ರಹಾರದ ಬ್ರಾಹ್ಮಣರ ಹುಡುಗ ತಮಿಳುನಾಡಿನ ಪಲ್ಲವರಿಂದ ಅಪಮಾನಕ್ಕೊಳಗಾದ. ಬ್ರಾಹ್ಮಣನೆಂಬ ಕಾರಣಕ್ಕೆ ಅವಮಾನಕ್ಕೊಳಗಾದ ಮಯೂರ ಶರ್ಮ ಆ ಅವಮಾನವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಕದಂಬ ವಂಶದ ಸ್ಥಾಪಕನಾಗಿ ಕನ್ನಡನಾಡಿನ ಇತಿಹಾಸಕ್ಕೆ ಹೊಸ ತಿರುವು ತಂದುಕೊಟ್ಟ. ಶರ್ಮ ಎಂಬ ಬ್ರಾಹ್ಮಣ ಸೂಚಕ ಹೆಸರನ್ನು ಬದಲಿಸಿಕೊಂಡ ಮಯೂರ ವರ್ಮ ಅಪಮಾನವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಗೆಲ್ಲುವುದು ಹೇಗೆಂಬುದಕ್ಕೆ ಒಂದು ಸುಂದರ ಉದಾಹರಣೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X