ನರಜನ್ಮ ಬಂದಾಗ,ಕಣ್ಣು ಹೋದಾಗ
* ಧವಳ
* ಏಳು ವರ್ಷ ವಯಸ್ಸಿನ ತನಕ ಸಾಧಾರಣ ಮಕ್ಕಳಂತೆ ಇತ್ತು ಸಂಗೀತ ಬದುಕು.ಆ ಬಳಿಕ ಆಕೆಯ ಆರೋಗ್ಯ ಕೆಟ್ಟಿತು.ದಿನೇ ದಿನೇ ಕ್ಷೀಣಿಸುತ್ತ ಬಂದ ಆರೋಗ್ಯ ಪೋಷಕರಲ್ಲಿ ಆತಂಕ ಹೆಚ್ಚು ಮಾಡಿತು.ವೈದ್ಯಕೀಯ ಪರೀಕ್ಷೆಗಳ ಬಳಿಕ ಜಿ.ಕೆ.ನಟರಾಜ್ ಮತ್ತು ಲಲಿತ ದಂಪತಿಗಳಿಗೆ ತಿಳಿದು ಬಂದ ಸಂಗತಿ ತಮ್ಮ ಮಗಳು ಬ್ರೈನ್ ಟ್ಯೂಮರ್ ಆಪ್ಟಿಕ್ ನರ್ವ್ ಪ್ರಭಾವದಿಂದ ಶಾಶ್ವತವಾಗಿ ಅಂಧಳಾಗಿದ್ದಾಳೆ! ಧುತ್ತೆಂದು ಬಂದ ಈ ಸಮಸ್ಯೆಯನ್ನು ಸ್ವೀಕರಿಸುವುದು ಸುಲಭದ ಮಾತಲ್ಲ,ಆದರೆ ಅದನ್ನು ಒಪ್ಪಲೇಬೇಕಿತ್ತು. ಸೂಕ್ತ ಟ್ರೀಟ್ ಮೆಂಟ್ ಕೊಡಿಸುವಷ್ಟರಲ್ಲಿ ಸಂಗೀತ ಹೊರಪ್ರಪಂಚದ ಬೆಳಕು ನೋಡುವ ಭಾಗ್ಯ ಕಳೆದುಕೊಂಡು ಬಿಟ್ಟಿದ್ದಳು.
* ಅತ್ಯಂತ ಬುದ್ಧಿವಂತ ಕೂಸು, ಮುಂದೇನು ಎನ್ನುವ ಆತಂಕ ಈ ದಂಪತಿಗಳಿಗೆ! ಆಕೆ ಓದುತ್ತಿದ್ದ ವಿಜಯನಗರದಲ್ಲಿದ್ದ ನ್ಯೂ ಪಬ್ಲಿಕ್ ಇಂಗ್ಲೀಷ್ ಶಾಲೆಯ ಆಡಳಿತ ಮಂಡಳಿ ಉಳಿದ ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ ಓದುವ ಅವಕಾಶ ಕಲ್ಪಿಸಿಕೊಟ್ಟರು. ಈ ಮೂಲಕ ಸಂಗೀತಳಿಗೆ ತನ್ನ ದೈಹಿಕ ಕೊರತೆಯ ಬಹುಪಾಲು ಸಮಸ್ಯೆ ದೂರವಾಯಿತು.ಅದೇ ಸಮಯದಲ್ಲಿ ಇಂಟಗ್ರೆಟೆಡ್ ಎಜುಕೇಶನ್ ಸಿಸ್ಟಂ ಎನ್ನುವ ಹೊಸ ಶಿಕ್ಷಣ ಪದ್ಧತಿ ಇಂತಹ ದೈಹಿಕ,ದೃಷ್ಟಿ,ವಿಕಲಚೇತನರಿಗಾಗಿ ಆರಂಭ ಆಯಿತು.ಆ ಪದ್ಧತಿಯ ಮೊದಲ ವಿದ್ಯಾರ್ಥಿನಿಯಾಗಿ ತಮ್ಮ ಹೊಸ ಬದುಕು ಆರಂಭಿಸಿದರು ಸಂಗೀತ.
* ಆ ಬಳಿಕ ತಮ್ಮ ಕಾಲೇಜು ವ್ಯಾಸಂಗ ಪೂರೈಸಿದ್ದು ಎನ್.ಎಂ.ಕೆ ಆರ್ ವಿ ಯಲ್ಲಿ. ಮಹಿಳಾ ಅಧ್ಯಯನದಲ್ಲಿ ಎಂ ಎ ಪದವಿ ಗಳಿಸಿದರು ಸಂಗೀತ ಆಕೆಯ ಸರ್ವತೋಮುಖ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತಿದ್ದು ಚಿ.ನ.ಮಂಗಳ . ಈಗಿನ ಪ್ರಿನ್ಸಿಪಾಲ್ ಆದ ಉಮಾದೇವಿ, ಸಹೋದರಿಯರಾದ ಕವಿತಸನತ್ ಮತ್ತು ರಂಜಿತ ರವಿ ಪಾಟೀಲ್ .ಮಹಿಳಾ ಅಧ್ಯಯನದಲ್ಲಿ ಅಪರಿಮಿತ ಆಸಕ್ತಿ ಪಡೆದಿದ್ದ ಸಂಗೀತ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಆರ್ ಎಸ್ ಎಸ್ ಟ್ರಸ್ಟ್ , ಎನ್ಎಂವಿಆರ್ ಕೆ ಶಿಕ್ಷಣ ಸಂಸ್ಥೆ ಈಕೆಯ ಎರಡನೇ ಮನೆ.
* ಎಂ ಎ ಪದವಿ ಪೂರೈಸಿದ ಬಳಿಕ ಸಂಗೀತ ಆಸಕ್ತಿ ಗಮನಿಸಿದ ಪ್ರಿನ್ಸಿಪಾಲ್ ಉಮಾದೇವಿ ಮಹಿಳಾ ಅಧ್ಯಯನದಲ್ಲಿ ಡಾಕ್ಯುಮೆಂಟಲಿಸ್ಟ್ ಹೊಣೆಗಾರಿಕೆ ನೀಡಿದರು.ಅಲ್ಲಿಂದ ಆರಂಭಗೊಂಡಿತು ಸಂಗೀತ ಅವರ ಮತ್ತೊಂದು ಮಜಲು.ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳು ತಮ್ಮದೇ ಆದ ರೀತಿಯಲ್ಲಿ ಸೇವೆಸಲ್ಲಿಸುತ್ತಾ ಬಂದಿದ್ದಾರೆ.ಅವರ ಸಾಧನೆಯು ಹೆಚ್ಚು ಬೆಳಕಿಗೆ ಬಂದಿಲ್ಲ.ಆಕೆ ಸ್ಲಂ ನಲ್ಲಿ ವಾಸಿಸುವ ಮನೆ ಕೆಲಸದವಳು ಆಗಿರ ಬಹುದು,ಉನ್ನತ ಹುದ್ದೆಯಲ್ಲಿ ಇರುವ ಮಹಿಳೆ ಆಗಿರ ಬಹುದು,ಆದರೆ ಆಕೆ ಬದುಕನ್ನು ಯಾವರೀತಿ ಸ್ವೀಕರಿಸಿದಳು,ಸಮಸ್ಯೆಯನ್ನು ಹೇಗೆ ಎದುರಿಸಿ ಗಟ್ಟಿಯಾದಳು ಎನ್ನುವ ಬಗ್ಗೆ ಯಾರು ಗಮನ ಹರಿಸಲ್ಲ. ಆದರೆ ಈ ಕೆಲಸವನ್ನು ಎನ್ ಎಂ ಕೆ ಆರ್ ವಿ ಮಹಿಳಾ ಅಧ್ಯಯನ ಕಳೆದ ದಶಕದಿಂದ ಮೌನವಾಗಿ ಮಾಡುತ್ತಾ ಬಂದಿದೆ. ಇದರ ಒಂದು ಕಣ್ಣು ಸಂಗೀತ.
* ಮಹಿಳೆಯರ ಸಾಧನೆ, ಯಶೋಗಾಥೆಗಳನ್ನು ಧ್ವನಿ ಮುದ್ರಣ ಮಾಡಿರುವ ಸಂಗೀತಾ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿದ್ದಾರೆ . ವರ್ಷಕ್ಕೆ ನೂರು ಸಾಧಕ ಮಹಿಳೆಯರನ್ನು ಭೇಟಿ ಮಾಡಿ ಅವರ ಯಶೋಗಾಥೆಗಳನ್ನು ದಾಖಲಿಸ ಬೇಕು,ಇದು ಸಂಗೀತ ಅವರ ಅಸೈನ್ ಮೆಂಟ್.ಈಗಾಗಲೇ 1250 ಆಡಿಯೋ ಸೀಡಿಗಳು ಲೈಬ್ರರಿಯಲ್ಲಿ ಸ್ಥಾನ ಗಳಿಸಿವೆ. ಅನುಪಮ ನಿರಂಜನ, ಉಷಾ ನವರತ್ನ ರಾಮ್ ಮುಂತಾದವರ ಧ್ವನಿ ಕೇಳ ಬೇಕಾದರೆ ಮಹಿಳಾ ಅಧ್ಯಯನ ಕೇಂದ್ರದಲ್ಲಿ ಮುಖ್ಯಸ್ಥರ ಅನುಮತಿ ಪಡೆದು ಆಲಿಸಬಹುದು. ಒಟ್ಟಾರೆ ಸುಧಾಮೂರ್ತಿ, ಲೀಲಾದೇವಿ ಆರ್ ಪ್ರಸಾದ್ , ಗಂಗೂ ಬಾಯಿ ಹಾನಗಲ್ ಅವರಷ್ಟೇ ಅಲ್ಲದೆ ನಮ್ಮ ನಿಮ್ಮ ರಸ್ತೆ ಶುದ್ಧ ಮಾಡುವ ಮುನಿಯಮ್ಮನಂತಹ ಮಹಿಳೆಯರ ಅನುಭವಗಳು ಮುದ್ರಿತ ರೂಪದಲ್ಲಿದೆ.
* ಇಷ್ಟೆಲ್ಲಾ ಬ್ಯುಸಿ ಲೈಫ್ ಮಧ್ಯೆ ಹಂಪಿ ವಿಶ್ವವಿದ್ಯಾಲಯದಲ್ಲಿ ಡಾ.ಎಂ.ಉಮಾ ಅವರ ಮಾರ್ಗದರ್ಶನದಲ್ಲಿ Role of Women's Organizations in Empowerment of Distressed Women in Karnataka ವಿಷಯದಲ್ಲಿ ಸಂಗೀತಾ ಡಾಕ್ಟರೇಟ್ ಪಡೆದಿದ್ದಾರೆ.ಇತ್ತೀಚೆಗೆ Women's Organizations in Modern Era ಪುಸ್ತಕ ಬರೆದು ತಮ್ಮ ಕೈಲಿ ಎಲ್ಲವು ಸಾಧ್ಯ ಎಂದು ಸಮಾಜಕ್ಕೆ ಸಾಬೀತು ಮಾಡಿದ್ದಾರೆ ಡಾ.ಸಂಗೀತ.
* ಈಕೆಯ ಬದುಕಿನ ಪ್ರತಿಯೊಂದು ಕ್ಷಣವೂ ಅವಿಸ್ಮರಣೀಯ.ಸಾಧನೆಯ ಪಟ್ಟಿಯತ್ತ ಗಮನ ಹರಿಸಿದರೆ ಹೃದಯ ವಿಸ್ಮಯದಿಂದ ಮೂಕವಾಕಿ ಈ ಹೆಣ್ಣು ಮಗಳ ಬಗ್ಗೆ ಹೆಮ್ಮೆ ಉಕ್ಕಿ ಬರುತ್ತದೆ. ಕೆಲವೊಂದು ಹೃದಯದಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಡಾ.ಸಂಗೀತ.1990 ರಲ್ಲಿ 44 ನೇ ಕಾಮನ್ ವೆಲ್ತ್ ಸಂದರ್ಭದಲ್ಲಿ ರಾಣಿ ಎಲಿಜೆಬತ್ ಅವರನ್ನು ಭೇಟಿ ಮಾಡಿದ ಘಟನೆ,ಡಾ.ಎ.ಪಿ.ಜೆ.ಅಬ್ದುಲ್ ಕಲಾಮ್ ಅವರ ಜೊತೆಯ ಹತ್ತು ನಿಮಿಷಗಳ ಭೇಟಿ,ಪಾಕಿಸ್ತಾನದ ವಿಸಿಟ್.! ಇವುಗಳ ಬಗ್ಗೆ ಹೆಚ್ಚು ಹೆಚ್ಚು ಕೇಳ ಬೇಕಾದರೆ ಡಾ.ಸಂಗೀತ ಜೊತೆ ವೈಯುಕ್ತಿಕವಾಗಿ ಮಾತನಾಡಬೇಕು.
* ಕಳೆದ ವಾರವಷ್ಟೇ ವರ್ಲ್ಡ್ ಡಿಸೇಬಲ್ ಡೇ ಯನ್ನು ವಿಶ್ವವಿಡಡೀ ದಿನವಿಡೀ ಸಂಭ್ರಮದಿಂದ ಆಚರಿಸಿ ತಮ್ಮ ಕರ್ತವ್ಯ ಮುಗಿಸಿತು. ಆದರೆ ಡಾ.ಸಂಗೀತರಂತಹ ಸಾಧಕಿಯರಿಗೆ ಇಂತಹ ಯಾವುದೇ ಸಂಭ್ರಮ ಬೇಕಿಲ್ಲ,ಅವರಿಗೆ ಅತ್ಯಗತ್ಯವಾಗಿ ಬೇಕಾಗಿರುವುದು ಸಮಾಜದದ ಬೆಂಬಲ, ಪ್ರೋತ್ಸಾಹ! ತನ್ನ ಈ ಕೆಲಸ ಬೆಂಗಳೂರಿಗೆ ಮಾತ್ರ ಸೀಮಿತ ವಾಗಿದೆ,ಕರ್ನಾಟಕದ ಇತರ ಕಡೆ ಹೋಗುವುದಕ್ಕೆ ಸಾಧ್ಯ ಆಗಿಲ್ಲ ಎನ್ನುವ ಬೇಸರ ಡಾ.ಸಂಗೀತಗಿದೆ.ಅವರದೊಂದು ವೆಬ್ಸೈಟ್ ಆರಂಭಿಸುವ ಕನಸು ಜೊತೆಗಿದೆ.ಇದಕ್ಕೆ ಸಹೃದಯರ ಸಹಾಯದ ಅಗತ್ಯ ಇದೆ.ಅವರ ಆಶಯ ನೆರವೇರಲಿ ಎಂದು ಹಾರೈಸುವ /
ಡಾ ಸಂಗೀತಾ ಅವರ ಬಗೆಗೆ ಹೆಚ್ಚು ತಿಳಿಯಲು ಇಚ್ಛಿಸುವವರು ಸಂಪರ್ಕಿಸಿ: 94490-26658 email: [email protected]